Advertisement

ಬಸವಣ್ಣ ಪ್ರಬುದ್ಧ ತತ್ವಜ್ಞಾನಿ

04:45 PM May 21, 2017 | Team Udayavani |

ಶಹಬಾದ: ದೇಶ ಕಂಡ ಅತಿ ಪ್ರಬುದ್ಧ ತತ್ವಜ್ಞಾನಿ ಯಾರಾದರೂ ಇದ್ದರೆ ಅವರು ಬಸವಣ್ಣನವರು ಎಂದು ಐಟಿ-ಬಿಟಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ನಗರದಲ್ಲಿ ಬಸವಾದಿ ಶರಣರ ಒಕ್ಕೂಟ ಸಮಿತಿ ವತಿಯಿಂದ ಪಾರ್ವತಿ ಸಬಾಂಗಣದಲ್ಲಿ ಆಯೋಜಿಸಲಾಗಿದ್ದ ಬಸವಾದಿ ಶರಣರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ನಾಡಿನಲ್ಲಿ ಸಂತರು, ಮಹಾತ್ಮರು ಹಾಗೂ ದಾರ್ಶನಿಕರೆಲ್ಲರೂ ಸಮಾನತೆ ಬಗ್ಗೆ ಮಾತನಾಡಿದ್ದಾರೆ. ಆದರೆ ಸಮಾನತೆ ಜತೆಗೆ ಕಾಯಕದ ಬಗ್ಗೆ ಮಾತನಾಡಿದವರು ಬಸವಣ್ಣನವರೇ ಮೊದಲಿಗರು. ಬಸವಣ್ಣನವರ ತತ್ವ ಕಾಯಕ, ದಾಸೋಹ ಹಾಗೂ ಪ್ರಸಾದ ಎಂಬ ಮೂರು ಸ್ತಂಭದ ಮೇಲೆ ನಿಂತಿದೆ.

ಅವರ ತತ್ವಗಳನ್ನೇ ಇಟ್ಟುಕೊಂಡು ಸಿದ್ದರಾಮಯ್ಯನವರ ಸರ್ಕಾರ ಸರ್ವರಿಗೂ ಸಮಬಾಳು ಮತ್ತು ಸಮಪಾಲು ಎಂಬ ನೀತಿ ಅನುಸರಿಸಿಕೊಂಡಿದೆ. ಆದರೆ ಅಧಿವೇಶನದಲ್ಲಿ ಪ್ರತಿಪಕ್ಷದವರು ನಮ್ಮ ಸರ್ಕಾರವನ್ನು ಅಹಿಂದ ಸರ್ಕಾರ ಎಂದು ಅಪವಾದ ಮಾಡುತ್ತಿದ್ದಾರೆ.

ನಮ್ಮ ಸರ್ಕಾರ ಸಮಾಜದ ಎಲ್ಲ ಜನರಿಗೆ ಕ್ಷೀರಭಾಗ್ಯ, ಕೃಷಿಭಾಗ್ಯ, ಆರೋಗ್ಯಭಾಗ್ಯ, ಅನ್ನಭಾಗ್ಯ, ವಿದ್ಯಾಸಿರಿ, ಮನಸ್ವಿನಿ ಸೇರಿದಂತೆ ಅನೇಕ ಯೋಜನೆ ತಂದಿದೆ. ಕೇವಲ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಮಾತ್ರವಲ್ಲ. ಆರ್ಥಿಕವಾಗಿ ಹಿಂದುಳಿದ ಯಾವುದೇ ಜನಾಂಗವಿರಲಿ ಅವರಿಗೆ ಯೋಜನೆಗಳು ಒಳಪಡುತ್ತವೆ ಎಂದು ಹೇಳಿದರು. 

12ನೇ ಶತಮಾನದಲ್ಲಿ ನಿರ್ಮಾಣವಾದ ಅನುಭವ ಮಂಟಪದಲ್ಲಿ ಬ್ರಾಹ್ಮಣ ಹಾಗೂ ಮೇಲ್ವರ್ಗದ ಜನರಿರಲಿಲ್ಲ. ಇಪ್ಪತೊಂದನೇ ಶತಮಾನದಲ್ಲಿ ಅನುಭವ ಮಂಟಪ ಮಾಡಲು ನಮ್ಮಿಂದ ಸಾಧ್ಯವೇ ಎಂದು ತಿಳಿದುಕೊಳ್ಳಬೇಕಾಗಿದೆ. ಜಾತಿ ಬಿಡಿ. ಉಪಜಾತಿಗಳಾಗಿ ಇಬ್ಭಾಗ ಮಾಡಿಕೊಂಡಿದ್ದೇವೆ. ಸಮಾಜ ಬೆಳೆಯುತ್ತಿದೆ. 

Advertisement

ಮೌಲ್ಯಗಳನ್ನು ಮರೆಯುತ್ತಿದ್ದೇವೆ ಎಂದು ಹೇಳಿದರು. ಬುದ್ಧನ ನಂತರ ಬಂದ ಬಸವಣ್ಣ ಸಮಾಜದಲ್ಲಿ ಸಮಾನತೆ ಹಾಗೂ ಐಕ್ಯತೆ ಕಾಪಾಡಿದರು. ಆದ್ದರಿಂದ ಯುವಕರು ವ್ಯಕ್ತಿ ಪೂಜೆಗೆ ಮಹತ್ವ ನೀಡದೇ ತತ್ವಪೂಜೆ ಮಾಡಿದರೆ ಸಾಕು ಸ್ವಪ್ರಕಾಶಿತರಾಗಿ ಉತ್ತಮ ಸಮಾಜಕ್ಕೆ ದಾರಿದೀಪವಾಗಿ ಜಗತ್ತನೇ ಬೆಳಗಿಸಬಹುದು ಎಂದು ಹೇಳಿದರು. 

ಗುರುಮಿಠಕಲ್‌ನ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗೀತಾ ಸಾಹೇಬಗೌಡ ಬೋಗುಂಡಿ ಧ್ವಜಾರೋಹಣ ನೆರವೇರಿಸಿದರು. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ. ರಾಮಕೃಷ್ಣ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣು ಮೋದಿ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ವಾಡಿ-ಶಹಾಬಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಷಮ್‌ಖಾನ್‌,

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ರಶೀದ್‌ ಮರ್ಚಂಟ್‌, ಮಾಜಿ ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ, ಕಲಬುರಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ| ಮೈಕಲ್‌, ನಗರಸಭೆ ಉಪಾಧ್ಯಕ್ಷೆ ಲಕ್ಷಿಬಾಯಿ ಕುಸಾಳೆ ಇದ್ದರು. ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಅನಿಲ ಮರಗೋಳ ಅಧ್ಯಕ್ಷತೆ ವಹಿಸಿದ್ದರು. ಶರಣಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೃತ್ಯುಂಜಯ ಹಿರೇಮಠ ಸ್ವಾಗತಿಸಿದರು. ವಿಶ್ವನಾಥ ಹಡಪದ ನಿರೂಪಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next