Advertisement

‘ನೈತಿಕ ನೆಲೆಗಟ್ಟಿನ ಹೋರಾಟಗಾರ ಬಸವಣ್ಣ’

05:47 PM May 14, 2021 | Team Udayavani |

ನಾವು ಬದಲಾವಣೆ ಬಯಸುತ್ತೇವೆ ಆದರೆ ಸ್ವತಃ ಬದಲಾಗುವದಿಲ್ಲ,ಉಪದೇಶ ಮಾಡುತ್ತೇವೆ ನಮ್ಮ ಮನ ಅವಲೋಕನ ಮಾಡುವುದಿಲ್ಲ,ಆಚಾರ ವಿಚಾರದಲ್ಲೂ ಲಾಭ ನಷ್ಟಗಳ ಲೆಕ್ಕ ಹಾಕುವ ಕಾಲಮಾನ ಇದು.ಆದರೆ, ಇತಿಹಾಸದಲ್ಲಿ ಇಂತಹ ಮನಸ್ಸುಗಳಿಗೆ ಜಾಗವಿಲ್ಲ. ಇದು ಕೇವಲ ಈಗಿನ ಕಥೆ ಅಲ್ಲ ಅನಾದಿಕಾಲದಿಂದಲೂ ಮಾನವಜೀವನದ ಮೇಲೆ ಪ್ರಭಾವ ಬೀರುವ ಭಾವನೆಗಳ ಸಂತೆ. ಈ ಸಂತೆಯಲ್ಲಿ ಮಾನವಕೂಲಕ್ಕೆ ಒಳಿತು ಮಾಡಲು ಸಾಕಷ್ಟು ಮಹನೀಯರು ತಮ್ಮ ತನು ಮನದಿಂದ ತಮ್ಮನ್ನು ಅರ್ಪಿಸಿ ಕೊಂಡಿದ್ದಾರೆ ಅಂತಹ ಮಹಾನುಭಾವರಲ್ಲಿ ೧೨ ಶತಮಾನದಲ್ಲಿ ನಮ್ಮ ಕರುನಾಡಿನ ಪುಣ್ಯ ಭೂಮಿಯಲ್ಲಿ ಜನಿಸಿದ ಬಸವಣ್ಣನವರು ಒಬ್ಬರು.

Advertisement

ಮಡುಗಟ್ಟಿ ನಿಂತ ಅಂದಿನ ಸಮಾಜದಲ್ಲಿ ತಮ್ಮ ವಿಚಾರಧಾರೆಯ ಮುಖೇನ ಸಾಮಾಜಿಕ-ಧಾರ್ಮಿಕ ಚಳುವಳಿ ಆರಂಭಿಸಿದ ವಚನಕಾರರಲ್ಲಿ  ಬಸವಾದಿ ಶರಣರು ಪ್ರಮುಖರಾಗಿದ್ದಾರೆ. ಅರ್ಥರಹಿತ ಆಚಾರ,ಮೇಲುಕೀಳು ಎಂಬ ವಿಚಾರ,ಬಡವ ಶ್ರೀಮಂತರೆಂಬ ಭೇದ,ಲಿಂಗ ತಾರತಮ್ಯ ಹೀಗೆ ಹತ್ತು ಹಲವು ದುರಂತ ಸಮಾಜದ ನಿರ್ಮಾಣದ ಮೌಲ್ಯರಹಿತ ಭಾವನೆಗಳ ವಿರುದ್ಧ ನೈತಿಕ ನೆಲೆಗಟ್ಟಿನಲ್ಲಿ  ಹೋರಾಟ ಆರಂಭಿಸಿದವರು ಕ್ರಾಂತಿಕಾರಿ ಬಸವಣ್ಣನವರು.

ಮೌಲ್ಯಯುತ ಜೀವನಕೆ ವಚನ ಸಂವಿಧಾನ

ಕಳಬೇಡ ಕೊಲಬೇಡ,ಹುಸಿಯ ನುಡಿಯಲು ಬೇಡ,ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ,ಇದಿರು ಹಳಿಯಲು ಬೇಡ,ಇದೆ ಅಂತರಂಗ ಶುದ್ಧಿ ಇದೆ ಬಹಿರಂಗ ಶುದ್ಧಿ,ಇದೆ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ!!

ಈ ಮೇಲಿನ ವಚನವನ್ನು ಬಾಲ್ಯದಿಂದ ಪಠಿಸುತ್ತ ಬೆಳೆದವರು ನಾವೆಲ್ಲರು. ಮಾನವ ಸಮುದಾಯಕ್ಕೆ ಮಾನವಿಯತೆಯ ನೆಲೆಯಲಿ ನೀತಿ ಸಂಹಿತೆ ರಚಿಸಿದ ಅದ್ಭುತ ವಚನವಿದು. ಅಹಿಂಸೆಯ ದಾರಿಯಲ್ಲಿ,ಅಕ್ಷರ ಅರಿವಿನ ಮೂಲಕ ಮಾನವಕೂಲಕ್ಕೆ ೧೨ ಶತಮಾನದಲ್ಲಿ ಭಕ್ತಿ ಭಂಡಾರಿಯ ಎದೆಗೂಡಲ್ಲಿ ಮೂಡಿದ ಈ ವಚನ ನಮ್ಮ ಮನಸ್ಸಿಗೆ ಕಾನೂನಿನ ಚೌಕಟ್ಟು ವಿಧಿಸಿ ಬದುಕು ಹಸನುಗೊಳಿಸುವ ಅರಿವಿನ ಸಂವಿಧಾನವಾಗಿದೆ ಎಂದರೆ ತಪ್ಪಾಗದು. ಈ‌ ಮೇಲಿನ ವಚನದ ಸಾಲುಗಳು ನಮ್ಮ ಜೀವನದ ಅನುಕರಣೆ ಆದರೆ ಸ್ವಸ್ಥ ಸಮಾಜದ ನಿರ್ಮಾಣದ ಕನಸು ನನಸಾಗದೆ ಇರದು.

Advertisement

ಜ್ಞಾನದ ದೀಪ ಬೆಳಗಿದ ಜಗಜ್ಯೋತಿ

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ,

ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ,

ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ,

ಕೂಡಲ ಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯ…

 

ನಮ್ಮ ಜೀವನ ಯಾರು ರೂಪಿಸುವುದಿಲ್ಲ ಹಾಗೆಯೇ ನಮ್ಮ ಜೀವನ ಯಾರು ಹಾಳು‌ ಮಾಡುವುದಿಲ್ಲ.ಅದಕ್ಕೆಲ್ಲ ನಮ್ಮೊಳಗಿನ ಅಜ್ಞಾನವೇ ಕಾರಣವಾಗಿರುತ್ತದೆ. ನಮ್ಮ‌ ಅಂತರಂಗದಲ್ಲಿ ಜ್ಞಾನ ಮೂಡದೆ ನಾವು ಕತ್ತಲೆ ಕಳೆಯಲಾರೆವು. ಸತ್ಯ ನುಡಿಯುವ ಧೈರ್ಯ ನಾಲಿಗೆಗೆ ಬಂದರೆ ಸುಳ್ಳು ಗೆಲ್ಲಲಾರದು. ಹಾಗೆಯೇ ನಮ್ಮ ಒಳಿತಿಗೆ ನಮ್ಮ ಸಹವಾಸ ಅಷ್ಟೇ ಮುಖ್ಯವಾಗಿರುತ್ತದೆ.ಗಂಧದ ಜೊತೆಗೆ ಬೆರೆತ ನೀರು ಸುವಾಸನೆ ಬೀರುವಂತೆ. ಹಾಲಿನಲ್ಲಿ ಬೆರೆತ ನೀರು ಹಾಲಾಗುವಂತೆ ನಮ್ಮ‌ ಸಫಲತೆಯ ಜೀವನ ನಮ್ಮ ಸುತ್ತಲಿನವರ ಪ್ರಭಾವದಿ ಅವತಿರುತ್ತದೆ ಎಂದು ಹೇಳು ಮೇಲಿನ‌ ವಚನ ನವಿರಾಗಿ ನಮಗೆ ಸನ್ಮಾರ್ಗ ತೋರುತ್ತದೆ..ಹೀಗೆ ತಮ್ಮೊಳಗಿನ‌ ಜ್ಞಾನದ ಮೂಲಕ ‌ಜಗಕೆ ಬೆಳಕಾದವರು ಜಗಜ್ಯೋತಿ ಬಸವೇಶ್ವರರು.

ಬಾಲ್ಯದಿಂದಲೇ ಸ್ತ್ರೀ ಸಮಾನತೆಯ ಸಾರಿದ ಕ್ರಾಂತಿಯೋಗಿ

8 ನೇಯ ವಯಸ್ಸಿನಲ್ಲಿ  ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನಿವಾರ ಹಾಕುವ ಕಾರ್ಯಕ್ರಮ ಮಾಡುವಾಗ ಇದು ನನಗಷ್ಟೇ ಏಕೆ ನನಗಿಂತ ಹಿರಿಯಳಾದ ನಾಗಮ್ಮಳಿಗೇಕೆ ಇಲ್ಲ ಎಂದು ಪ್ರಶ್ನಿಸಿದರು ಅದು ಕೇವಲ ಗಂಡು ಮಕ್ಕಳಿಗೆಂದು ಹೇಳಿದಾಗ ಅದನ್ನು ವಿರೋಧಿಸಿದರು.ತಮ್ಮ ಅನುಭವ ಮಂಟಪದಲ್ಲಿ ಲಿಂಗ ಭೇದ ವಿಲ್ಲದೆ ಯಾವುದೇ  ಸ್ತ್ರೀಯರಿಗೆ ತಮ್ಮ ಅನುಭವ ಹಂಚಿಕೊಳ್ಳಲು ಅವಕಾಶ ಕೊಡುತ್ತಿದ್ದರು.. ಆದ್ದರಿಂದ  ಅನುಭವ ಮಂಟಪವನ್ನು ವಿಶ್ವದ ಮೊದಲ ಸಂಸತ್ ಎಂದು ಕರೆಯಲಾಗುತ್ತದೆ.

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ

ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ

ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ

ಇದಾವ ಪರಿಯಲ್ಲಿ ಕಾಡಿಸಿತು ಮಾಯೆ

ಈ ಮಾಯೆಯ ಕಳೆವೂಡೆ ಎನ್ನಳವಲ್ಲ ನೀವೆ ಬಲ್ಲಿರಿ ಕೂಡಲಸಂಗಮ ದೇವಾ!!

ಈ ಒಂದು ವಚನ ಸಾಕಲ್ಲವೆ ಅಣ್ಣನವರು ತಮ್ಮ ವೈಚಾರಿಕ ನೆಲೆಗಟ್ಟಲಿ ಸ್ತ್ರೀ ಸಮಾನತೆಯನು ಎತ್ತಿ ಹಿಡಿದದ್ದು ಕಾಣಲು. ತಾಯಿಯಾಗಿ,ಮಡದಿಯಾಗಿ,ತಂಗಿಯಾಗಿ,ಗೆಳತಿಯಾಗಿ,ಹೀಗೆ ಹಲವು ರೂಪದಲ್ಲಿ ಪುರುಷನ ಜೀವನ ಸಾರ್ಥಕಗೊಳಿಸುವ ಅವಳಿಗೆ ಗೌರವ,ಸಮಾನತೆ ಸಿಗಬೇಕು ಎಂಬುದನ್ನು ಸಾರಿದವರು ಕ್ರಾಂತಿಯೋಗಿ ಬಸವಣ್ಣ.

ಕಾಯಕವೇ ಕೈಲಾಸ ಎಂದ ಕಾಯಕ ಯೋಗಿ

ಕಾಯಕದಲ್ಲಿ ಮೇಲು ಕೀಳು ಎಂಬುವದಿಲ್ಲ.ಇಲ್ಲಿ ದುಡಿಯುವವನೆ ದೊರೆ.ಈ‌ ಕೆಲಸ ಶ್ರೇಷ್ಠ  ಇದು ಕನಿಷ್ಠ ಎಂಬುದೆನಿಲ್ಲ ಎಲ್ಲವು ಉದರ ಪೋಷಣೆಗೆ ಎನ್ನುವ ಅವರ ನಿಲುವು ಇಂದಿನ ಪ್ರಸ್ತುತ ಸಮಯಕ್ಕೆ ತುಂಬ ಅನ್ವಯವಾಗುತ್ತದೆ. ಯಾಕೆಂದರೆ ಯುವಶಕ್ತಿಯ ಮನಸಿನಲ್ಲಿ ದುಡಿಮೆಯ ಮಹತ್ವ   ತಿಳಿಸುವ ಅವಶ್ಯಕತೆ ಇದೆ. ಇದು ಟೆಕ್ನಾಲಜಿ ಕಾಲ ಇಲ್ಲಿ ದೈಹಿಕ ಶ್ರಮಕ್ಕಿಂತ ಬುದ್ಧಿಯ ಬಳಕೆ ಜಾಸ್ತಿಯಾಗಿದೆ,ಅದಕ್ಕಾಗಿ ಅವರಿಗೆ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ತುಂಬಾ ಇರುತ್ತದೆ.  ಕಾಯಕದ ಮಹತ್ವ ಸಾರುವ ಅವರ ಈ ವಚನ ಒಮ್ಮೆ ಓದಲೇ ಬೇಕು.

 

ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು,

ಎಮ್ಮಯ್ಯ ಚೆನ್ನಯ್ಯ ರಾಯಕಂಪಣವ ಹೇರುವ.

ಎಮಗೆ ಆರೂ ಇಲ್ಲವೆಂಬಿರಿ,

ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು.

ಎಮಗೆ ಆರೂ ಇಲ್ಲವೆಂಬಿರಿ,

ಎಮ್ಮ ಅಜ್ಜರ ಅಜ್ಜರು ಹಡೆದ ಭಕ್ತಿಯ ನಿಮ್ಮ ಕೈಯಲು ಕೊಂಬೆ,

ಕೂಡಲಸಂಗಮದೇವಾ!!

 

ಮನಸ್ಸಿನಂತೆ ಮಹಾದೇವ, ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ, ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದರೆ ಸಿಹಿಯಾಗಬಲ್ಲುದೆ ಕಹಿಯಹುದಲ್ಲದೆ ? ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು ಕೂಡಲಸಂಗಮದೇವ!!.

ವೈಜ್ಞಾನಿಕ ವಿಚಾರ ಹೊತ್ತ ಈ ವಚನ ನಾವು ಏನು ಬಿತ್ತನೆ ಮಾಡುತ್ತೆವೊ ಅದನ್ನೆ ಬೆಳೆಯುತ್ತೇವೆ ಹಾಗೆ ಮನಸ್ಸೆಂಬ ಈ‌ ಮಾಯೆ ಮೇಲೆ ನಿಯಂತ್ರಣ ಸಾಧಿಸಲು ನಾವೇ ಶ್ರಮಿಸಬೇಕು ಅಲ್ವೇ ಹಾಗೆಯೇ ನಾವು ಇಂದು ಎದುರಿಸುತ್ತಿರುವ ಕಾಣದ ವೈರಾಣು ಸಮಸ್ಯೆ ನಮಗೆ ನಾವೆ ತಂದು ಕೊಂಡ ಸಮಸ್ಯೆ ಎಂದರೆ ತಪ್ಪಾಗಲಾರದು. ಅವರ ವಚನಗಳು ಬದುಕಿನ ಸತ್ಯವನ್ನು ಎಷ್ಟು ಚೆಂದದಿ ಅನಾವರಣ ಮಾಡಿವೆ ಆದರೆ ನಮಗೆ ಅವಗಳನ್ನು ಓದುವ ತಿಳಿಯುವ ಮನಸ್ಸು ಮರೆಯಾಗಿದೆ ಭಕ್ತಿ ಡಾಂಬಿಕತೆಯಾಗಿದೆ  ವಿಚಾರ  ಶುದ್ಧ ವಿಲ್ಲದೆ.ಅದಕ್ಕಾಗಿ ನಮ್ಮ ವಿಚಾರದಲ್ಲಿ ಏನು ಬೇಕು ಎಂಬುದು ನಮ್ಮ ಅರಿವಿಗಿರಬೇಕು.ಅರಿವು ಗುರುವಾಗಬೇಕು.

ಜಾತಿ ಭೇದ ತೊರೆದು ಏಕತೆ ಮಂತ್ರ ಸಾರಿದ ಭಕ್ತಿ ಭಾಂಡಾರಿ ಬಸವಣ್ಣ

೧೨ ನೇಯ ಶತಮಾನದಲ್ಲಿ ಮೂಢನಂಬಿಕೆ, ಜಾತಿಯತೆ,ಅಸಮಾನತೆ, ಅಸಮಾಧಾನ ದಿಂದ ಜನಮನದಲಿ ಮೌಢ್ಯತೆ ತುಂಬಿತ್ತು ಅಂತಹ ಸಮಯದಲ್ಲಿ ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಎಲ್ಲ ಜಾತಿ ಮೀರಿ ಮಾನವೀಯತೆಗೆ ಬೆಲೆ ನೀಡಿದರು..ಜಾತಿಯತೆ ವಿರುದ್ಧ ಹೋರಾಡಲು ಪ್ರಾರಂಭಿಸಿದರು.ಅದಕ್ಕಾಗಿ ಅಂತರಜಾತಿ‌ ವಿವಾಹ ಪ್ರೋತ್ಸಾಹಿಸಿದರು.

ಮಧುವರಸರ ಮಗಳನ್ನು ಹುಟ್ಟಿನಿಂದ ಸಮಗಾರರಾಗಿ ಸಂಸ್ಕಾರದಿಂದ ಶರಣರಾದ ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡಲು ಪ್ರೇರಣೆ ನೀಡಿದರು. ಹೀಗೆ ಸಮಾಜ ಸುಧಾರಕರಾಗಿ ,ಯೋಗಿಯಾಗಿ,ಭಕ್ತಿ ಭಂಡಾರಿಯಾಗಿ,ಕ್ರಾಂತಿಕಾರಿಯಾಗಿ,ಜಗವ ಬೆಳಗಿದವರು ನಮ್ಮ ಜಗಜ್ಯೋತಿ ಬಸವೇಶ್ವರರು. ಅವರ ವಚನಗಳ ಪ್ರಭಾವ ನವ ಸಮಾಜದ ನಿರ್ಮಾಣದ‌ ನಮ್ಮ ಯುವ ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕಿದೆ..ಈ ನರಳುವ ಸಮಯದಿಂದ ಮನಸ್ಸುಗಳು ಆದಷ್ಟು ಬೇಗ ದೂರ ಸರಿದು ಮತ್ತೆ ನಗೆಯ ಕಡಲಲಿ ಬದುಕು ಬೆಳಗಲಿ..ಎಂದು ಆ ಕೂಡಲ ಸಂಗಮ ದೇವನಲ್ಲಿ ಬೇಡುತ್ತ ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು…

ಜಯಶ್ರೀ ವಾಲಿಶಟ್ಟರ್

ಕರ್ನಾಟಕ ಪಬ್ಲೀಕ್ ಸ್ಕೂಲ್ ಹಿರೇಸಿಂದೋಗಿ

ಕೊಪ್ಪಳ 

Advertisement

Udayavani is now on Telegram. Click here to join our channel and stay updated with the latest news.

Next