Advertisement

ಬಸವ ವಸತಿ ಯೋಜನೆ: ಶೇ. 70 ಗುರಿ ಮುಟ್ಟಿಲ್ಲ 

10:02 AM Oct 29, 2018 | |

ಸುಳ್ಯ : ಮರಳು ಸಿಗದೆ, ಸಹಾಯಧನ ಬಾರದೆ ಬಸವ ವಸತಿ ಯೋಜನೆ ಫಲಾನುಭವಿಗಳು ಅಕ್ಷರಶಃ ಅತಂತ್ರ ಸ್ಥಿತಿಯಲ್ಲಿದ್ದಾರೆ! ಸಹಾಯಧನ ನಂಬಿ ಮನೆ ಕಟ್ಟಲು ಆರಂಭಿಸಿದ ಫಲಾನುಭವಿಗಳಿಗೆ ಸರಕಾರದ ದ್ವಂದ್ವ ನೀತಿ ಮಗ್ಗುಲ ಮುಳ್ಳಾಗಿದೆ. 70 ಶೇ. ದಷ್ಟು ಮನೆಗಳು ಆರಂಭದಲ್ಲಿ ಮತ್ತು ಅರ್ಧದಲ್ಲಿ ತೆವಳುತ್ತಿದ್ದು, ಗುರಿ ಮುಟ್ಟಲು ಪ್ರಯಾಸಪಡುತ್ತಿದೆ.

Advertisement

ಕಳೆದ ವರ್ಷ ಬಸವ ವಸತಿ ಯೋಜನೆಯಡಿ ತಾಲೂಕಿಗೆ 711 ಮನೆಗಳು ಮಂಜೂರಾತಿಗೊಂಡಿತ್ತು. ಅದರಲ್ಲಿ 220 ಮನೆಗಳು ಮಾತ್ರ ಪೂರ್ಣಗೊಂಡಿವೆ. 172 ಮನೆ ನಿರ್ಮಾಣ ಕೆಲಸ ಆರಂಭ ಆಗಿಲ್ಲ. 319 ಮನೆಗಳು ಕಾಮಗಾರಿ ಹಂತದಲ್ಲಿ ಬಾಕಿ ಇವೆ. ಸ್ಥಳೀಯವಾಗಿ ಮರಳು ಸಿಗದಿರುವುದು, ದುಬಾರಿ ದರ ಮತ್ತು ಸರಕಾರದ ಸಹಾಯಧನ ಬ್ಯಾಂಕ್‌ ಖಾತೆಗೆ ಜಮೆ ಆಗದಿರುವುದು ವಿಳಂಬಕ್ಕೆ ಮುಖ್ಯ ಕಾರಣ.

ಪ್ರಗತಿ ಕುಂಠಿತ
ತಾಲೂಕಿನ ಒಟ್ಟು ಅಂಕಿ ಅಂಶ ಗಮನಿಸಿದರೆ ವಸತಿ ಯೋಜನೆಯಲ್ಲಿ ಶೇ. 30ರಷ್ಟು ಪ್ರಗತಿ ಕಂಡಿದೆ. ಶೇ. 70ರಷ್ಟು ಬಾಕಿ ಇದೆ. ಇದರಲ್ಲಿ ಶೇ. 44.86 ಕಾಮಗಾರಿಗಳು ಹಂತದಲ್ಲಿವೆ. ಇದು ಹಿಂದಿನ ವರ್ಷದ ವಸತಿ ಯೋಜನೆಯಲ್ಲಿ ಮಂಜೂರಾದ ಕಾಮಗಾರಿಯ ಕಥೆ. ಮರಳು, ಸಹಾಯಧನ ಅವ್ಯವಸ್ಥೆಯಿಂದ ಪ್ರಗತಿಗೂ ತೊಡರಾಗಿದೆ.

ಮರಳು ಇಲ್ಲ!
ಎರಡು ಪ್ರಮುಖ ನದಿಗಳು ಹರಿಯುವ ತಾಲೂಕಿನಲ್ಲಿ ಮರಳಿಗೆ ಬರ ಬಂದಿದೆ. ಅದು ಆಡಳಿತ ವ್ಯವಸ್ಥೆ ಲೋಪದ ಬರ. ಕುಮಾರಧಾರಾ, ಪಯಸ್ವಿನಿ ನದಿಗಳಲ್ಲಿ ಮರಳು ನಿಕ್ಷೇಪಕ್ಕೆ ಕೊರತೆ ಇಲ್ಲ. ಹಿಂದೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ಭರಪೂರ ಮರಳು ಸಿಗುತ್ತಿತ್ತು.

ಸ್ಥಳೀಯ ಪಂಚಾಯತ್‌ಗೆ ತೆರಿಗೆ ಪಾವತಿಸಿ ಮರಳು ತೆಗೆದು ಮಾರಾಟ ಮಾಡುವ ವ್ಯವಸ್ಥೆ ಇತ್ತು. ನದಿ ಸಂಪತ್ತಿಗೆ ಧಕ್ಕೆ ಮತ್ತು ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಅಕ್ರಮವಾಗಿ ಮರಳು ಕೊಂಡೊಯ್ಯುವ ಕಾರಣ ಒಡ್ಡಿ ಮರಳುಗಾರಿಕೆ ಸ್ಥಗಿತಕ್ಕೆ ಸರಕಾರ ಆದೇಶ ನೀಡಿತ್ತು. ಬಳಿಕ ಗಣಿ ಇಲಾಖೆ ಮೂಲಕ ಹೊಸ ವ್ಯವಸ್ಥೆಯಲ್ಲಿ ಕೇನ್ಯ ಬಳಿ ಕುಮಾರಧಾರಾ ನದಿಯಲ್ಲಿ ನಿಕ್ಷೇಪ ಗುರುತಿಸಿ ಮರುಳುಗಾರಿಕೆಗೆ ಟೆಂಡರ್‌ ಆಹ್ವಾನಿಸಲಾಗಿತ್ತು. ಆದರೆ ಧಾರಣೆ ಪಟ್ಟಿ ಕಾರ್ಯಸಾಧುವಲ್ಲ ಎಂಬ ಕಾರಣದಿಂದ ಯಾರು ಟೆಂಡರ್‌ ವಹಿಸಿಕೊಳ್ಳಲಿಲ್ಲ. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಯಿತು. ಮರಳಿನ ಸಂಗ್ರಹವಿದ್ದರೂ, ಕಾನೂನಿನ ಪ್ರಕಾರ ಹೊಳೆಯಿಂದ ತೆಗೆಯುವಂತಿಲ್ಲ. ಹಾಗಾಗಿ ಇಲ್ಲಿನ ಜನರಿಗೆ ಯಾವುದೇ ಪ್ರಯೋಜನ ಇಲ್ಲದ ಸ್ಥಿತಿ ಉಂಟಾಗಿದೆ. 

Advertisement

ದುಬಾರಿ ದರ
ಮಂಗಳೂರಿನಿಂದ ಮರಳು ತಂದು ಮನೆ ಕಟ್ಟುವ ಸ್ಥಿತಿಯಲ್ಲಿ ಫಲಾನುಭವಿಗಳು ಇಲ್ಲ. ಲೋಡುವೊಂದಕ್ಕೆ ಆರೇಳು ಸಾವಿರ ರೂ. ಇದ್ದ ದರೆ ಈಗ 25 ಸಾವಿರ ರೂ. ದಾಟಿದೆ. ಇದರಿಂದ ಸಹಾಯಧನದಲ್ಲಿ ದೊರೆಯುವ ಶೇ. 75 ಹಣ ಮರಳು ಖರೀದಿಗೆ ಖರ್ಚು ಮಾಡಬೇಕು. ಒಂದು ಲೋಡ್‌ ಖರೀದಿಸಬೇಕಾದರೆ ವಾರಗಟ್ಟಲೆ, ತಿಂಗಳುಗಟ್ಟಲೇ ಕಾದದ್ದೂ ಇವೆ ಎನ್ನುತ್ತಾರೆ ತಾಲೂಕಿನ ಫಲಾನುಭವಿ ಭಾರತಿ.

ಸಹಾಯಧನ ಸಿಗುತ್ತಿಲ್ಲ
2018ರ ಜನವರಿಯಿಂದಲೇ ಸಹಾಯಧನ ಪಾವತಿ ವಿಳಂಬವಾಗಿದೆ. ಈ ತನಕ ಪಾವತಿ ಪ್ರಕ್ರಿಯೆ ಸಮರ್ಪಕವಾಗಿಲ್ಲ. 2018-19ರಲ್ಲಿ ಮನೆ ಮಂಜೂರಾತಿ ಆಗಿಯೇ ಇಲ್ಲ. ಅಡಿಪಾಯ, ಗೋಡೆ, ಛಾವಣಿ ಹಂತದಲ್ಲಿ ಮನೆ ಕಾಮಗಾರಿಗಳು ನಿಂತಿವೆ. ನಾಲ್ಕು ಹಂತದಲ್ಲಿ ಸಿಗುವ ಹಣಕ್ಕೆ ಎಲ್ಲ ನಿಯಮ ಪಾಲಿಸಿದ ಮೇಲೂ ಕಾಯಬೇಕಾದ ಸ್ಥಿತಿ ಉಂಟಾಗಿದೆ.

ಸಹಾಯಧನಕ್ಕೆ ಸಾರಣೆ ಕಡ್ದಾಯ
ಸಹಾಯಧನ ಪಡೆದು ಕಟ್ಟುವ ಮನೆಯನ್ನು ಒಂದು ವರ್ಷದೊಳಗೆ ನಿರ್ಮಿಸಬೇಕು ಎನ್ನುವುದು ಸರಕಾರದ ವಸತಿ ಇಲಾಖೆಯ ಗಡುವು. ಆದರೆ ಮನೆ ಕಟ್ಟಲು ಬೇಕಾದ ಮರಳಿನ ಪೂರೈಕೆ ಸಮಸ್ಯೆ ಬಗೆಹರಿಸಲು ವರ್ಷಗಳೇ ಉರುಳಿದರೂ, ಇನ್ನು ಬಗೆಹರಿದಿಲ್ಲ. ಇಲ್ಲಿ ವಸತಿ ಸಹಾಯಧನ ಸಿಗಬೇಕಾದರೆ ಗೋಡೆ ಸಾರಣೆ ಆಗಬೇಕು ಎಂಬ ನಿಯಮವಿದೆ. ಮರಳಿಲ್ಲದೆ ಸಾರಣೆ ಮಾಡುವುದು ಹೇಗೆ ಅನ್ನುವುದು ಫಲಾನುಭವಿಯ ಪ್ರಶ್ನೆ. ಇದಕ್ಕೆ ಸರಕಾರದ ಬಳಿಯು ಉತ್ತರ ಇಲ್ಲ. ಹಾಗಂತ ನಿಯಮ ಕೂಡ ಸಡಿಲಿಸದೆ ಫಲಾನುಭವಿಯನ್ನು ಇಕಟ್ಟಿಗೆ ಸಿಲುಕಿಸಲಾಗಿದೆ.

ಗಮನಕ್ಕೆ ಬಂದಿಲ್ಲ
ಮನೆ ಕಟ್ಟಲು ಮರಳು ಸಮಸ್ಯೆ ಇರುವುದು ನಮ್ಮ ಗಮನಕ್ಕೆ ಬಂದಿಲ್ಲ. ಲೋಕೋಪಯೋಗಿ ಇಲಾಖೆ ಕೇನ್ಯದಲ್ಲಿ ನಿಕ್ಷೇಪ ಗುರುತಿಸಿ ಮರುಳುಗಾರಿಕೆಗೆ ಅನುಮತಿ ಕೋರಿದ್ದು, ಅದು ಒಪ್ಪಿಗೆ ದೊರೆಯುವ ಹಂತದಲ್ಲಿದೆ. ವಸತಿ ಸಹಾಯಧನ ಪಾವತಿ ಒಂದೆರಡು ತಿಂಗಳಿನಿಂದ ವ್ಯತ್ಯಾಸ ಆಗುತ್ತಿರುವುದು ನಿಜ. ಅದು ಸರಿಯಾಗಲಿದೆ.
– ಆರ್‌. ಮಧುಕುಮಾರ್‌
ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ., ಸುಳ್ಯ

 ಕಿರಣ್‌ ಪ್ರಸಾದ್‌ ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next