Advertisement

ಅಪಘಾತಗಳಿಗೆ ಆಹ್ವಾನ ಅಪಾಯಕಾರಿ ಬ್ಯಾರಿಕೇಡ್‌!

10:43 AM Apr 25, 2022 | Team Udayavani |

ಮಹಾನಗರ: ಮಂಗಳೂರು ನಗರ ವ್ಯಾಪ್ತಿಯ ಹೆದ್ದಾರಿ ಹಾಗೂ ನಗರದ ಒಳಭಾಗದಲ್ಲಿ ಸಂಚಾರ ನಿಯಂತ್ರಣದ ಸದಾಶಯದಿಂದ ಇರಿಸಿರುವ ಬ್ಯಾರಿಕೇಡ್‌ ಗಳ ಅಳವಡಿಕೆ ಸದ್ಯ ಅಪಾಯಕ್ಕೆ ಆಹ್ವಾನ ನೀಡುವಂತಿದೆ!

Advertisement

ಮಳೆ-ಗಾಳಿ ಹತ್ತಿರವಾಗುತ್ತಿದ್ದಂತೆ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಇಡಲಾದ ಬ್ಯಾರಿಕೇಡ್‌ಗಳಿಂದ ಅಪಾಯಕಾರಿ ಸನ್ನಿವೇಶ ಎದುರಾಗಿದೆ. ಈ ಮೂಲಕ ಅಪಘಾತ ನಿಯಂತ್ರಿಸಲು ಹಾಕಿರುವ ಬ್ಯಾರಿಕೇಡ್‌ಗಳೇ ಸ್ವತಃ ಅಪಘಾತಕ್ಕೆ ಆಹ್ವಾನ ನೀಡುವ ಸ್ವರೂಪದಲ್ಲಿದೆ.

ರಾ.ಹೆ.ಗಳಲ್ಲಿ ಶಾಲೆ, ಕಾಲೇಜುಗಳು, ಆಸ್ಪತ್ರೆ, ಪಾದಚಾರಿಗಳು ರಸ್ತೆ ದಾಟುವಿಕೆ ಪ್ರಮಾಣ ಜಾಸ್ತಿ ಇರುವ ಪ್ರದೇಶಗಳು ಸಹಿತ ಸೂಕ್ಷ್ಮ ಪ್ರದೇಶಗಳಲ್ಲಿ ವಾಹನಗಳ ವೇಗ ನಿಯಂತ್ರಿಸಲು ಸ್ಪೀಡ್‌ ಬ್ರೇಕರ್‌, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತದೆ. ವಿಶೇಷವೆಂದರೆ, ರಾಷ್ಟ್ರೀಯ ಹೆದ್ದಾರಿಯು ನಗರದ ಬಹುಮುಖ್ಯ ಪಟ್ಟಣಗಳ ಮಧ್ಯೆಯೇ ಹಾದು ಹೋಗಿರುವ ಕಾರಣದಿಂದ ಅಲ್ಲಲ್ಲಿ ವೇಗನಿಯಂತ್ರಕಗಳನ್ನು ಇರಿಸಲಾಗಿದೆ. ರಸ್ತೆಯ ಬಹುತೇಕ ಭಾಗ ಬ್ಯಾರಿಕೇಡ್‌ ಗಳಿಂದ ತುಂಬಿ ರಾಷ್ಟ್ರೀಯ ಹೆದ್ದಾರಿಗಳು ತನ್ನ ಮೂಲಾರ್ಥವನ್ನೇ ಕಳೆದುಕೊಂಡಿದೆ. ಜತೆಗೆ ರಸ್ತೆ ದಾಟುವಿಕೆ ಪಥಗಳ ಕೊರತೆಯಿಂದ ಜನರು, ವಾಹನಗಳು ಆತಂಕದಿಂದಲೇ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಿಫ್ಲೆಕ್ಟರ್‌ಗಳೇ ಇಲ್ಲ!

ಮೂಲ್ಕಿಯಿಂದ ತಲಪಾಡಿವರೆಗೆ ಹಾಗೂ ಪಂಪ್‌ವೆಲ್‌ನಿಂದ ಅಡ್ಯಾರ್‌ ವರೆಗೂ ರಾ.ಹೆದ್ದಾರಿಯದ್ದಕೂ ಹಲವು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

Advertisement

ಆದರೆ ಇವುಗಳಲ್ಲಿ ಹೆಚ್ಚಿನ ಬ್ಯಾರಿಕೇಡ್‌ಗಳಲ್ಲಿ ರಿಫ್ಲೆಕ್ಟರ್‌ (ಪ್ರತಿಫಲನ) ಅಳವಡಿಸಲಾಗಿಲ್ಲ. ವಾಹನ ಚಾಲಕರಿಗೆ ಮಾಹಿತಿ ನೀಡುವ ಸೂಚನ ಫಲಕಗಳಿಲ್ಲ. ಪರಿಣಾಮ ತೀರ ಹತ್ತಿರ ಬರುವವರೆಗೆ ವಾಹನ ಚಾಲಕರಿಗೆ ಇದು ಗಮನಕ್ಕೆ ಬರುವುದಿಲ್ಲ. ಗಮನಕ್ಕೆ ಬರುವಷ್ಟರಲ್ಲಿ ವೇಗ ನಿಯಂತ್ರಿಸಲು ಸಮಯಾವಕಾಶವಿಲ್ಲದೆ ಅಪಘಾತಗಳು ಸಂಭವಿಸುತ್ತಿವೆ. ಇದಲ್ಲದೆ ಬ್ಯಾರಿಕೇಡ್‌ ಗಳನ್ನು ಕೂಡ ವ್ಯವಸ್ಥಿತವಾಗಿ ಅಳವಡಿಸಿಲ್ಲ. ವಾಹನ ಚಾಲಕರು ಪ್ರಯಾಸಪಟ್ಟು ಇದರ ನಡುವೆ ನುಸುಳಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ಬ್ಯಾರಿಕೇಡ್‌ಗಳ ನಿರ್ವಹಣೆ ಸಮರ್ಪಕವಾಗಿಲ್ಲದೆ ಹಲವು ಬಾರಿ ಸಮಸ್ಯೆ ಎದುರಿಸಬೇಕಾಗುವುದು.

ಜಪ್ಪಿನಮೊಗರು, ಕಲ್ಲಾಪು, ಬೀರಿ, ಕೊಟ್ಟಾರ, ಬೈಕಂಪಾಡಿ, ಪಾವಂಜೆ ಸಹಿತ ಕೆಲವು ಭಾಗಗಳಲ್ಲಿ ಬ್ಯಾರಿಕೇಡ್‌ ಅಳವಡಿಕೆ ಪ್ರಮುಖವಾಗಿ ಸಮಸ್ಯೆ ಸೃಷ್ಟಿಸುತ್ತಿವೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ವಲಯ ಎಂದು ಪರಿಗಣಿಸಲಾಗಿರುವ ತಾಣಗಳಲ್ಲಿ ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ಮಾರ್ಗ ಸೂಚಿಯಂತೆ ಬ್ಯಾರಿಕೇಡ್‌ನ‌ ವಿನ್ಯಾಸ ರೂಪಿಸಲಾಗುತ್ತಿದೆ. ಬ್ಯಾರಿಕೇಡ್‌ ಎಷ್ಟು ಎತ್ತರ ಇರಬೇಕು, ಎಷ್ಟು ದೂರದಲ್ಲಿ ಅಳವಡಿಸಬೇಕು ಮುಂತಾದುವುಗಳ ಬಗ್ಗೆ ಐಆರ್‌ಸಿ ಮಾರ್ಗಸೂಚಿಗಳನ್ನು ಪರಿಗಣಿಸಿ ವಿನ್ಯಾಸ ರೂಪಿಸಲಾಗುತ್ತಿದೆ. ಅದರ ಪ್ರಕಾರವೇ ಇರಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ವಾಸ್ತವ ಮಾತ್ರ ಹೆದ್ದಾರಿಯಲ್ಲಿ ಬೇರೆಯದೇ ಇದೆ!

ಬ್ಯಾರಿಕೇಡ್‌ ಬಗ್ಗೆ ನಿಗಾ

ರಾ.ಹೆ. ವ್ಯಾಪ್ತಿಯ ಮಂಗಳೂರಿನ ಕೆಲವು ಕಡೆಗಳಲ್ಲಿ ಯು ಟರ್ನ್ ಇರುವ ಹಿನ್ನೆಲೆಯಲ್ಲಿ ಯಾವುದೇ ಅಪಾಯ ಆಗಬಾರದು ಎಂಬ ನೆಲೆಯಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಇವುಗಳಲ್ಲಿ ರಿಫ್ಲೆಕ್ಟರ್‌ ಇರಬೇಕಾಗಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಆಯಾಯ ವ್ಯಾಪ್ತಿಯ ಪೊಲೀಸ್‌ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಮಳೆ-ಗಾಳಿ ಸಂದರ್ಭ ಬ್ಯಾರಿಕೇಡ್‌ ಬಿದ್ದರೆ ಅದನ್ನು ತೆರವು ಮಾಡುವ ಬಗ್ಗೆ ನಿಗಾವಹಿಸಲಾಗುವುದು. ಎಂ.ಎ. ನಟರಾಜ್‌, ಎಸಿಪಿ, ಸಂಚಾರ ವಿಭಾಗ, ಮಂಗಳೂರು

ದಿನೇಶ್ ಇರಾ

Advertisement

Udayavani is now on Telegram. Click here to join our channel and stay updated with the latest news.

Next