Advertisement

Bantwal: ಸೇತುವೆಯ ಸಾಮರ್ಥ್ಯ ತಪಾಸಣೆ ಯಂತ್ರ ಆಗಮನ

12:30 PM Sep 10, 2024 | Team Udayavani |

ಬಂಟ್ವಾಳ: ಪೊಳಲಿ ಸಮೀಪದ ಅಡ್ಡೂರು ಸೇತುವೆಯ ಸಾಮರ್ಥ್ಯ ಪರಿಶೀಲನೆಗಾಗಿ ಬೆಂಗಳೂರಿನಿಂದ ರಾಜ್ಯ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧೀನದ ಸೇತುವೆ ತಪಾಸಣೆ ಯಂತ್ರವು ಆಗಮಿಸಿ ಸೋಮವಾರದಿಂದ ಸಾಮರ್ಥ್ಯ ತಪಾಸಣೆಯ ಕಾರ್ಯ ಆರಂಭಿಸಿದ್ದು, ಸುಮಾರು 3 ದಿನಗಳ ಕಾಲ ಈ ಕಾರ್ಯ ಮುಂದುವರಿಯುವ ಸಾಧ್ಯತೆ ಇದೆ.

Advertisement

ಸೇತುವೆಯಲ್ಲಿ 11 ಸ್ಪಾನ್‌ಗಳಿದ್ದು, ಪ್ರತಿಯೊಂದರ ಕೋರ್‌ ಮಾದರಿ ಪಡೆದು ಬಳಿಕ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಅಲ್ಲಿ ತಪಾಸಣೆ ಮಾಡಲಾಗುತ್ತದೆ. ಅವರು ಪರಿಶೀಲನ ವರದಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಿ ದ.ಕ. ಡಿಸಿಗೆ ಒಪ್ಪಿಸಲಿದ್ದಾರೆ. ಬಳಿಕ ಡಿಸಿ ಸಂಚಾರದ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಮೊದಲ ದಿನ 2 ಸ್ಪಾನ್‌ಗಳ ಪರಿಶೀಲನೆ ನಡೆದಿದೆ ಎನ್ನಲಾಗಿದೆ. ಆಗಾಗ ಮಳೆಯಾಗುತ್ತಿದ್ದು, ತಪಾಸಣೆ ವೇಗಕ್ಕೆ ಅಡ್ಡಿಯಾಗಿದೆ ಎಂದು ಮೂಲವು ತಿಳಿಸಿದೆ.

ಅಡ್ಡೂರು ಸೇತುವೆ ತಪಾಸಣೆಯ ಬಳಿಕ ಮಂಗಳೂರು ಉಪವಿಭಾಗ ವ್ಯಾಪ್ತಿಯ ಉಳಾಯಿಬೆಟ್ಟು, ಮರವೂರು, ಪಲಿಮಾರು ಸೇತುವೆಗಳ ತಪಾಸಣೆಯ ಕಾರ್ಯ ನಡೆಯಲಿದೆ. ಮೊದಲ ದಿನ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್‌ ಗೋಕುಲ್‌ದಾಸ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ಅಮರನಾಥ ಜೈನ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆರ್‌.ಬಿ.ನಾಗರಾಜ್‌, ಸಹಾಯಕ ಎಂಜಿನಿಯರ್‌ ಹೇಮಂತ್‌ಕುಮಾರ್‌ ಮತ್ತಿತರರು ಸ್ಥಳದಲ್ಲಿದ್ದರು.

ಹೋರಾಟ ಸಮಿತಿ ರಚನೆ
ಅಡ್ಡೂರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧದಿಂದ ತೊಂದರೆಯಾಗುತ್ತಿದ್ದು, ಸ್ಥಳೀಯರು ಬಸ್ಸು ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದರು. ಬಳಿಕ ದ.ಕ.ಜಿಲ್ಲಾಧಿಕಾರಿಗಳು, ಮಂಗಳೂರು ಪೊಲೀಸ್‌ ಕಮೀಷನರ್‌ ಅವರು ಅಡ್ಡೂರಿಗೆ ಭೇಟಿ ನೀಡಿ ತಪಾಸಣ ವರದಿಯ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಆ. 26ರಂದು ತಪಾಸಣಾ ಯಂತ್ರ ಆಗಮಿಸಲಿದೆ ಎಂದು ಹೇಳಲಾಗಿದ್ದು, ಯಂತ್ರದ ಆಗಮನ ವಿಳಂಬಕ್ಕೂ ಆಕ್ರೋಶ ವ್ಯಕ್ತವಾಗಿತ್ತು. ಸೋಮವಾರ ಪೊಳಲಿಯಲ್ಲಿ ಸ್ಥಳೀಯರು ಸಮಾಲೋಚನಾ ಸಭೆ ನಡೆಸಿ ಫಲ್ಗುಣಿ ಸೇತುವೆ ಹೋರಾಟ ಸಮಿತಿಯನ್ನೂ ರಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next