Advertisement

Bangla Illegal immigrants: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪೊಲೀಸರ ಕಟ್ಟೆಚ್ಚರ

01:47 AM Oct 13, 2024 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಕಲಿ ಪಾಸ್‌ಪೋರ್ಟ್‌ ಮೂಲಕ ದುಬಾೖಗೆ ಪ್ರಯಾಣಿಸಲು ಯತ್ನಿಸಿದ ಬಾಂಗ್ಲಾದೇಶದ ಪ್ರಜೆಯನ್ನು ವಶಕ್ಕೆ ಪಡೆದ ಬಳಿಕ ಆತ ನೀಡಿದ ಮಾಹಿತಿಯಂತೆ ಉಡುಪಿಯಲ್ಲಿ ಹಲವು ಬಾಂಗ್ಲಾ ಪ್ರಜೆಗಳನ್ನು ಬಂಧಿಸಿರುವ ಪ್ರಕರಣದ ಬಳಿಕ ಮಂಗಳೂರಿನಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Advertisement

ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಾಗುವುದು. ಹೊರ ರಾಜ್ಯಗಳ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವವರು ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸಬೇಕು. ಬಾಂಗ್ಲಾ ಅಥವಾ ಇತರ ದೇಶಗಳ ಕಾರ್ಮಿಕರು ಅಕ್ರಮವಾಗಿ ಕೆಲಸ ಮಾಡುತ್ತಿದ್ದರೆ ಉದ್ಯೋಗದಾತರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಕರಾವಳಿಯಲ್ಲಿ ಬಾಂಗ್ಲಾದೇಶ ಮೂಲದ ಪ್ರಜೆಗಳು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎನ್ನುವ ಸಂಶಯ ಇತ್ತಾದರೂ, ಇಲ್ಲಿಯವರೆಗೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಯಾರನ್ನೂ ವಶಕ್ಕೆ ಪಡೆದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ, ಮೀನುಗಾರಿಕೆ ಬಂದರು, ಮರಳುಗಾರಿಕೆ, ಕೈಗಾರಿಕೆಗಳಲ್ಲಿ ಉತ್ತರ ಪ್ರದೇಶ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಲ ಎಂದು ಹೇಳಿಕೊಂಡು ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ನೆಲೆಸಿದ್ದಾರೆ. ಒಂದು ಕಾಲದಲ್ಲಿ ಸ್ಥಳೀಯರು ಅಥವಾ ಉತ್ತರ ಕರ್ನಾಟಕ ಭಾಗದ ಕಾರ್ಮಿಕರು ಮಾಡುತ್ತಿದ್ದ ಕೆಲಸಗಳಿಗೆ ಇಂದು ಉತ್ತರ ಭಾರತ ಭಾಗದ ಕಾರ್ಮಿಕರು ನಿರ್ವಹಿಸುತ್ತಿದ್ದಾರೆ.

ನಕಲಿ ಆಧಾರ್‌ ಕಾರ್ಡ್‌?
ಎಲ್ಲರೂ ಆಯಾ ರಾಜ್ಯದ ಆಧಾರ್‌ ಕಾರ್ಡ್‌ಗಳನ್ನು ಹೊಂದಿದ್ದಾರೆ. ಆಧಾರ್‌ ಕಾರ್ಡ್‌ ದಾಖಲೆಯನ್ನೇ ಕೆಲಸಕ್ಕೆ ಸೇರಿಸಿ ಕೊಳ್ಳುವಾಗ ಪರಿಗಣಿಸಲಾಗುತ್ತಿದೆ. ಆದರೆ ಇವುಗಳ ನೈಜತೆಯನ್ನು ಪರಿಶೀಲಿಸದಿರು ವುದೂ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಇದರಿಂದಾಗಿ ಯಾರು ಎಲ್ಲಿಯವರು ಎನ್ನುವ ಸ್ಪಷ್ಟ ಮಾಹಿತಿ ಸಿಗದು. ಪ್ರಸುತ ನಕಲಿ ಆಧಾರ್‌ ಕಾರ್ಡ್‌ಗಳನ್ನೂ ಮಾಡಿಸಿ ಕೊಡುವ ಮಧ್ಯವರ್ತಿಗಳೂ ಕಾರ್ಯ ನಿರತರಾಗಿದ್ದಾರೆ ಎನ್ನಲಾಗಿದೆ.

4 ಸಾವಿರ ಕಾರ್ಮಿಕರ ವಿಚಾರಣೆ
2022 ರಲ್ಲಿ ನಗರ ಪೊಲೀಸ್‌ ವ್ಯಾಪ್ತಿಯ ಎಲ್ಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ಉತ್ತರ ಭಾರತದ ವಿವಿಧ ರಾಜ್ಯಗಳ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು. ಸುಮಾರು 4 ಸಾವಿರಕ್ಕೂ ಅಧಿಕ ಮಂದಿಯನ್ನು ಈ ವೇಳೆ ವಿಚಾರಣೆ ನಡೆಸಿದ್ದರು. ಈ ಪೈಕಿ ಶಂಕಿತ 518 ಮಂದಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದರೂ ಬಾಂಗ್ಲಾ ಪ್ರಜೆಗಳು ಪತ್ತೆಯಾಗಿರಲಿಲ್ಲ.

Advertisement

ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾದ ಬಾಂಗ್ಲಾ ಪ್ರಜೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತನಿಂದ ಏನಾದರೂ ಹೆಚ್ಚಿನ ಮಾಹಿತಿ ಸಿಗುತ್ತದೆಯೇ ಎಂದು ವಿಚಾರಿಸಲಾಗುತ್ತಿದೆ. ಬಾಂಗ್ಲಾ ಪ್ರಜೆಗಳಿಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ಕಮಿಷನರೆಟ್‌ ವ್ಯಾಪ್ತಿಯಲ್ಲಿ ತಪಾಸಣೆ ಕಾರ್ಯವನ್ನು ಚುರುಕುಗೊಳಿಸಲಾಗುವುದು. – ಅನುಪಮ್‌ ಅಗರ್‌ವಾಲ್‌, ನಗರ ಪೊಲೀಸ್‌ ಆಯುಕ್ತ

ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಬಾಂಗ್ಲಾ ಪ್ರಜೆಗಳು ವಾಸವಾಗಿರುವ ಕುರಿತು ಸದ್ಯ ಯಾವುದೇ ಮಾಹಿತಿ ಲಭ್ಯವಿಲ್ಲ. ಈಗಾಗಲೇ ಪೊಲೀಸರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು.– ಯತೀಶ್‌ ಎನ್‌.,
ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

“ಹಿಂದಿ’ಯಿಂದ ತಿಳಿಯಿತು!
ಬಾಂಗ್ಲಾ ಪ್ರಜೆ “ಮೊಹಮ್ಮದ್‌ ಮಾಣಿಕ್‌’ನನ್ನು ಪತ್ತೆ ಹಚ್ಚಿದ್ದು ಅವನ ಹಿಂದಿಯಿಂದ. ಆತ ಮಾತನಾಡುತ್ತಿದ್ದ ಹರಕಲು “ಹಿಂದಿ’ ಭಾಷೆಯಿಂದ ಅನುಮಾನಗೊಂಡ ವಿಮಾನ ನಿಲ್ದಾಣದ ಇಮಿಗ್ರೇಶನ್‌ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದರು. ಭಾರತಕ್ಕೆ ಬಂದು ಕಲಿತ ಕಾರಣದಿಂದ ಹಿಂದಿ ಅಷ್ಟು ಸ್ಪಷ್ಟವಾಗಿರಲಿಲ್ಲ. ಅಧಿಕಾರಿಗಳು ತೀವ್ರತರ ವಿಚಾರಣೆಗೆ ಒಳಪಡಿಸಿದಾಗ ತನ್ನ ಅಸಲಿ ವಿವರವನ್ನು ಬಾಯಿ ಬಿಟ್ಟ. ಅಲ್ಲದೆ ಆತನಲ್ಲಿ ಒಂದು ಬಾಂಗ್ಲಾದೇಶದ ಪಾಸ್‌ಪೋರ್ಟ್‌ ಕೂಡ ಇತ್ತು. ಉಡುಪಿಯಲ್ಲಿ ಭಾರತದ ನಕಲಿ ಪಾಸ್‌ಪೋರ್ಟ್‌ ಮಾಡಿಸಿರುವುದೂ ವಿಚಾರಣೆ ವೇಳೆ ಸ್ಪಷ್ಟಗೊಂಡಿದೆ.

ಮೊಹಮ್ಮದ್‌ ಪೊಲೀಸ್‌ ಕಸ್ಟಡಿಗೆ
ಮಂಗಳೂರು: ಬಂಧಿತ ಬಾಂಗ್ಲಾ ಪ್ರಜೆ ಮೊಹಮ್ಮದ್‌ ಮಾಣಿಕ್‌ನನ್ನು ಪೊಲೀಸರು ಒಂದು ವಾರ ಕಸ್ಟಡಿಗೆ ಪಡೆದ್ದಿದ್ದಾರೆ. ಈತನ ವಿರುದ್ಧ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಕಸ್ಟಡಿಗೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಶುಕ್ರವಾರ ಸಂಜೆ 5.45ರ ವೇಳೆಗೆ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್‌ ವಿಭಾಗ ಕೌಂಟರ್‌ ನಂ.6 ರಲ್ಲಿ ಮೊಹಮ್ಮದ್‌ ಮಾಣಿಕ್‌ ಭಾರತೀಯ ಪಾಸ್‌ ಪೋರ್ಟ್‌ ಹಾಗೂ ಇತರೆ ದಾಖಲಾತಿಗಳನ್ನು ಹಾಜರುಪಡಿಸಿದ್ದ. ಈ ವೇಳೆ ದಾಖಲೆಗಳ ಬಗ್ಗೆ ಅನುಮಾನಗೊಂಡು ಅಧಿಕಾರಿಗಳು ಆತನನ್ನ ವಿಚಾರಣೆಗೆ ಒಳಪಡಿಸಿದ್ದರು.
ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆ ಮಾಣಿಕ್‌ಚೌಕ್‌ನ ನಿವಾಸಿ ಮೊಹಮ್ಮದ್‌ ಮಾಣಿಕ್‌.

ಬಾಂಗ್ಲಾದೇಶದ ರಾಷ್ಟ್ರೀಯ ಗುರುತು ಚೀಟಿ ಸಂಖ್ಯೆ 601 ಆಗಿದ್ದು ಈತನು 2017ರಲ್ಲಿ ಇಂಡೋ -ಬಾಂಗ್ಲಾ ಅಂತರಾಷ್ಟ್ರೀಯ ಗಡೀರೇಖೆ ಪಶ್ಚಿಮ ಬಂಗಾಳದ ಮುರ್ಷಿದಬಾದ್‌ ಜಿಲ್ಲೆಯ ಲಾಲ್‌ಗೊಲ್‌ ಮುಖೇನ ಭಾರತಕ್ಕೆ ಬಂದಿದ್ದ. ಶೆಲ್ಡಾ-ಹೌರ-ಚೆನ್ನೈ ಮುಖಾಂತರ ಮಂಗಳೂರು ಮೂಡಬಿದರೆ ಮೂಲಕ ಉಡುಪಿಗೆ ಬಂದಿದ್ದ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next