Advertisement

ಹಳ್ಳಿಗಳಿಗೆ ಹೋಗದ ಪಿಡಿಒಗಳ ಬೆಂಗಳೂರು ಕೆಲಸ

06:00 AM Aug 02, 2018 | |

ಬೆಂಗಳೂರು: ಗ್ರಾಮೀಣ ಜನರ ಸೇವೆಗೆಂದು ನೇಮಕಗೊಂಡರೂ ಗ್ರಾಮಗಳತ್ತ ಮುಖ ಮಾಡದ ಸುಮಾರು 15ಕ್ಕೂ ಅಧಿಕ ಮಂದಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಕಾರ್ಯಕ್ಷೇತ್ರ ಶಕ್ತಿಕೇಂದ್ರ ವಿಧಾನಸೌಧ ಬಳಿಯ ವಿಶ್ವೇಶ್ವಯ್ಯ ಗೋಪುರ!

Advertisement

ಗ್ರಾಮಗಳಿಗೆ ತೆರಳದೆ ರಾಜಧಾನಿಯಲ್ಲೇ ಏಳು ವರ್ಷದಿಂದ ಬೀಡುಬಿಟ್ಟಿರುವ ಪಿಡಿಒಗಳು ಸ್ವಸ್ಥಾನಕ್ಕೆ ತೆರಳಬೇಕೆಂಬ ಸರ್ಕಾರದ ಸೂಚನೆಗೂ ಕ್ಯಾರೆ ಎಂದಿಲ್ಲ. ಗ್ರಾಮಗಳಿಂದ ದೂರವೇ ಉಳಿದಿರುವ ಈ ಅಧಿಕಾರಿಗಳು ಪಿಡಿಒ ಹುದ್ದೆಯ ಪಗಾರ ಪಡೆಯುತ್ತಿದ್ದರೂ ಸಚಿವಾಲಯದ ಕಿರಿಯ ಸಹಾಯಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಅಂಬೇಡ್ಕರ್‌ ವೀದಿಯಲ್ಲಿರುವ ವಿಶ್ವೇಶ್ವರಯ್ಯ ಗೋಪುರದಲ್ಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕೇಂದ್ರ ಕಚೇರಿಯ ವಿವಿಧ ಶಾಖೆಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಪಂಚಾಯತ್‌ ಅಧಿಕಾರಿಗಳು (ಪಿಡಿಒ) ಸಚಿವಾಲಯದ ಕಿರಿಯ ಸಹಾಯಕರಾಗಿ ನಿಯೋಜನೆ ಸೇವೆ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಏಳು ವರ್ಷಗಳಿಂದ ಇದೇ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ಪಿಡಿಒಗಳು ತಕ್ಷಣವೇ ಸ್ವಸ್ಥಾನಗಳಿಗೆ ಹಿಂತಿರುಗುವಂತೆ ಸರ್ಕಾರ 2016ರಲ್ಲೇ ಸೂಚನೆ ನೀಡಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಎರವಲು ಸೇವೆ ಮೇಲೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್‌ ಕಾರ್ಯದರ್ಶಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆಗೊಳಿಸಿ ಆಯಾ ಜಿಲ್ಲಾ ಪಂಚಾಯತ್‌ಗೆ ಹಿಂತಿರುಗುವಂತೆ ಆದೇಶ ಹೊರಡಿಸಿತ್ತು. ಆದರೆ ಈ ಆದೇಶವನ್ನು ಕೆಲವು ಅಧಿಕಾರಿಗಳು ಪಾಲನೆ ಮಾಡಿದಂತೆ ಕಾಣುತ್ತಿಲ್ಲ.

ಕರ್ನಾಟಕ ನಾಗರಿಕ ಸೇವಾ ನಿಯಮ 423ರ ಅನ್ವಯ, ನಿಯೋಜನೆಯಡಿ ಕಾರ್ಯ ನಿರ್ವಹಿಸುವಾಗ ಮೂಲ ಹುದ್ದೆಯ ಸರಿಸಮಾನವಾದ ಜವಾಬ್ದಾರಿಯನ್ನೇ ನಿರ್ವಹಿಸಬೇಕು. ಆದರೆ ಈ ನಿಯಮ ಪಾಲನೆಯಾದಂತಿಲ್ಲ. ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ನಿಯೋಜಿತ ಸೇವೆ ಸಲ್ಲಿಸುತ್ತಿರುವ ಪಿಡಿಒಗಳು ಹಲವು ಕಾರಣಗಳ ನೆಪವೊಡ್ಡಿ ಆಯಕಟ್ಟಿನ ಹುದ್ದೆಗಳಲ್ಲೇ ಮುಂದುವರಿದಿದ್ದಾರೆ.

Advertisement

ಸರ್ಕಾರದ ಬೊಕ್ಕಸಕ್ಕೂ ನಷ್ಟ:
ಸಚಿವಾಲಯದ ಕಿರಿಯ ಸಹಾಯಕರ ವೇತನ ಶ್ರೇಣಿ ರೂ.21400 – 42000ಗಳಾಗಿದ್ದು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವೇತನ ಶ್ರೇಣಿ ರೂ.37900 -70850ಗಳಾಗಿರುತ್ತದೆ. ಆದರೆ, ಸರಿ ಸುಮಾರು ಅರ್ಧದಷುx ಕಡಿಮೆ ವೇತನ ಶ್ರೇಣಿ ಇರುವ ಕಿರಿಯ ಸಹಾಯಕರ ಹುದ್ದೆಗಳಲ್ಲಿ ಪಿಡಿಒಗಳು ಕರ್ತವ್ಯ ನಿರ್ವಸುತ್ತಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇತನ ಪಡೆಯುತ್ತಿರುವುದರಿಂದ ವೇತನಕ್ಕೆ ಸಮಾನವಾದ ಜವಾಬ್ದಾರಿ ನಿರ್ವಹಿಸದಂತಾಗಿದೆ.

ಸಚಿವಾಲಯದ ಕಿರಿಯ ಸಹಾಯಕರ ಹುದ್ದೆಗಳ ಕರ್ತವ್ಯಗಳಿಗೆ ಸೆಕ್ರೆಟೇರಿಯೇಟ್‌ ಮ್ಯಾನ್ಯುಯಲ್‌ ಇಲಾಖಾ ಪರೀಕ್ಷೆಯ ಅರ್ಹತೆ ಅಗತ್ಯವಾಗಿರುತ್ತದೆ. ಅಲ್ಲದೇ ಇಂತಹ ಹುದ್ದೆಗಳಿಗೆ ಸಮಾನ ಕೇಡರ್‌ ನೌಕರರು ಸಾಕಷ್ಟು ಲಭ್ಯರುತ್ತಾರೆ. ಆದರೆ ಸರ್ಕಾರವೇ ನಿಯಮಗಳನ್ನು ಗಾಳಿಗೆ ತೂರಿ ಕಿರಿಯ ಸಹಾಯಕರ ಹುದ್ದೆಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನಿಯೋಜಿಸಿರುವುದು ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ.

ಒಬ್ಬರಿಗೆ ಮೂರು ಪಂಚಾಯತ್‌!
ಗ್ರಾಮ ಸ್ವರಾಜ್‌ ಶಾಖೆ, ಪಶ್ಚಿಮ ಘಟ್ಟ ಶಾಖೆ, ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ ಕಚೇರಿಗಳಲ್ಲಿ ಕೂಡ ಇದೇ ಪರಿಸ್ಥಿತಿ ಇದೆ. 200ಕ್ಕೂ ಅಧಿಕ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್‌ ಕಾರ್ಯದರ್ಶಿಗಳು ನಿಯೋಜನೆ ಆಧಾರದಲ್ಲಿ ಕಾರ್ಯನಿರ್ವಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಪಿಡಿಒ ಕೊರತೆಯಿದ್ದು, ಕೆಲವು ಪಿಡಿಒಗಳಿಗೆ 2-3 ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ಹೊರಿಸಲಾಗಿದೆ. 

ಇಲಾಖೆಯ ಹಲವು ಶಾಖೆಗಳಲ್ಲಿ ನಿಯೋಜನೆ ಸೇವೆಯ ಮೇಲೆ ಕೆಲವರು ಕೆಲಸ ಮಾಡುತ್ತಿರುವುದು ನಿಜ. ಇದರಲ್ಲಿ ಕೆಲವರು ಸಚಿವರು, ಶಾಸಕರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ನಿಯೋಜನೆ ಅಧಿಕಾರಿಗಳು ಇಂತಹದ್ದೇ ಕೆಲಸ ಮಾಡಬೇಕೆಂಬ ಮಾನದಂಡ ಇಲ್ಲ. ಸೆಕ್ರೇಟೆರಿಯೇಟ್‌ ವ್ಯಾಪ್ತಿಯಲ್ಲಿನ ಎಲ್ಲ ಕೆಲಸವನ್ನು ನಿರ್ವಹಿಸುತ್ತಾರೆ.
– ಕೆಂಪೇಗೌಡ, ಆರ್‌ಡಿಪಿಆರ್‌ ನಿರ್ದೇಶಕರು

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next