Advertisement

ಬೆಂಗಳೂರು: ಕವಿ ಶಾಂತಾರಾಮ ವಿ. ಶೆಟ್ಟಿ ಅವರ ಕೃತಿ ಬಿಡುಗಡೆ 

04:14 PM Apr 10, 2018 | Team Udayavani |

ಮುಂಬಯಿ: ಶ್ರೇಷ್ಠ ಕವಿಗಳು ಶ್ಲೇಷೆಯನ್ನು ಉಪಯೋಗಿಸಿಕೊಂಡು ಕಾವ್ಯ ರಚಿಸಿದ್ದಾರೆ. ಓದುಗರನ್ನು ಸುಲಭವಾಗಿ ಓದಿಸಿಕೊಂಡು ಹೋಗುವ ಕೃತಿಗಳ ಕೊರತೆಯಿದ್ದು ಶಾಂತಾರಾಮ ಶೆಟ್ಟಿಯವರ ಕವನ ಸಂಕಲನದಲ್ಲಿ ಓದುಗನನ್ನು ಹಿಡಿದಿಡುವ ಗುಣವಿದೆ. ಅವರ ಕವಿತೆಗಳಲ್ಲಿ ವಾಘರ್ಥಗಳಿವೆ. ಈ ಕೃತಿಯಲ್ಲಿ ಯಕ್ಷಗಾನ, ರಂಗಭೂಮಿಯ ವರ್ಣಗಳಿವೆ. ಇಲ್ಲಿ ದೊಡ್ಡದೊಡ್ಡ ಆನೆಗಳಿಲ್ಲ.  ಜೀವನ ಅನುಭವ, ಭಾವನಾತ್ಮಕ ಅಂಶಗಳಿರುವ ಕವನಗಳಿವೆ ಎಂದು ಪದ್ಮಶ್ರೀ ಡಾ| ದೊಡ್ಡರಂಗೇ ಗೌಡ ಅವರು ಅಭಿಪ್ರಾಯಪಟ್ಟರು.

Advertisement

ಅವರು ಬೆಂಗಳೂರಿನ ಟೋಟಲ್‌ ಕನ್ನಡ ಪ್ರಕಾಶನ ಹಾಗೂ ಭಾಷಾ ಭಾವೈಕ್ಯ ಕವಿಕೂಟ ಅವರು ಬಸವನ ಗುಡಿಯ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಂತಾರಾಮ ವಿ. ಶೆಟ್ಟಿಯವರ “ಸುಳ್ಳು ಹೇಳಿದ ಸತ್ಯ’ ಕವನ ಸಂಕಲನ ಲೋಕಾರ್ಪಣೆಗೊಳಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿರು.

ಶಾಂತಾರಾಮ ಶೆಟ್ಟಿಯವರ ಕವನಗಳೆಂದರೆ ಅವು ಉಗುರು ಗೀಚಿನ ಕಾವ್ಯವಿದ್ದಂತೆ ನವಿರಾಗಿವೆ ಎಂದು ಡಾ| ದೊಡ್ಡರಂಗೇ ಗೌಡ ನುಡಿದರು.

ಕೃತಿಯ ಕುರಿತು ಮಾತನಾಡಿದ ಮುಂಬಯಿ ವಿವಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ, ವಿಮರ್ಶಕರು ಶಾಂತಾರಾಮ ಶೆಟ್ಟಿಯವರ ಕವಿತೆಗಳನ್ನು ವಿವಿಧ ಆಯಾಮಗಳಲ್ಲಿ ನೋಡಬಹುದು. ಒಂದು ಕವಿತೆ ಓದುಗ ಅಥವಾ ವಿಮರ್ಶಕನನ್ನು ಚಿಂತನೆಗೆ ಹಚ್ಚುವ ಕಾರ್ಯವನ್ನು ಮಾಡಬೇಕು. ಆ ಕೆಲಸವನ್ನು “ಸುಳ್ಳು ಹೇಳಿದ ಸತ್ಯ’ ಕವಿತೆಗಳಲ್ಲಿ ಕಾಣಬಹುದು. ಸೃಜನಾತ್ಮಕವಾಗಿ ಬರೆಯುವಾಗ ಇರಲೇಬೇಕಾದ ಸರಳತೆ, ಭಾಷೆಯ ಸೊಗಡು, ಸಮೃದ್ಧ ಭಾವನೆಗಳಿಂದ ಕೆಡೆದು ಮಾಡಿದ ಸುಂದರ ಮೂರ್ತಿಯಂತಿರುವ ಈ ಸಂಕಲನದಲ್ಲಿ ಮನುಷ್ಯ ಸಂಸ್ಕೃತಿಯ ಕುರಿತಾದ ಚಿಂತನೆಯಿದೆ. ಸಮಾಜದ ಆಗು-ಹೋಗುಗಳ ಕುರಿತು ಕವಿ ನವಿರಾದ ಹಾಸ್ಯ, ವ್ಯಂಗ್ಯ ಪದಗಳಿಂದಲೇ ಓದುಗನ‌ನ್ನು ಎಚ್ಚರಿಸುವ ಪ್ರಯತ್ನ ಕೂಡ ಈ ಕವನ ಸಂಕಲನದ ಮೂಲಕ ಮಾಡಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಮಾತನಾಡಿ, ಇಂದಿನ ವೇದಿಕೆ ಮುಂಬಯಿ ಮತ್ತು ಬೆಂಗಳೂರನ್ನು ಸಮಸ್ಥಿತಿಯಲ್ಲಿ ತಂದಿಟ್ಟಿದೆ ಎನ್ನಲು ಖುಷಿಯಾಗುತ್ತಾ ಇದೆ. ನಾವು ವೃತ್ತಿ  ಪ್ರವೃತ್ತಿಯನ್ನು ಬೇರೆ ಬೇರೆಯಾಗಿಸಿಕೊಂಡೇ ಪದಗಳನ್ನು ಹೀಗೆ ಪೋಣಿಸಬಹುದು ಎನ್ನುವುದನ್ನು ಶಾಂತಾರಾಮ ಶೆಟ್ಟಿಯವರು ತೋರಿಸಿಕೊಟ್ಟಿದ್ದಾರೆ ಎಂದು ಶುಭಹಾರೈಸಿದರು.

Advertisement

ಇನ್ನೋರ್ವ ಮುಖ್ಯ ಅತಿಥಿ, ಚುಟುಕು ಬ್ರಹ್ಮ ಎಚ್‌. ಡುಂಡಿರಾಜ್‌ ಅವರು ಮಾತನಾಡಿ, ಹನಿಗವನ, ಚುಟುಕು ಸಾಹಿತ್ಯ ಒಂದು ರೀತಿಯಲ್ಲಿ ದರ್ಶನಿಗಳಿದ್ದಂತೆ. ಶೆಟ್ಟಿ ಅವರ ಕವನಗಳು ಎಲ್ಲರೂ ಓದಿ ಅಥೆ„ìಸ ಬಹುದಾದಂತವು. ಅವರ ಹನಿಗಳು ಶಾಂತ ಮತ್ತು ಆರಾಮವಾಗಿವೆ. ಕಾವ್ಯದಲ್ಲಿ ಕೇವಲ ಭಾವನೆಗಳೇ ಇದ್ದಾಗ ಅದು ರಾಜಕೀಯ ಭಾಷಣವಾಗುತ್ತದೆ. ಧ್ಯಾನಸ್ಥ ಮನಸ್ಥಿತಿಯಲ್ಲಿ ಬರೆಯಬೇಕು. ವಿನೋದ ಮತ್ತು ವಿಚಾರ ಎರಡೂ ಹದವಾಗಿ ಬೆರೆತುಕೊಂಡ ಕವನಗಳು ಸುಳ್ಳು ಹೇಳಿದ ಸತ್ಯ ಕವನ ಸಂಕಲನದಲ್ಲಿವೆ ಎಂದರು.

ಮುಂಬಯಿ ಕನ್ನಡಿಗರಲ್ಲಿ ಭಾಷಾ ಪ್ರೇಮ ಹೆಚ್ಚು 

ಹಾಸ್ಯ ಚಕ್ರವರ್ತಿ ಗುಂಡೂರಾವ್‌ ಮಾತನಾಡಿ, ಇಂದಿನ ಕಾರ್ಯಕ್ರಮದಲ್ಲಿ ಬೆಂಗಳೂರು, ಮುಂಬಯಿ ಕನ್ನಡಿಗರ ಸಮಾಗಮವಾಗಿದೆ. ದಾಖಲೆಗಳಲ್ಲಿ ನಾವು ಇಲ್ಲಿನ ನಿವಾಸಿ ಕನ್ನಡಿಗರು. ಮುಂಬಯಿಯವರು ಅನಿವಾಸಿ ಕನ್ನಡಿಗರು. ಆದರೆ ಇಲ್ಲಿನವರ ಕನ್ನಡ ಪ್ರೇಮಕ್ಕಿಂತ ಮುಂಬಯಿಗರ ಕನ್ನಡ ಪ್ರೇಮದ ತೂಕ ಜಾಸ್ತಿಯಾಗಿದೆ. ಸುಳ್ಳು ಮತ್ತು ಸತ್ಯಗಳ ಕುರಿತಾದ ವಾಸ್ತವ ಸತ್ಯ ಶಾಂತಾರಾಮ ಶೆಟ್ಟಿಯವರ ಕವನ ಸಂಕಲನದಲ್ಲಿದೆ ಎಂದರು.

ವಿಶೇಷ ಅಹ್ವಾನಿತ, ರಂಗನಟ ಮೋಹನ್‌ ಮಾರ್ನಾಡ್‌ ಮಾತನಾಡಿ, ನಾನು ಬರೆಹಗಾರನಲ್ಲ. ನಾನೊಬ್ಬ ಓದುಗ. ಶಾಂತಾರಾಮ ಶೆಟ್ಟಿಯವರ  ಕವನಗಳನ್ನು ಓದುವಾಗ ಅದ್ಭುತ ಲೋಕಕ್ಕೆ ಹೋದ ಅನುಭವ ಆಗುವುದು ಸತ್ಯ. ಆ ಅಭಿಮಾನ, ಪ್ರೀತಿಯಿಂದಲೇ ನಾವು ಮುಂಬಯಿಂದ ಇಲ್ಲಿಗೆ ಬಂದಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಮ್ಮ ಸೌಭಾಗ್ಯ ಎಂದರು. ಮುಂಬಯಿ ಲೇಖಕ, ಕವಿ ಪೇತ್ರಿ ವಿಶ್ವನಾಥ ಶೆಟ್ಟಿ ಮಾತನಾಡಿ, ಶಾಂತಾರಾಮ ಶೆಟ್ಟಿ ಅವರ ಕವನಗಳನ್ನು ನಾನು ವಾಟ್ಸಾéಪ್‌ನಲ್ಲಿ ಓದಿ ಮೆಚ್ಚಿಕೊಂಡವ. ಕರ್ನಾಟಕದ ಸಾಹಿತಿಗಳು ಅವರನ್ನು ಗುರುತಿಸುವ ಮೊದಲು ಮುಂಬಯಿ ಕನ್ನಡಿಗರು ಗುರುತಿಸಿದ್ದು ವಿಶೇಷ. ಅವರು ತಮ್ಮ ಕಾವ್ಯಶಕ್ತಿಯಿಂದ ನಾಡಿನಾದ್ಯಂತ ಪರಿಚಿತರಾಗಿದ್ದಾರೆ ಎನ್ನುವುದೂ ಖುಷಿಯ ವಿಚಾರ. ಅವರು ಬರೆಯುವ ವಿಶಿಷ್ಟ ಶೈಲಿಯನ್ನು ನಾನು ಇಷ್ಟಪಟ್ಟವ ಎಂದರು.

ಕೃತಿಕಾರ ಶಾಂತಾರಾಮ ಶೆಟ್ಟಿ ಮಾತನಾಡಿ, ನಾನು ಹವ್ಯಾಸಕ್ಕಾಗಿ ಬರೆಯಲು ಆರಂಭಿಸಿದವನು. ಹಾಗಾಗಿ ಕವಿ ಎನುವ ಮಟ್ಟಕ್ಕೆ ಮುಟ್ಟುವುದು ಅಷ್ಟು ಸುಲಭ ಅಲ್ಲ ಅನ್ನೋದು ನನಗೆ ಗೊತ್ತಿತ್ತು. ಕವಿ ಎನ್ನುವ ಶಬ್ದದ ಅರ್ಥವ್ಯಾಪ್ತಿ ಮತ್ತು ಅದರ ವಿಶಾಲತೆ ಇವೆರಡ ಅರಿವೂ ನನಗಿದೆ. ಒಂದು ಕಡೆ ಈ ಪುಸ್ತಕದಲ್ಲಿ ಕವಿ ಬತ್ತಿದ ಬಾವಿಯಲ್ಲೂ ಭಾವದ ಸೆಲೆ ಹುಡುಕುವ ಭಾವ ಜೀವಿ ಎಂದಿರುವುದು ಆ ಭಾವನೆಯಿಂದಲೇ.  ಕವಿತೆಯನ್ನು ರಚಿಸುವುದು ಅಂದರೆ ಬೋರ್‌ವೆಲ್‌ ಕೊರೆದಂತೆ.  ಒಂದು ಸಾವಿರ ಅಡಿ ಕೊರೆದರೂ ನೀರು ಸಿಕ್ಕಲ್ಲ. ಹಾಗಾಗಿ ಕವಿ ಅನ್ನುವ ಪದ ಕಲ್ಪನಾತೀತ. ಮುಂಬಯಿ  ಕನ್ನಡಿಗರ ಪ್ರೀತಿ, ಟೋಟಲ್‌ ಕನ್ನಡದ ಲಕ್ಷ್ಮೀಕಾಂತ್‌ ಹಾಗೂ ನನ್ನ ಸ್ನೇಹಿತರ ಬೆಂಬಲ ನನ್ನಲ್ಲಿ ಬರೆಯುವ ಭರವಸೆ  ಹೆಚ್ಚಿಸಿದೆ. ಮುಂಬಯಿಯ “ಉದಯವಾಣಿ’, ಕರ್ನಾಟಕ ಮಲ್ಲ ಪತ್ರಿಕೆ ನನ್ನ ಕವಿತೆಗಳನ್ನು, ಲೇಖನಗಳನ್ನು ಪ್ರಕಟಿಸಿದ್ದು ಅವರೆಲ್ಲರಿಗೆ ನಾನು ಋಣಿಯಾಗಿದ್ದೇನೆ ಎಂದು ಅವರು ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪದ್ಮಶ್ರೀ ಡಾ| ದೊಡ್ಡರಂಗೇಗೌಡ ಅವರಿಗೆ ಅಭಿವಂದಿಸಲಾಯಿತು. ಇದೇ ಸಂದರ್ಭದಲ್ಲಿ ಪುಟಾಣಿಗಳಿಂದ ಹಾಗೂ ಸುಧೀಂದ್ರ, ಸುಧಾಕರ ಶೆಟ್ಟಿ,  ಮುಂಬಯಿಯ ಗಾಯಕಿ ಲಕ್ಷ್ಮೀ ಸತೀಶ್‌ ಶೆಟ್ಟಿ  ಮೊದಲಾದವರಿಂದ ಗಾಯನ ಕಾರ್ಯಕ್ರಮ ನಡೆಯಿತು. ಟೋಟಲ್‌ ಕನ್ನಡದ ಲಕ್ಷ್ಮೀಕಾಂತ್‌, ಸದಾನಂದ ಕಾರ್ಕಳ, ದಿವ್ಯಾ ಶಾಂತಾರಾಮ ಶೆಟ್ಟಿ, ಕುಮಾರಿ ದಿಶಾ ಶಾಂತಾರಾಮ ಶೆಟ್ಟಿ, ಕುಮಾರಿ ವರ್ಷಾ ಲಕ್ಷ್ಮೀಕಾಂತ್‌, ಸತೀಶ್‌ ಅಗಿಪಾಲ, ವಿನೋದ್‌ ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಅರ್ಜುನ ಕೋರ್ಡಲ್‌ ಮತ್ತು ತಂಡದವರು ಯಕ್ಷಗಾನ ಶೈಲಿಯ ಪ್ರಾರ್ಥನೆಗೈದರು. ಸುಧೀಂದ್ರ ಕಾರ್ಯಕ್ರಮ ನಿರ್ವಹಿಸಿದರು. ಟೋಟಲ್‌ ಕನ್ನಡದ ಲಕ್ಷ್ಮೀಕಾಂತ್‌ ವಂದಿಸಿದರು. ಪಳ್ಳಿ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next