Advertisement

ಎಕ್ಸ್‌ಪ್ರೆಸ್‌ ಹೈವೆ ಸೇಫ್ಟಿ ಆಡಿಟ್‌ ಆಗಲಿ 

10:31 AM Jun 26, 2023 | Team Udayavani |

ರಾಮನಗರ: ರಾಜ್ಯದ ಪ್ರಮುಖ ಪಟ್ಟಣಗಳಾದ ಬೆಂಗಳೂರು-ಮೈಸೂರು ನಡುವಿನ ಸಂಪರ್ಕ ಸೇತುವಾಗಿ, ಈ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಬೇಕಾದ ಎಕ್ಸ್‌ಪ್ರೆಸ್‌ ಹೈವೇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಡವಟ್ಟಿನಿಂದಾಗಿ ಅವ್ಯವಸ್ಥೆಯ ಆಗರವಾಗಿದೆ. ಹೆದ್ದಾರಿಯ ಸೇಪ್ಟಿ ಆಡಿಟ್‌ ನಡೆಸುವ ಮೂಲಕ ಹೆದ್ದಾರಿ ಅವ್ಯವಸ್ಥೆ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಲೋಪದೋಷ ಸರಿಪಡಿಸುವ ಕೆಲಸ ತ್ವರಿತವಾಗಿ ನಡೆಯಬೇಕಿದೆ.

Advertisement

ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರ ಜೀವರಕ್ಷಣೆ ಜತೆಗೆ ಹೆದ್ದಾರಿ ಕಾಮಗಾರಿಯ ಸಣ್ಣ ಪುಟ್ಟ ಲೋಪದೋಷ ಸರಿಪಡಿಸಿ ಎಕ್ಸ್‌ಪ್ರೆಸ್‌ವೇ ಸುರಕ್ಷಿತ ಹೆದ್ದಾರಿಯಾಗಿ ಪರಿವರ್ತಿಸಬೇಕಿದೆ. ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು, ಹೆದ್ದಾರಿ ಬದಿ ಗ್ರಾಮಗಳ ನಿವಾಸಿಗಳಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಸಂಬಂಧಿಸಿದವರು ತಕ್ಷಣ ಕೈಗೊಳ್ಳಬೇಕಿದೆ.

ಬೈಪಾಸ್‌ ರಸ್ತೆಗೆ ಬೇಕಿದೆ ಸರ್ಜರಿ: ಪೊಲೀಸ್‌ ಇಲಾಖೆ ಮಾಹಿತಿಯ ಪ್ರಕಾರ ರಾಮನಗರ-ಚನ್ನಪಟ್ಟಣ ನಡುವಿನ ಬೈಪಾಸ್‌ ರಸ್ತೆಯಲ್ಲಿ ಜನವರಿಯಿಂದ 17 ಅಪಘಾತ ಸಂಭವಿಸಿದ್ದು 27 ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 22.50 ಕಿ.ಮೀ. ದೂರ ಇರುವ ಬೈಪಾಸ್‌ ರಸ್ತೆಯಲ್ಲಿ ಅಪಘಾತ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿದ್ದು, ಬೈಪಾಸ್‌ ರಸ್ತೆಯಲ್ಲಿ ಅಪಘಾತ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯ ಸರ್ಕಾರವೂ ಗಮನಹರಿಸಲಿ: ರಾಷ್ಟ್ರೀಯ ಹೆದ್ದಾರಿ ಕೇವಲ ಕೇಂದ್ರ ಸರ್ಕಾರದ ಹೊಣೆ ಎಂದು ರಾಜ್ಯ ಸರ್ಕಾರ ಸುಮ್ಮನೆ ಕೂರದೆ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ. ಹೆದ್ದಾರಿಯಲ್ಲಿ ಜೀವ ಕಳೆದುಕೊಳ್ಳುತ್ತಿರುವ ಜನರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹೈವೆ ಸುರಕ್ಷತೆ ಬಗ್ಗೆ ಗಮನಹರಿಸುವ ಕೆಲಸ ಮಾಡಬೇಕಿದೆ. ಹೆದ್ದಾರಿಯಲ್ಲಿ ಬ್ಲಾಕ್‌ಸ್ಪಾಟ್‌ ಗುರುತಿಸಿ ಸರಿಪಡಿಸುವ, ಪ್ರಯಾಣಿಕರಿಗೆ ಸೂಚನಾ ಫಲಕ ಹಾಕಿ ಪ್ರಯಾಣಿಕರಿಗೆ ರಸ್ತೆ ಬಗ್ಗೆ ಮಾಹಿತಿ ನೀಡುವ, ಅವ್ಯವಸ್ಥೆ ಆಗರವಾಗಿರುವ ಅಂಡರ್‌ಪಾಸ್‌, ಮೇಲ್ಸೇತುವೆ ದುರಸ್ಥಿ ಪಡಿಸುವುದು ಸೇರಿ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕಿದೆ.

ಹೆದ್ದಾರಿಯಲ್ಲಿ ಟ್ರಾಮಾ ಸ್ಥಾಪಿಸಿ : 

Advertisement

ಬೆಂಗಳೂರು: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಜೀವಹಾನಿಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯ ಮಾರ್ಗಮಧ್ಯೆ ಅತ್ಯಾಧುನಿಕ ಟ್ರಾಮಾ ಕೇರ್‌ ಸೆಂಟರ್‌ ಜತೆಗೆ ಪ್ರತಿ 30 ಕಿ.ಮೀ. ಗೊಂದು ಆ್ಯಂಬುಲೆನ್ಸ್‌ ಕಲ್ಪಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಪತ್ರ ಬರೆದಿರುವ ದಿನೇಶ್‌ ಗೂಳಿಗೌಡ, ಉದ್ದೇಶಿತ ಮಾರ್ಗದಲ್ಲಿ ರಾಮನಗರ, ಮಂಡ್ಯ ಮತ್ತು ಮೈಸೂರು ಸೇರಿ ಮೂರು ಜಿಲ್ಲೆಗಳು ಬರುತ್ತವೆ. ಕಳೆದ 9 ತಿಂಗಳಲ್ಲಿ (2022ರ ಸೆಪ್ಟೆಂಬರ್‌ನಿಂದ 2023ರ ಜೂನ್‌ವರೆಗೆ) 595 ಅಪಘಾತಗಳು ಸಂಭವಿಸಿವೆ. 158 ಜನ ಜೀವ ಕಳೆದುಕೊಂಡಿದ್ದಾರೆ. ಬೇಗ ಹೋಗುವ ಧಾವಂತದಲ್ಲಿ ಜನ ಅಪಘಾತಗಳಿಗೀಡಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಬೆಂಗಳೂರು-ಮೈಸೂರು ನಡುವೆ ಸುಸಜ್ಜಿತ ಟ್ರಾಮಾ ಕೇರ್‌ ಸೆಂಟರ್‌, ಆಧುನಿಕ ಸೌಲಭ್ಯಗಳಿರುವ ಆಸ್ಪತ್ರೆಯ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಇದರಿಂದ ಸಾಕಷ್ಟು ಜೀವಗಳನ್ನು ಉಳಿಸಲು ಸಾಧ್ಯವಾಗಲಿದೆ. ಅಲ್ಲದೆ, ಹೆದ್ದಾರಿಯಲ್ಲಿ ಪ್ರತಿ 30 ಕಿ.ಮೀ.ಗೆ ಒಂದು ಆ್ಯಂಬುಲೆನ್ಸ್ ನೀಡಬೇಕು. ಇದರಿಂದ ಅಪಘಾತ ಸಂಭವಿಸಿದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ನೆರವಾಗಲಿದೆ. ಕೆಲವೊಮ್ಮೆ ಆ್ಯಂಬುಲೆನ್ಸ್  ಬರುವುದು ವಿಳಂಬವಾಗಿಯೂ ಜೀವ ಹೋಗಿದ್ದಿದೆ. ಹೀಗಾಗಿ ಕೂಡಲೇ ಈ ಭಾಗದಲ್ಲಿ ಟ್ರಾಮಾ ಸೆಂಟರ್‌ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.

ಕೇವಲ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 55 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 52 ಮಂದಿ ತೀವ್ರ ಗಾಯಗೊಂಡಿದ್ದಾರೆ.ಇದೇ ಅವಧಿಯಲ್ಲಿ ಹೊಸ ಬೈಪಾಸ್‌ ನಲ್ಲಿ 269 ಅಪಘಾತಗಳು ಸಂಭವಿಸಿ 92 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೆದ್ದಾರಿಯಲ್ಲಿ ವೇಗಕ್ಕೆ ಮಿತಿ ಇಲ್ಲ. 120 ರಿಂದ 140 ಕಿಮೀ ವೇಗದಲ್ಲಿ ಎಲ್ಲ ವಾಹನಗಳು ಸಂಚರಿಸುತ್ತವೆ. ಅಲ್ಲದೇ, ಸರ್ವೀಸ್‌ ರಸ್ತೆ ಸೇರುವಲ್ಲಿ ನಾಮಫ‌ಲಕ ಇಲ್ಕದೇ ಇರುವುದು. ಇಳಿಜಾರುಗಳಲ್ಲಿ ರಸ್ತೆ ಜಾರುವುದು ಮುಂತಾದ ಕಾರಣಗಳಿಂದ ಅಪಘಾತಗಳು ಹೆಚ್ಚುತ್ತಿರುವುದು ವರದಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಉದ್ದೇಶಿತ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿದಲ್ಲಿ ಗಾಯಾಳುಗಳನ್ನು ಬೆಂಗಳೂರು ಅಥವಾ ಮೈಸೂರಿಗೆ ಸಾಗಿಸಬೇಕಿದೆ. ಎರಡೂ ನಗರಗಳು ಸಾಕಷ್ಟು ದೂರ ಇರುವುದರಿಂದ ಆ “ಗೋಲ್ಡನ್‌ ಅವರ್‌’ನಲ್ಲಿಯೇ ಸಾಕಷ್ಟು ಜನ ಗಾಯಾಳುಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ ಎಂಬುದು ಕಟುಸತ್ಯ. ಆದ್ದರಿಂದ ಟ್ರಾಮಾ ಕೇರ್‌ ಸೆಂಟರ್‌, ಅತ್ಯಾಧುನಿಕ ಆಸ್ಪತ್ರೆಯ ಅಗತ್ಯವಿದೆ ಎಂದೂ ಅವರು ತಿಳಿಸಿದ್ದಾರೆ.

ಕೇಂದ್ರದ ಗಮನ ಸೆಳೆಯಲಿ : ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೇ ಬೆಂಗಳೂರು ಗ್ರಾಮಾಂತರ, ಮಂಡ್ಯ ಮತ್ತು ಮೈಸೂರು ಲೋಕ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆಯಾದರೂ, ಹೆದ್ದಾರಿಯಲ್ಲಿ ಜೀವ ಕಳೆದುಕೊಳ್ಳುತ್ತಿರುವವರು ಹೆಚ್ಚಾಗಿ ಬೆಂಗಳೂರು, ರಾಜ್ಯದ ವಿವಿಧ ಭಾಗದ ಜನತೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರಾಜ್ಯದ ಸಂಸದರು ಕೇಂದ್ರದ ಗಮನ ಸೆಳೆದು ಅವ್ಯವಸ್ಥೆ ಸರಿಪಡಿಸುವ ಕಾರ್ಯ ಮಾಡಬೇಕಿದೆ.

ಇನ್ನು ಈ ಹೈವೆ ಹಾಯ್ದು ಹೋಗುವ ಬೆಂಗಳೂರು ಗ್ರಾಮಾಂತರ, ಮಂಡ್ಯ ಮತ್ತು ಮೈಸೂರು ಸಂಸದರಾದ ಡಿ.ಕೆ.ಸುರೇಶ್‌, ಸುಮಲತಾ ಮತ್ತು ಪ್ರತಾಪ್‌ ಸಿಂಹ ಹೈವೆ ಅವ್ಯವಸ್ಥೆ ಬಗ್ಗೆ ಪಕ್ಷಾತೀತವಾಗಿ ಶ್ರಮಿಸಬೇಕಿದೆ. ಇನ್ನು ಹೆದ್ದಾರಿ ಬಗ್ಗೆ ತೀವ್ರ ಆಸಕ್ತಿ ತೋರಿದ್ದ ಸಂಸದ ಪ್ರತಾಪ್‌ಸಿಂಹ ಪ್ರತಿ ವಿಚಾರಕ್ಕೂ ಎನ್‌ಎಚ್‌ ಎಐ ಪರವಾಗಿ ವಕಾಲತ್ತು ವಹಿಸುವ ಬದಲು ಪ್ರಜೆಗಳ ರಕ್ಷಣೆಗೆ ಮುಂದಾಗಬೇಕಿದೆ.

ಎನ್‌ಎಚ್‌ಎಐ ಎಚ್ಚರಿಸಲಿ : ಎಕ್ಸ್‌ಪ್ರೆಸ್‌ ಹೈವೆ ಕಾಮಗಾರಿಯಲ್ಲಿ ಸಾಕಷ್ಟು ಲೋಪಗಳಾಗಿದ್ದು, ಇದರಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಎಚ್ಚರಿಸುವ ಕೆಲಸವಾಗಬೇಕಿದೆ. ಎಕ್ಸ್‌ಪ್ರೆಸ್‌ ಹೈವೆಯಲ್ಲಿನ ಅಪಘಾತ ಸಂಭವಿಸುತ್ತಿರುವುದು ಏಕೆ, 158 ಮಂದಿ ಸಾವಿಗೀಡಾಗಿರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕಿದೆ. ಈ ಕಾರಣದಿಂದಾಗಿ ಎಕ್ಸ್‌ಪ್ರೆಸ್‌ ಹೈವೆ ಕುರಿತು ಸೇಪ್ಟಿ ಆಡಿಟ್‌ ನಡೆಸಬೇಕಿದೆ. ಇನ್ನು ಬ್ಲಾಕ್‌ಸ್ಪಾಟ್‌ ಗುರುತಿಸಿ ಲೋಪದೋಷ ಸರಿಪಡಿಸುವ ಕೆಲಸವನ್ನೂ ಮಾಡಬೇಕಿದೆ.

ಪ್ರಯಾಣದ ಸಮಯ ಕಡಿಮೆ ಮಾಡುತ್ತೇವೆ, ಜನರ ಸಂಚಾರ ಸುಗಮಗೊಳಿಸುತ್ತೇವೆ ಎಂದು ರಸ್ತೆ ನಿರ್ಮಾಣ ಮಾಡಿರುವ ಹೆದ್ದಾರಿ ಪ್ರಾಧಿಕಾರ, ಪ್ರಯಾಣಿಕರು ಸುರಕ್ಷತೆ ಬಗ್ಗೆ ಉದಾಸೀನ ಮಾಡಿರುವುದು ವಿಪರ್ಯಾಸವೇ ಸರಿ. 8408 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಸ್ತೆಯಲ್ಲಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನಹರಿಸದೇ ಇರುವುದು, ಜನರಿಗೆ ಅನುಕೂಲಕ್ಕಿಂತ ಹೆಚ್ಚು ಅನಾನುಕೂಲ ಮಾಡಿರುವುದನ್ನು ಗಮನಿಸಿ ಇನ್ನಾದರೂ ಎನ್‌ಎಚ್‌ ಎಐ, ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಮಾಡಬೇಕಿದೆ.

ಸುರಕ್ಷತೆಗೆ ಕೈಗೊಳ್ಳಬೇಕಾದ ಪ್ರಮುಖ ಕ್ರಮ: 

● ಅಪಘಾತ ವಲಯ ಗುರುತಿಸಿ ಅಲ್ಲಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಕಣಿ¾ಣಕಿ ಟೋಲ್‌ ಪ್ಲಾಜಾದಲ್ಲಿನ ಅವ್ಯವಸ್ಥೆ, ಟೋಲ್‌ ಬೂತ್‌ನಲ್ಲಿ ಪ್ರಯಾಣಿಕರಿಗೆ ಕಿರಿಕಿರಿ ಸೇರಿದಂತೆ ಟೋಲ್‌ ಸಮಸ್ಯೆ ಪರಿಹರಿಸಿ

● ಮಳೆಗಾಲದಲ್ಲಿ ಹೆದ್ದಾರಿಗೆ ನೀರು ಹರಿದು ಬಂದು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದ್ದು, ಇದನ್ನು ಸರಿಪಡಿಸುವ ಕೆಲಸ ಮಾಡಿ. ಅಂಡರ್‌ಪಾಸ್‌ ಗಳಲ್ಲಿ ಎದುರಾಗಿರುವ ಅವ್ಯವಸ್ಥೆ ಸರಿಪಡಿಸುವ ಜತೆಗೆ ರಾತ್ರಿ ವೇಳೆ ಲೈಟ್‌ಗಳನ್ನು ಹಾಕಬೇಕಿದೆ.

● ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೆಫೆಟೇರಿಯಾ ಸ್ಥಾಪಿಸಿ ಸ್ಥಳೀಯ ಆಹಾರ, ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಜತೆಗೆ ಪ್ರಯಾಣಿಕರ ವಿಶ್ರಾಂತಿಗೆ ಅವಕಾಶ ಮಾಡಬೇಕಿದೆ

● ಹೆದ್ದಾರಿಯಲ್ಲಿ ತುರ್ತು ಸಂದರ್ಭದಲ್ಲಿ ಆ್ಯಂಬು ಲೆನ್ಸ್‌ ಮತ್ತು ಟ್ರೋಲ್‌ ಸೌಲಭ್ಯ ಸಿಗುವಂತೆ ಮಾಡಬೇಕಿದೆ. ಹೆದ್ದಾರಿಯಲ್ಲಿ ಹಾನಿಯಾಗಿರುವ ಫೆನ್ಸಿಂಗ್‌ ಸರಿಪಡಿಸುವ, ರಸ್ತೆ ದಾಟಲು ಸ್ಕೈವಾಕ್‌ ಅಳವಡಿಸುವ ಕೆಲಸ ಮಾಡಬೇಕಿದೆ.

● ಹೆದ್ದಾರಿಯ ಎಂಟ್ರಿ-ಎಕ್ಸಿಟ್‌ ಬಳಿ ಉಂಟಾಗಿರುವ ಸಮಸ್ಯೆ ಸರಿಪಡಿಸುವ, ವೈಜ್ಞಾನಿಕವಾಗಿ ಎಂಟ್ರಿ ಮತ್ತು ಎಕ್ಸಿಟ್‌ ನಿರ್ಮಿಸುವ ಕೆಲಸ ಮಾಡ ಬೇಕಿದೆ. ಸರ್ವೀಸ್‌ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಕೆಲವೆಡೆ ಕಾಮಗಾರಿ ಪೂರ್ಣ ಗೊಂಡಿಲ್ಲ. ಇದರಿಂದಾಗಿ ಸಮಸ್ಯೆಯಾಗುತ್ತಿದ್ದು, ಇದನ್ನು ಸರಿಪಡಿಸುವ ಕೆಲಸವಾಗಬೇಕಿದೆ.

● ಸರ್ವೀಸ್‌ ರಸ್ತೆಯಲ್ಲಿ ಚರಂಡಿ ಹಾನಿ, ಬಸ್‌ಬೇಗಳು ಇಲ್ಲದಿರುವುದು ಸಮಸ್ಯೆಯಾಗಿದ್ದು, ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಗಮನಹರಿಸಬೇಕಿದೆ.

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next