Advertisement

Bangalore kambala: ಅದ್ಧೂರಿ ಕಂಬಳ ಕಣ್ತುಂಬಿಕೊಂಡ ಲಕ್ಷ ಲಕ್ಷ ಜನ

09:22 AM Nov 26, 2023 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಕಂಬಳಕ್ಕೆ ಶನಿವಾರ ಅರ ಮನೆ ಮೈದಾನದಲ್ಲಿ ಚಾಲನೆ ದೊರಕಿದ್ದು, ಲಕ್ಷಾಂತರ ಜನ ಬೆಂಗಳೂರು ಕಂಬಳ-ನಮ್ಮ ಕಂಬಳಕ್ಕೆ ಸಾಕ್ಷಿಯಾದರು. ಮೊದಲ ಬಾರಿಗೆ ಸಿಲಿಕಾನ್‌ ಸಿಟಿಯಲ್ಲಿ ಕಂಬಳವನ್ನು ಆಯೋಜಿಸಿದ್ದು, ಸಾರ್ವಜನಿಕರಿಂದ ಭರ್ಜರಿ ಸ್ಪಂದನೆ ದೊರಕಿದೆ. ಕರಾವಳಿ ಕಂಬಳದ ಉತ್ಸವದ ಸಡಗರ, ಕೆಸರು ಗದ್ದೆಯ ಪರಿಮಳ, ಕಂಬಳದ ವಾದ್ಯ, ಕಹಳೆ, ಡೋಲುಗಳ ನಾದಗಳ ವೈಭೋಗಕ್ಕೆ ಬೆಂಗಳೂರು ಕಂಬಳ ಸಾಕ್ಷಿಯಾಗಿದೆ. ವಿಶಾಲವಾದ ಅರಮನೆ ಮೈದಾನ ತುಂಬೆಲ್ಲ ಜನಸಾಗರ ತುಂಬಿತ್ತು.

Advertisement

ಲಕ್ಷಾಂತರ ಮಂದಿ ಭಾಗಿ!: ಕಂಬಳವನ್ನು ಕಣ್ತುಂಬಿ ಕೊಳ್ಳಲು ಲಕ್ಷಾಂತರ ಮಂದಿ ಮುಂಜಾನೆಯಿಂದ ಸಂಜೆಯವರೆಗೆ ನಿರಂತರವಾಗಿ ಆಗಮಿಸಿ, ನಿರ್ಗಮಿಸಿದ್ದಾರೆ. ಕೇವಲ ವಿವಿಐಪಿಗಳಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿದ್ದ ಹಿನ್ನೆಲೆಯಲ್ಲಿ ಪ್ರೇಕ್ಷಕರು ಕರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗಂಟೆಗಟ್ಟಲೇ ನಿಂತುಕೊಂಡು ನೋಡುವ ದೃಶ್ಯಗಳು ಕಂಡು ಬಂತು.

ಸಾಂಪ್ರದಾಯಿಕ ಉಡುಗೆ: ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆಗಳನ್ನು ತೊಟ್ಟ ಜನರು ಸಂಭ್ರಮಿಸಿದರು. ಮಕ್ಕಳಿಂದ ಹಿಡಿದು ವಯಸ್ಕರ ವರೆಗಿನ ಗಂಡಸರು ಬಿಳಿ ಪಂಚೆ, ಬಿಳಿ ಶರ್ಟ್‌ ಧರಿಸಿ, ಕಣ್ಣಿಗೆ ಕೂಲಿಂಗ್‌ ಗ್ಲಾಸ್‌, ಕೈಯಲ್ಲಿ ಕೋಣವನ್ನು ಪಳಗಿಸುವ ಬೆತ್ತ ಹಿಡಿದು ಕಂಬಳ ಕಣವನ್ನು ಸುತ್ತಾಡಿದ ದೃಶ್ಯಗಳು ಕರಾವಳಿ ಕಂಬಳ ನೆನಪು ಹಸಿರು ಮಾಡಿದೆ. ಇನ್ನೂ ಮಹಿಳೆಯರು ಜರಿ ಸೀರೆ ಹಾಕಿಕೊಂಡು ಮಂಗಳೂರು ಮಲ್ಲಿಗೆ ಮುಡಿಗೇರಿಸಿಕೊಂಡು ಗುಂಪು ಗುಂಪಾಗಿ ನಿಂತುಕೊಂಡು ಹರಟೆ ಹೊಡೆಯುವ ದೃಶ್ಯ ಕಂಡು ಬಂತು.

ಸುಸಜ್ಜಿತ ವ್ಯವಸ್ಥೆ, ನೋ ಟ್ರಾಫಿಕ್‌ ಜಾಮ್‌: ಲಕ್ಷಾಂತರ ಜನರು ಕಂಬಳದಲ್ಲಿ ಭಾಗವಹಿಸಲು ಆಗಮಿಸಿದ್ದರೂ, ವ್ಯವಸ್ಥಿತ ಪಾರ್ಕಿಂಗ್‌ನಿಂದಾಗಿ ಎಲ್ಲಿಯೂ ವಾಹನ ಸಂಚಾರಕ್ಕೆ ಸಮಸ್ಯೆಯಾಗಿಲ್ಲ. ಪೊಲೀಸರು ಕಟ್ಟುನಿಟ್ಟಾಗಿ ಕಾರ್ಯಕ್ರಮಕ್ಕೆ ಆಗಮಿಸುವ ಹಾಗೂ ಹೊರಗೆ ಹೋಗುವ ಗೇಟ್‌ಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನ ಪಾರ್ಕಿಂಗ್‌ ನಿಷೇಧಿಸಿದ್ದು, ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಯಿತು.

ಮಾಲೀಕರಿಗೆ ಗೌರವ: ದೂರದ ಊರಿನಿಂದ ಬಂದ ಕೋಣಗಳ ಮಾಲೀಕರು ತಮ್ಮ ಕೋಣಗಳನ್ನು ಪ್ರಾಯೋಗಿಕವಾಗಿ ಕಣಕ್ಕೆ ಇಳಿಸುವ ಸಂದರ್ಭದಲ್ಲಿ ಕಂಬಳ ಸಮಿತಿ ಗೌರವ ಪೂರ್ವಕವಾಗಿ 2 ಎಳನೀರು, ಅಡಿಕೆ, 5 ವೀಳ್ಯೆ ಎಲೆ, ಕಣ್ಣಿನ ಗ್ಲಾಸ್‌, ಶಲ್ಯವನ್ನು ನೀಡಿ ಗೌರವಿಸಲಾಯಿತು. ತದ ನಂತರಷ್ಟೇ ಕೋಣಗಳನ್ನು ಟ್ರ್ಯಾಕ್‌ನಲ್ಲಿ ಓಡಿಸಲು ಅನುವುಗೊಳಿಸಲಾಯಿತು.

Advertisement

ಸಿಂಗಾರ ಸಿರಿ ಗೌಜು!: ಒಂದೆಡೆ ಕಂಬಳದ ಕ್ರೀಡಾಕೂಟ ಇನ್ನೊಂದೆಡೆ ಸಾಂಸ್ಕೃತಿಕ ವೇದಿಕೆಯಲ್ಲಿ ಕರಾವಳಿ ಕಾರ್ಯ ಕ್ರಮಗಳ ಗೌಜಿ. ಎಲ್ಲಿ ನೋಡಿದರೂ ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಹಾಡುಗಳು ಕೇಳಿ ಬರುತ್ತಿತ್ತು. ಸಾರ್ವ ಜನಿಕರ ಉತ್ಸಹ ಹೆಚ್ಚಿಸಲು ವಿಶೇಷ ಸಾಂಸ್ಕೃತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕರಂಗೋಲು ನೃತ್ಯ, ಯಕ್ಷಗಾನ, ಆಟಿಕಳಂಜ, ಹುಲಿವೇಷ, ಕಂಗೀಲು, ಮಂಕಾಳಿ ನಲಿಕೆ, ಬಾಲಿವುಡ್‌ ಸಮಕಾಲೀನ ನೃತ್ಯ, ಕಂಬ ಳದ ನಲಿಕೆ, ಮಿಮಿಕ್ರಿ, ಚೆನ್ನು ನಲಿಕೆ, ಬೆಂಗಾಲ್‌ ಬ್ಯೂಟಿ ಕ್ರ್ಯೂ ಕಾಮಿಡಿ ಶೋ ಕಾರ್ಯಕ್ರಮದ ಮೆರಗು ಹೆಚ್ಚಿಸಿದೆ.

6 ಸಹೋದರರ ಕೋಣಗಳು: ಕಂಬಳಕ್ಕೆ ಮಂಗಳೂರು ಬೋಲಾರದ ಒಂದೇ ಕುಟುಂಬದ 6 ಮಂದಿ ಸಹೋದರು ಸುಮಾರು 20 ವರ್ಷದಿಂದ ಕಂಬಳ ಕೋಣಗಳ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದೆ. ಪ್ರತಿಮೆಗಳ ಜತೆ ಸೆಲ್ಫಿ ಕಂಬಳದಲ್ಲಿ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಪ್ರತಿಮೆಗಳನ್ನು ಇಡಲಾಯಿತು. ಅಕ್ಕಿ ತಿರಿ, ಕಂಬಳ ಕೋಣಗಳು, ಯಕ್ಷಗಾನ, ಬಾಹುಬಲಿ ಸೇರಿದಂತೆ ಇತರೆ ಪ್ರತಿಮೆಗಳನ್ನು ಕಂಬಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೆಲ್ಫೀ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಜನರು ವಿಶೇಷವಾಗಿ ಕೋಣಗಳ ಪ್ರತಿಮೆಯ ಎದುರು ಸೆಲ್ಫಿ ತೆಗೆದುಕೊಂಡರು.

ನನ್ನ ಕಾರು ಚಾಲಕನೂ ಕೋಣ ಓಡಿಸುತ್ತಿದ್ದಾನೆ: ಖಾದರ್‌ ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಮಾತನಾಡಿ, ಕಂಬಳ ಪರಸ್ಪರ ಎಲ್ಲರನ್ನೂ ಒಟ್ಟುಗೂಡಿಸುವಂತಹ ಅತ್ಯುತ್ತಮವಾದ ವಾತಾವರಣ ನಿರ್ಮಾಣವಾಗಿದೆ. ಪ್ರತಿ ವರ್ಷವೂ ಶಾಶ್ವತವಾಗಿ ಬೆಂಗಳೂರು ಕಂಬಳ ನಡೆಯುವುದಕ್ಕೆ ಎಲ್ಲರೂ ಸಹಕರಿಸಬೇಕು. ಬೆಂಗಳೂರಿನಲ್ಲೂ ಕರಾವಳಿ ಸಂಸ್ಕೃತಿ ಬಿಂಬಿಸುವ ಅವಕಾಶವನ್ನು ಕಂಬಳ ಸಮಿತಿ ಹಮ್ಮಿಕೊಂಡಿದೆ. ನಾನು ಇಲ್ಲಿಗೆ ಬಂದಾಗ ಮಂಗಳೂರಿನಲ್ಲಿರುವ ಅನುಭವ ಉಂಟಾಗಿದೆ. ಈ ಕಂಬಳದಲ್ಲಿ ಎಲ್ಲ ಧರ್ಮದವರೂ ಕಂಬಳದಲ್ಲಿ ಭಾಗಿಯಾಗುತ್ತಾರೆ. ನನ್ನ ಕಾರು ಚಾಲಕ ಶಮೀರ್‌ ಎಂಬಾತ ಆತನ ಕೋಣವನ್ನು ಇಲ್ಲಿ ಓಡಿಸುತ್ತಿದ್ದಾನೆ ಎಂದು ಹೇಳಿದರು.

ಕೋಣಗಳನ್ನು ಮಕ್ಕಳಂತೆ ಸಾಕುತ್ತಾರೆ :

ಕಂಬಳ ಸಮಿತಿಅಧ್ಯಕ್ಷ ಕೆ.ಎಸ್‌.ಅಶೋಕ್‌ ರೈ ಮಾತನಾಡಿ, ಕೋಣಗಳನ್ನು ಮಕ್ಕಳಂತೆ ಸಾಕಿ-ಸಲಹುತ್ತಾರೆ. ಪೇಟಾ ಎಂಬ ಸಂಸ್ಥೆ ಕಂಬಳ ನಿಷೇಧಿಸಬೇಕೆಂದು ಸುಮಾರು 12 ವರ್ಷಗಳ ಕಾಲ ಕೋರ್ಟ್‌ನಲ್ಲಿ ವಾದ ಮಂಡಿಸಿತ್ತು. ಸಿದ್ದರಾಮಯ್ಯ ಅವರ ಬಳಿ ನಾವು ಕಂಬಳಕ್ಕೆ ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದೆವು. ಆಗ ಅವರು ವಿಧಾನ ಸಭೆಯಲ್ಲಿ ಮಂಡಿಸಿ ಸುಗ್ರೀವಾಜ್ಞೆ ಮಾಡಿದ್ದರು. 158 ಜತೆ ಕೋಣಗಳು ಇದರಲ್ಲಿ ಭಾಗವಹಿಸುತ್ತಿವೆ. 228 ಕೋಣಗಳು ನೋಂದಣಿ ಮಾಡಿಸಿದ್ದರೂ 13 ಸೆಕೆಂಡ್‌ನ‌ಲ್ಲಿ ಕರೆ ಮುಟ್ಟಿದ ಕೋಣಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಿದ್ದೇವೆ. ಈ ಕಂಬಳ ಆಯೋಜನೆಗೆ 2 ತಿಂಗಳ ಕಾಲ ಕೆಲಸ ಮಾಡಿದ್ದೇವೆ. ತುಳುವನ್ನು ಕರ್ನಾಟಕದ ಹೆಚ್ಚುವರಿ ಭಾಷೆಯಾಗಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರ ಬಳಿ ವಿನಂತಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next