Advertisement

ಬೆಂಗಳೂರು ಈಗ Brand ಬೆಂಗಳೂರು 

03:47 PM Jun 27, 2017 | Team Udayavani |

ಬೆಂಗಳೂರು ನಿರ್ಮಾತೃ ಕೆಂಪೇಗೌಡರು ದೂರದೃಷ್ಟಿಯಿಂದ ನಿರ್ಮಿಸಿದ ಬೆಂಗಳೂರು ಈಗ ಜಾಗತಿಕ ಮನ್ನಣೆ ಪಡೆದ ನಗರವಾಗಿದೆ. ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಬೆಂಗಳೂರು ಎನ್ನುವ ವಿಶಾಲ ಸೌಧವಾಗಿದೆ. ಕೆಂಪೇಗೌಡರ ಕನಸಾಗಿದ್ದ ಈ ಬೆಂಗಳೂರು ಇಡೀ ರಾಜ್ಯದ ಚಾಲನಾ ಶಕ್ತಿ ಕೇಂದ್ರವೆನಿಸಿದೆ. ಬೆಂಗಳೂರಿನ ಈ ಸಾಧನೆಯ ಪ್ರೇರಕಶಕ್ತಿ ಕೆಂಪೇಗೌಡರು. ಅದಕ್ಕಾಗಿ ಅವರನ್ನು ನಾವು ಗೌರವಪೂರ್ವಕವಾಗಿ ಸ್ಮರಿಸಿ ವಂದಿಸಬೇಕು.

Advertisement

ಬೆಂಗಳೂರು ಜಗತ್ತಿನಲ್ಲೇ ಹೆಸರಾಗಿರುವ ನಗರ. ಈ ಜಗದ್ವಿಖ್ಯಾತಿಯ ಹಿಂದೆ ಜನರ ಕೊಡುಗೆಯಿದೆ. ಕೈಗಾರಿಕೋದ್ಯಮಿಗಳು, ಶಿಕ್ಷಣ ಸಂಸ್ಥೆಗಳು, ವೈಜ್ಞಾನಿಕ ಕೇಂದ್ರಗಳು, ಹಲವು ಸಂಘ- ಸಂಸ್ಥೆಗಳು ಇವುಗಳೆಲ್ಲದರ ನಡುವೆ ಸರ್ಕಾರ ಸಮನ್ವಯ ಸಾಧಿಸಿ ಬೆಂಗಳೂರನ್ನು ವಿಶ್ವವಿಖ್ಯಾತ ನಗರವನ್ನಾಗಿಸಿದೆ.

ಅಂತಾರಾಷ್ಟ್ರೀಯ ನಗರ ಬೆಂಗಳೂರನ್ನು ನಾವು ಮೂರು ಸ್ತರದಲ್ಲಿ ಗುರುತಿಸುತ್ತೇವೆ. ಬೆಂಗಳೂರನ್ನು ವಿಶ್ವವಿಖ್ಯಾತಗೊಳಿಸಿದ ಉದ್ಯಮಗಳು, ಶಿಕ್ಷಣ ಸಂಸ್ಥೆ ಗಳು, ಅಂತಾರಾಷ್ಟ್ರೀಯ ಮನ್ನಣೆಯ ಸಂಘ-ಸಂಸ್ಥೆಗಳ ಅತ್ಯುತ್ತಮ ಕಾರ್ಯನಿರ್ವಹಣೆಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.

ಹಾಗೆಯೇ, ಬೆಂಗಳೂರಿನಲ್ಲಿ ನೆಲೆಸಿರುವ ಮಧ್ಯಮ ವರ್ಗದ ಜನಸಮುದಾಯಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಮತ್ತೂಂದು ಆದ್ಯತೆಯಾಗಿದೆ. ಮೂರನೆಯದಾಗಿ ಹಾಗೂ ಬಹಳ ಪ್ರಮುಖವಾಗಿ ಬೆಂಗಳೂರು ನಗರದ ಇಂದಿನ ಉನ್ನತಿಗೆ ಸದಾ ಶ್ರಮಿಸುತ್ತಿರುವ ಶ್ರಮಿಕ ಸಮುದಾಯಕ್ಕೆ ಜೀವನಾವಶ್ಯಕ ಸೌಲಭ್ಯಗಳನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಈ ಮೂರು ಆದ್ಯತೆಗಳನ್ನು ನಮ್ಮ ಸರ್ಕಾರ ಸಮನ್ವಯದಿಂದ ಸಾಧಿಸುತ್ತಾ ಬಂದಿದೆ.

ಜಾಗತಿಕ ಮಟ್ಟದಲ್ಲಿ ಬೆಂಗಳೂರು ಈಗ “ಬ್ರ್ಯಾಂಡ್‌ ಬೆಂಗಳೂರು’ ಆಗಿದೆ. ವಾಣಿಜ್ಯ ಚಟುವಟಿಕೆಯ ಕೇಂದ್ರ ಬಿಂದು. ಕೈಗಾರಿಕೆಗಳ ಉಗಮ ಸ್ಥಾನ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಗರ. ಹೀಗೆ, ಜಾಗತಿಕ ಸ್ತರದಲ್ಲಿ ಗುರುತಿಸಿಕೊಳ್ಳುವ ಬೆಂಗಳೂರಿಗೆ ನಾವು ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದೇವೆ. ಇಲ್ಲಿ ನೆಲೆಗೊಳ್ಳಲು ಬಯಸುವ ಎಲ್ಲ ಕಂಪನಿಗಳಿಗೆ ಜಮೀನು, ನೀರು ಮತ್ತು ವಿದ್ಯುತ್‌ ನೀಡಲಾಗುತ್ತಿದೆ.

Advertisement

ನಾವು ಕಲ್ಪಿಸಿಕೊಡುತ್ತಿರುವ ಈ ಮೂಲ ಸೌಕರ್ಯಗಳಿಂದಲೇ ವಿಶ್ವದ ದೊಡ್ಡ ದೊಡ್ಡ ಕಂಪನಿಗಳು ಬೆಂಗಳೂರಿನತ್ತ ಮುಖ ಮಾಡಿವೆ. ಜಾಗತಿಕ ದರ್ಜೆಯ ಹಲವು ಕಂಪನಿಗಳು ಬೆಂಗಳೂರಿನಲ್ಲಿ ನೆಲೆಸಿರುವುದೇ ನಮ್ಮ ಸರ್ಕಾರ ಕೈಗಾರಿಕಾ ಸ್ನೇಹಿ ಎಂಬುದನ್ನು ನಿರೂಪಿಸುತ್ತದೆ.

ಜನಸಂಖ್ಯೆ ಒಂದು ಕೋಟಿಗೂ ಅಧಿಕ: ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿಗೂ ಅಧಿಕ. ರಾಜ್ಯದ ಒಟ್ಟು 6.30 ಕೋಟಿ ಜನಸಂಖ್ಯೆ ಪೈಕಿ ಅತ್ಯಧಿಕ ಸಂಖ್ಯೆಯ ಜನರು ವಾಸಿಸುವ ನಗರವಾಗಿದೆ. ಇವರಿಗೆ ಪ್ರಾಥಮಿಕ ಅವಶ್ಯಕತೆಗಳಲ್ಲಿ ಒಂದಾದ ನೀರನ್ನು ಸರ್ಕಾರ ಪೂರೈಸುತ್ತಿದೆ. ಬೃಹತ್‌ ಬೆಂಗಳೂರು ವ್ಯಾಪ್ತಿಯಲ್ಲಿನ ಎಲ್ಲಾ ಪ್ರದೇಶಗಳಿಗೂ ನೀರು ದೊರೆಯುತ್ತಿದೆ. ಬೆಳೆಯುತ್ತಿರುವ ನಗರಕ್ಕೆ ಅನುಗುಣವಾಗಿ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿದೆ.

ಆಧುನಿಕ ರಸ್ತೆ, ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳು, ಉದ್ಯಾನ, ಆಟದ ಮೈದಾನ ನಿರ್ಮಿಸುತ್ತಿದೆ. ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಜೊತೆಗೆ ಸ್ವತ್ಛ ನಗರಿಯನ್ನಾಗಿಸುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ. ತ್ಯಾಜ್ಯ ನಿರ್ವಹಣೆಗಾಗಿ ಆಧುನಿಕ ವಿಧಾನಗಳನ್ನು ಅಳವಡಿಸಿಕೊಂಡಿದೆ. ಕಸದಿಂದ ವಿದ್ಯುತ್‌, ಅನಿಲ ಮತ್ತು ಗೊಬ್ಬರವನ್ನಾಗಿ ಪರಿವರ್ತಿಸಿ ಬಳಸಲು ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರಿನ ಜನಸಂಖ್ಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವವರು ಮಧ್ಯಮವರ್ಗದ ಜನ. ಇವರ ಕನಸು ಬೆಂಗಳೂರಿನಲ್ಲಿ ತಮ್ಮದೇ ಆದ ಸ್ವಂತ ಮನೆಯನ್ನು ಕಟ್ಟಿಕೊಳ್ಳುವುದು. ಇದಕ್ಕಾಗಿ ಸರ್ಕಾರ ವಿವಿಧ ಕಡೆಗಳಲ್ಲಿ ಕೈಗೆಟುಕುವ ದರದಲ್ಲಿ ಮನೆ ಮತ್ತು ನಿವೇಶನಗಳನ್ನು ಒದಗಿಸುತ್ತಿದೆ. ಯಶಸ್ವಿನಿ ಯೋಜನೆಯನ್ನು ನಗರ ಪ್ರದೇಶದವರಿಗೂ ವಿಸ್ತರಿಸಲಾಗಿದೆ. ಇದರಿಂದ ಹೆಚ್ಚಿನ ಪ್ರಯೋಜನ ಬೆಂಗಳೂರಿನ ನಿವಾಸಿಗಳಿಗೆ ಸಿಗುತ್ತಿದೆ.

ಮನೆಗಳಿಗೆ ಪೈಪುಗಳ ಮೂಲಕ ನೈಸರ್ಗಿಕ ಅನಿಲ ಪೂರೈಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಂದ ಹಿಡಿದು ಅಂತಾರಾಷ್ಟ್ರೀಯ ದರ್ಜೆಯ ಆಸ್ಪತ್ರೆಗಳೂ ಇಲ್ಲಿವೆ. ಎಲ್ಲರಿಗೂ ಸುಲಭವಾಗಿ ಮತ್ತು ಹತ್ತಿರದಲ್ಲೇ ಆಸ್ಪತ್ರೆಗಳು, ಶಾಲಾ- ಕಾಲೇಜುಗಳಿವೆ. ಜನರ ಭದ್ರತೆ ಮತ್ತು ರಕ್ಷಣೆಗಾಗಿ ಅಗತ್ಯ ಪ್ರಮಾಣದಲ್ಲಿ ಪೊಲೀಸ್‌ ಠಾಣೆಗಳನ್ನು ನಿರ್ಮಿಸಲಾಗಿದೆ.

ಸುಗಮ ಸಂಚಾರಕ್ಕಾಗಿ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಕಳೆದ ನಾಲ್ಕು ವರ್ಷಗಳಲ್ಲಿ 3,000 ಬಸ್‌ಗಳನ್ನು ನಗರ ಸಾರಿಗೆಗೆ ಸೇರ್ಪಡೆ ಮಾಡಲಾಗಿದೆ. ಫ್ಲೈಓವರ್‌ಗಳನ್ನು ನಿರ್ಮಿಸಲಾಗಿದೆ. ಮೊಟ್ರೋ ಮೊದಲ ಹಂತದ ಯೋಜನೆ ಪೂರ್ಣಗೊಂಡಿದ್ದು, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ. ಉತ್ತಮ ರಸ್ತೆಗಳನ್ನು ನಿರ್ಮಿಸಲಾಗಿದೆ. ಸಿಗ್ನಲ್‌ವುುಕ್ತ ಕಾರಿಡಾರ್‌ಗಳನ್ನು ಆದ್ಯತೆ ಮೇರೆಗೆ ನಿರ್ಮಿಸಲಾಗುತ್ತಿದೆ.

ಉಪನಗರ ರೈಲ್ವೆ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇವುಗಳೆಲ್ಲವೂ ನಗರದ ಸಂಚಾರ ದಟ್ಟಣೆಗೆ ಪರಿಹಾರ ದೊರಕಿಸಿಕೊಡುತ್ತಿವೆ. ಬೆಂಗಳೂರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಒತ್ತು ನೀಡುವ ಜತೆಗೆ ಇಲ್ಲಿನ ಬಡ ವರ್ಗದವರು ಮತ್ತು ಶ್ರಮಿಕ ವರ್ಗದವರಿಗೂ ಅಗತ್ಯ ಅನುಕೂಲಗಳನ್ನು ಕಲ್ಪಿಸಿಕೊಡುತ್ತಿವೆ. ಸರ್ಕಾರ ಬಡವರಿಗೆ ಕಡಿಮೆ ಬೆಲೆಗೆ ಶುದ್ದ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಿದೆ.

ಬಿಎಂಟಿಸಿ ಬಸ್‌ಗಳಲ್ಲಿ ಓಡಾಡಲು ಅನುಕೂಲವಾಗುವಂತೆ ಕಡಿಮೆ ದರ ನಿಗದಿಪಡಿಸಲಾಗಿದೆ. ಬಡವರನ್ನು ಗಮನದಲ್ಲಿಟ್ಟುಕೊಂಡೇ ಕಡಿಮೆ ಬೆಲೆಗೆ ಊಟ- ತಿಂಡಿ ನೀಡುವ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತಿದೆ. ಕೊಳಚೆ ಪ್ರದೇಶದಲ್ಲಿರುವವರಿಗೆ ಪ್ರತಿ ತಿಂಗಳು ಉಚಿತವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೇ ಅವರ ಹಿಂದಿನ ನೀರಿನ ಬಾಕಿ ಬಿಲ್‌ಗ‌ಳನ್ನು ಸರ್ಕಾರ ಮನ್ನಾ ಮಾಡಿದೆ.

ಎಲ್ಲ ಭಾಗಗಳಿಂದಲೂ ಜನರು ಇಲ್ಲಿ ಬಂದು ನೆಲೆಸುತ್ತಿದ್ದಾರೆ. ಎಲ್ಲ ಸಮುದಾಯದವರು ಇಲ್ಲಿದ್ದಾರೆ. ದೇಶ-ವಿದೇಶಿಗರು ಇದ್ದಾರೆ. ಇಲ್ಲಿ ಕಾನೂನು- ಸುವ್ಯವಸ್ಥೆ ಕಾಪಾಡುವುದು ಅತ್ಯಂತ ಕಠಿಣ ಸವಾಲು ಎನಿಸಿದೆ. ಇದನ್ನು ಯಶಸ್ವಿಯಾಗಿ ನಿಭಾಯಿಸಿರುವ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಕೋಮು ಗಲಭೆಯಾಗದಂತೆ ನೋಡಿಕೊಂಡಿದೆ.

ಸರ್ಕಾರ ಕಲ್ಪಿಸಿರುವ ಈ ಸವಲತ್ತುಗಳಿಂದ ಬೆಂಗಳೂರಿನ ಒಂದು ಕೋಟಿಗೂ ಅಧಿಕ ಮಂದಿ ಪ್ರತಿನಿತ್ಯವೂ ಪ್ರಯೋಜನ ಪಡೆಯುತ್ತಿದ್ದಾರೆ. ಕೋಟಿ ಜನರಿಗೆ ಸೌಲಭ್ಯಗಳನ್ನು ಪೂರೈಸುವುದು ಸುಲಭದ ಮಾತಲ್ಲ. ಇಂತಹ ಮಹತ್ವದ ಕಾರ್ಯವನ್ನು ನಮ್ಮ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದೆ. ಇದು ನಾವೆಲ್ಲರೂ ಹೆಮ್ಮಪಡುವಂತಹ ಸಂಗತಿ.

* ನಮ್ಮ ಮೆಟ್ರೋ ಮೊದಲ ಹಂತದ ಯೋಜನೆ ಪೂರ್ಣಗೊಂಡಿದ್ದು, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ. ಉತ್ತಮ ರಸ್ತೆಗಳನ್ನು ನಿರ್ಮಿಸಲಾಗಿದೆ. ಉಪನಗರ ರೈಲ್ವೆ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಬೆಂಗ ಳೂ ರು ವಾಣಿಜ್ಯ ಚಟುವಟಿಕೆಯ ಕೇಂದ್ರ ಬಿಂದು. ಕೈಗಾರಿಕೆಗಳ ಉಗಮ ಸ್ಥಾನ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಗರ. ಹೀಗೆ, ಜಾಗತಿಕ ಸ್ತರದಲ್ಲಿ ಗುರುತಿಸಿಕೊಳ್ಳುವ ಬೆಂಗಳೂರಿಗೆ ನಾವು ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದೇವೆ. 

ಜಾಗತಿಕ ಮನ್ನಣೆ ಪಡೆದ ನಗರ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next