Advertisement

ಸರಣಿ ಬಾಂಬ್‌ ಸ್ಫೋಟ: ಶೀಘ್ರ ಶಂಕಿತರು ಎನ್‌ಐಎ ವಶಕ್ಕೆ

12:37 PM Aug 07, 2023 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿ ಸೇರಿ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರು ಸರಣಿ ಬಾಂಬ್‌ ಸ್ಫೋಟ ರೂವಾರಿ, ಐಐಎಸ್‌ಸಿ ಸ್ಫೋಟದ ಆರೋಪಿ ಎಲ್‌ಇಟಿ ಕಾರ್ಯಕರ್ತ ಟಿ.ನಾಜೀರ್‌ ಸೇರಿ ಆರು ಶಂಕಿತರನ್ನು ಹೆಚ್ಚಿನ ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಸದ್ಯದಲ್ಲೇ ವಶಕ್ಕೆ ಪಡೆಯಲಾಗಿದೆ.

Advertisement

ಶಂಕಿತರ ಸಿಸಿಬಿ ವಿಚಾರಣೆ ಮುಕ್ತಾಯಗೊಂಡಿದ್ದು, ಆರು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೀಗಾಗಿ ಎನ್‌ಐಎ ಕೇಂದ್ರ ಗೃಹ ಸಚಿವಾಲಯ ಅಥವಾ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆಯಲಿದೆ.

ಈಗಾಗಲೇ ಪ್ರಕರಣದ ಬಗ್ಗೆ ಸಿಸಿಬಿಯಿಂದ ಪ್ರಾಥಮಿಕ ಮಾಹಿತಿ ಪಡೆದಿದ್ದು, ಶಂಕಿತರ ಬಳಿ ಪತ್ತೆಯಾದ ಗ್ರೆನೇಡ್‌, ನಾಡ ಪಿಸ್ತೂಲ್‌ ಗಳ ಬಗ್ಗೆ ಎನ್‌ಐಎ ನಿಗಾ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಶಂಕಿತ ಉಗ್ರರ ಒಳಸಂಚು ಮತ್ತು ಷಡ್ಯಂತ್ರ ಬಗ್ಗೆ ವಿಚಾರಣೆ ನಡೆಸಲಿದೆ.

ಜತೆಗೆ ವಿದೇಶದಿಂದ ಹಣ ವರ್ಗಾವಣೆ ಮತ್ತು ಗ್ರೆನೇಡ್‌ ಭಾರತಕ್ಕೆ ಪೂರೈಕೆ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಎನ್‌ಐಎ ಸದ್ಯದಲ್ಲಿಯೇ ಐವರನ್ನು ವಶಕ್ಕೆ ಪಡೆಯಲಿದೆ. ಅಲ್ಲದೇ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಜುನೈದ್‌ ಪತ್ತೆ ಕಾರ್ಯ ಕೂಡ ನಡೆಸಲಿದೆ. ಸದ್ಯ ಜುನೈದ್‌ ಪತ್ತೆಗೆ ಸಿಸಿಬಿ ಈಗಾಗಲೇ ಲುಕ್‌ ಔಟ್‌ ನೋಟಿಸ್‌ ಹೊರಡಿಸಿದೆ.

ಏನಿದು ಪ್ರಕರಣ?:

Advertisement

ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ ಮಾಹಿತಿ ಮೇರೆಗೆ ಸುಲ್ತಾನ್‌ಪಾಳ್ಯದ ಮನೆಯೊಂದರ ಮೇಲೆ ಕಳೆದ ತಿಂಗಳು ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಶಂಕಿತರಾದ ಸುಹೇಲ… ಅಹಮದ್‌, ಜಾಹೀದ್‌ ತಬ್ರೇಜ್‌, ಮುದಾಸೀರ್‌ ಪಾಷಾ, ಮೊಹಮ್ಮದ್‌ ಫೈಜಲ… ರಬ್ಟಾನಿ ಮತ್ತು ಮೊಹಮ್ಮದ್‌ ಉಮರ್‌ನನ್ನು ಬಂಧಿಸಿದ್ದರು. ಆ ಬಳಿಕ ಇತ್ತೀಚೆಗೆ ಜಾಹೀದ್‌ ತಬ್ರೇಜ್‌ ಮನೆ ಮೇಲೆ ದಾಳಿ ನಡೆಸಿ ಗ್ರೇನೇಡ್‌ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಜೈಲಿನಲ್ಲಿದ್ದ ಟಿ.ನಾಜೀರ್‌ ಸೇರಿ ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡು ಮುಖಾಮುಖೀ ವಿಚಾರಣೆ ನಡೆಸಿದ್ದರು. ನ್ಯಾಯಾಂಗ ಬಂಧನ ಅಂತ್ಯಗೊಂಡ ಹಿನ್ನೆಲೆಯಲ್ಲಿ ಶನಿವಾರ ಕೋರ್ಟ್‌ಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next