Advertisement

ಬನವಾಸಿಯ ಮಡಿಲಲ್ಲಿ ಕೃಷಿ-ಕಲಿ-ನಲಿ

11:35 PM Jan 11, 2019 | |

ಬನವಾಸಿಯ ನೆಲದಲ್ಲಿ ಇತ್ತೀಚೆಗೆ  ಮೂರು ಭಿನ್ನ ಪ್ರಯೋಗಗಳು ನಡೆದವು. ಒಂದು ನೆಲದ ಇತಿಹಾಸ ಪರಿಚಯಿಸುವ ಕೆಲಸವಾದರೆ ಇನ್ನೊಂದಡೆ ಈ ನೆಲಕ್ಕೆ ಆಧಾರವಾದ ಜೀವ ಜಲದ ರಕ್ಷಣೆಯ ಪಾಠ ನಡೆದಿತ್ತು. ಈ ಎರಡನ್ನೂ ಒಳಗೊಂಡ ನೆಲ, ವರ್ತಮಾನ, ಕೃಷಿಯ ಕುರಿತು ಜಾಗೃತಿ ಮೂಡಿಸುವ ನಡೆಗಳೂ ನಡೆದವು. ಇದೆಲ್ಲದರ ವಿವರ ಇಲ್ಲಿದೆ…

Advertisement

ಒಂದು ಇತಿಹಾಸ
ಎಲ್ಲರೂ ಕಣ್ಣರಳಿಸಿ ಕೇಳುತ್ತಿದ್ದರು. ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಇತಿಹಾಸ ಪ್ರಸಿದ್ಧ ಮಧುಕೇಶ್ವರ ದೇವಾಲಯದ ಆವಾರದಲ್ಲಿ ಇನ್ನೂರಕ್ಕೂ ಅಧಿಕ ಮಕ್ಕಳು ಕಥೆಯನ್ನು ಆಸ್ವಾದಿಸುತ್ತಿದ್ದರು. ಬನವಾಸಿ ಕನ್ನಡದ ಪ್ರಥಮ ರಾಜಧಾನಿಯಾದ ಕಥೆ, ಮಯೂರ ಶರ್ಮ,  ವರ್ಮನಾದ ಸಾಹಸ, ಬನವಾಸಿ ಸುತ್ತಲಿನ ದೇವಾಲಯಗಳು, ಅವುಗಳ ಸೊಗಸು ಎಲ್ಲವುಗಳ ಕುರಿತು ಇತಿಹಾಸ ತಜ್ಞ ಲಕ್ಷಿ$¾àಶ ಸೋಂದಾ ಹೇಳುತ್ತಿದ್ದ ಕಥೆಗಳನ್ನು ಕುತೂಹಲದಿಂದ ಆಸ್ವಾದಿಸುತ್ತಿದ್ದರು.

ಈ ಮಕ್ಕಳೇನು ಇದೇ ಪ್ರಥಮ ಬಾರಿಗೆ ಬನವಾಸಿ ನೋಡಲು ಬಂದ ಮಕ್ಕಳಲ್ಲ. ಅಪ್ಪ, ಅಮ್ಮ, ಅಣ್ಣನ ಜೊತೆ ಬಂದಿದ್ದರೂ ಅವರಿಗೆ ಈ ಕಲ್ಲಿನ ಹಿಂದಿನ ಕಥೆಗಳು ಗೊತ್ತಿರಲಿಲ್ಲ. ಶಿರಸಿ-ಸಿದ್ದಾಪುರದ ಆಚೀಚಿನ ಶಾಲೆಗಳ ಈ ಹೈಸ್ಕೂಲ್‌ ವಿದ್ಯಾರ್ಥಿಗಳು, ಬನವಾಸಿಯನ್ನು ಮನದುಂಬಿಕೊಂಡು ಇನ್ನೊಂದು ಸ್ಪರ್ಧೆ ಎದುರಿಸಲು ಬಂದಿದ್ದರು. ಬನವಾಸಿ ಅಭಿವೃದ್ಧಿ ಪ್ರಾಧಿಕಾರ, ತನ್ನ ಮೊದಲ ಕಾರ್ಯಕ್ರಮವಾಗಿ ಒಂದು ವಿಶಿಷ್ಟ ಸಂಯೋಜನೆಯಲ್ಲಿ ಇತಿಹಾಸದ ಬೆರಗಿನ ಕುರಿತು ಇನ್ನೊಂದು ಕಣ್ಣಿನಲ್ಲಿ ನೋಡುವ ಕಾರ್ಯ ಹಮ್ಮಿಕೊಂಡಿತ್ತು. 

ಮಕ್ಕಳೆಲ್ಲ ಮುಂಜಾನೆಯೇ ಚುಮು ಚುಮು ಚಳಿಗೆ ಬೆಚ್ಚನೆಯ ಏರು ಬಿಸಿಲಿಗೆ ಇತಿಹಾಸದ ಬಿಸಿ ಬಿಸಿ ಕಥೆಗಳನ್ನು ತಿಳಿದರು. ಬಳಿಕ ಆದಿ ಕವಿ ಪಂಪನ ಹೆಸರಿನಲ್ಲಿ ನಿರ್ಮಾಣ ಮಾಡಲಾದ ಪಂಪ ವನದಲ್ಲಿ ಬನವಾಸಿಯ ವೈಭವದ ಕುರಿತು ಚಿತ್ರ ಬಿಡಿಸಿದರು. ಬಣ್ಣ ಬಣ್ಣದ ಚಿತ್ತಾರಗಳಲ್ಲಿ ಬನವಾಸಿ ದೇಗುಲ, ನಂದಿ, ಚಿತ್ತಾಕರ್ಷಕ ಕಂಬಗಳು, ವರದಾ ನದಿ, ಮಯೂರವರ್ಮ… ಹೀಗೆ ತಮ್ಮಿಷ್ಟದ ಭಾವವನ್ನು ಚಿತ್ರಿಸಿದರು.

ಕಾಲೇಜಿಗೆ ಹೋಗುವ ಕೆಲವು ಮಕ್ಕಳ ಕೈಯಲ್ಲಿ ಕೆಮರಾ ಇತ್ತು. ಸ್ವತಃ ಅವರೂ ಮೊಬೈಲ್‌ ಕೆಮರಾ, ಅಣ್ಣ ಅಪ್ಪನ ಕೆಮರಾ ಬಳಸಿ ಬಿಂಬದಲ್ಲಿ ಚಿತ್ರ ದಾಖಲಿಸುವ ಪ್ರಯತ್ನ ಮಾಡಿದರು. ಅವರಿಗೆಲ್ಲ ಬನವಾಸಿಯ ಮಧುಕೇಶ್ವರ ದೇವಸ್ಥಾನ ಹೊಸ ಅನುಭವ ಕಟ್ಟಿಕೊಟ್ಟಿತು.

Advertisement

ಅವರನ್ನು ಕರೆತಂದ ಪಾಲಕರಿಗೆ, ಶಿಕ್ಷಕರಿಗಾಗಿ ಬನವಾಸಿ ಭಾಗದ ಇತಿಹಾಸದ ಕುರಿತು ಜಾಗೃತಿ ಮೂಡಿಸುವ ಉಪನ್ಯಾಸಗಳೂ ನಡೆದವು. ಒಂದರ್ಥದಲ್ಲಿ, ಇತಿಹಾಸವನ್ನು ಆಪ್ತವಾಗಿ ಪರಿಚಯಿಸುವ, ಎಳೆಯ ಮನಸ್ಸಿನಲ್ಲಿ ಎರಕ ಹೊಯ್ಯುವ ಕಾರ್ಯ ನಡೆದಿತ್ತು. ಮಕ್ಕಳು ವಾಪಸ್‌ ಆಗುವಾಗ ಬನವಾಸಿಯ ಬಗ್ಗೆ ಹೆಮ್ಮೆ ಮೂಡಿಸಿಕೊಳ್ಳುವಂತಾಗಿತ್ತು. ಇತಿಹಾಸದ ಪಾಠ ಬನವಾಸಿಯ ನೆಲದಲ್ಲೇ ಆಗಿತ್ತು. ಸ್ಪರ್ಧೆಯ ನೆಪದಲ್ಲಿ ಹೊಸ ಓದೂ ಸಾಧ್ಯವಾಗಿತ್ತು. 

ಇದೆಲ್ಲ ಸಾಧ್ಯವಾಗಿದ್ದು ಎರಡು ವರ್ಷಗಳ ಹಿಂದೆಯೇ ಚಾಲನೆ ಪಡೆದ ಬನವಾಸಿ ಅಭಿವೃದ್ಧಿ ಪ್ರಾಧಿಕಾರ, ಉತ್ತರ ಕನ್ನಡ ಜಿಲ್ಲಾಡಳಿತದಿಂದ.  ಶಿರಸಿಯ ಎ.ಸಿ ರಾಜು ಮೊಗವೀರ ಈ ಹೊಸ ಪಾಠದ ಬೆನ್ನೆಲುಬಾಗಿದ್ದರು. ಪ್ರಾಧಿಕಾರದ ಪ್ರಥಮ ಕಾರ್ಯಕ್ರಮ ಮಕ್ಕಳಲ್ಲಿ ಇತಿಹಾಸದ ಕುರುಹಿನ ಬೀಜ ಬಿತ್ತಿತ್ತು.

ಜಲಾಭಿಮಾನ

 ಬನವಾಸಿಯಿಂದ ಎಂಟತ್ತು ಕಿಲೋಮೀಟರ್‌ ದೂರದ ಊರು ಬೀಳೂರು. ಇದೂ ಬನವಾಸಿ ಕದಂಬರ ನಾಡಿನ ಊರೇ. ಬನವಾಸಿ ಎಂದರೆ, ಬೇಸಗೆಯಲ್ಲಿ ಬರದ ಬವಣೆ ಇರುವ ಊರು. ಮಳೆಗಾಲದಲ್ಲಿ ವರದೆ ಉಕ್ಕಿದರೆ ಬೇಸಗೆಯಲ್ಲಿ ಬರಿದು. ಈ ಕಾರಣದಿಂದಲೂ ಬನವಾಸಿ ಭಾಗದಲ್ಲಿ ನೀರಿನ ತುಟಾಗ್ರತೆ ಉಂಟಾಗುತ್ತದೆ.

ಇಂತಿಪ್ಪ ಬನವಾಸಿ ಹೋಬಳಿಯಲ್ಲಿದೆ ಒಂದು ಸರಕಾರಿ ಪದವಿ ಪೂರ್ವ ಕಾಲೇಜು. ಅದೇ ಬೀಳೂರು ಕಾಲೇಜು. ಏನಾದರೂ ಹೊಸತು ಮಾಡಬೇಕು ಎಂದು ಹಂಬಲಿಸುವ ಇಲ್ಲಿನ ಪ್ರಾಚಾರ್ಯ ಆರ್‌.ಜಿ.ಭಟ್ಟ, ಶಿಕ್ಷಕ ಉಮೇಶ ನಾಯ್ಕ ಮತ್ತು ಇತರರು ಬರಗಾಲದ ಬವಣೆಗೆ ಏನಾದರೂ ಮಾಡಬೇಕು, ನಾಳಿನ ನಾಗರೀಕ ಸಮಾಜದಲ್ಲೂ ಕೆರೆಗಳ ಮಹತ್ವ ಸಾರಬೇಕು ಎಂದು ಆಲೋಚಿಸಿದರು.

ಅದರ ಪರಿಣಾಮವೇ  ಮಕ್ಕಳಿಗೆ ನೆಲ ಜಲದ ಪಾಠದ ವಿಶೇಷ ಕ್ಲಾಸು. ಸ್ವತಃ ಕೆರೆಗಳ ಬಳಿಯೇ ತೆರಳಿ ಈ ಕೆರೆಯ ಮಹತ್ವ, ಕ್ಷೇತ್ರ, ಅದಕ್ಕಿರುವ ಸ್ಥಳೀಯ ಹೆಸರು, ನೀರಿನ ಮೂಲ, ಕೋಡಿ, ಎಷ್ಟು ಕ್ಷೇತ್ರಕ್ಕೆ ಅನುಕೂಲ ಎಂಬೆಲ್ಲ ಪಾಠ ಮಾಡಿದರು. 

ಗೊತ್ತಿರಬಹುದು ನಿಮಗೂ. ಕದಂಬರ ಕಾಲದಲ್ಲಿ ಬನವಾಸಿ ಪ್ರಾಂತದಲ್ಲಿ ನೂರಾರು ಕೆರೆಗಳನ್ನು ತೋಡಿಸಿದ್ದರು. ಈಚೆಗೆ ಕೆಲವು ಕೆರೆಗಳ ಅಭಿವೃದ್ಧಿ ಆಗುತ್ತಿದ್ದರೂ ಒಳ ಹಳ್ಳಿಗಳ ಕೆರೆಗಳ ಪುನರುಜ್ಜೀವನ ಆಗಬೇಕು. ಅಂಥ ಅನೇಕ ಕೆರೆಗಳ ಸರ್ವೆಯನ್ನು  ಕಾಲೇಜು ಮಕ್ಕಳೇ ತಂಡ ರಚಿಸಿಕೊಂಡು ಮಾಡುತ್ತಿದ್ದಾರೆ.

ಬೀಳೂರಿನಿಂದ ಆರೇಳು ಕಿ.ಮೀ ವ್ಯಾಪ್ತಿಯಲ್ಲಿ ಮೂವತ್ತಕ್ಕೂ ಅಧಿಕ ಕೆರೆಗಳಿವೆ. ಪ್ರತಿ ಕೆರೆಗೂ ಮಕ್ಕಳ ತಂಡ ಹೋಗಿ ಸರ್ವೆ ನಡೆಸಿ, ಅದರ ಸ್ಥಿತಿಗತಿಯ ಕುರಿತು ವರದಿ ಮಾಡುತ್ತಿದ್ದಾರೆ. ಕೆರೆ ಎಷ್ಟು ಕ್ಷೇತ್ರಕ್ಕೆ ಜಲಾನಯನ ಹೊಂದಿದೆ, ಅದರ ಮಹತ್ವ, ಕ್ಷೇತ್ರ ಎಲ್ಲವನ್ನೂ ದಾಖಲಿಸುತ್ತಾರೆ. ಕೆರೆಯ ಸ್ಥಿತಿ ಕುರಿತು ಆಯಾ ಗ್ರಾಮಸ್ಥರಿಗೂ ವಿವರಿಸಿದ್ದೂ ಇದೆ.

ಬೇಸಗೆ ಬಂದರೆ ಬತ್ತಿ ಹೋಗುವ, ಮಳೆಗಾಲದಲ್ಲಿ ಕೆರೆಯ ದಡ ಶಿಥಿಲವಾಗಿರುವ, ಕೋಡಿ ದುರಸ್ತಿ ಹೀಗೆ…
ಎಲ್ಲವನ್ನೂ ವಿದ್ಯಾರ್ಥಿಗಳು ದಾಖಲಿಸಲಿದ್ದಾರೆ. ಆ ವರದಿಯನ್ನು ಶಾಸಕರಿಗೆ,  ಸರಕಾರಕ್ಕೂ ಸಲ್ಲಿಸಲಿದ್ದೇವೆ ಎನ್ನುವಾಗ ಪ್ರಾಚಾರ್ಯ ಆರ್‌.ಜಿ ಭಟ್ಟ ಅವರಲ್ಲಿ ನೀರ ನೆಮ್ಮದಿ ಕಾಣುತ್ತದೆ. 

ಕೃಷಿ ಖುಷಿ
ಉಳಿದೆಲ್ಲ ಶಾಲೆಗಳಲ್ಲಿ ಮಕ್ಕಳು ಶಾಲೆಗೆ ಬಂದು, ಬಿಡುವಿದ್ದರೆ ಮೈದಾನದಲ್ಲಿ ಆಟವಾಡುತ್ತಾರೆ. ಇಲ್ಲವಾದರೆ ಕ್ಲಾಸ್‌ರೂಂನಲ್ಲಿಯೇ ಕುಳಿತು ಹೋಂ ವರ್ಕ್‌ ಬರೆಯುತ್ತಾರೆ. ಹೌದು ತಾನೆ? ಸಿದ್ದಾಪುರದ ಸೋವಿನಕೊಪ್ಪದ ಹಲುಕತ್ರಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೆ ಮಾಡಲಿಲ್ಲ. ಮುಂಜಾನೆ ಶಾಲೆಗೆ ಬಂದವರೇ ಕುಡಗೋಲು ಹಿಡಿದು ಯುಧ್ದೋಪಾದಿಯಲ್ಲಿ ಸಜಾjದರು. ಸರ ಸರನೇ ಸಮೀಪದ ಗದ್ದೆ ಬಯಲಿಗೆ ಓಡಿದರು.

ಅವರೊಂದಿಗೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಶಾಲಾಭಿವೃದ್ಧಿ ಸದಸ್ಯರ ಬಳಗವೇ ಇತ್ತು. ನಮ್ಮ ಮಕ್ಕಳು ಏನು ಮಾಡುತ್ತಾರೆ ಎಂದು ಕುತೂಹಲಿಗಳಾಗಿ ಬಂದ ಪಾಲಕರೂ ಇದ್ದರು. ಶಿಕ್ಷಕರು ಹೀಗೆ ಮಾಡಿ ಎಂದು ತೋರಿಸಿದ್ದೇ ತಡ,  ಮಕ್ಕಳೆಲ್ಲ ಸೂಚನೆ ಪಾಲಿಸಿದರು. ಒಂದೊಂದೇ ಹಿಂಡಾಗಿ ಕೋಯ್ಲು ಮಾಡಿದರು. 

ಹದಿನಾಲ್ಕು ಗುಂಟೆ ಭತ್ತದ ಗದ್ದೆಯ ಕೋಯ್ಲು ಮಾಡಿ ಮೂರು ದಿನ ಬಿಟ್ಟು ಕಣಕ್ಕೆ ಹೊತ್ತು ಸೆಳೆದು ಆರೇಳು ಚೀಲ ಭತ್ತವನ್ನೂ ಬಿಡಿಸಿದರು. ಮಕ್ಕಳು ಅಕ್ಷರಶಃ ಕೃಷಿಕರಾದರು. ಶಾಲಾ ಶಿಕ್ಷಕರು, ಅಭಿವೃದ್ಧಿ ಸಮಿತಿಯವರು, ಪಾಲಕರು ಮಕ್ಕಳು ಕೃಷಿಕರಾಗುವದನ್ನು ಕಣ್ತುಂಬಿಕೊಂಡರು.

ಕೇವಲ ಗದ್ದೆ ಕೊಯ್ಲಷ್ಟೆ ಅಲ್ಲ, ಮಳೆಗಾಲದಲ್ಲಿ ಗದ್ದೆಯ ಹದಗೊಳಿಸಿದ ಬಳಿಕ ಇದೇ ಸ್ಥಳದಲ್ಲಿ ಭತ್ತದ ನಾಟಿಯನ್ನೂ ಈ ಮಕ್ಕಳು ಮಾಡಿದ್ದರು. ನಾಲ್ಕರಿಂದ ಏಳನೇ ವರ್ಗದ ಮಕ್ಕಳಿಗೆ ನೇಗಿಲಯೋಗಿಯ ಪಾಠವಿದೆ. ಅವರಿಗೆ ಇದು ಅರಿವಾಗಲಿ, ಕೃಷಿ ಮೇಲೆ ಪ್ರೇಮ ಬೆಳೆಯಲಿ ಎಂದು ಶಿಕ್ಷಕರೇ ಆಯೋಜಿಸಿದ ಬಗೆ ಇದು.

ಈ ಮಕ್ಕಳೆಲ್ಲ ನಿತ್ಯ ಊಟ ಮಾಡುವ ಅನ್ನದ ಕೃಷಿಯ ಪಾಠ ಕಲಿತಿದ್ದರು. ತರಗತಿ ಕೋಣೆಯ ಪಠ್ಯ ಬಯಲಿನಲ್ಲೂ ಪಾಠ ಮಾಡಿತ್ತು. ಕೃಷಿ ಪಾಠಕ್ಕೆ ಮುಖ್ಯಾಧ್ಯಾಪಕ ದರ್ಶನ ಹರಿಕಂತ್ರ, ಅಭಿವೃದ್ಧಿ ಸಮಿತಿಯ ಚಂದ್ರಕಾಂತ ಗೌಡ ಜೊತೆಯಾಗಿದ್ದರು. ನಾವೆಲ್ಲ ಕಲಿಯುವಾಗ ಭತ್ತದ ಕೃಷಿಯನ್ನೂ ಮಾಡುತ್ತಿದ್ದೆವು. ಶಾಲೆಯದ್ದೇ ಗದ್ದೆ ಇರುತ್ತಿತ್ತು. ಈಗೆಲ್ಲ ಎಲ್ಲಿ ಎನ್ನುವ ಹಿರಿಯಜ್ಜನ ನಡುವೆ ಇಲ್ಲೊಂದು ಮರಳಿ ಮಣ್ಣಿಗೆ ಕಾರ್ಯ ನಡೆಯಿತು. 

 ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next