Advertisement

ಗಿಡಗಂಟಿ ಹಚ್ಚಿ ವ್ಯಕ್ತಿಯಿಂದ ರಸ್ತೆ ಬಂದ್‌

09:37 AM Jan 06, 2019 | Team Udayavani |

ಬನಹಟ್ಟಿ: ಖಾಸಗಿ ಜಾಗೆಯಲ್ಲಿ ಮನೆಗಳನ್ನು ನಿರ್ಮಿಸಿದ್ದಾರೆಂದು ಆಕ್ರೋಶಗೊಂಡು ಆಶ್ರಯ ಮನೆಗಳಿಗೆ ತೆರಳುವ ರಸ್ತೆ ಮಧ್ಯ ಗಿಡಗಂಟಿಗಳನ್ನು ಹಚ್ಚಿದರ ಪರಿಣಾಮ 50ಕ್ಕೂ ಅಧಿಕ ಕುಟುಂಬಗಳ ಸಂಚಾರಕ್ಕೆ ತೊಂದರೆ ಉಂಟಾದ ಘಟನೆ ಜಗದಾಳ ಗ್ರಾಮದಲ್ಲಿ ನಡೆದಿದೆ.

Advertisement

ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದ ದುರ್ಗಾದೇವಿ ಆಶ್ರಯ ಮನೆಗಳನ್ನು ಸ್ಥಳೀಯ ಗ್ರಾಮ ಪಂಚಾಯತ 1998 ರ ಅವಧಿಯಲ್ಲಿಯೇ ನಿರ್ಮಾಣ ಮಾಡಿತ್ತು. 200 ಮನೆಗಳನ್ನು ನಿರ್ಮಿಸಿರುವ ಗ್ರಾಮ ಪಂಚಾಯ್ತಿಯು 50 ಕ್ಕೂ ಅಧಿಕ ಮನೆಗಳನ್ನು ಖಾಸಗಿ ಭೂಮಿಯನ್ನು ಕಬಳಿಸಿ ನಿರ್ಮಿಸಿದ್ದಾರೆಂದು ಹೊಸೂರ(ಹಳೆಮನಿ) ಕುಟುಂಬವು ಆರೋಪ ಮಾಡುತ್ತಲೇ ಬಂದಿತ್ತು. ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ದಿಢೀರನೆ ರಸ್ತೆ ಮಧ್ಯ ಬೇಲಿ, ಗಿಡಗಂಟಿಗಳನ್ನು ಹಾಕುವ ಮೂಲಕ ಅಲ್ಲಿನ 50 ಕುಟುಂಬಗಳಿಗೆ ಸಂಚಾರ ಸಂಪೂರ್ಣ ಬಂದ್‌ ಆಗಿತ್ತು.

ಕೆಲ ರೋಗಿಗಳು ಚಿಕಿತ್ಸೆಗೆಂದು ತೆರಳಲು ತೀವ್ರ ಪರದಾಡಿದರೆ, ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಜನರು ಶೌಚಕ್ಕೂ ಸಹಿತ ಹೋಗಿಲ್ಲ. ದಿನಂಪ್ರತಿ ಉದ್ಯೋಗಕ್ಕೆ ಹೋಗದಿದ್ದರೆ ಕುಟುಂಬ ನಿರ್ವಹಣೆ ತೊಂದರೆ ಕಾರಣ ಯಾರೂ ಉದ್ಯೋಗಕ್ಕೆ ತೆರಳದೆ ರಸ್ತೆ ಮನೆಯಲ್ಲಿಯೇ ಖಾಲಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಬಹುತೇಕ ಗೃಹ ಬಂಧನದಂತೆ ಅಲ್ಲಿ ಭಾಸವಾಗುತ್ತಿತ್ತು.

ಸಂಜೆ ಸ್ಥಳಕ್ಕೆ ಆಗಮಿಸಿದ ಜಗದಾಳ ಅಭಿವೃದ್ಧಿ ಅಧಿಕಾರಿ ಬಸವರಾಜ ಮುನವಳ್ಳಿ ಪರಿಶೀಲನೆ ನಡೆಸಿ ರಸ್ತೆ ಸಂಚಾರಕ್ಕೆ ಹಾಕಿದ್ದ ಬೇಲಿ ತೆಗೆಸುವುದಾಗಿ ಭರವಸೆ ನೀಡಿದರಾದರೂ ಬೇಲಿ ಇನ್ನೂ ತೆಗೆಯದ ಕಾರಣ ಅಲ್ಲಿನ ಕುಟುಂಬಗಳು ಮಾತ್ರ ಹೊರಬರದಂತ ಸ್ಥಿತಿ ಎದುರಾಗಿದೆ.

ಯಾವುದೇ ಸಮಸ್ಯೆಯಿದ್ದರೂ ಕಾನೂನಿನ ಮೂಲಕ ಪರಿಹಾರ ಕಾಣಬೇಕು. ಬದಲಾಗಿ ಸಾರ್ವಜನಿಕರಿಗೆ ತೊಂದರೆ ಕೊಡುವಂತ ಕಾರ್ಯದಲ್ಲಿ ತೊಡಗಿದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುನವಳ್ಳಿ ಹೇಳಿದರು.

Advertisement

ಬೇಜವಾಬ್ದಾರಿಯಾಗಿ ಕಾನೂನು ಮೀರಿ ಮಾಡಿರುವ ಕೆಲಸ. ರಸ್ತೆ ಮೇಲೆ ಗಿಡಗಂಟಿ ಹಚ್ಚಿ ರಸ್ತೆ ಬಂದ್‌ ಮಾಡಿರುವುದು ಅಮಾನವೀಯ ಕೆಲಸ. ಅವರ ಸಮಸ್ಯೆ ಏನಿದ್ದರೂ ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಲು ಅದನ್ನು ಬಿಟ್ಟು ಬಡಕುಟುಂಬಗಳಿಗೆ ತೊಂದರೆ ಕೊಡುವುದು ತಪ್ಪು.
. ಬಸವರಾಜ ಮುನವಳ್ಳಿ, 
ಅಭಿವೃದ್ಧಿ ಅಧಿಕಾರಿ, ಗ್ರಾಪಂ ಜಗದಾಳ 

‘ಕಾರಣವಿಲ್ಲದೆ ಒಮ್ಮೆಲೆ ರಸ್ತೆ ಮೇಲೆ ಗಿಡಗಂಟಿ ಹಚ್ಚಿ, ರಸ್ತೆ ಬಂದ್‌ ಮಾಡಿದ್ದಾರೆ. ಸುಮಾರು 10 ಗಂಟೆಗಳ ಕಾಲ ನಾವು ಬಂಧನದಲ್ಲಿದ್ದಂತಾಗಿತ್ತು.
. ಮಲ್ಲಿಕಾರ್ಜುನ ಮಾಳಿ

Advertisement

Udayavani is now on Telegram. Click here to join our channel and stay updated with the latest news.

Next