Advertisement

ಹೂಳಲು 2 ಗಜ ಜಾಗ ಕೂಡ ಸಿಗಲಿಲ್ಲ ಎಂದು ಗೋಳಿಡುತ್ತ ನಿಧನರಾದ ಬಹದ್ದೂರ್‌ ಶಾ ಜಫರ್‌!

03:56 PM Aug 14, 2024 | Team Udayavani |

ಒಬ್ಬ ಮೊಘಲ್‌ ದೊರೆಯನ್ನು ಸ್ವಾತಂ‌ತ್ರ್ಯ ಹೋರಾಟಗಾರರ ಯಾದಿಯಲ್ಲಿ ಸೇರಿಸುವುದು ತಪ್ಪು ಎನ್ನುತ್ತೀರಾ? ಆದರೆ ಇತಿಹಾಸದ ಒಂದು ತಿರುವಿನಲ್ಲಿ ಮೊಘಲ್‌ ಸಂತಾನದ ಕೊನೆಯ ಬಾದಶಹ ಸಾಂಕೇತಿಕವಾಗಿಯಾದರೂ ಭಾರತದ
ಮೊತ್ತಮೊದಲ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ್ದ. ಈ ಕಾರಣಕ್ಕಾಗಿ ಅವನು ಮತ್ತು ಅವನ ವಂಶಜರು ತಲೆದಂಡ ಕೊಡಬೇಕಾಗಿ ಬಂದಿತ್ತು!

Advertisement

ಔರಂಗಜೇಬನ ಬಳಿಕ ದೆಹಲಿಯಲ್ಲಿ ಮೊಘಲರ ಪ್ರಾಬಲ್ಯ ಕಡಿಮೆಯಾಗುತ್ತ ಬಂತು. 1771ರಲ್ಲಿ ಮರಾಠಾ ದಳಪತಿ ಮಹಾದ್ರಿ ಶಿಂಧೆ ಹಲಿಯನ್ನು ವಶಪಡಿಸಿಕೊಂಡು ಮೊಘಲ್‌ ವಂಶದ ಇಮ್ಮಡಿ ಶಾಹ್‌ ಆಲಮ್‌ನನ್ನು ಗದ್ದುಗೆಯಲ್ಲಿ ಕೂರಿಸಿದ. 1803ರಲ್ಲಿ ಬ್ರಿಟಿಷರ “ಈಸ್ಟ್‌ ಇಂಡಿಯಾ ಕಂಪೆನಿ’ ಮರಾಠಾರನ್ನು ಸೋಲಿಸಿ, ದೆಹಲಿಯನ್ನು ವಶಪಡಿಸಿಕೊಂಡಿತು. ಕೋಲ್ಕತಾದಿಂದ
ಆಳುತ್ತಿದ್ದ ಕಂಪೆನಿ ಸರಕಾರದ ಸಾಮಂತರಾಗುವ ದುರ್ದೆಶೆ ಬಂದಿತ್ತು ಮೊಘಲ್‌ ಮನೆತನಕ್ಕೆ.

1857ರಲ್ಲಿ ಸಿಪಾಯಿ ದಂಗೆಯ ಕಾಲದಲ್ಲಿ ಸಿಪಾಯಿಗಳು ತಮ್ಮ ಆಂದೋಲನದ ನಾಯಕನಾಗಿ ಆರಿಸಿದ್ದು ಮೊಘಲ್‌ ದೊರೆ ಬಹದ್ದೂರ್‌ ಶಾ ಜಫರ್‌ನನ್ನು. ಆತನನ್ನು “ಚಕ್ರವರ್ತಿ’ ಎಂದು ಕರೆದು, ದೆಹಲಿಯ ಮೂಲಕ ಸ್ವತಂತ್ರ ಭಾರತವನ್ನು ಕಟ್ಟುವ ಕನಸು ಅವರದಾಗಿತ್ತು. ಆದರೆ ಸಿಪಾಯಿ ದಂಗೆ ಹೆಚ್ಚು ಸಮಯ ನಡೆಯಲಿಲ್ಲ . ಬ್ರಿಟಿಷ್‌ ಪಡೆಗಳು ದೆಹಲಿಯನ್ನು ವಶಪಡಿಸಿ, ಬಹದ್ದೂರ್‌ ಶಾ ಜಫರ್‌ನನ್ನು ಸೆರೆ ಹಿಡಿದಿದ್ದರು.

ಬ್ರಿಟಿಷರು ದೆಹಲಿಯ ಮೇಲೆ ಭೀಕರ ಪ್ರತಿಕಾರ ತೆಗೆದುಕೊಂಡರು. ಸೆರೆಸಿಕ್ಕಿದ ಸಿಪಾಯಿಗಳನ್ನು ಕೋಟೆಯ ಸುತ್ತ ನೇಣಿಗೇರಿಸಿದರು. ಬಹದ್ದೂರ್‌ ಶಾ ಜಫರ್‌ನ ಇಬ್ಬರು ಮಕ್ಕಳು ಮತ್ತು ಒಬ್ಬ ಮೊಮ್ಮಗನನ್ನು ಖೂನಿ ದರವಾಜಾ ಎಂಬ ದ್ವಾರದಲ್ಲಿ ಸಾಲಾಗಿ ನಿಲ್ಲಿಸಿ, ಗುಂಡಿಕ್ಕಿ ಕೊಂದರು. ಬಹದ್ದೂರ್‌ ಶಾ ಜಫರ್‌ ಮತ್ತು ಅವನ ಪತ್ನಿಯರನ್ನು ಎತ್ತಿನ ಗಾಡಿಗಳಲ್ಲಿ ಕೂರಿಸಿ, ಬರ್ಮಾದ ರಂಗೂನ್‌ಗೆ ಗಡಿಪಾರು ಮಾಡಿದರು. ಸ್ವಾತಂತ್ರ್ಯ ಸೇನಾನಿಗಳ ನಾಯಕತ್ವ ವಹಿಸಿದ್ದ ತಪ್ಪಿಗೆ ಬಹದ್ದೂರ್‌ ಶಾ ಜಫರ್‌ ತನ್ನ ಕೊನೆಗಾಲವನ್ನು ದೂರದ ರಂಗೂನ್‌ನ ಬೆಟ್ಟಗಳ ಮೇಲೊಂದು ಮುರುಕಲು ಮನೆಯಲ್ಲಿ ಕಳೆದು, 1862ರಲ್ಲಿ
ಅಸುನೀಗಿದ.

Advertisement

ಬಹದ್ದೂರ್‌ ಶಾ ಜ‚ಫ‚ರ್‌ ಸ್ವತಃ ಒಬ್ಬ ಕವಿಯಾಗಿದ್ದ . ನೆಲೆ ಕಳೆದುಕೊಂಡ ಈ ಬಾದಶಹ “ಲಗ್ತಾ ನಹೀಂ ದಿಲ್‌ ಮೇರಾ’ ಎಂಬ ಸುಂದರ ಘಜಲ್‌ನಲ್ಲಿ ತೋಡಿಕೊಳ್ಳುವ ಗೋಳು ಇಂದಿಗೂ ಹೃದಯ ಕಲಕಿಸುವಂತಿದೆ: ಹೈ ಕಿತ್ನಾ ಬದ್‌ ನಸೀಬ್‌ ಜ‚ಫ‚‌ರ್‌

ದಫನ್‌ ಕೇ ಲಿಯೇ

ದೋ ಗಜ್‌ ಜಮೀನ್‌ ಭೀ ನ ಮಿಲೀ ಕೂ-ಇ-ಯಾರ್‌ ಮೇಂ(ಎಷ್ಟು ನತದೃಷ್ಟನಾಗಿದ್ದಾನೆ ಜ‚ಫ‚ರ್‌, ಹೂಳಲು ಎರಡು ಗಜ ಜಾಗ ಕೂಡ ಸಿಗಲಿಲ್ಲ ಅವನ ಪ್ರೀತಿಯ ಬೀದಿಯಲ್ಲಿ). ಬಹದ್ದೂರ್‌ ಶಾ ಜ‚ಫ‚ರ್‌ಗೆ 22 ಗಂಡು ಮಕ್ಕಳು ಮತ್ತು 32 ಹೆಣ್ಣು ಮಕ್ಕಳಿದ್ದರು. ಹೀಗಾಗಿ ಇವರ ವಂಶಜರು ಸಾಕಷ್ಟು ಜನರು ಇದ್ದಾರೆ. ಇವರಲ್ಲಿ ಹೆಚ್ಚಿನವರು ಕೋಲ್ಕತಾ ಮತ್ತು ಔರಂಗಾಬಾದ್‌ನಲ್ಲಿ ಇದ್ದಾರೆ. ಕೆಲವರು ಪಾಕಿಸ್ತಾನ ಮತ್ತು ಮ್ಯಾನ್ಮಾರ್‌ನಲ್ಲೂ ಇದ್ದಾರೆ. ಹೆಚ್ಚಿನವರು ತೀರಾ ನಿಕೃಷ್ಟ ಕೆಲಸಗಳಲ್ಲಿದ್ದು , ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ತಾವು ಮೊಘಲ್‌ ವಂಶಜರು ಎಂದು ಹೇಳಿಕೊಂಡು ದೆಹಲಿಯ ಗದ್ದುಗೆಗೆ ದಾವೆ ಸಲ್ಲಿಸಿದವರೂ ಇದ್ದಾರೆ. ಇವರಲ್ಲಿ ಯಾರ ಬಳಿಯೂ ಪುರಾವೆಗಳಿಲ್ಲ .

ಇವರಲ್ಲಿ ಒಬ್ಟಾತ ಹೈದರಾಬಾದ್‌ನ ಯಾಕುಬ್‌ ಹಬೀಬುದ್ದೀನ್‌ ಟುಸಿ. ಇವನು ತ ನ್ನು ಮೊಘಲ್‌ ವಂಶಜ ಎಂದು ಹೇಳಿಕೊಂಡಿದ್ದಾನೆ. ತನ್ನ ಹೆಸರಿನ ಜೊತೆಗೆ ಪ್ರಿನ್ಸ್‌ (ರಾಜ  ಕುಮಾರ) ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈತನ ಮಾತನ್ನು ಹೆಚ್ಚಿನವರು ನಂಬುವುದಿಲ್ಲ.

*ತುಕಾರಾಮ್‌ ಶೆಟ್ಟಿ
ಕೃಪೆ: ತರಂಗ ವಾರಪತ್ರಿಕೆ

 

Advertisement

Udayavani is now on Telegram. Click here to join our channel and stay updated with the latest news.

Next