Advertisement

ಬಾಗಲಕೋಟೆ-ಕುಡಚಿ ರೈಲು ಮಾರ್ಗ 2025ಕ್ಕೆ ಪೂರ್ಣ

05:25 PM Jan 18, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಬರಲಿರುವ ಮಾರ್ಚ್‌ ಅಂತ್ಯಕ್ಕೆ ಲೋಕಾಪುರ ರೈಲು ನಿಲ್ದಾಣ ಲೋಕಾರ್ಪಣೆಗೊಳಿಸಲಾಗುವುದು. 2025ಕ್ಕೆ
ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ನೈರುತ್ಯ ರೈಲ್ವೆ ಇಲಾಖೆಯ ಮಹಾ ವ್ಯವಸ್ಥಾಪಕ ಸಂಜೀವ ಕಿಶೋರ ತಿಳಿಸಿದರು.

Advertisement

ಬಾಗಲಕೋಟೆ-ಕುಡಚಿ ರೈಲು ಮಾರ್ಗ ಹಾಗೂ ಗದಗ-ಹುಟಗಿ ವಿದ್ಯುತ್ತೀಕರಣ ಕಾಮಗಾರಿ ಪರಿಶೀಲನೆಗೆ ಆಗಮಿಸಿದ್ದ ಅವರು, ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳ ನಿಯೋಗಕ್ಕೆ ಈ ಭರವಸೆ ನೀಡಿದರು
.
ಭರವಸೆ ಹುಸಿಗೊಳಿಸಿದ್ದೀರಿ: ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕತ್ಬುದ್ದೀನ ಖಾಜಿ ಈ ವೇಳೆ ಮಾತನಾಡಿ, ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿ 2024ರ ಒಳಗಾಗಿ ಪೂರ್ಣಗೊಳಿಸಬೇಕು. ಈ ಹಿಂದೆ ನಾವು ಹೋರಾಟ ಮಾಡಿದ ವೇಳೆ ರೈಲ್ವೆ ಹಿರಿಯ ಅಧಿಕಾರಿಗಳು, 2016 ಮತ್ತು 2020ರೊಳಗಾಗಿ ಪೂರ್ಣಗೊಳಿಸುವುದಾಗಿ ಎರಡು ಬಾರಿ ಪ್ರತ್ಯೇಕ
ಭರವಸೆ ನೀಡಿದ್ದರು. ಈವರೆಗೂ ಪೂರ್ಣಗೊಂಡಿಲ್ಲ.ಈಗ ಮತ್ತೆ 2025ರೊಳಗೆ ಪೂರ್ಣಗೊಳಿಸುವುದಾಗಿ ಹೇಳುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಡಚಿ ಮಾರ್ಗ ನಿರ್ಮಾಣ, ಈಗಾಗಲೇ ಬಹಳ ವಿಳಂಬವಾಗಿದೆ. ಇದರಿಂದ ಇಲಾಖೆಗೂ ಭಾರವಾಗಿದೆ.ಈಗಾಗಲೇ ರಾಜ್ಯ ಸರ್ಕಾರ ಅಗತ್ಯ ಭೂಸ್ವಾಧೀನ ಮಾಡಿಕೊಂಡು ಇಲಾಖೆಗೆ ಹಸ್ತಾಂತರಿಸಿದೆ. 2025ರೊಳಗೆ ಪೂರ್ಣಗೊಳಿಸುವ ವಿಶ್ವಾಸವಿಲ್ಲ. ಕಾರಣ, ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿದೆ.

ಯಾದವಾಡದವರೆಗೆ ಮಾತ್ರ ವೇಗದಿಂದ ನಡೆದಿದ್ದು, ಅದರಂತೆ ಮುಧೋಳ, ಜಮಖಂಡಿ, ರಬಕವಿ, ಬನಹಟ್ಟಿ, ತೇರದಾಳ, ಹಾರೂಗೇರಿ ಸೇರಿದಂತೆ ಕುಡಚಿಯವರೆಗೂ ಭರದಿಂದ ಕಾಮಗಾರಿ ನಡೆದರೆ ಮಾತ್ರ ತಮ್ಮ ಭರವಸೆಯಂತೆ 2025ರ ಒಳಗಾಗಿ
ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದರು.

ಗೋವಾಕ್ಕೆ ರೈಲು ವಿಸ್ತರಿಸಿ: ಹುಬ್ಬಳ್ಳಿ ನಿಜಾಮುದ್ದೀನ ಎಕ್ಸ್‌ಪ್ರೆಸ್‌ ರೈಲನ್ನು ವಾರದಲ್ಲಿ 3 ಬಾರಿ ಸಂಚರಿಸುವಂತೆ ಕ್ರಮಕೈಗೊಳ್ಳಬೇಕು. ವಿಜಯಪುರದಿಂದ ತಿರುಪತಿಗೆ ಹೊಸ ರೈಲು ಆರಂಭಿಸಬೇಕು. ಈಚೆಗೆ ಇಂಟರ್‌ ಸಿಟಿ ರೈಲನ್ನು ಸ್ಥಗಿತಗೊಳಿಸಿದ್ದು, ಸೊಲಾಪೂರದಿಂದ ವಾಸ್ಕೋ (ಗೊವಾ) ಕ್ಕೆ ವಿಸ್ತರಿಸಿ ಪುನಃ ಆರಂಭಿಸಬೇಕು.

Advertisement

ಇದಕ್ಕೆ ಸೇರಿದಂತೆ ಗದಗ-ಹುಟಗಿ ಜೋಡಿ ಮಾರ್ಗ ವಿದ್ಯುತ್ತೀಕರಣ ಅತೀ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಅನುಕೂಲ ಮಾಡಿಕೊಡಬೇಕು. ಬಾಗಲಕೋಟೆ ರೈಲು ನಿಲ್ದಾಣ ಅಮೃತ ಭಾರತ ರೈಲುಯೋಜನೆ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು,
ಪ್ಲಾಟ್‌ಫಾರ್ಮಗಳ ಸಂಪರ್ಕಕ್ಕೆ ಲಿಫ್ಟ್‌ ವ್ಯವಸ್ಥೆ, ಎಕ್ಸಿಲೇಟರ್‌ ಮೇಲುಸೇತುವೆ ಬ್ಯಾಟರಿ ಕಾರ್‌, ನಿರ್ಮಲ ಶೌಚಾಲಯಗಳು (ಸಿ.ಓ.ಪಿ) ಪ್ಲಾಟ್‌ ಫಾರ್ಮಗಳ ಪೂರ್ಣ ಪ್ರಮಾಣದ ಮೇಲ್ಛಾವಣಿಗೆ ಸೇರಿದಂತೆ ಯೋಜನೆಗೆ ಅನುಗುಣವಾಗಿ ಸಾರ್ವಜನಿಕ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಲೋಕಾಪುರದಿಂದ ರೈಲು ಸಂಪರ್ಕ : ಎಲ್ಲ ಬೇಡಿಕೆಗಳನ್ನು ಆಲಿಸಿದ ಸಂಜೀವ ಕಿಶೋರ, ನಾವು ಕೊಟ್ಟ ಭರವಸೆಯಂತೆ ಕುಡಚಿ ಮಾರ್ಗ 2025ರ ಒಳಗಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾಮಗಾರಿ ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುವುದು. ಅದರಂತೆ ಮಾರ್ಚ್‌ ತಿಂಗಳ ಒಳಗಾಗಿ ಲೋಕಾಪುರ ರೈಲು ನಿಲ್ದಾಣ ಉದ್ಘಾಟಿಸಿ, ಪ್ರಮುಖ ನಗರಗಳಿಗೆ ಲೋಕಾಪುರದಿಂದ ರೈಲು ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದರು.

ರೈಲ್ವೆ ಇಲಾಖೆಯ ವಿಭಾಗೀಯ ವ್ಯವಸ್ಥಾಪಕ ಹರ್ಷಾ ಖರೆ, ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಕುತ್ಬುದ್ದಿನ ಖಾಜಿ, ಶ್ರೀನಿವಾಸ ಬಳ್ಳಾರಿ, ಜಯಶ್ರೀ ಗುಳಬಾಳ, ಮಂಜುಳಾ ಬುಸಾರೆ, ಪ್ರೇಮಾ ರಾಠೊಡ, ಧರ್ಮ ಡಿ.ಸಿ, ಫಹಾದ ಪಟೇಲ, ಮೈನುದ್ದೀನ ಖಾಜಿ ಮುಂತಾದವರು ಇದ್ದರು.

ಸಂಸದ ನೇತೃತ್ವದಲ್ಲಿ ಮನವಿ: ಬಾಗಲಕೋಟೆಯಿಂದ ಮಲ್ಲಾಪುರ-ಮುಗಳ್ಳೋಳ್ಳಿ ರಸ್ತೆ ನಿರ್ಮಾಣ ಮಾಡುವಂತೆ
ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಕಮಿಟಿಯಿಂದ ಸಂಸದ ಪಿ.ಸಿ. ಗದ್ದಿಗೌಡರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಬಾಗಲಕೋಟೆಯಿಂದ 2-3 ಕಿಮೀ ಅಂತರದಲ್ಲಿರುವ ಮಲ್ಲಾಪುರ ಮಲ್ಲಯ್ಯನ ದೇವಸ್ಥಾನವು ಬಹಳ ಪುರಾತನವಾಗಿದ್ದು, ಈ
ದೇವಸ್ಥಾನಕ್ಕೆ ಬಾಗಲಕೋಟೆಯಿಂದ ಸಾವಿರಾರು ಭಕ್ತಾದಿಗಳು ಹೋಗಿ ಬರುತ್ತಿದ್ದು, ಆಲಮಟ್ಟಿ ಹಿನ್ನಿರಿನಿಂದ ರಸ್ತೆ ಮುಳಗಡೆ ಹೊಂದಿದೆ. ದೇವಸ್ಥಾನಕ್ಕೆ ಹೋಗಿ ಬರಲು 20-25 ಕಿಮೀ ಸುತ್ತುವರಿದು ಹೋಗಿಬರಬೇಕಾಗುತ್ತದೆ. ಅಲ್ಲದೆ ಮಲ್ಲಾಪೂರದ ಸುತ್ತಮುತ್ತಲು ರೈತರ ಜಮಿನುಗಳಿದ್ದು, ಜಮೀನುಗಳಿಗೆ ಹೋಗಲು ರೈತರಿಗೂ ಸಹ ತೊಂದರೆಯಾಗುತ್ತಿದೆ, ಈಗ ಹೊಸದಾಗಿ ರೈಲ್ವೆ ಹಳಿ ಕಾಮಗಾರಿ ನಡೆದಿದ್ದು, ಬಾಗಲಕೋಟೆಯಿಂದ (ಮಲ್ಲಾಪುರ) ಮುಗಳೊಳ್ಳಿಗೆ ಹೋಗಲು ರಸೆ ಡಬಲ್‌ ಲೈನ್‌ ನಿರ್ಮಾಣ ಕಾರ್ಯ ತೀವ್ರಗತಿಯಲ್ಲಿ ನಡೆದಿದ್ದು, ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗವಂತೆ ಬಾಗಲಕೋಟೆಯಿಂದ ಮಲ್ಲಾಪುರ ಮುಗಳ್ಳೋಳ್ಳಿಗೆ ಹೋಗಲು ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಹಳಿಯ ಮಗ್ಗಲು ರಸ್ತೆಯನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.

ಕಮಿಟಿ ಪ್ರಭುಕಾಂತ ನಾರಾ, ಮಲ್ಲಪ್ಪ ಡಾವಣಗೇರೆ, ವೀರಣ್ಣ ಗಂಗಾವತಿ, ರಾಮಣ್ಣ ಕಟ್ಟಿಮನಿ, ಬಸವರಾಜ ಯಂಕಂಚಿ , ನಾನಾಗೌಡ ಪಾಟೀಲ, ಮಲ್ಲಯ್ಯಸ್ವಾಮಿ ಕುಂದರಿಗಿಮಠ, ಬಸಯ್ಯ, ಶಂಕರ ಸಗರ, ಸಂಗಪ್ಪ ಸಜ್ಜನ, ದರಿಯಪ್ಪಯಳ್ಳಿಗುತ್ತಿ, ಸಂಗಪ್ಪ ಕೊಪ್ಪದ, ಶಿವಶಂಕರ ಯಾದವಾಡ, ತಮ್ಮಣ್ಣ ಯಳ್ಳಿಗುತ್ತಿ, ಸುರೇಶ ಮಜ್ಜಗಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next