Advertisement

Bagalkot: ಚಳಿಗಾಲದಲ್ಲಿಯೇ ಬೇಸಿಗೆಯ ಅನುಭವ!

04:37 PM Nov 08, 2023 | Team Udayavani |

ಬಾಗಲಕೋಟೆ: ನೈಸರ್ಗಿಕ ಋತುಮಾನಗಳ ಪ್ರಕಾರ ಸಧ್ಯ ಚಳಿಗಾಲ. ಆದರೆ, ನಿತ್ಯವೂ ಬೇಸಿಗೆಯ ಅನುಭವ ಜಿಲ್ಲೆಯಾದ್ಯಂತ ಇದೆ. ಅಯ್ಯೋ, ಈಗಲೇ ಹೀಗಾದರೆ, ಮುಂದೆ ಬೇಸಿಗೆಯಲ್ಲಿ ಹ್ಯಾಂಗ್ರಿ ಎಂಬ ಮಾತು ಪ್ರತಿಯೊಬ್ಬರ ಬಾಯಿಯಿಂದ ಕೇಳಿ ಬರುತ್ತಿದೆ. ಚಳಿಗಾಲದಲ್ಲೇ ಅಲ್ಲಲ್ಲಿ ನೀರಿನ ಸಮಸ್ಯೆ ಉದ್ಭವವಾಗುತ್ತಿದೆ. ಇನ್ನು ಬರಲಿರುವ ಬೇಸಿಗೆಯ ದಿನಗಳನ್ನು ನೆನಪಿಸಿಕೊಂಡರೆ ಭಯವೇ ಹುಟ್ಟುತ್ತಿದೆ…!

Advertisement

ಹೌದು, ಜಿಲ್ಲೆಯಾದ್ಯಂತ ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ಸೋಮವಾರ ಸಂಜೆ ಕೊಂಚ ಮಳೆ ಸುರಿದ ತಂಪಾದ ವಾತಾವರಣ ಸೃಷ್ಠಿಯಾಗಿತ್ತಾದರೂ, ಅದು ಅಂದಿನ ದಿನಕ್ಕೆ ಮಾತ್ರ ಸಿಮೀತವಾಯಿತು. ಮಂಗಳವಾರವೂ ಮಳೆ ಮುಂದುವರೆಯಲಿ ಎಂಬ ಜನರ ಪ್ರಾರ್ಥನೆ ಕೈಗೂಡಿಲ್ಲ.

ನಿತ್ಯ ಬೆವರಿನ ಸ್ನಾನ: ಪ್ರತಿವರ್ಷ ನವೆಂಬರ್‌ದಿಂದ ಫೆಬ್ರವರಿವರೆಗೆ ಭರ್ತಿ ಚಳಿಗಾಲ. ಇದರಿಂದ ಆರೋಗ್ಯ
ಕಾಪಾಡಿಕೊಳ್ಳಲು ಹಲವರು, ಹಲವು ರೀತಿ ಸಲಹೆ ನೀಡುತ್ತಿದ್ದರು. ಮೆ ಕೊರೆಯುವ ಚಳಿ ಜಿಲ್ಲೆಯಲ್ಲಿ ಇರುತ್ತಿತ್ತು. ಬೆಳಗ್ಗೆ 8 ಗಂಟೆಯಾದರೂ ಜನ ಮನೆಯಿಂದ ಹೊರ ಬರಲು ತೀವ್ರ ಪ್ರಯಾಸಪಡುತ್ತಿದ್ದರು. ಆದರೆ, ಈ ವರ್ಷದ ಕಥೆ ಹಾಗಿಲ್ಲ. ಚಳಿಗಾಲದಲ್ಲೂ ಮನೆಯಲ್ಲಿ ಫ್ಯಾನ್‌, ಎಸಿ ಹಚ್ಚಿಕೊಂಡು ಮಲಗುವ ಪರಿಸ್ಥಿತಿ ಒಂದೆಡೆ, ಬೆಳಗ್ಗೆ 10 ಗಂಟೆಯಾದರೆ ಸಾಕು ಬೆವರಿನ ಸ್ನಾನ, ಬೇಸಿಗೆ ಬಿಸಿಲು ಮೀರಿಸುವಷ್ಟೂ ಈಗಲೇ ಬಿಸಿಲು ಇದೆ. ಹೀಗಾಗಿ ಚಳಿಗಾಲದಲ್ಲೇ ಇಷ್ಟೊಂದು ಬಿಸಿಲಿದೆ. ಇನ್ನು ಬೇಸಿಗೆಯ ಪಾಡೇನು ಎಂಬ ದೊಡ್ಡ ಚಿಂತೆ ಮತ್ತೂಂದೆಡೆ ನಡೆದಿದೆ. ಇದೆಲ್ಲದರ ಮಧ್ಯೆ ಕುಡಿಯುವ ನೀರಿನ ತೀವ್ರ ತಾತ್ವಾರ ಉಂಟಾಗುವ ಸಾಧ್ಯತೆ ಹೆಚ್ಚಿದೆ.

ನದಿ ತಗ್ಗಿನ ನೀರು ಸಾಲಲಿಲ್ಲ: ಕಳೆದ 2011 ಮತ್ತು 2016ರಲ್ಲಿ ತೀವ್ರ ಬರ ಎದುರಾಗಿತ್ತು. ಆಗ ಕೃಷ್ಣಾ ಹಾಗೂ ಘಟಪ್ರಭಾ ನದಿಯ ತಗ್ಗು ಪ್ರದೇಶಗಳಲ್ಲಿ ನಿಂತಿದ್ದ ನೀರನ್ನೂ ಬಳಸುವ ಪರಿಸ್ಥಿತಿ ಉಂಟಾಗಿತ್ತು. ಅದರಲ್ಲೂ ಜಿಲ್ಲಾ ಕೇಂದ್ರವಾದ ಬಾಗಲಕೋಟೆ ನಗರಕ್ಕೆ ಕುಡಿಯುವ ನೀರಿಗಾಗಿ, ಬನ್ನಿದಿನ್ನಿ ಬ್ಯಾರೇಜ್‌ ಸಂಪೂರ್ಣ ಖಾಲಿಯಾದ ಬಳಿ, ನದಿಯ ತಗ್ಗು ಪ್ರದೇಶದಲ್ಲಿ ನಿಂತಿದ್ದ ನೀರನ್ನು ಸಂಗ್ರಹಿಸಿ, ಇಲ್ಲಿನ ಜನರಿಗೆ ಕೊಡುವ ಪ್ರಯತ್ನ ಬಿಟಿಡಿಎ ಮಾಡಿತ್ತು. ಇನ್ನು ಬೀಳಗಿ, ಕೊಲ್ಹಾರ ಭಾಗದಲ್ಲೂ ಕೃಷ್ಣಾ ನದಿಯ ಒಡಲಿನ ನೀರನ್ನು ಬಸೆದು ಕುಡಿಯುವ ಪರಿಸ್ಥಿತಿ ಉಂಟಾಗಿತ್ತು. ಈ ವರ್ಷವೂ ನೀರಿನ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿದೆ.

ನೀರು ಪೂರೈಕೆಯೇ ದೊಡ್ಡ ಸವಾಲು: ಜಿಲ್ಲೆಯಲ್ಲಿ 17 ನಗರ ಸ್ಥಳೀಯ ಸಂಸ್ಥೆಗಳು, 613 ಜನವಸತಿ ಗ್ರಾಮಗಳು, 11 ಜನವಸತಿ ಇಲ್ಲದ ಗ್ರಾಮಗಳಿವೆ. 2011ರ ಜನಗಣತಿ ಪ್ರಕಾರ 18,89,752 ಜನಸಂಖ್ಯೆ ಇದ್ದು, ಸಧ್ಯ 2023ರಲ್ಲಿ ಅದು ಅಂದಾಜು 22 ಲಕ್ಷ ದಾಟಿರುವ ಲೆಕ್ಕಾಚಾರವಿದೆ. ಕೃಷ್ಣೆ, ಘಟಪ್ರಭೆ ಹಾಗೂ ಮಲಪ್ರಭೆ ನದಿಗಳು ಕುಡಿಯುವ ನೀರಿನ ಜಲಮೂಲಗಳಾಗಿವೆ. ಇವುಗಳ ಹೊರತಾಗಿ, ಸಣ್ಣ ನೀರಾವರಿ ಇಲಾಖೆಯ 63 ಹಾಗೂ ಜಿ.ಪಂ. ವ್ಯಾಪ್ತಿಯ 162 ಕೆರೆಗಳಿವೆಯಾದರೂ, ಬೆರಳೆಣಿಕೆಯಷ್ಟು ಕೆರೆಗಳಿಂದ ನೀರು ಪೂರೈಕೆ ಯೋಜನೆಗಳಿವೆ.

Advertisement

ಬಾಗಲಕೋಟೆ ಜಿಲ್ಲಾ ಕೇಂದ್ರವೂ ಸೇರಿದಂತೆ ಜಿಲ್ಲೆಯ ನಗರ ಪ್ರದೇಶ ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಯಡಿ 402 ಗ್ರಾಮಗಳು ಒಳಗೊಂಡಿವೆ. ಉಳಿದೆಡೆ ಕೊಳವೆ ಬಾವಿ, ಸಿಂಗಲ್‌ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆ ಅಳವಡಿಸಲಾಗಿದೆ. ಇದಕ್ಕೆಲ್ಲ ಜಲಮೂಲ ಉಳಿಸಿಕೊಳ್ಳಲು ಈಗಲೇ ಗಂಭೀರ ಚಿಂತನೆ ಮಾಡಬೇಕಿದೆ.

ಬೇಸಿಗೆ ವರೆಗೆ ಕನಿಷ್ಠ 40 ಟಿಎಂಸಿ: ಆಲಮಟ್ಟಿ ಜಲಾಶಯದ ನೀರನ್ನೇ ಬಳಸಿಕೊಂಡು, ವಿದ್ಯುತ್‌ ಉತ್ಪಾದನೆ, ಕೈಗಾರಿಕೆ, ಕುಡಿಯುವ ನೀರು, ನೀರಾವರಿಗಾಗಿ ಮುಂದಿನ ಬೇಸಿಗೆಯವರೆಗೆ ಕನಿಷ್ಠ 40 ಟಿಎಂಸಿ ಅಡಿ ನೀರು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

519.60 ಮೀಟರ್‌ ನೀರು ಸಂಗ್ರಹ (123 ಟಿಎಂಸಿ ಅಡಿ) ಸಾಮರ್ಥ್ಯದ ಆಲಮಟ್ಟಿ ಡ್ಯಾಂನಲ್ಲಿ ಸಧ್ಯ 516.88 ಮೀಟರ್‌ (82.997 ಟಿಎಂಸಿ ಅಡಿ) ವರೆಗೆ ನೀರಿದೆ. ಅದರಲ್ಲಿ 17.62 ಟಿಎಂಸಿ ಅಡಿ ಡೆಡ್‌ ಸ್ಟೋರೇಜ್‌ ಇದ್ದು, ಈ ನೀರು ಬಳಕೆಗೆ ಬರಲ್ಲ. ಹೀಗಾಗಿ ಸಧ್ಯ ಡ್ಯಾಂನಲ್ಲಿರುವ ಒಟ್ಟು ನೀರಿನಲ್ಲಿ 65.377 ಟಿಎಂಸಿ ಅಡಿ ನೀರು ಮಾತ್ರ ಬಳಕೆಗೆ ಸಾಧ್ಯವಿದೆ.

ಅಲ್ಲದೇ ಪ್ರಸ್ತುತ ಜಲಾಶಯದಿಂದ ನೀರಾವರಿಗಾಗಿ 1998 ಕ್ಯೂಸೆಕ್‌, ಕೆಪಿಸಿಎಲ್‌ನಿಂದ (ವಿದ್ಯುತ್‌ ಉತ್ಪಾದನೆ) 10 ಸಾವಿರ ಕ್ಯೂಸೆಕ್‌, ಹಿನ್ನೀರ ವ್ಯಾಪ್ತಿಯ ಕೃಷಿ ಪಂಪಸೆಟ್‌, ಕುಡಿಯುವ ನೀರಿನ ಯೋಜನೆ ಸಹಿತ ವಿವಿಧ ಕಾರ್ಯಕ್ಕೆ 721 ಕ್ಯೂಸೆಕ್‌ ನೀರು ನಿತ್ಯ ಬಳಕೆಯಾಗುತ್ತಿದೆ. ಬೇಸಿಗೆಯ ಹೊತ್ತಿಗೆ ಡ್ಯಾಂನಲ್ಲಿ 40 ಟಿಎಂಸಿ ನೀರು ಸಂಗ್ರಹಿಸಿಟ್ಟುಕೊಳ್ಳುವುದು ಕಷ್ಟಸಾಧ್ಯ. ಹೀಗಾಗಿ ಬೇಸಿಗೆಯ ದಿನ ನೆನಸಿಕೊಂಡರೆ, ಈಗಲೇ ಭಯ ಹುಟ್ಟುತ್ತಿದೆ.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಇಲ್ಲ. ಮಹಾರಾಷ್ಟ್ರದಲ್ಲೂ ಮಳೆ ಕೊರತೆಯಿಂದ ಸದ್ಯ ಡ್ಯಾಂಗೆ ಒಳ ಹರಿವು ನಿಂತು ಹೋಗಿದೆ. ಹೀಗಾಗಿ ಈ ಬಾರಿ ಹಿಂಗಾರು ಹಂಗಾಮಿಗೆ ಆಲಮಟ್ಟಿ ಜಲಾಶಯದಿಂದ ನೀರು ಕೊಡುವುದು ಕಷ್ಟ ಸಾಧ್ಯ. ಮುಂದಿನ ಬೇಸಿಗೆ ವರೆಗಿನ ಜನ-ಜಾನುವಾರುಗಳಿಗೆ, ತುರ್ತು ಅಗತ್ಯ ಕಾರ್ಯಗಳಿಗೆ ಬೇಕಾದ ನೀರು ಸಂಗ್ರಹಿಸಿಕೊಳ್ಳುವುದು ಅಗತ್ಯವಿದೆ. ಜಿಲ್ಲೆಯ ಜನರೂ, ನೀರನ್ನು ಮಿತವಾಗಿ ಬಳಕೆ ಮಾಡಬೇಕು.
*ಆರ್‌.ಬಿ. ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು

*ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next