Advertisement

ಚರಿತ್ರೆ ಪುಟ ತೆರೆದಿಡುವ ಪ್ರಾಚ್ಯವಸ್ತು ಪ್ರದರ್ಶನ

07:22 AM Jan 14, 2019 | |

ಬದಿಯಡ್ಕ: ಅನೇಕ ಆಂದೋಲನ- ಹೋರಾಟಗಳ ಫಲವಾಗಿ ರೂಪುಗೊಂಡ ರಾಜ್ಯದ ಪ್ರಜಾಪ್ರಭುತ್ವ ತಳಹದಿಯ ವಿವಿಧ ಹಂತಗಳನ್ನು ಜನತೆಯ ಮುಂದೆ ತೆರೆದಿಡುವ ವಿಧಾನಸಭೆ ಪ್ರಾಚ್ಯವಸ್ತು ಪ್ರದರ್ಶನ ಆರಂಭಗೊಂಡಿದೆ.

Advertisement

ಮಂಜೇಶ್ವರ ಎಸ್‌.ಎ.ಟಿ. ಶಾಲೆಯಲ್ಲಿ ಈ ಪ್ರದರ್ಶನ ಆರಂಭಗೊಂಡಿದ್ದು, ಕೇರಳ ವಿಧಾನಸಭೆ ಪ್ರಾಚ್ಯವಸ್ತು ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ವತಿಯಿಂದ ಸಾಕ್ಷರತಾ ಮಿಷನ್‌ ಪ್ರಾಧಿಕಾರದ ಸಹಕಾರದೊಂದಿಗೆ ಜರಗುತ್ತಿದೆ.

ಪ್ರಜಾಪ್ರಭುತ್ವ ನೀತಿಯ ಮೌಲ್ಯಗಳನ್ನು ದೇಶದ ಸಂವಿಧಾನದ ಹಿನ್ನೆಲೆಯಲ್ಲಿ ಜನತೆಗೆ ತಿಳಿಸುವ ಮಹತ್ತರ ಉದ್ದೇಶದಿಂದ ಜ.14 ಮಂಜೇಶ್ವರದಿಂದ ಆರಂಭಗೊಂಡು ತಿರುವನಂತಪುರಂ ಜ.24 ರ ವರೆಗೆ ಪರ್ಯಟನೆ ನಡೆಸುವ ಸಂವಿಧಾನ ಸಂದೇಶ ಯಾತ್ರೆಯ ಪೂರ್ವಭಾವಿಯಾಗಿ ಈ ಪ್ರದರ್ಶನ ನಡೆಯುತ್ತಿದೆ.

2006ರಲ್ಲಿ ಉದ್ಘಾಟನೆಗೊಂಡ ಕೇರಳ ವಿಧಾನಸಭೆಯ ಸುವರ್ಣ ಮಹೋತ್ಸವ ಮ್ಯೂಸಿಯಂ ನಲ್ಲಿ ಕೇರಳ ರಾಜ್ಯ ರಚನೆಯ ಹಿಂದಿನ ಮತ್ತು ನಂತರದ ಕಾಲಯಾನದೊಂದಿಗೆ, ವಿಧಾನಸಭೆಯ ಚಟುವಟಿಕೆಗಳ, ಸರಕಾರಗಳ ವ್ಯವಸ್ಥೆಗಳ, ಜನನಾಯಕರ, ಜನಪ್ರತಿನಿಧಿಗಳ ಕುರಿತಾದ ಸಮಗ್ರ ದಾಖಲೆಗಳು, ಮಾಹಿತಿಗಳು ಇಲ್ಲಿವೆ. ವಿಧಾನಸಭೆಯ ಅಧ್ಯಕ್ಷರು, ಮುಖ್ಯಮಂತ್ರಿಗಳು, ಸಭಾಪತಿಗಳು, ಸಚಿವರು, ಪ್ರತಿಪಕ್ಷ ನಾಯಕರು, ರಾಜ್ಯಪಾಲರು, ಅವರ ಪ್ರತಿಜ್ಞಾ ಸ್ವೀಕಾರದ ಚಿತ್ರಗಳು ಸಹಿತ ಅಪರೂಪದ ಚಿತ್ರ ಪ್ರದರ್ಶನಗಳಿವೆ. ಪ್ರಜಾಪ್ರಭುತ್ವ ನೀತಿಯ ಮಹತ್ವವನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಮ್ಯೂಸಿಯಂನ ಜಿಲ್ಲಾ ಮಟ್ಟದ ಪ್ರದರ್ಶನಗಳನ್ನು ನಡೆಸಲಾಗುತ್ತಿದೆ.

ವಿಧಾನಸಭೆಯ ನಿಯಮಾವಳಿಗಳು, ಶಿಸ್ತು ಸಂಹಿತೆಗಳು ಇತ್ಯಾದಿ ಮಾಹಿತಿಗಳು ಇಲ್ಲಿವೆ. ಇವುಗಳ ಜತೆಗೆ ”ನಮ್ಮುಡೆ ನಿಯಮಸಭಾ(ನಮ್ಮ ವಿಧಾನಸಭೆ)” ಎಂಬ ಹೆಸರಿನ ಸಾಕ್ಷ್ಯಚಿತ್ರ, ರಾಜ್ಯ ಸಚಿವ ಸಂಪುಟ ಕುರಿತಾದ ”ವಜ್ರ ಕೇರಳಂ” ಎಂಬ ಸಾಕ್ಷ್ಯಚಿತ್ರಗಳ ಪ್ರದರ್ಶನವೂ ಇಲ್ಲಿ ನಡೆಯುತ್ತಿದೆ. ಒಟ್ಟಿನಲ್ಲಿ ಪ್ರಜಾಪ್ರಭುತ್ವ ನೀತಿ ಬಗ್ಗೆ, ಕೇರಳದ ಇತಿಹಾಸದ ಬಗ್ಗೆ ಕುತೂಹಲಿಗಳಾದ ಮಂದಿಯ ಕಣ್ಮನ ತಣಿಸುವ ಮಾಹಿತಿಗಳೊಂದಿಗೆ ಸಾರ್ಥಕ ಪ್ರದರ್ಶನವೊಂದು ಆರಂಭಗೊಂಡಂತಾಗಿದೆ.

Advertisement

ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಎ.ಕೆ.ಎಂ.ಅಶ್ರಫ್‌ ಪ್ರದರ್ಶನವನ್ನು ಉದ್ಘಾಟಿಸಿದರು. ಮಂಜೇಶ್ವರ ಗ್ರಾಮಪಂಚಾಯತ್‌ ಅಧ್ಯಕ್ಷ ಅಬ್ದುಲ್‌ ಅಝೀಝ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕೇರಳ ವಿಧಾನಸಭೆ ವಿಭಾಗ ಅಧಿಕಾರಿ ಎ.ವಿಜಯನ್‌ ಅಮೃತರಾಜ್‌ ಶುಭಾಶಂಸನೆಗೈದರು.

ಬ್ಲಾಕ್‌ ಪಂಚಾಯತ್‌ ಉಪಾಧ್ಯಕ್ಷೆ ಮಮತಾ ದಿವಾಕರ್‌, ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಹರೈನ್‌ ಮಹಮ್ಮದ್‌, ಮಹಮ್ಮದ್‌ ಮುಸ್ತಫ, ಮಂಜೇಶ್ವರ ಗ್ರಾಮ ಪಂಚಾಯತ್‌ ಮುಕ್ತಾರ್‌, ಕೆ.ಎಂ.ಕೆ.ಅಬ್ದುಲ್‌ ರಹಮಾನ್‌ ಹಾಜಿ, ಸದಸ್ಯೆ ಸುಪ್ರಿಯ ಶೆಣೆ„, ಜಿಲ್ಲಾ ಸಾಕ್ಷರತಾ ಮಿಷನ್‌ ಯೋಜನೆ ಸಂಚಾಲಕ ಶಾಜು ಜೋನ್‌, ಸಹಾಯಕ ಸಂಚಾಲಕ ಶಾಸ್ತಾ ಪ್ರಸಾದ್‌, ಗೀತಾ ಟೀಚರ್‌, ನೋಡೆಲ್‌ ಪ್ರೇರಕ್‌ ಗ್ರೇಸಿ ವೇಗಸ್‌ ಮೊದಲಾದವರು ಉಪಸ್ಥಿತರಿದ್ದರು.

ಬೆಳಕು ಚೆಲ್ಲುವ ಪ್ರಯತ್ನ
ಕೇರಳದಲ್ಲಿ ಪ್ರಜಾಪ್ರಭುತ್ವ ನೀತಿ ಅರಳುವ ಮುನ್ನ ಇದ್ದ ಆಡಳಿದ ಸ್ವರೂಪವನ್ನು ಸ್ಪಷ್ಟವಾಗಿ ಈ ಪ್ರದರ್ಶನ ಚಿತ್ರಿಸುತ್ತದೆ. ಸಮಾನತೆಯ ಮೂಲಮಂತ್ರದೊಂದಿಗೆ ಮಾನವಬದುಕಿಗೆ ಬೇಕಾದ ತಳಹದಿಗೆ ನಡೆಸಲಾದ ನಿನ್ನೆಗಳ ಹೋರಾಟಗಳ ಹಂತಗಳಿಗೆ ಬೆಳಕು ಚೆಲ್ಲುವ ಯತ್ನ ಈ ಪ್ರದರ್ಶನ ನಡೆಸುತ್ತದೆ. ತಿರುವಾಂಕೂರು ಆಡಳಿತದಿಂದ ತೊಡಗಿ ಇಂದಿನ ಜನರ ಕೈಗೆ ಅಧಿಕಾರ ಲಭಿಸಿರುವ (ಪ್ರಜಾಪ್ರಭುತ್ವ ರೀತಿಯ) ಸಚಿವ ಸಂಪುಟ ರಚನೆ ವರೆಗಿನ ಕ್ರಾಂತಿಕಾರಿ ಬೆಳವಣಿಗೆಗಳನ್ನು ತಿಳಿಸುತ್ತದೆ. ಗಣತಂತ್ರ ಕೇರಳದ ಪರಂಪರೆಯ ಹೆಜ್ಜೆಗಳನ್ನು ಸಂರಕ್ಷಿಸುವ ದಾಖಲೆಗಳು ಇಲ್ಲಿವೆ. ಛಾಯಾಚಿತ್ರಗಳ, ವೀಡಿಯೋ ಸಹಿತ ಪ್ರದರ್ಶನ ಇಲ್ಲಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next