Advertisement

ಹೊಸ ಖ್ಯಾತ ಪ್ರಸಂಗಗಳ ಯಶಸ್ವಿ ಪ್ರದರ್ಶನ

11:03 PM Mar 04, 2020 | Team Udayavani |

ಬಸ್ರೂರು: ಬಡಗುತಿಟ್ಟಿನ ಯಕ್ಷಗಾನ ಮೇಳಗಳು ಈಗ ತಿರುಗಾಟ ನಡೆಸುತ್ತಿವೆ. ಮುಂದಿನ ಮೇ ತನಕ ಈ ತಿರುಗಾಟ ಮುಂದುವರಿಯುತ್ತದೆ. ಬಡಗುತಿಟ್ಟಿನಲ್ಲಿ ಟೆಂಟ್‌ ಮೇಳಗಳಿರುವುದು ಎರಡೇ. ಅವುಗಳೆಂದರೆ ಶ್ರೀ ಸಾಲಿಗ್ರಾಮ ಮತ್ತು ಶ್ರೀ ಪೆರ್ಡೂರು ಮೇಳ.

Advertisement

ಶ್ರೀ ಸಾಲಿಗ್ರಾಮ ಮೇಳದವರು ಈ ಬಾರಿ ದೇವದಾಸ್‌ ಈಶ್ವರ ಮಂಗಲರ “ಚಂದ್ರಮುಖೀ ಸೂರ್ಯಸಖೀ’ ಪ್ರಸಂಗವನ್ನು ಯಶಸ್ವಿಯಾಗಿ ಆಡುತ್ತಿದ್ದು ಶತದಿನದ ಸಂಭ್ರಮವನ್ನೂ ಕಂಡಿದೆ. ಶ್ರೀ ಪೆರ್ಡೂರು ಮೇಳದವರು ಪ್ರೊ. ಪವನ್‌ ಕಿರಣಕೆರೆ ಅವರ “ಮಾನಸ ಗಂಗಾ’ ಪ್ರಸಂಗವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಇದಲ್ಲದೆ ಸಾಲಿಗ್ರಾಮ ಮೇಳದವರಿಂದ ಅಲ್ತಾರು ನಂದೀಶ್‌ ಶೆಟ್ಟಿ ವಿರಚಿತ “ವಚನ ವಲ್ಲರಿ’, ಪೆರ್ಡೂರು ಮೇಳದವರಿಂದ ಮಣೂರು ವಾಸುದೇವ ಮಯ್ಯ ವಿರಚಿತ “ಸೂರ್ಯ ಸಂಕ್ರಾಂತಿ’ ಪ್ರಸಂಗಗಳು ಯಶಸ್ವಿ ಪ್ರದರ್ಶನಗೊಳ್ಳುತ್ತಿವೆ.

ಬೇರೆ ಪ್ರಸಂಗಗಳ ಪ್ರದರ್ಶನ
ಈ ಎರಡು ಪ್ರಸಂಗಗಳು ಮಾತ್ರವಲ್ಲದೆ ಇನ್ನೂ ಕೆಲವು ಹೊಸ ಪ್ರಸಂಗಗಳನ್ನು ಈ ಎರಡು ಮೇಳಗಳು ಯಶಸ್ವಿಯಾಗಿ ಪ್ರದರ್ಶಿಸುತ್ತಿವೆ. ಶ್ರೀ ಸಾಲಿಗ್ರಾಮ ಮತ್ತು ಶ್ರೀ ಪೆರ್ಡೂರು ಮೇಳಗಳಲ್ಲದೆ ಬಡಗುತಿಟ್ಟಿನಲ್ಲಿ ಹಲವು ಹರಕೆಯಾಟದ, ಸೇವಾ ಬಯಲಾಟದ ಮೇಳಗಳಿವೆ. ಮುಖ್ಯವಾಗಿ ಶ್ರೀ ಮಂದಾರ್ತಿ ಮೇಳ ಐದು ಮೇಳಗಳನ್ನು ಹೊಂದಿದ್ದು ಹರಕೆಯಾಟದ ಒತ್ತಡದಲ್ಲಿದೆ. ಇದಲ್ಲದೆ ಶ್ರೀ ಮಾರಣಕಟ್ಟೆ ಎರಡು ಮೇಳಗಳಿದ್ದು ಈ ಬಾರಿ ಮತ್ತೂಂದು ಮೂರನೇ ಮೇಳವನ್ನೂ ತಿರುಗಾಟದಲ್ಲಿ ನಡೆಸುತ್ತಿದ್ದಾರೆ.

ಉಳಿದಂತೆ ಶ್ರೀ ಸೌಕೂರು, ಶ್ರೀ ಹಿರಿಯಡಕ, ಶ್ರೀ ಮಡಾಮಕ್ಕಿ, ಶ್ರೀ ಹಾಲಾಡಿ, ಶ್ರೀ ಅಮೃತೇಶ್ವರಿ, ಶ್ರೀ ಸಿಗಂಧೂರು, ಶ್ರೀ ಆಜ್ರಿ ಮೇಳ ಚೋನಮನೆ, ಶ್ರೀ ಮೇಗರಹಳ್ಳಿ, ಶ್ರೀ ಗೋಳಿಗರಡಿ, ಶ್ರೀ ನೀಲಾವರ ಮೇಳಗಳು ಒಂದೊಂದೇ ಮೇಳವನ್ನು ಹೊಂದಿದ್ದು ಯಶಸ್ವಿ ತಿರುಗಾಟವನ್ನು ನಡೆಸುತ್ತಿವೆ. ಶ್ರೀ ಕಮಲಶಿಲೆ ಮೇಳ ಎರಡು ಮೇಳಗಳನ್ನು ಹೊಂದಿದ್ದು ಯಶಸ್ವಿ ತಿರುಗಾಟವನ್ನು ನಡೆಸುತ್ತಿವೆ.

ಬಯಲಾಟದ ಕೆಲವು ಮೇಳಗಳು ಮಾತ್ರ ಕೇವಲ ಪೌರಾಣಿಕ ಪ್ರಸಂಗಗಳನ್ನಷ್ಟೇ ಆಡುತ್ತಿದ್ದರೆ ಉಳಿದ ಬಯಲಾಟದ ಮೇಳಗಳು ಹೊಸ ಪ್ರಸಂಗಗಳನ್ನು ಪ್ರದರ್ಶಿಸುತ್ತಿವೆ. ಮತ್ತೆ ಕೆಲವು ಬಯಲಾಟದ ಮೇಳಗಳು ಈ ಬಾರಿಯ ತಿರುಗಾಟದಲ್ಲೇ ಪ್ರಥಮವಾಗಿ ಪ್ರದರ್ಶಿಸಿದ ಯಕ್ಷಗಾನ ಪ್ರಸಂಗವೂ ಇದೆ. ಹಿರಿಯಡಕ ಮೇಳದವರಿಂದ
“ಗರುಡೊದ್ಭವ’ , “ಮೂಷಿಕ ವಾಹನ’, ಮಡಾಮಕ್ಕಿ ಮೇಳದವರಿಂದ “ಮಹಾಶಕ್ತಿ ಮಂತ್ರದೇವತೆ ಯಶಸ್ವಿ ಪ್ರದರ್ಶನಗೊ ಳ್ಳುತ್ತಿರುವ ಪ್ರಸಂಗಗಳು.

Advertisement

ಪೌರಾಣಿಕ ಪ್ರಸಂಗ
ಯಶಸ್ವಿ ಪ್ರದರ್ಶನ
ಈ ಬಾರಿ ಪೌರಾಣಿಕ ಹಿಟ್‌ ಪ್ರಸಂಗಗಳು “ಭೀಷ್ಮ ವಿಜಯ’, “ಭೀಷ್ಮ-ಭೀಷ್ಮ-ಭೀಷ್ಮ’,
“ಬ್ರಹ್ಮಕಪಾಲ’, “ಶಶಿಪ್ರಭಾ ಪರಿಣಯ” ಯಶಸ್ವಿ ಪ್ರದರ್ಶನಗಳಿಂದೊಡಗೂಡಿದೆ.

ಬಯಸಿದರೆ ಬಯಲಾಟ
ಕಾಲಮಿತಿ ಪ್ರದರ್ಶನ
ಬಯಲಾಟದ ಕೆಲವು ಮೇಳಗಳು ಆಡಿಸುವವರು ಬಯಸಿದರೆ ಕಾಲಮಿತಿ ಪ್ರದರ್ಶನವನ್ನೂ ಮಾಡಿದ್ದಾರೆ. ಒಂದೇ ಯಜಮಾನರ ಬೇರೆ ಬೇರೆ ಮೇಳಗಳಲ್ಲಿ ಕಲಾವಿದರು ಎರಡೆರಡು ಕಡೆ ವೇಷ ಮಾಡಿದ ಪ್ರಸಂಗವೂ ಇದೆ. ಬಡಗು ತಿಟ್ಟಿನಲ್ಲಿ ಕೆಲವು ಹೆಸರಾಂತ ಕಲಾವಿದರು ಈಗ ಇಲ್ಲ . ಹೊಸ ಹೊಸ ಪೀಳಿಗೆಯ ಭರವಸೆಯ ಕಲಾವಿದರು ಮತ್ತೆ ಮತ್ತೆ ಮೂಡಿಬರುತ್ತಿರುವುದು ಯಕ್ಷಗಾನ ಕ್ಷೇತ್ರಕ್ಕೆ ಆಶಾಕಿರಣವಾಗಿದೆ.

ಒಟ್ಟಿನಲ್ಲಿ ಯಕ್ಷಗಾನ ಕಲೆ ಕರಾವಳಿಯಲ್ಲಿ ಬಡವಾಗಲಿಲ್ಲ. ಬೆಂಗಳೂರು, ಮುಂಬಯಿ ನಗರಗಳಲ್ಲೂ ಯಶಸ್ವಿ ಪ್ರದರ್ಶನ ನೀಡಿದ ಉದಾಹರಣೆಗಳಿವೆ. ಮತ್ತೆ ಮತ್ತೆ ಹೊಸ ಮೇಳಗಳು ಹುಟ್ಟಿಕೊಳ್ಳುತ್ತಿರುವುದು ಯಕ್ಷರಸಿಕರ ಪಾಲಿಗೆ ಆಶಾಕಿರಣವಾಗಿ ಕಂಡುಬರುತ್ತಿದೆ.

-  ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next