Advertisement

ಒಂದೇ ಸೂರಿನಡಿ ಸರ್ವ ಸೌಲಭ್ಯದ ಪಂ. ಕಟ್ಟಡಕ್ಕೆ ಬೇಡಿಕೆ

09:00 PM Sep 29, 2021 | Team Udayavani |

ಬಡಗ ಎಡಪದವು ಗ್ರಾಮದಲ್ಲಿ ಸಮರ್ಪಕ ನೀರಿನ ಸೌಲಭ್ಯಗಳನ್ನು ಒದಗಿಸುವುದು ಪ್ರಮುಖ ಬೇಡಿಕೆಯಾಗಿದೆ. ಗ್ರಾಮಕ್ಕೆ ಬಸ್‌ ಸೌಲಭ್ಯ ಒದಗಿಸಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯಲು ಉದಯವಾಣಿ ಸುದಿನದ ಒಂದು ಊರು-ಹಲವು ದೂರು ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ.

Advertisement

ಕೈಕಂಬ: ಒಂದೇ ಸೂರಿನಡಿ ಎಲ್ಲ ಸೌಲಭ್ಯ ಸಿಗುವ ಪಂಚಾಯತ್‌ ಕಟ್ಟಡ ಒದಗಿಸುವಂತೆ ಬಡಗ ಎಡಪದವು ಗ್ರಾಮಸ್ಥರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಅದು ಇನ್ನೂ ಈಡೇರಿಲ್ಲ.

ಬಡಗ ಎಡಪದವು ಗ್ರಾ.ಪಂ. ಎಡಪದವು ಗ್ರಾಮ ಪಂಚಾಯತ್‌ನಿಂದ ಬೇರ್ಪಟ್ಟು ಹೊಸ ಗ್ರಾ.ಪಂ. ಆಗಿ 2015ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಅದು ಎಡಪದವು ಮಾರುಕಟ್ಟೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಿತ್ತು. 2018ರ ಬಳಿಕ ಸುವರ್ಣ ಗ್ರಾಮ ಯೋಜನೆಯ ಸಮುದಾಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಂಚಾಯತ್‌ಗೆ ಸಭೆ, ಸಮಾರಂಭಗಳಿಗೆ ಸಭಾಂಗಣದ ಕೊರತೆ, ಬ್ಯಾಂಕ್‌, ಅಂಚೆಕಚೇರಿ ಸಮೀಪದಲ್ಲಿ ಇರದಿರುವುದು, ಗ್ರಾಮಕರಣಿಕರು ಹಳೆಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು, ಗ್ರಂಥಾಲಯ ಕಟ್ಟಡ ಇಲ್ಲದಿರುವ ಕಾರಣ ಒಂದೇ ಸೂರಿನಡಿಯಲ್ಲಿ ಎಲ್ಲ ಸರಕಾರಿ ಸೇವೆಯನ್ನು ನೀಡುವ ಮಾದರಿ ಪಂಚಾಯತ್‌ ಕಟ್ಟಡಕ್ಕೆ 1.50 ಕೋ.ರೂ. ಯೋಜನೆ ರೂಪಿಸಿ ಈಗಾಗಲೇ ಶಂಕುಸ್ಥಾಪನೆ ನೆರವೇರಿದೆ. ಆದರೆ ಯೋಜನೆಯ ಅನುಷ್ಠಾನ ಮಾತ್ರ ಇನ್ನೂ ಆಗಿಲ್ಲ. ಇದು ವೇಗ ಪಡೆಯಬೇಕಿದೆ.

ಅಕ್ರಮ ಸಕ್ರಮ ನಮೂನೆ 57ರಲ್ಲಿ ಕುಮ್ಕಿ ಹಕ್ಕಿಗಾಗಿ ಬಫರ್‌ ಝೋನ್‌ಅನ್ನು 10 ಕಿ.ಮೀ. ನಿಂದ 5 ಕಿ.ಮೀ. ವ್ಯಾಪ್ತಿಗೆ ಇಳಿಸಬೇಕಿದೆ. ಗ್ರಾಮದ ಸರ್ವೆ ನಂಬ್ರ 109/5 ಸುಮಾರು 355 ಎಕರೆಗಿಂತ ಜಾಸ್ತಿ ವಿಸ್ತೀರ್ಣ ಇದ್ದು ಹಿಲ್‌ ಬ್ಲಾಕ್‌ ನಂಬ್ರ ಆಗಿದೆ. ಇದರಲ್ಲಿ 40ಕ್ಕಿಂತ ಹೆಚ್ಚು ಮಂಜೂರಾತಿದಾರರಿದ್ದಾರೆ. ಅಲ್ಲದೇ ಇದರಲ್ಲಿ ಮಂಜೂರಾಗುವ ಸಮಯ ಬೇರೆ ಬೇರೆ ಹೊಸ ಸರ್ವೆ ನಂಬ್ರ ವಿಭಜನೆ ಆಗಿರುತ್ತದೆ. ಇದರಿಂದಾಗಿ 11 ಇ ನಕ್ಷೆ ಪಡೆಯುವುದಕ್ಕೆ ಸಮಸ್ಯೆಗಳು ಉಂಟಾಗುತ್ತದೆ. ಅದರಿಂದ ಏಕವ್ಯಕ್ತಿ ಕೋರಿಕೆಯಡಿ 11ಇ ಅರ್ಜಿ ಪರಿಗಣಿಸಬೇಕು. ಅವಿಭಜಿತ ದ.ಕ. ಜಿಲ್ಲೆಗೆ ಕಂದಾಯ ಇಲಾಖೆಯ ಜಮೀನಿಗೆ ಸಂಬಂಧಪಟ್ಟ ಕೆಲವು ಕಾನೂನು ತಿದ್ದುಪಡಿ ಅಗತ್ಯವಿದೆ.

ಇದನ್ನೂ ಓದಿ:ಬಿಡುಗಡೆಯ ಮುನ್ನವೇ ‘ಕೋಟಿಗೊಬ್ಬ’ನಿಗೆ ಸಿನಿಮಾ ಚೋರರ ಬೆದರಿಕೆ  

Advertisement

ಮನೆ ನಿವೇಶನಕ್ಕೆ ನೂರಕ್ಕಿಂತ ಹೆಚ್ಚು ಅರ್ಜಿಗಳು ಬಂದಿದ್ದು, ದಡ್ಡಿ ಮತ್ತು ಮಜ್ಜಿಗುರಿ ಬಳಿ ನಿವೇಶನಕ್ಕೆ ಸ್ಥಳವನ್ನು ಕಾದಿರಿಸಲಾಗಿದೆ. ಮಜ್ಜಿಗುರಿಯು ನಿವೇಶನಕ್ಕೆ ಯೋಗ್ಯವಲ್ಲದ ಜಾಗವಾಗಿದ್ದು, ಬೇರೆ ಸ್ಥಳವನ್ನು ಗುರುತಿಸಬೇಕಿದೆ.

ಇತರ ಸಮಸ್ಯೆಗಳೇನು?
– ಕೊಳವೆ ಬಾವಿಗಳೇ ಇಲ್ಲಿನ ನೀರಿನ ಮೂಲವಾಗಿವೆೆ. ಅಂತರ್ಜಲ ಕುಸಿತದಿಂದಾಗಿ 500 ಅಡಿಗಳಿಂತ ಹೆಚ್ಚು ಆಳಕ್ಕೆ ಹೋಗಿದೆ. ಬಹುಗ್ರಾಮ ಕುಡಿ ಯುವ ನೀರಿನ ಯೋಜನೆ ಇಲ್ಲಿ ಅಗತ್ಯವಾಗಿ ಬೇಕಾಗಿದೆ. ರಸ್ತೆಗಳಿಲ್ಲದ ಮನೆಗಳಿಗೆ ನೀರಿನ ಸಂಪರ್ಕ ನೀಡುವುದೇ ಇಲ್ಲಿ ಸವಾಲಾಗಿದೆ.
– ರಾ.ಹೆ. 169 ಹಾದು ಹೋಗುತ್ತಿರುವ ಕಾರಣ ಶಾಲಾ ಸಮಯದಲ್ಲಿ ವೇಗದೂತ ಬಸ್‌ಗಳಿಗೆ ಇಲ್ಲಿ ನಿಲುಗಡೆ ನೀಡಬೇಕಿದೆ. ಸರಕಾರಿ ಬಸ್‌ ಸೇವೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
– ಗ್ರಾಮದ ಒಳರಸ್ತೆಗಳಾದ ಬೆಳ್ಳೆಚ್ಚಾರು-ಉರ್ಕಿ -ಪೂಪಾಡಿಕಲ್ಲು-ಎಡಪದವು ರಸ್ತೆಯಲ್ಲಿ ಬಸ್‌ ಸಂಚಾರವಿಲ್ಲದೇ ಗ್ರಾಮಸ್ಥರು ರಿಕ್ಷಾದಲ್ಲಿ ಪ್ರಯಾಣಿಸಬೇಕಾಗಿದೆ. ಬಸ್‌ ಸೌಲಭ್ಯ ಒದಗಿಸಬೇಕಿದೆ.
– ದಡ್ಡಿ-ಧೂಮಚಡವು-ಬೆಳ್ಳೆಚ್ಚಾರು-ಉರ್ಕಿ-ಪೂಪಾಡಿಕಲ್ಲು-ಎಡಪದವು ರಸ್ತೆ ವಿಸ್ತರಣೆಯಾಗಬೇಕಿದೆ.
– ಗೋಸ್ಟೈಲ್ -ಶಾಸ್ತಾವು-ತಿಪ್ಲಬೆಟ್ಟು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಬೇಕು.
– ಅಂತರ್ಜಲ ವೃದ್ಧಿಗೆ ಇಲ್ಲಿನ ಸರಕಾರಿ ಕೆರೆಗಳ ಹೂಳೆತ್ತುವ ಕಾರ್ಯವಾಗಬೇಕಿದೆ.
– ಉಪ ಆರೋಗ್ಯ ಕೇಂದ್ರಕ್ಕೆ ಖಾಯಂ ಆರೋಗ್ಯ ಸಹಾಯಕರನ್ನು ನೇಮಿಸಬೇಕು.
– 5 ಅಂಗನವಾಡಿ ಕೇಂದ್ರಗಳಿಗೆ ಅವರಣಗೋಡೆ, ಇಂಟರ್‌ಲಾಕ್‌ ಹಾಕಬೇಕು.
– ಶಾಂತಿಪಡ್ಪು, ಕರೆಂಕಿ, ತಿಪ್ಲಬೆಟ್ಟು , ಮಂಜನಕಟ್ಟೆ ಪ್ರದೇಶಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿದ್ದು ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ.
– ಗ್ರಾಮದಲ್ಲಿ ಹಳೆ ಟ್ರಾನ್ಸ್‌ಫಾರ್ಮರ್‌, ವಿದ್ಯುತ್‌ ತಂತಿಗಳ ಬದಲಾವಣೆ ಮಾಡಬೇಕು.
– ಶತಮಾನೋತ್ಸವ ಆಚರಿಸಿದ ಬಡಗ ಎಡಪದವು ಬೆಳ್ಳೆಚ್ಚಾರು ಸರಕಾರಿ ಹಿ.ಪ್ರಾ. ಶಾಲೆಯ ಮೂಲಸೌಕರ್ಯ ಒದಗಿಸಬೇಕಿದೆ.

-ಸುಬ್ರಾಯ ನಾಯಕ್‌, ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next