Advertisement

ಎಲ್ಲರಿಗೂ ಇಂದು ಹಕ್ಕು ಬೆಲ್ಲವಾದರೆ, ಕರ್ತವ್ಯ ಬೇವಿನಂತಾಗಿದೆ: ಬಾಬು ಹಿರಣ್ಣಯ್ಯ

08:35 PM May 16, 2021 | Team Udayavani |

ಕಷ್ಟಕಾಲದಲ್ಲಿ ಜೀವನಕ್ಕೆ ಒಂದಷ್ಟು ಲವ ಲವಿಕೆಯನ್ನು ತಂದುಕೊಳ್ಳಲು ಕಾನೂನಿನ ಚೌಕಟ್ಟಿನಲ್ಲಿ ಹಬ್ಬ ಹರಿದಿನಗಳನ್ನು ಆಚರಿಸುವುದರ ಜತೆಗೆ ಸಾಧಕರಿಂದ ನಾಲ್ಕು ಉತ್ತಮ ಮಾತುಗಳನ್ನು ಕೇಳಿಸಿಕೊಳ್ಳುವುದು ಸೂಕ್ತ ಹಾಗೂ ಸಮಂಜಸ. ಇಂತಹ ಸದುದ್ದೇಶದಿಂದ ಕನ್ನಡ ಬಳಗ ಯುಕೆ ಹಾಗೂ ಕನ್ನಡಿಗರು ಯುಕೆ ಜಂಟಿಯಾಗಿ ಮೇ 8ರಂದು ವಸಂತೋತ್ಸವ ಹಾಗೂ ಯುಗಾದಿ ಹಬ್ಬವನ್ನು ವರ್ಚುವಲ್‌ ಪ್ಲಾಟ್‌ಫಾರ್ಮ್ ಮೂಲಕ ಹಮ್ಮಿಕೊಂಡಿತ್ತು.

Advertisement

ಆರಂಭದಲ್ಲಿ ಎಲ್ಲರಿಗೂ ಯುಗಾದಿ ಹಬ್ಬದ ಶುಭ ಹಾರೈಸಿ ಮಾತನಾಡಿದ ರಂಗಭೂಮಿ ಕಲಾವಿದ, ಬೆಳ್ಳಿತೆರೆ ಮತ್ತು ಕಿರುತೆರೆಯ ನಟರಾದ ಬಾಬು ಹಿರಣ್ಣಯ್ಯ ಅವರು,  ಕೊರೊನಾ ಹೊಡೆತದಿಂದ ಜನರ ಜೀವನ ಹೇಗಾಗಿದೆ ಎಂದರೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಲ್ಲಿ  ಯಾವುದಾದರೂ ಗುರುತು, ಪರಿಚಯದವರ ಫೋಟೋಗಳು ಬಂದರೆ ಒಂದೋ ಹೆದರಿಕೆಯಾಗುತ್ತದೆ, ಇಲ್ಲ ಓಂ ಶಾಂತಿ ಎಂದೋ ಬರೆಯಬೇಕಾಗಿದೆ ಎಂದರು.

ಹಕ್ಕು ಮತ್ತು ಕರ್ತವ್ಯದ ಬಗ್ಗೆ ಅಭಿಪ್ರಾಯ ಮಂಡಿಸಿದ ಅವರು ಒಂದು ಸೊಗಸಾದ ಹಾಗೂ ಪ್ರಸ್ತುತ ಸಂದರ್ಭಕ್ಕೆ ಹೊಂದಿಕೆಯಾಗುವಂತೆ ಕಥೆಯನ್ನು ಹಂಚಿಕೊಂಡರು.

ಇಂದು ಹಕ್ಕು ಎಲ್ಲರಿಗೂ ಬೆಲ್ಲದಂತಾದರೆ ಕರ್ತವ್ಯ ಬೇವಿನಂತಾಗಿದೆ. ಹಾಗಾಗಿ ಅವರೆಲ್ಲಿ, ಇವರೆಲ್ಲಿ, ಅವರೇನು ಮಾಡುತ್ತಿದ್ದಾರೆ, ಇವರೇನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗಳ ಹೊರತು ನಾನು ಏನು ಮಾಡುತ್ತಿದ್ದೇನೆ, ನನ್ನ ಕರ್ತವ್ಯವೇನು, ನನ್ನಿಂದ ಸಮಾಜಕ್ಕೇನು ಒಳಿತಾಗುತ್ತಿದೆ  ಎನ್ನುವ  ಆತ್ಮಾವಲೋಕನ  ನಮ್ಮಲ್ಲಿ ಕಡಿಮೆಯಾಗುತ್ತಿದೆ.  ಉದಾಹರಣೆಯಾಗಿ ಲಾಟರಿ ಟಿಕೆಟ್‌ ಪಡೆದುಕೊಳ್ಳದೆ ಬಹುಮಾನ ಬರಲಿ ಎಂದು ಆಸೆ ಪಡುತ್ತಿರುವಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಪತ್ರಿಕೆಯಲ್ಲಿನ ಒಂದು ಚಿಕ್ಕ ವರದಿ ಹೇಗೆ “ಲಂಚಾವತಾರ’ ನಾಟಕಕ್ಕೆ ಪೀಠಿಕೆ ಆಯಿತು ಹಾಗೂ ಒಂದು ಹೆಣ್ಣುಮಗಳು ಕವಿಯಾಗಲು ಎಷ್ಟು ಕವಿತೆಗಳನ್ನು ಬರೆಯಬೇಕು ಎನ್ನುವ ಬೇಂದ್ರೆಯವರ ಪ್ರಶ್ನೆಗೆ, ತಾಯಿ ಯಾಗಬೇಕೆಂದರೆ ಎಷ್ಟು ಮಕ್ಕಳನ್ನು ಹಡಿಯ ಬೇಕೆಂದು ಮರು ಪ್ರಶ್ನಿಸುವುದರ ಮೂಲಕ ಮಾರ್ಮಿಕವಾಗಿ ಉತ್ತರಿಸಿದ ರೀತಿಯನ್ನು ವರ್ಣಿಸಿದರು.

Advertisement

ಅದೇ ರೀತಿ ಅರುಣೋದಯದ ಕಾಲ ದಲ್ಲಿ ಬದರಿನಾಥದಲ್ಲಿನ ಹಿಮಾಲಯದ ಶೃಂಗಪರ್ವತಗಳನ್ನು ನೋಡುವಾಗ ಮಗು ಅವುಗಳನ್ನು ತೆಗೆದುಕೊಂಡು ಹೋಗಬಹುದೇ ಎಂದು ಕೇಳಿದಾಗ ಹಳ್ಳಿಗಾಡಿನ ಅಜ್ಜಿಯು ನಿನ್ನೆ ಬಂದವರು ತೆಗೆದುಕೊಂಡು ಹೋಗಿದ್ದರೆ, ಇಂದು ಅದು ನಿನಗೆ ನೋಡಲು ಸಿಗುತಿತ್ತೇ ಎಂದು ಉತ್ತರಿಸಿದ್ದನು ಕಂಡು, ನಾವಾಗಿದ್ದರೆ ಕಾರಿನಲ್ಲಿ ತುಂಬಿಕೊಂಡು ಹೋಗೋಣ ಎನ್ನುವ ರೀತಿಯಲ್ಲಿ ಸುಳ್ಳು ಆಶ್ವಾಸನೆಯನ್ನು ಕೊಡುತ್ತಿದ್ದೆವು ಎಂದು ಹೇಳುವ ಮೂಲಕ ಅವರ ಅರಿವಿಗೆ ಬಂದ ಹಲವಾರು ಪ್ರಸಂಗ ಮತ್ತು ಉದಾಹರಣೆಗಳನ್ನು  ಹಂಚಿಕೊಂಡರು.

ಕೋವಿಡ್‌ ಮಹಾಮಾರಿಯಿಂದ ಭಾರತ ಬಳಲುತ್ತಿರುವಾಗ ನಾವೆಲ್ಲರೂ ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಇನ್ನಷ್ಟು ದೀರ್ಘ‌ವಾಗಿ ಯೋಚನೆ ಮಾಡಿ, ಒಬ್ಬರಿಗೊಬ್ಬರು ಸಹಾಯ ಮಾಡಿದರೆ, ನಮ್ಮನ್ನು ಸುಂದರವಾಗಿ ಇಟ್ಟುಕೊಳ್ಳಬಹುದು. ಇದರಿಂದ ಇಡೀ ಸಮಾಜ ಸುಂದರವಾಗುತ್ತದೆ. ಅದೇ ರೀತಿ  ಮನುಷ್ಯ ಸಂಘ ಜೀವಿಯಾಗಿ ಸಮಾಜ ಜೀವಿಯಾಗಿ ಬದುಕಿದರೆ ಪ್ರತಿಯೊಬ್ಬನೂ ಕರ್ತವ್ಯ ಪಾಲನೆ ಮಾಡಿದರೆ ಹಕ್ಕೂ ಪ್ರಾಪ್ತವಾಗುತ್ತದೆ. ಹಕ್ಕು  ಹಾಗೂ ಕರ್ತವ್ಯವನ್ನು ನಾವು ಮೇಳೈಸಿಕೊಂಡು ಹೋಗಬೇಕು ಎಂದು ಮನದಟ್ಟು ಮಾಡಿಸಿಕೊಟ್ಟರು.

ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಅವರು ಮಾತನಾಡಿ, ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ  ಪತ್ರಿಕೋದ್ಯಮ ಹಾಗೂ ದೃಶ್ಯ ಮಾಧ್ಯಮಗಳ ಜವಾಬ್ದಾರಿ ಮತ್ತು ಪಾತ್ರ ತುಂಬಾ ಮುಖ್ಯವಾಗಿದೆ. ಸಕಾರಾತ್ಮಕ ಸುದ್ದಿಗಳನ್ನು ಜನರಿಗೆ ತಲುಪಿಸುವತ್ತ ಹೆಚ್ಚು ಗಮನ ಹರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕೊರೊನದಿಂದ ಉಂಟಾದ ಸಾವು ನೋವಿನ ಲೆಕ್ಕದ ಮಧ್ಯೆ ಜನರಿಗೆ ಲಸಿಕೆ ಹಾಕುವ ಕಾರ್ಯಕ್ರಮ ಭರದಿಂದ ನಡೆಯುತ್ತಿದೆ. ಭಾರತದಂತಹ ಬೃಹತ್‌ ದೇಶಕ್ಕೆ ಪ್ರಾಥಮಿಕ ಆರೋಗ್ಯವನ್ನು ಕೊಡುವುದರಿಂದ ಹಿಡಿದು, ಕೊರೊನಾ ಮಹಾಮಾರಿಯ ಮಧ್ಯದಲ್ಲಿ ಎಲ್ಲ ವೈದ್ಯಕೀಯ ಸೌಲಭ್ಯವನ್ನು ಒದಗಿಸುವುದು ಘನವಾದ ಸವಾಲಾಗಿದೆ. ಇದು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಬೇಕು ಎಂದು ಹೇಳಿದರು.

ಸಾಂಸ್ಕೃತಿಕ ಪ್ರದರ್ಶನ ಬಳಿಕ ಸುಮಾರು ಒಂದು ಗಂಟೆ ಕಾಲ ಯುಕೆಯ ವಿವಿಧ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು.

ಪರಿಮಳ ಹಂಸೋಗೆ ಅವರಿಂದ ಭರತನಾಟ್ಯ, ಪುಟಾಣಿಗಳಾದ ಇಶಾನ್‌ ಹಾಗೂ ಇಷ್ಟ ಅವರಿಂದ ಹಿರಣ್ಯ ಕಶ್ಯಪ ನಾಟಕ, ಅರುಣ್‌ ಕುಕ್ಕೆ ಅವರಿಂದ ಕನ್ನಡ ಭಾವಗೀತೆ, ಬಯಲಾಟ ತಂಡದ ಡಾ| ಗುರುಪ್ರಸಾದ್‌, ಗಿರೀಶ್‌ ಪ್ರಸಾದ್‌, ರಶ್ಮಿ ಮಚಾನಿ ಹಾಗೂ ನಿರುಪಮಾ ಶ್ರೀನಾಥ್‌ ಅವರಿಂದ ಅದ್ಭುತವಾದ ಯಕ್ಷಗಾನ, ಡಾ| ಶ್ವೇತಾ ಹಿರೇಮs… ಅವರಿಂದ ಹೊಸ ಬೆಳಕು ಚಿತ್ರದ ಸುಂದರವಾದ ತೆರೆದಿದೆ ಮನೆ ಓ ಬಾ ಅತಿಥಿ ಹಾಡು, ಪ್ರಮೋದ್‌ ಪ್ರಸನ್ನ ಕುಮಾರ್‌ ಅವರಿಂದ ವೀಣಾ ವಾದನ ಹಾಗೂ ರಾಧಾ ಪ್ರಶಾಂತ್‌ ಅವರಿಂದ ಸ್ಯಾಂಡಲ್‌ವುಡ್‌ ನೃತ್ಯ ಹೀಗೆ ವೈವಿಧ್ಯಮಯವಾದ ಗುಣಮಟ್ಟದ ಕಾರ್ಯಕ್ರಮಗಳನ್ನು ಜೂಮ್‌ ಮೂಲಕ ನೆರೆದಿದ್ದ ಸುಮಾರು 100ಕ್ಕೂ ಹೆಚ್ಚು ಯುಕೆ ಕನ್ನಡ ಪರಿವಾರಗಳು ಮೆಚ್ಚುವಂತೆ ಮಾಡಿತು.ಬಾಬು ಹಿರಣ್ಣಯ್ಯ ಅವರಿಂದ ಮೆಚ್ಚುಗೆಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಿದ ಬಾಬು ಹಿರಣ್ಣಯ್ಯ ಅವರು ಯುಕೆ ಕನ್ನಡಿಗರ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಬಳಗದ ಹಿರಿಯ ಸದಸ್ಯರಾದ ಅನ್ನಪೂರ್ಣ ಆನಂದ ಅವರು ಕಾರ್ಯಕ್ರಮ ನಿರೂಪಿಸಿದ್ದು, ಇವರೊಂದಿಗೆ ಸಹ ನಿರೂಪಕರಾಗಿ ಕನ್ನಡಿಗರು ಯುಕೆಯು ಸದಸ್ಯರು ಹಾಗೂ ನಮ್‌ ರೇಡಿಯೋ ಯುಕೆ ಯು ವಾಟ್ಸ್‌ ಅಪ್‌ ಯುಕೆ ಕಾರ್ಯಕ್ರಮದ ನಿರೂಪಕರು, ನಟ, ಯಕ್ಷಗಾನ ಕಲಾವಿದರೂ ಆಗಿರುವ ಗಿರೀಶ್‌ ಪ್ರಸಾದ್‌ ಜತೆಯಾಗಿ ಆಹ್ವಾನಿತ ಅತಿಥಿಗಳು ಮತ್ತು ಸದಸ್ಯರನ್ನು ಸ್ವಾಗತಿಸಿದರು.

ಆರಂಭದಲ್ಲಿ ಡಾ| ಮುರಳಿ ಹತ್ವಾರ್‌ ಅವರ ಉಸಿರೆಂಬ ಬೆಲ್ಲಕ್ಕೆ ಮಾಸ್ಕೆಂಬ ಬೇವು ಬೆರೆತಿರುವಾಗ ಗೆಲ್ಲಬಹುದೆ ನಾವು…ಎನ್ನುವ ರಚನೆಯನ್ನು ನವ್ಯಾ ಆನಂದ ಅವರು ಗಮಕ ಶೈಲಿಯಲ್ಲಿ ರಾಗ ಸಂಯೋಜಿಸಿ ಪ್ರಸ್ತುತ ಪಡಿಸುವುದರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಡಾ| ಗಿರೀಶ್‌ ವಿಶಿಷ್ಠ ಅವರು ಅತಿಥಿಗಳಾಗಿ ಆಗಮಿಸಿದ್ದ ಬಾಬು ಹಿರಣ್ಣಯ್ಯ ಅವರನ್ನು ವಿಡಿಯೋ ತುಣುಕನ್ನು ಚಲಾಯಿಸುವುದರ ಮೂಲಕ ಹಾಗೂ ಗಣಪತಿ ಭಟ್‌ ಅವರು ಇನ್ನೊಬ್ಬ ಅತಿಥಿಗಳಾಗಿ ಆಗಮಿಸಿದ್ದ ವಿಶ್ವೇಶ್ವರ ಭಟ್‌ ಅವರನ್ನು ಪರಿಚಯಿಸಿದರು.

ಕೊನೆಯಲ್ಲಿ ಕನ್ನಡ ಬಳಗ ಯುಕೆ ವತಿ ಯಿಂದ ಡಾ| ಮಧುಸೂಧನ್‌ ಹಾಗೂ ಕನ್ನಡಿಗರು ಯುಕೆ ವತಿಯಿಂದ ಗಣಪತಿ ಭಟ್‌ ಅವರು ಎಲ್ಲರಿಗೆ ಧನ್ಯವಾದ ಸಲ್ಲಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.

-ಗೋವರ್ಧನ ಗಿರಿ ಜೋಷಿ,

ಲಂಡನ್‌

Advertisement

Udayavani is now on Telegram. Click here to join our channel and stay updated with the latest news.

Next