Advertisement

ಬಿಜೆಪಿ ಸರಕಾರಕ್ಕೆ ಒಂದು ವರ್ಷ: ಸವಾಲಿನ ನಡುವೆಯೂ ಸಾಧನೆಯ ಛಲ

02:25 AM Jul 25, 2020 | Hari Prasad |

ಬೆಂಗಳೂರು: ಪ್ರವಾಹದಿಂದ ಕೋವಿಡ್ 19 ನವರೆಗೆ ಸಾಲು ಸಾಲು ಸವಾಲುಗಳನ್ನು ಎದುರಿಸಿದ ರಾಜ್ಯ ಬಿಜೆಪಿ ಸರಕಾರ ಒಂದು ವರ್ಷ ಪೂರೈಸುತ್ತಿದೆ.

Advertisement

ಸರಕಾರ ಭದ್ರಪಡಿಸಿಕೊಂಡ ತೃಪ್ತಿಯ ಜತೆಗೆ ಆರ್ಥಿಕ ಇತಿಮಿತಿಯಲ್ಲಿ ಅಭಿವೃದ್ಧಿಗೆ ಚಾಲನೆ ಸಿಕ್ಕಿದರೂ ಕೋವಿಡ್ 19 ಮಾತ್ರ ಸದ್ಯ ಎಲ್ಲದಕ್ಕೂ ಸವಾಲಿನಂತೆ ನಿಂತಿದೆ.

ಸಿಎಂ ಯಡಿಯೂರಪ್ಪ ಅವರು ಒಂದು ವರ್ಷದಲ್ಲಿ ಎದುರಿಸಿದ ಸಮಸ್ಯೆಗಳು ಒಂದೆರಡಲ್ಲ.

ಪ್ರವಾಹದಿಂದ ಉಪ ಚುನಾವಣೆಯ ತನಕ; ಆರ್ಥಿಕ ಸಂಕಷ್ಟದಿಂದ ಕೋವಿಡ್ 19ವರೆಗೆ ಧುತ್ತನೆ ಬಂದೆರಗಿದ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ.

ವರ್ಷ ತುಂಬುವ ಸಂದರ್ಭದಲ್ಲೇ ಕೋವಿಡ್ 19 ಪರಿಕರಗಳ ಖರೀದಿ ಅವ್ಯವಹಾರ ಆರೋಪ, ಕೋವಿಡ್ 19 ಪ್ರಕರಣಗಳ ಏರಿಕೆಯು ಸಂಭ್ರಮಕ್ಕೆ ತಣ್ಣೀರು ಎರಚಿದೆ.

Advertisement

ಒಂದು ವರ್ಷದಲ್ಲಿ ಬಿಎಸ್‌ವೈ ಅವರ ಹಾದಿ ಸುಗಮವಾಗಿರಲಿಲ್ಲ. ಉಪ ಚುನಾವಣೆ ಎದುರಿಸಿ ಸರಕಾರ ಭದ್ರಪಡಿಸಿಕೊಳ್ಳುವುದು, ಸರಕಾರ ರಚನೆಯಾಗಲು ಕಾರಣರಾದವರಿಗೆ ಋಣ ಸಂದಾಯದ ಹೊಣೆ, ಪ್ರವಾಹ, ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ, ಕೋವಿಡ್ 19ಗಳನ್ನು ನಿಭಾಯಿಸಬೇಕಾಯಿತು. ವಲಸಿಗರು ಮತ್ತು ಮೂಲ ಬಿಜೆಪಿಗರೊಂದಿಗೆ ಹೊಂದಾಣಿಕೆ ಸಾಧಿಸಬೇಕಾಯಿತು.

ಕೋವಿಡ್ 19 ಬಿಡುವು ಕೊಟ್ಟರೆ ಮುಂದಿನ 32 ತಿಂಗಳಲ್ಲಿ ಅಭಿವೃದ್ಧಿಯ ನೀಲನಕ್ಷೆಯೊಂದಿಗೆ ಮುನ್ನಡೆಯುವ ಮತ್ತೂಂದು ಸವಾಲು ಸಿಎಂ ಮುಂದಿದೆ. ಸಂಕಷ್ಟದ ನಡುವೆಯೂ ಆರ್ಥಿಕತೆ ತೀರಾ ಕುಸಿಯದಂತೆ ನೋಡಿಕೊಂಡು, 4 ತಿಂಗಳು ಆರ್ಥಿಕತೆ ಸ್ಥಗಿತಗೊಂಡರೂ ಸರಕಾರಿ ನೌಕರರಿಗೆ ವೇತನ ಕಡಿತ ಮಾಡದೆ ನಿಭಾಯಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಸವಾಲುಗಳ ಸರಮಾಲೆ
ಕಳೆದ ವರ್ಷ ಜುಲೈ 26ರಂದು ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ಒಂದೇ ವಾರದಲ್ಲಿ ಉತ್ತರ ಕರ್ನಾಟಕದ ಪ್ರವಾಹ ದಿಢೀರ್‌ ಆತಂಕ ತಂದೊಡ್ಡಿತು. ಆಗ ಯಡಿಯೂರಪ್ಪ ಅವರು ಏಕಾಂಗಿಯಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಲ್ಲಿ ಧೈರ್ಯ ತುಂಬಿದರು.

ಪ್ರವಾಹದಿಂದ ಉಂಟಾದ ಸುಮಾರು 35 ಸಾವಿರ ಕೋಟಿ ರೂ. ನಷ್ಟ ಮೊದಲ ಆಘಾತವೇ ಆಗಿತ್ತು. ರಾಜ್ಯ ಸರಕಾರದಿಂದಲೇ ಪರಿಹಾರ ಕಾರ್ಯ ಕೈಗೊಳ್ಳುವುದರ ಜತೆಗೆ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ದಾಖಲೆಯ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಿದರು.

ಉಪ ಚುನಾವಣೆ ಮೂಲಕ ಸರಕಾರ ಭದ್ರ
ಪ್ರವಾಹದ ಸವಾಲು ಮುಗಿಯುತ್ತಿದ್ದಂತೆ ಹದಿನೈದು ಕ್ಷೇತ್ರಗಳ ಉಪ ಚುನಾವಣೆ ಎದುರಾಯಿತು. ಸತ್ವ ಪರೀಕ್ಷೆಯಾಗಿದ್ದ ಅದರಲ್ಲಿ ಗೆಲುವು ಸಾಧಿಸಿದ ಯಡಿಯೂರಪ್ಪ 12 ಕ್ಷೇತ್ರ ಗೆಲ್ಲುವ ಮೂಲಕ ಸರಕಾರ ಭದ್ರಪಡಿಸಿಕೊಂಡರು.ಇದಕ್ಕೆ ಮುನ್ನ ರಾಜೀನಾಮೆ ನೀಡಿದ ಶಾಸಕರು ಅನರ್ಹರಾಗಿದ್ದು, ಬಳಿಕ ಸುಪ್ರೀಂಕೋರ್ಟ್‌ ಮೆಟ್ಟಿಲೇರಿ, ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಂಡರು.

ಉಪ ಚುನಾವಣೆ ಮುಗಿಯುತ್ತಿದ್ದಂತೆ ಪೌರತ್ವ ತಿದ್ದುಪಡಿ ಕಾಯ್ದೆ ವಿವಾದದ ಹಿನ್ನೆಲೆಯಲ್ಲಿ ರಾಜ್ಯದ ಕೆಲವೆಡೆ ನಡೆದ ಅಹಿತಕರ ಘಟನೆಗಳು ಸರಕಾರಕ್ಕೆ ತಲೆನೋವಾಯಿತು. ಆ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ಕಪ್ಪು ಚುಕ್ಕೆಯಾಗಿಯೂ ಪರಿಣಮಿಸಿತು.

ಕೋವಿಡ್ 19 ಗ್ರಹಣ
ಮಾರ್ಚ್‌ನಲ್ಲಿ ಬಜೆಟ್‌ ಮಂಡಿಸಿದ ಸಿಎಂ ಹಲವು ಯೋಜನೆ ಘೋಷಿಸಿದರಾದರೂ ಮಾರ್ಚ್‌ ಮೊದಲ ವಾರದಲ್ಲಿ ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್ 19 ರಾಜ್ಯವನ್ನೂ ವ್ಯಾಪಿಸಿ ನಾಲ್ಕು ತಿಂಗಳು ಇಡೀ ರಾಜ್ಯವನ್ನೇ ಅಲುಗಾಡಿಸಿತು. ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡು ಅಭಿವೃದ್ಧಿ ಕಾಮಗಾರಿಗಳಿಗೂ ‘ಗ್ರಹಣ’ ಹಿಡಿದಂತಾಯಿತು. ಒಟ್ಟಾರೆ ಒಂದು ವರ್ಷದಲ್ಲಿ ಬಿಎಸ್‌ವೈ ಸರಕಾರ ಸಾಧನೆಗಿಂತ ಸವಾಲು ನಿಭಾಯಿಸಿದ್ದೇ ಹೆಚ್ಚು.

ಆರ್ಥಿಕ ಮುಗ್ಗಟ್ಟು
ಪ್ರವಾಹ ಮತ್ತು ಕೋವಿಡ್ 19 ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿ ಅಭಿವೃದ್ಧಿ ಕಾರ್ಯಗಳಿಗೆ ತಡೆಯಾಗಿದೆ. ಮೂರು ತಿಂಗಳು ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದರಿಂದ ಸುಮಾರು 20 ಸಾ.ಕೋಟಿ ರೂ. ಆದಾಯ ಸಂಗ್ರಹವಾಗದೆ ಅಭಿವೃದ್ಧಿ ಕಾಮಗಾರಿ ಮೇಲೆ ಪರಿಣಾಮ ಬೀರಿದೆ.

Advertisement

Udayavani is now on Telegram. Click here to join our channel and stay updated with the latest news.

Next