Advertisement

Ayodhya ‘ಸುಂದರ’ಕಾಂಡ ಆರಂಭ: ಕೇಸರಿ ಧ್ವಜಗಳಿಂದ ರಾರಾಜಿಸುತ್ತಿವೆ ಬೀದಿಗಳು

12:47 AM Jan 21, 2024 | Team Udayavani |

ಅಯೋಧ್ಯಾ/ಹೊಸದಿಲ್ಲಿ: ಪ್ರಾಣ ಪ್ರತಿಷ್ಠೆಗಾಗಿ ಸಜ್ಜುಗೊಂಡು ಥೇಟ್‌ ಮದುವಣಗಿತ್ತಿಯಂತೆ ಕಂಗೊಳಿ ಸುತ್ತಿರುವ ಅಯೋಧ್ಯೆಯಲ್ಲಿ ರಾಮಪಥವೂ ಸೇರಿದಂತೆ ಪ್ರತಿ ರಸ್ತೆಯೂ ಕೇಸರೀಕರಣಗೊಂಡಿವೆ. ಎತ್ತ ನೋಡಿ ದರೂ ರಾಮನ ಭಿತ್ತಿಚಿತ್ರಗಳು ಕಣ್ಮನ ಸೆಳೆಯುತ್ತಿವೆ. ದೊಡ್ಡ ದೊಡ್ಡ ಪೋಸ್ಟರ್‌ಗಳು, ಕೇಸರಿ ಧ್ವಜಗಳು ರಾರಾಜಿಸುತ್ತಾ ಇಡೀ ಅಯೋಧ್ಯೆಯಲ್ಲಿ ಸುಂದರ ಕಾಂಡದ ಅಧ್ಯಾಯವೇ ಆರಂಭವಾದಂತೆ ತೋರುತ್ತಿದೆ.

Advertisement

ಹೌದು, ನಗರದ ತುಂಬೆಲ್ಲಾ ಭಕ್ತಾದಿಗಳನ್ನು ಸ್ವಾಗತಿಸಲು ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಅಳವಡಿ ಸಲಾಗಿದೆ. ಎಲ್ಲದರಲ್ಲೂ ಶುಭ ಘಡಿ ಆಯಿ(ಶುಭ ಸಮಯ ಬಂದಿದೆ), ತೈಯಾರ್‌ ಹೈ ಅಯೋಧ್ಯಾ ಧಾಮ್‌ (ಅಯೋಧ್ಯಾಧಾಮ ತಯಾರಾಗಿದೆ), ವಿರಾಜೇಂಗೆ ಶ್ರೀ ರಾಮ್‌(ಶ್ರೀ ರಾಮ ವಿರಾಜಮಾನನಾಗುತ್ತಾನೆ), ರಾಮ್‌ ಫಿರ್‌ ಲೌಟೇಂಗೆ(ರಾಮ ಮತ್ತೆ ಬರುತ್ತಾನೆ) ಎನ್ನುವ ಘೋಷಣೆಗಳನ್ನು ಬರೆಯಲಾಗಿದೆ. ಕೆಲವೆಡೆ ರಾಮ ಮಂತ್ರಗಳನ್ನೂ ಪೋಸ್ಟರ್‌ಗಳನ್ನಾಗಿಸಿ ಹಾಕಲಾಗಿದೆ. ಕೇವಲ ಮಂದಿರ ಟ್ರಸ್ಟ್‌ ಮಾತ್ರವಲ್ಲ, ಪಕ್ಷಭೇದ ಮರೆತು ಹಲವಾರು ರಾಜಕಾರಣಿಗಳು ಕೂಡ ಪೋಸ್ಟರ್‌ ಮತ್ತು ಬ್ಯಾನರ್‌ಗಳನ್ನು ಹಾಕಿಸಿದ್ದಾರೆ.

ಇನ್ನು, ರಾಮಪಥದಲ್ಲಂತೂ ರಾಮಾಯಣದ ಕಥೆಗಳನ್ನೇ ಸಾರುವ ಕಟೌಟ್‌ಗಳನ್ನು ನಿಯೋಜಿಸಿ ಸೆಲ್ಫಿ ಪಾಯಿಂಟ್‌ಗಳನ್ನೂ ಮಾಡಲಾಗಿದೆ. ಅಲ್ಲದೇ, ನಗರದ ಎಲ್ಲೆಡೆಯು ಧ್ವನಿ ವರ್ಧಕಗಳನ್ನು ಅಳವಡಿಸಲಾಗಿದ್ದು, ಎಲ್ಲಾ ಕಡೆ “ಸಿಯಾ ರಾಮ್‌- ಜೈ ಸಿಯಾ ರಾಮ್‌’ ಎನ್ನುವಂಥ ನಾಮವೇ ಆವರಿಸಿದೆ. ಮತ್ತೂಂದೆಡೆ ಜನರು ಬಸ್‌ ನಿಲ್ದಾಣಗಳು, ರಸ್ತೆ ಬದಿಯ ಗೋಡೆಗಳನ್ನೂ ಅಲಂಕರಿಸುತ್ತಿದ್ದು, ಕೆಲವರು ಸ್ವಯಂ ಪ್ರೇರಿತವಾಗಿ ರಂಗೋಲಿಯಲ್ಲಿ ರಾಮನನ್ನು ಚಿತ್ರಿಸುವ ಮೂಲಕ ನಗರದ ಸೌಂದರ್ಯಕ್ಕೆ ಮೆರುಗು ನೀಡಿ ದ್ದಾರೆ.

ರಾಮ ರಾಜ್ಯದ ಮರುಸೃಷ್ಟಿ
ಒಂದೆಡೆ ಅಲಂಕಾರದಿಂದ ಅಯೋಧ್ಯೆ ಕಂಗೊಳಿಸುತ್ತಿದ್ದರೆ ಮತ್ತೂಂದೆಡೆ ಸೇವೆ ಗಳಿಂದ ರಾಮ ರಾಜ್ಯವನ್ನೇ ಅಯೋಧ್ಯೆಯಲ್ಲಿ ಸೃಷ್ಟಿಸಲಾಗಿದೆ. ಉದ್ಘಾಟನೆ ಸಮಾ ರಂಭಕ್ಕೂ ಮುನ್ನವೇ ವಿವಿಧ ಧಾರ್ಮಿಕ ಗುಂಪುಗಳು ನಗರದ ವಿವಿಧೆಡೆ ಅನ್ನದಾಸೋಹವನ್ನು ಏರ್ಪಡಿಸಿವೆ. ನಿಹಾಂಗ್‌ ಸಿಖ್ಖರು ರಾಮ್‌ ಕಿ ರಸೋಯ್‌ ಹೆಸರಿನಲ್ಲಿ ಲಂಗಾರ್‌ ಆರಂಭಿಸಿದ್ದರೆ, ಇಸ್ಕಾನ್‌ ಹಾಗೂ ಜೈನ ಧರ್ಮದ ಕೆಲವು ಮಠಗಳು ಸಹಿತ ಹಲವಾರು ಸಮುದಾಯಗಳು ಸೇರಿ ಭಕ್ತರಿಗಾಗಿ ದಾಸೋಹ ಕೇಂದ್ರಗಳನ್ನು ತೆರೆದಿವೆ. ದಿನಂಪ್ರತಿ 20 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗುತ್ತಿದೆ. ಬೇರೆ ರಾಜ್ಯ ಗಳಿಂದ ಅಯೋಧ್ಯೆಗೆ ಆಗಮಿಸಿರುವ ಭಕ್ತರಿಗೆ ಆಶ್ರಯಗಳನ್ನು ಒದಗಿಸಿ ಸೇವೆ ಸಲ್ಲಿಸಲಾಗುತ್ತಿದೆ. ದಿನಂಪ್ರತಿ ಸಂಜೆ ವೇಳೆ ನಗರದ ಬೇರೆ-ಬೇರೆ ಕಡೆ ಅಳವಡಿಸಿರುವ ಎಲ್‌ಇಡಿ ಪರದೆಗಳಲ್ಲಿ ರಾಮಾಯಣ ಕಥೆಯನ್ನು ಪ್ರದರ್ಶಿಸಿ ಜನರು ಸಾಮೂಹಿಕವಾಗಿ ನೋಡಲು ಅನುಕೂಲ ಮಾಡಿಕೊಡಲಾಗಿದೆ.

ಕಂಗೊಳಿಸುತ್ತಿದೆ ಮಂದಿರಾಲಂಕಾರ
ವಿವಿಧ ಬಗೆಯ ಬಣ್ಣ ಬಣ್ಣದ ಹೂವಿನ ಗುತ್ಛಗಳೇ ಅಪ್ಪಿ ನಿಂತಿರುವಂತೆ ಮಂದಿರವನ್ನು ಅಲಂಕರಿಸಲಾಗುತ್ತಿದೆ. ಚಳಿಗಾಲ ವಾದುದರಿಂದ ಹೂವುಗಳು ಬಾಡದೇ ಇರುವ ಹಿನ್ನೆಲೆಯಲ್ಲಿ ಸಂಪೂರ್ಣ ಮಂದಿರವನ್ನು ನಿಜವಾದ ಪುಷ್ಪಗಳನ್ನೇ ಬಳಸಿ ಅಲಂಕರಿಸುತ್ತಿದ್ದು, ಈ ಅಲಂಕಾರ ಪ್ರಕ್ರಿಯೆಗಳಿಗಾಗಿಯೇ ಖ್ಯಾತ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಇದರ ಜತೆಗೆ ವಿವಿಧ ರೀತಿಯ ದೀಪಗಳಿಂದಲೂ ಮಂದಿರ ಜಗಮಗಿಸುತ್ತಿದ್ದು, ಗರ್ಭಗುಡಿಯ ಒಳಗಿನ ಅಲಂಕಾರಕ್ಕೆ ಪ್ರಾಚೀನ ಮಾದರಿಯ ದೀಪಗಳನ್ನು ಬಳಸಲಾಗಿದೆ.

Advertisement

ದಿಲ್ಲಿಯಲ್ಲಿ ಅಪರಾಹ್ನದವರೆಗೆ ರಜೆ
ಮಂದಿರ ಉದ್ಘಾಟನೆ ದಿನದಂದು ದಿಲ್ಲಿಯಲ್ಲಿ ಅಪರಾಹ್ನ 2.30ರ ವರೆಗೆ ಸರಕಾರಿ ರಜೆ ಘೋಷಿಸಲಾಗಿದೆ. ಹೀಗೆಂದು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಹೇಳಿದ್ದಾರೆ.

ಮಂದಿರದ ಬಗ್ಗೆ ವದಂತಿ ಹಬ್ಬದಿರಿ: ಜಾಲತಾಣಗಳಿಗೆ ಕೇಂದ್ರ ಸೂಚನೆ
ಉದ್ಘಾಟನೆಯ ಹೊಸ್ತಿಲಿನಲ್ಲಿರುವ ಅಯೋಧ್ಯೆಯ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಹಬ್ಬಿಸಲಾಗುತ್ತಿರುವ ವದಂತಿಗಳನ್ನು ಪರಿಶೀಲಿಸಿ ಅವುಗಳು ಪ್ರಕಟವಾಗದಂತೆ ಎಚ್ಚರಿಕೆ ವಹಿಸಿ ಎಂದು ಎಲ್ಲ ಮಾಧ್ಯಮಗಳು ಮತ್ತು ಜಾಲತಾಣ ವೇದಿಕೆಗಳಿಗೆ ಕೇಂದ್ರ ಸರಕಾರ ಶನಿವಾರ ಸೂಚನೆ ನೀಡಿದೆ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಈ ಕುರಿತಂತೆ ಸಲಹೆ ಸೂಚನೆಗಳನ್ನು ನೀಡಿದೆ. ಅದರಲ್ಲಿ ಮಂದಿರಕ್ಕೆ ಸಂಬಂಧಿಸಿ ಕೆಲವು ನಕಲಿ ಸುದ್ದಿಗಳು, ಪ್ರಚೋದನಕಾರಿ ವದಂತಿಗಳನ್ನು ಪರಿಶೀಲಿಸದೆಯೇ ಪ್ರಕಟಿಸಲಾಗುತ್ತಿದೆ. ಇದು ಕೋಮುಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಎಚ್ಚರಿಸಿದೆ.

ಅಮೆರಿಕದಲ್ಲೂ ರಾಮಸಂಭ್ರಮ, ಕೆನಡಾದಲ್ಲಿ ಜ.22 ಮಂದಿರ ದಿನವೆಂದು ಘೋಷಣೆ
ಅಯೋಧ್ಯೆಯ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಮೆರಿಕದಾದ್ಯಂತ ದೇಗುಲಗಳಲ್ಲಿ ಶನಿವಾರದಿಂದಲೇ ವಿಶೇಷ ಪೂಜೆ, ಸಮಾರಂಭಗಳು ಆರಂಭಗೊಂಡಿವೆ. ನೃತ್ಯಸೇವೆ, ಗಾಯನದಂಥ ಸುಂದರಕಾಂಡದೊಂದಿಗೆ ಕಾರ್ಯಕ್ರಮ ಆರಂಭಗೊಂಡಿದೆ. ಇದರ ಅನಂತರ ಹೋಮ-ಹವನ, ರಾಮನ ಪ್ರಾಣಪ್ರತಿಷ್ಠೆ, ಮೆರವಣಿಗೆ, ಪ್ರಸಾದ ವಿತರಣೆ ಸಮಾರಂಭವನ್ನೂ ಆಯೋಜಿಸಿದ್ದೇವೆ ಎಂದು ಟೆಕ್ಸಾಸ್‌ನ ಶ್ರೀ ಸೀತಾ ರಾಮ ಫೌಂಡೇಶನ್‌ನ ಕಪಿಲ್‌ ಶರ್ಮಾ ಹೇಳಿದ್ದಾರೆ. ವಾಷಿಂಗ್ಟನ್‌ ಡಿಸಿ, ಕ್ಯಾಲಿಫೋರ್ನಿಯಾ ಸೇರಿದಂತೆ ಪ್ರಮುಖ ನಗರಗಳಲ್ಲೂ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಈ ನಡುವೆಯೇ, ಹ್ಯೂಸ್ಟನ್‌ನಲ್ಲಿರುವ ಭಾರತೀಯ ಮೂಲದವರಾದ ಅಮೆರಿಕನ್ನರು ಅದರಲ್ಲೂ ಟೆಸ್ಲಾ ಕಾರುಗಳು ಮಾಲಕರು ಗುರುವಾಯೂರಪ್ಪನ್‌ ಕೃಷ್ಣ ದೇಗುಲದಲ್ಲಿ ಟೆಸ್ಲಾ ಲೈಟ್‌ ಶೋ ಆಯೋಜಿಸಿ ಎಲ್ಲರ ಗಮನಸೆಳೆದಿದ್ದಾರೆ. ಇದೇ ವೇಳೆ, ಕೆನಡಾದ ಒಂಟಾರಿಯೋದ ಒಕಾವಿಲ್ಲೆ ಹಾಗೂ ಬ್ರ್ಯಾಂಪ್ಟನ್‌ ನಗರಗಳಲ್ಲಿ ಜ.22 ಅನ್ನು ರಾಮ ಮಂದಿರ ದಿನವೆಂದು ಅಲ್ಲಿನ ಮೇಯರ್‌ಗಳು ಅಧಿಕೃತವಾಗಿ ಘೋಷಿಸಿದ್ದಾರೆ. ಎರಡೂ ನಗರಗಳಲ್ಲೂ ಹಿಂದೂಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಡಿಸ್ಕವರಿಯಲ್ಲಿ ಲೆಜೆಂಡ್ಸ್‌ ಆಫ್ ದ ರಾಮಾಯಣ
ಖ್ಯಾತ ಲೇಖಕ ಅಮೀಶ್‌ ತ್ರಿಪಾಠಿ ಅವರ ನಿರೂಪಣೆಯೊಂದಿಗೆ ರಾಮಾಯಣದ ರಹಸ್ಯಗಳನ್ನು ಬಹಿರಂಗ ಪಡಿಸಲು ಪ್ರಯತ್ನಿಸಿದ್ದ ” ಲೆಜೆಂಡ್ಸ್‌ ಆಫ್ ದಿ ರಾಮಾಯಣ -ವಿತ್‌ ಅಮೀಶ್‌’ ಸಾಕ್ಷ್ಯಚಿತ್ರ ಸರಣಿಯು ಶನಿವಾರದಿಂದ ಜ.23ರ ವರೆಗೆ ಡಿಸ್ಕವರಿ ಚಾನೆಲ್‌ನಲ್ಲಿ ಹಾಗೂ ಡಿ.ತಮಿಳ್‌ನಲ್ಲಿ ಪ್ರಸಾರವಾಗಲಿದೆ. ದೇಶ-ವಿದೇಶದಲ್ಲಿ ರಾಮಾಯಣದ ನಂಟನ್ನೂ ಇದು ತೆರೆದಿಟ್ಟಿತ್ತು.

ಮಂದಿರದಲ್ಲಿ ವಿಶ್ವದ ಅತ್ಯಂತ ದುಬಾರಿ ರಾಮಾಯಣ
ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿರುವ ರಾಮಾಯಣ ಪ್ರತಿಯನ್ನು ಮಂದಿರದಲ್ಲಿ ಇರಿಸಲಾಗಿದೆ. 1.65 ಲಕ್ಷ ರೂ. ಮೌಲ್ಯದ ಈ ರಾಮಾಯಣ ಪ್ರತಿಯು 45 ಕೆಜಿ ತೂಕವಿರಲಿದ್ದು, 3 ಆವೃತ್ತಿಗಳಾಗಿ ವಿನ್ಯಾಸಗೊಂಡಿದೆ. ಇದರ ಪ್ರತೀ ಪುಟವನ್ನು ಫ್ರಾನ್ಸ್‌ ಮೂಲದ ಆಮ್ಲ ಮುಕ್ತ ಪೇಟೆಂಟ್‌ ಪೇಪರ್‌ನಿಂದ ರೂಪಿಸಲಾಗಿದೆ. ಮುದ್ರಣಕ್ಕೆ ಜಪಾನ್‌ ಶಾಯಿ ಬಳಸಲಾಗಿದೆ. ಪ್ರತೀ ಪುಟವೂ ವಿಶೇಷ ವಿನ್ಯಾಸ ಹೊಂದಿದ್ದು, ಮುಖಪುಟವನ್ನೂ ಆಮದು ಮಾಡಿಕೊಂಡಿರುವ ಕಾಗದದಿಂದ ತಯಾರಿಸಲಾಗಿದೆ. ಪುಸ್ತಕ ಓದಲು ಬಳಸುವ ವ್ಯಾಸ ಪೆಟ್ಟಿಗೆಯನ್ನೂ ವಿಶೇಷವಾಗಿ ಅಮೆರಿಕದ ಅಕ್ರೂಟ್‌ ಮರ ಬಳಸಿ ತಯಾರಿಸಲಾಗಿದೆ.

56 ಬಗೆಯ ಸಿಹಿ ಖಾದ್ಯ
ಉತ್ತರಪ್ರದೇಶದ ರಾಜಧಾನಿ ಲಕ್ನೋದ ಪ್ರಸಿದ್ಧ ಸಿಹಿತಿಂಡಿ ಅಂಗಡಿಯಾದ ಮಧುರಿಮಾ ಸ್ವೀಟ್ಸ್‌ ಶನಿವಾರ 56 ಬಗೆಯ ವಿಶೇಷ ಸಿಹಿ ಖಾದ್ಯವುಳ್ಳ ಛಪ್ಪನ್‌ ಭೋಗ್‌ ಥಾಲಿಯನ್ನು ಮಂದಿರಕ್ಕೆ ಸಮರ್ಪಿಸಿದೆ. ಥಾಲಿಯಲ್ಲಿ ಭಗವಾನ್‌ ವಿಷ್ಣುವಿಗೆ ಪ್ರಿಯವಾದ ತುಳಸಿಯನ್ನೇ ಬಳಸಿ “ತುಳಸಿ ಕೀ ಮೀಠಾ’ವನ್ನು ತಯಾರಿಸಲಾಗಿದೆ. ಈ ಸಿಹಿಯನ್ನು ವಿಶೇಷವಾಗಿ ಶುದ್ಧೀಕರಣದ ಬಳಿಕ ನೈವೇದ್ಯವಾಗಿ ಬಳಸಲಾಗುತ್ತದೆ.

ಪ್ರಸಾದಕ್ಕೆ ಬಟಾಣಿ ಕಚೋರಿ
ಪ್ರಾಣ ಪ್ರತಿಷ್ಠೆ ದಿನದಂದು ಪ್ರಸಾದವಾಗಿ ಗುಜರಾತಿ ಮೂಲದ ಪ್ರಸಿದ್ಧ ಖಾದ್ಯ ತೆಪ್ಲಾ, ಬಾದಾಮಿ ಸಿಹಿ ಮತ್ತು ಬಟಾಣಿ ಕಚೋರಿಗಳನ್ನು ವಿತರಿಸಲು ಯೋಜಿಸಲಾಗಿದೆ. ಜತೆಗೆ ದೇಶದ ವಿವಿಧ ಭಾಗಗಳಿಂದ ಅಯೋಧ್ಯೆಗೆ ಲಡ್ಡುಗಳನ್ನೂ ಕಳುಹಿಸಲಾಗಿದ್ದು, ಭಕ್ತರಿಗೆ ರಾಮನ ಪ್ರಸಾದವಾಗಿ ಲಡ್ಡುಗಳನ್ನು ಹಂಚಲಾಗುತ್ತದೆ. ಈ ನಡುವೆ ಹೈದರಾಬಾದ್‌ನಿಂದ ಕಳುಹಿಸಲಾಗಿರುವ 1265 ಕೆ.ಜಿ. ತೂಕದ ಲಡ್ಡು ಶನಿವಾರ ಅಯೋಧ್ಯೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next