Advertisement

Ayodhya Ram Temple: ವ್ಯಾಜ್ಯವೇ ಇಲ್ಲದ ರಾಜ್ಯ ಅದುವೇ ರಾಮರಾಜ್ಯ!

04:34 PM Jan 22, 2024 | Team Udayavani |

“ರಾಮ’ ಎಂಬ ಎರಡಕ್ಷರದ ಹೆಸರು ಈ ನಮ್ಮ ಭಾರತೀಯರಿಗೆ ಅನಾದಿಕಾಲದಿಂದ ಸೂರ್ಯಚಂದ್ರ ರಿರುವರೆಗೂ ನಿತ್ಯಹಸಿರು
ಪ್ರತಿನಿತ್ಯ ಉಸಿರು. ಈ ದಶರಥನ ಪುತ್ರ ಕೌಸಲ್ಯತನಯ ನಮ್ಮ ನಾಡಿಗಷ್ಟೇ ಏಕೆ, ಜಗತ್ತಿಗೇ ಈ ಮಹಾಮಹಿಮನ ಹೆಸರು ಆದರ್ಶ.
ಆತನ ನಡೆ, ಆತನ ನುಡಿ, ಸಮಸ್ತ ಜನತೆಗೆ ಬದುಕಿನ ಬೆಳಕು.

Advertisement

ದಿನಬೆಳಗಾದರೆ ಪನ್ನೀರ ಕೊಳದಲ್ಲಿ ಮಿಂದೆದ್ದ ಶರೀರದಂತೆ ಪ್ರತಿಯೋರ್ವನ ಮನಸ್ಸು ಕಲ್ಪವೃಕ್ಷ ಕಾಮಧೇನುವಿನಂತೆ ಶುದ್ಧವೋ ಶುದ್ಧ. ಶ್ರೀರಾಮನ ಕೃತಿ, ಕೀರ್ತಿ, ಸ್ಫೂರ್ತಿ ದಿನನಿತ್ಯ ಮಾನವನ ಅದಸರಲ್ಲಿಯೂ ಈ ಭಾರತೀಯನ ಹೃನ್ಮನಕೆ ಸ್ಮೃತಿ, ಸ್ಥಿತಿ, ಸಂಸ್ಕೃತಿ. ನಮ್ಮ ನಾಡಿನ ಹೆಮ್ಮೆಯ ಕವಿ ಲಕ್ಷ್ಮೀಶ ತನ್ನ “ಜೈಮಿನಿ ಭಾರತ’ದ ಕೃತಿಯಲ್ಲಿ ಬಣ್ಣಿಸಿದಂತೆ ಶ್ರವಣ ಮನೋಹರ, ಅಂತೆಯೇ ನಯನ ಮನೋಹರ, ಕಾಣುವ ಕಣ್ಣು, ಕೇಳುವ ಕಿವಿಗೆ ಪಾಡುವ ನಾಲಿಗೆಗೆ ಪಂಚರತ್ನದಂತೆ ಹೊಳೆವ ಶಿಖರ. ರಘುಕುಲ ಕುವರನ ಕೈ ಹಿಡಿದ ಧರ್ಮಪತ್ನಿಯೇ ತಾನೇ ಬಣ್ಣಿಸಿದ ರಾಮನ ವರ್ಣನೆ ಆತನ ವ್ಯಕ್ತಿತ್ವಕ್ಕೆ ಸಾಕ್ಷಿ.

ಅಂದವಾದ ಮೂಗು, ನುಣುಪಾದ ಕೆನ್ನೆಗಳು, ಕಾಂತಿಯಿಂದ ಹೊಳೆವ ಕಣ್ಣುಗಳು, ವಿಶಾಲವಾದ ಕಣ್ರೆಪ್ಪೆಗಳು, ತಿದ್ದಿ ತೀಡಿದಂತಹ ಆ ಹುಬ್ಬುಗಳು, ವಿಶಾಲವಾದ ಹಣೆ, ಥಳಥಳನೆ ಹೊಳೆಯುವ ಆ ಕಿರೀಟ, ಜೋಕಾಲಿಯಂತೆ ಜೋತಾಡುವ ಮಕರಕುಂಡಲಗಳು, ಕೆನ್ನೆಯ ಮೇಲೆ ಅಲಗುವ ಚೆಂದುಟಿಗಳು, ಘಳಘಳನೆ ಮಿನುಗುವ ದಂತ ಪಂಕ್ತಿಗಳು, ಮಂದಸ್ಮಿತನಂತೆ ಶೋಭಿಸುವ ಸೊಗ ಮೊಗದ ಆ ಮುಖ ಮುದ್ರೆಗಳು, ನೀಳವಾದ ಬಾಹುಗಳು, ಶ್ರೀರಾಮ ಎಂದ ಕೂಡಲೇ ಮನದಲ್ಲಿ ಮೂಡುವ ಪರಿಪೂರ್ಣ ಚಿತ್ರಣ.

ಶ್ರೀರಾಮಚಂದ್ರ ರಾಜ್ಯವನ್ನು ಪಾಲಿಸುತ್ತಿದ್ದಾಗ ಭೂಮಿಯ ಎಲ್ಲಾ ಕಡೆಗಳಲ್ಲೂ ಯಜ್ಞ ಯಾಗಾದಿಗಳು ನಡೆಯುತ್ತಿದ್ದವೂ,
ಮನೆಗಳೆಲ್ಲ ಸುಸ್ವರ್ಣ ಭರಿತವಾಗಿದ್ದವೂ ಕಾಡುಗಳಲ್ಲಿ ಗಿಳಿ, ಕೋಗಿಲೆ ಇಂಚರ ತುಂಬಿತ್ತು. ಸಮಸ್ತ ಪ್ರಜೆಗಳು ಅಭ್ಯುಧಯಶಾಲಿಗಳಾಗಿದ್ದರು. ಬೆಟ್ಟಗಳಲ್ಲಿ ಗೋಪಾಲಕರು ಗೋವುಗಳನ್ನು ಮೇಯಿಸುತ್ತಿದ್ದರು. ಕತ್ತಲೆಯೂ ರತ್ನಗಳ
ಬೆಳಕಿನಿಂದ ಓಡಿ ಹೋಯಿತು. ಮೂರು ಲೋಕಗಳಲ್ಲಿ  ರಾಮನ ಪ್ರತಾಪ ಹಬ್ಬಿತ್ತು. ಹೀಗೆ ರಾಮರಾಜ್ಯದ ಪರಿಕಲ್ಪನೆ ನಮ್ಮೆದುರು ಮೂಡುತ್ತದೆ.

ಹಣ್ಣು, ಹೂವು, ಕಾಯಿಗಳಿಲ್ಲದ ಮರಬಳ್ಳಿಗಳು ರಾಮರಾಜ್ಯದಲ್ಲಿ ಇರಲಿಲ್ಲ. ತಣ್ಣೀರಿನ ಕೊಳ, ಕಾಲುವೆಗಳು, ಕೆರೆಗಳು ಇಲ್ಲದ
ಪ್ರದೇಶವಿರಲಿಲ್ಲ. ಪುರುಷರು, ಸ್ತ್ರೀಯರು ವಿಚಾರವಿಲ್ಲದೆ ನಡೆಯುತ್ತಿರಲಿಲ್ಲ. ತುಂಬಿದ ಕೆಚ್ಚಲಿನಿಂದ ಹಾಲು ಕೊಡದ ಹಸುಗಳಿರಲಿಲ್ಲ. ಸುಂದರವಲ್ಲದ ಪಶು, ಪಕ್ಷಿ, ಮೃಗಗಳು ಅಲ್ಲಿರಲಿಲ್ಲ. ಯಮುನಾ ನದಿಯ ನೀರು ಕಪ್ಪು, ಬಿಳಿದಾದ ಗಂಗೆಯನ್ನು ಸೇರಿದಾಗ ಗಂಗೆಗೆ ಒಂದು ಆಭರಣವಾಗಿ, ಮನೋಹರ, ಕ್ಷೀರ ಸಮುದ್ರಕ್ಕೆ ಶ್ರೀಕೃಷ್ಣ, ಸರಸ್ವತಿ ದೇವಿಗೆ ಅವಳ
ಕಪ್ಪಾದ ಮುಗುಳುಗಳು. ಗಾಳಿಯು ಶುಭ್ರವಾದ ಶಿವನಿಗೆ ಬಿಳಿ ಮತ್ತು ಕಪ್ಪು ಬಣ್ಣದ ಐರಾವತ (ಬಿಳಿ ಬಣ್ಣ), ಆದಿಶೇಷನಿಗೆ ವಿಷ
(ಕಪ್ಪು) ಆಭರಣಗಳು ಆದರೆ, ಶ್ರೀರಾಮನ ಶುಭ್ರ ಕೀರ್ತಿ, ಕಾಂತಿಗೆ ಒಂದು ಕಪ್ಪಾದ ಆಭರಣವಿಲ್ಲ. ಇಂತಹ ದಿವ್ಯಾಭರಣಗಳು ಪ್ರಕೃತಿಯಲ್ಲಿ ಐಸಿರಿಯಾಗಿ ರಾರಾಜಿಸುತ್ತಿದ್ದವು.

Advertisement

ಕವಿ ಲಕ್ಷ್ಮೀಶನ ರಾಮರಾಜ್ಯದ ಪರಿಕಲ್ಪನೆ ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ. ರಾಮರಾಜ್ಯದಲ್ಲಿ ಸಂಪತ್ತು ಸಂವೃದ್ಧಿ ಹೊಂದಿತ್ತು. ಸಕಲ ಜಾತಿಯವರು, ಅಧಿಕಾರಿಗಳು ಚಾತುರ್ವರ್ಣ ಧರ್ಮವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ರಾಜನೀತಿಯನ್ನು ಸ್ವಲ್ಪವೂ ಬಿಡದೆ ಶ್ರೀರಾಮನು 9000 ವರ್ಷಗಳ ಕಾಲ ರಾಜ್ಯಭಾರವನ್ನು ಆನಂದವಾಗಿ ನಡೆಸಿದ. ರಾಮರಾಜ್ಯದ ಜನಗಳೆಲ್ಲ ಅವರ್ಣನೀಯ ಆನಂದದಿಂದ, ಸಂತೃಪ್ತಿಯಿಂದ, ಸಂತೋಷದಿಂದ, ಸಮಾಧಾನದಿಂದ ಬದುಕಿ ಬಾಳುತ್ತಿದ್ದರು. ಧರ್ಮ ಮತ್ತು ನ್ಯಾಯ “ಕಣ್ಣೆರೆಡು ನೋಟ ಒಂದೇ’ ಎನ್ನುವ ರೀತಿಯಲ್ಲಿ ಪಾಲನೆಯಾಗುತ್ತಿತ್ತು. ಎಲ್ಲರ ಮನಸ್ಸುಗಳು ಕಲ್ಪವೃಕ್ಷ ಕಾಮಧೇನುವಿನಂತೆ ತುಂಬಿ ತುಳುಕುತ್ತಿತ್ತು.

ರಾಮನ ಕಾಲದಲ್ಲಿ ಪ್ರಜಾಪ್ರಭುತ್ವ ಆನಂದಮಯವಾಗಿತ್ತು. ಕಾರಣ, ಪ್ರಜೆಗಳ ಬಳಿಗೆ ಪ್ರಜಾಪ್ರತಿನಿಧಿಯಾದ ಶ್ರೀರಾಮನೇ ಧಾವಿಸಿ ಬರುತ್ತಿದ್ದ. ಕುಂದುಕೊರತೆಗಳನ್ನು ಕೇಳುವುದಕ್ಕೆ ಇವನ ಒಡ್ಡೋಲಗದಲ್ಲಿ ಯಾವುದೇ ಅಡೆತಡೆಗಳು ಇರಲಿಲ್ಲ. ಹೆಣ್ಣುಮಕ್ಕಳು, ಮಹಿಳೆಯರು ಯಾವುದೇ ರೀತಿಯ ಜೀವಭಯವಿಲ್ಲದೆ ನಡೆದಾಡಲು ಅವಕಾಶವಿತ್ತು.

ದರೋಡೆ, ಲೂಟಿ, ಕಳ್ಳತನ, ಮೋಸ, ಇಂತಹ ಪ್ರಕರಣಗಳಿಗೆ ಅವಕಾಶವೇ ಇರಲಿಲ್ಲ. ಅವರವರ ಕುಲಕಸುಬುಗಳನ್ನು ವಂಶಪಾರಪರ್ಯವಾಗಿ ನಡೆಸಿಕೊಂಡು ಬಂದವರ ಮನೆಯಲ್ಲಿ ಅದಕ್ಕೆ ತಕ್ಕ ಬೆಲೆ ಮತ್ತು ನೆಲೆ ರಾಮರಾಜ್ಯದಲ್ಲಿ ದೊರೆಯುತ್ತಿತ್ತು. ಭೂಮಿಯ ಒತ್ತುವರಿಯಾಗಲಿ, ಕೆರೆಕಟ್ಟೆಗಳನ್ನು ಆಕ್ರಮಿಸುವುದಾಗಲಿ, ವನಸಂಪತ್ತನ್ನು ಕಬಳಿಸುವುದಾಗಲಿ ಈ ಥರದ ಪ್ರಕೃತಿ ಸಂರಕ್ಷಣೆಗೆ ವಿರುದ್ಧ ಕಾರ್ಯಗಳು ಕಿಂಚಿತ್ತೂ ಇರಲಿಲ್ಲ. ಇಡೀ ರಾಜ್ಯ “ಸುಜಲಾಂ ಸುಫ‌ಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಂ’ ಅನ್ನುವ ಮಾತಿಗೆ ಅನುಗುಣವಾಗಿ ಮನಸಿರಿಗಳು ಐಸಿರಿಯಿಂದ ಕೂಡಿದ್ದವು. ಹಸಿರಿಗೆ, ಉಸಿರಿಗೆ, ಹೆಸರಿಗೆ ಕೊರತೆ ಇರಲಿಲ್ಲ. ಸಮರ್ಥ, ಸಂವೃದ್ಧಿಯ ಕೌಟುಂಬಿಕ ಕಲಹಗಳಿಲ್ಲದ ಸಂಸಾರ ನಡೆಸುವಂತಹ ಸಾಮಾನ್ಯರು ಅಸಾಮಾನ್ಯರು ಆಡಳಿತಕ್ಕೆ ಉಘೇ ಉಘೇ ಎಂದು ಉದ್ಗರಿಸುತ್ತಿದ್ದರು. ವಿಜ್ಞಾನ, ಬುದ್ಧಿ, ತತ್ವಜ್ಞಾನಿ, ಮನಸ್ಸು, ಕವಿ ಹೃದಯ ಈ ಮೂರು ರಾಜ್ಯಭಾರ ಮಾಡುವ ಶ್ರೀರಾಮನಲ್ಲಿ ಮುಪ್ಪರಿಗೊಂಡಿತ್ತು. ಶ್ರೀರಾಮನ ಕಾಲದಲ್ಲಿ ಆಡಳಿತಕ್ಕೆ ಮುಪ್ಪೇ ಇರಲಿಲ್ಲ. ಜಾನಕಿಯೇ ಇರಲಿ, ನಾಡಿನ ಸಮಸ್ತ ಜನರೇ ಇರಲಿ,  ರಾಮನನ್ನು ಕಾಣದೆ ಹೋದರೆ, ಪಕ್ಷಿ ಪ್ರಾಣಿಗಳಿಗೂ ಜೀವಚೈತನ್ಯ ಉಡುಗಿ ಹೋಗುತ್ತದಂತೆ! ಅವುಗಳ ಶಕ್ತಿ ಅಡಗಿ ಹೋಗುತ್ತಿದ್ದಂತೆ ಶ್ರೀರಾಮ ಕೇವಲ ನರನಾಡಿಗಷ್ಟೇ ಅಲ್ಲ, ಸಮಸ್ತ ಪ್ರಾಣಿಗಳಿಗೂ
ಆತ ಶಕ್ತಿ, ಭಕ್ತಿ, ಉಕ್ತಿ, ಯುಕ್ತಿ ಆತನಿಂದಲೇ ಮುಕ್ತಿಯಂತೆ ಎಂದು ಕವಿ ಲಕ್ಷ್ಮೀಶ ವರ್ಣಿಸಿದ್ದು, ರಾಮರಾಜ್ಯದ ಸ್ಥಿತಿಗತಿ ನಮ್ಮಕಣ್ಣಮುಂದೆ ತೆರೆದುಕೊಳ್ಳುತ್ತದೆ.

ಯೂಪಮಯವಾಯ್ತು ಧರೆಯೆಲ್ಲಮುಂ ವರಜಾತ
ರೂಪಮಯವಾಯ್ತು ಮನೆಯೆಲ್ಲಮುಂ ಶುಕಪಿಕ
ಲಾಪಮಯವಾಯ್ತು ವನವೆಲ್ಲಮುಂ ವರ್ಧಿಪ
ಪ್ರಜೆಗಳಿಂ ಸಂಚರಿಸುವ
ಗೋಪಮಯವಾಯ್ತು ಗಿರಿಯೆಲ್ಲಮಂ
ರತ್ನಪ್ರದೀಪಮಯವಾಯ್ತು ತಮಮೆಲ್ಲಮುಂ ರಘುಜ ಪ್ರತಾಪಮಯವಾಯ್ತು ಮೂಜಗಮೆಲ್ಲಮಂ ದಾಶರಥಿ
ರಾಜ್ಯಮಂ ಪಾಲಿಸೆ…

*ಹಿರೇಮಗಳೂರು ಕಣ್ಣನ್‌, ಖ್ಯಾತವಾಗ್ಮಿ, ಕನ್ನಡ ಅರ್ಚಕ

Advertisement

Udayavani is now on Telegram. Click here to join our channel and stay updated with the latest news.

Next