Advertisement

Ayodhya: ಭಾರತದ ಭಾವದಲೂ, ಭಾಷೆಯಲ್ಲೂ ಶ್ರೀ ರಾಮಚಂದ್ರನ ನಿರಂತರ ಹರಿವು

05:22 PM Jan 22, 2024 | Team Udayavani |

ರಾಮಾಯಣ ಒಂದು ಅದ್ಭುತ ಕೃತಿ. ವಾಲ್ಮೀಕಿಗಳ ರಚನೆಯ ಉತ್ಕೃಷ್ಟತೆಯೇ ಅಂಥದ್ದು. ಕೆಲವು ಕೃತಿಗಳನ್ನು ರಚಿಸಿಸುವುದಲ್ಲ, ಅವು ತಾವಾಗಿಯೇ ಹುಟ್ಟಿಕೊಳ್ಳುತ್ತವೆ ಎನ್ನುವ ಮಾತಿದೆ. ಕ್ವಚಿತ್‌ ಜಾಯತೇ ಎನ್ನುತ್ತಾರೆ ತಿಳಿದವರು. ರಾಮಾಯಣ ಹಾಗೆ ಹುಟ್ಟಿದ ಕೃತಿ. ಹೊಸೆದದ್ದಲ್ಲ, ಹೆಣೆದದ್ದಲ್ಲ. ಕವಿಯ ಮನಸ್ಸಿಗೆ ಇಳಿಯುತ್ತಾ ಹೋದ ಕಾವ್ಯ. ಅಲ್ಲಿಂದ ಹರಿದು ಬಂದ ಕಾವ್ಯ.
ವಾಲ್ಮೀಕಿಯಿಂದ ಉದಿಸಿದ ಕಾವ್ಯ ಅಂದೇ ಎಲ್ಲೆಡೆ ಹರಡಿತ್ತು. ಅದನ್ನು ಕಾವ್ಯವೇ ಹೇಳುತ್ತದೆ.

Advertisement

ಕುಶ-ಲವರಿಂದ ಪ್ರಸರಣ ಆರಂಭವಾಗಿದ್ದು ಮುಂದುವರಿಯುತ್ತಲೇ ಹೋಯಿತು. ಅದು ಜನಜೀವನವನ್ನು ಪೂರ್ಣವಾಗಿ ವ್ಯಾಪಿಸಿತು. ಭಾರತ ತನ್ನ ಪರಮಾದರ್ಶವಾಗಿ ರಾಮಾಯಣವನ್ನು ಸ್ವೀಕರಿಸಿತು. ರಾಮ ಬದುಕಿನ ಉಸಿರಾದ. ಭಾರತದಲ್ಲಿ ಅತ್ಯಂತ ಹೆಚ್ಚು ಹೆಸರಿಟ್ಟುಕೊಳ್ಳುವುದು ರಾಮನದ್ದು. ಯಾವ ಮೂಲೆಗೆ ಹೋದರೂ ಅಲ್ಲಿ ರಾಮನ ಹೆಸರಿರುವ ವ್ಯಕ್ತಿಗಳು ಸಿಗುತ್ತಾರೆ. ಬದುಕಿನ ಪ್ರತಿ ಘಟನೆಗೂ ರಾಮಾಯಣವನ್ನು ಸಮನ್ವಯ ಮಾಡಿಕೊಂಡು  ಬಂದರು. ಕಷ್ಟಕ್ಕೂ, ನಷ್ಟಕ್ಕೂ, ಸುಖಕ್ಕೂ, ಆನಂದಕ್ಕೂ, ಕ್ರೌರ್ಯಕ್ಕೂ, ಪ್ರೀತಿಗೂ, ನೀತಿಗೂ, ವಾತ್ಸಲ್ಯಕ್ಕೂ, ಗೆಳೆತನಕ್ಕೂ, ಸಹೋದರ ಭಾವಕ್ಕೂ ರಾಮಾಯಣ ಬಳಕೆಯಾಯಿತು. ಮಾತು ಮಾತಿನಲ್ಲಿ ರಾಮಾಯಣ. ಗಾದೆಯಲ್ಲಿ ರಾಮಾಯಣ. ಹಾಡಿನಲ್ಲಿ ರಾಮಾಯಣ. ಕೇಳಲೂ
ರಾಮಾಯಣ, ನೋಡಲೂ ರಾಮಾಯಣ, ಓದಲೂ ರಾಮಾಯಣ ಹೀಗೆ ಆವರಿಸಿತು ಅದು.

ಇಂದು ನಿಂತು ಹಿಂದಿರುಗಿ ನೋಡಿದಾಗ ಅಬ್ಬಾ ಎನ್ನುವ ಬೆಳವಣಿಗೆ ಅದರದ್ದು. ಒಂದು ಸಾಹಿತ್ಯ ಕೃತಿ ವಿಶಾಲವಾದ
ರಾಷ್ಟ್ರವನ್ನು ಹೀಗೆ ಆವರಿಸುವುದು ಸಾಧ್ಯವಾಯ್ತು ಎನ್ನಿಸುತ್ತದೆ. ಅದರಲ್ಲೂ ಸುದೀರ್ಘ‌ ಕಾಲ. ಎಷ್ಟು ಮತಗಳು ಹುಟ್ಟಿದವು. ಎಷ್ಟು ದಾಳಿಗಳು ನಡೆದವು. ಎಷ್ಟು ವಂಶಗಳು ಆಳಿದವು. ಎಷ್ಟು ಮಹಾತ್ಮರು ಹುಟ್ಟಿಬಂದರು. ಭಾರತ ಅದೆಷ್ಟು ಬದಲಾವಣೆ ಗಳನ್ನು ಕಂಡಿತೋ. ಅದೆಷ್ಟು ತರಹದ ಬದಲಾವಣೆಗಳನ್ನು ಕಂಡಿತೋ. ರಾಮಾಯಣದ ಹರಿವು ಮಾತ್ರ ನಿಲ್ಲಲಿಲ್ಲ. ಅದು ಮತ್ತೆ ಮತ್ತೆ ಹುಟ್ಟಿತು. ಹೊಸ ಕೃತಿಯಾಗಿ ಬಂತು. ವ್ಯಾಖ್ಯಾನಗಳು ಬಂದವು. ರಂಗಕೃತಿಯಾಗಿ ರಂಜಿಸಿದವು. ಪೂಜೆ, ಜಪ, ಹೋಮ, ಪಾರಾಯಣ ಎಂದು ಉಪಾಸನಾ ಪ್ರಪಂಚ ಬೆಳೆಯಿತು.

ದೇಶದ ಉದ್ದಗಲದ ರಾಮ ದೇಗುಲಗಳಿದ್ದು ಬೇರೆಯದೇ ಇತಿಹಾಸ. ಸಣ್ಣಪುಟ್ಟ ಊರುಗಳಲ್ಲಿಯೂ ರಾಮಮಂದಿರಗಳು. ನಗರಗಳಲ್ಲಂತೂ ಅದೆಷ್ಟೋ ರಾಮನ ದೇವಾಲಯಗಳು. ರಾಮನಷ್ಟೇ ಹನುಮನ ದೇಗುಲಗಳೂ ಇವೆ. ಹನುಮನ ಗುಡಿಯಿರದ ಊರೇ ಇಲ್ಲ ಎನ್ನುವಷ್ಟು ಅವನಿಗೆ ಪೂಜಾಸ್ಥಾನಗಳಿವೆ. ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಹೀಗೆ ಎಲ್ಲರಿಗೂ ಪೂಜಾಸ್ಥಾನಗಳು.
ಇನ್ನು ರಾಮನ ಪದಸ್ಪರ್ಶದ ಕ್ಷೇತ್ರಗಳೂ ಅಸಂಖ್ಯ. ರಾಮ ಒಂದೆಡೆ ನಿಂತವನಲ್ಲವಲ್ಲ. ಅಯೋಧ್ಯೆಯಿಂದ ಲಂಕೆಯವರೆಗೆ ಪಾದ ಬೆಳೆಸಿದವ. ಹಾಗಾಗಿ ಎಲ್ಲೆಡೆ ಅವನ ಗುರುತುಗಳಿವೆ. ವಾಲ್ಮೀಕಿಗಳು ಹೆಸರಿಸಿದ ಊರುಗಳು ಒಂದೆಡೆಯಾದರೆ, ಅದೆಷ್ಟೋ ಊರುಗಳ ಸ್ಥಳಪುರಾಣಗಳು ಇನ್ನೆಷ್ಟನ್ನೋ ಹೇಳುತ್ತವೆ. ಜಗತ್ತಿನ ಸಂಪರ್ಕ ಭಾಷೆ ಎನಿಸಿಕೊಂಡ ಇಂಗ್ಲಿಷಿನಲ್ಲಿ ಸಹಜವಾ ಗಿಯೇ ರಾಮಾಯಣದ ಸಾವಿರಾರು ಕೃತಿಗಳಿವೆ. ಅವು ಭಾರತೀಯರಿಂದಲೂ ರಚಿತವಾಗಿವೆ, ವಿದೇಶೀಯರ ಕೊಡುಗೆಯೂ
ಇದೆ. ಸ್ವತಂತ್ರ ಕೃತಿಗಳಿಗಿಂತಲೂ ಅನುವಾದ ಮತ್ತು ವಿಮರ್ಶಾತ್ಮಕ ಕೃತಿಗಳು ಇಂಗ್ಲೀಷಿನಲ್ಲಿ ಹೆಚ್ಚಿವೆ. ಇದೆಲ್ಲದರ ಪರಿಣಾಮವಾಗಿ ಜಗತ್ತಿನ ಎಲ್ಲೆಡೆಗೆ ರಾಮಾಯಣ ತಲುಪಿದೆ.

ಜೈನಮತದಲ್ಲಿ ರಾಮಾಯಣ ಪಡೆದ ಸ್ಥಾನದ್ದು ಬೇರೆಯದೇ ಕಥೆ. ಅಲ್ಲಿ ಈ ರಾಮಾಯಣಕ್ಕೆ ಬೇರೆ ರೂಪವಿದೆ. ಜೈನಮತದ ಪ್ರಧಾನ ತಣ್ತೀವಾದ ಅಹಿಂಸೆ ಅಲ್ಲಿ ಮುಖ್ಯ ಸ್ಥಾನ ಪಡೆದಿದೆ. ಭಾರತದ ಅನೇಕ ಭಾಷೆಗಳಲ್ಲಿ ಜೈನರಾಮಾಯಣದ ದೊಡ್ಡ ಪರಂಪರೆಯೇ ಇದೆ. ಪ್ರಾಚೀನ ಕಾಲದಿಂದಲೂ ಜೈನಸಾಹಿತ್ಯ ರಾಮಾಯಣವನ್ನು ಮತ್ತೆ ಸೃಷ್ಟಿಸಿದೆ.

Advertisement

ಭಾರತದ ಭಾವದಲ್ಲೂ, ಭಾರತದ ಭಾಷೆಯಲ್ಲೂ ಅದರದ್ದು ನಿರಂತರ ಹರಿವು. ಅಂದೆಂದೋ ಆರಂಭವಾಗಿದ್ದು ಇಂದೂ
ನಿಂತಿಲ್ಲ. ಪ್ರಾಚೀನ ಸಾಹಿತ್ಯದ ಪದ್ಯ ಮತ್ತು ಗದ್ಯ ಎರಡರಲ್ಲೂ ರಾಮಾಯಣ ಮರುಕಳಿಸಿತು. ಸಂಸ್ಕೃತ ಕಾವ್ಯ ಎಂದೊಡನೆ
ನೆನಪಾಗುವ ರಘುವಂಶ, ಚಂಪೂ ಎಂದೊಡನೆ ಮನಸ್ಸಿಗೆ ಬರುವ ಚಂಪೂರಾಮಾಯಣ, ಅನನ್ಯತೆ ಯಿಂದಾಗಿ ಗಮನ ಸೆಳೆದ ಭಟ್ಟಿಕಾವ್ಯ, ನಾಟಕದ ಸಾರ್ವಭೌಮ ಎನಿಸಿದ ಉತ್ತರ ರಾಮಚರಿತೆ ಹೀಗೆ ಅಸಂಖ್ಯ ಕೃತಿಗಳು ಮೂಡಿಬಂದವು. ಕನ್ನಡದಲ್ಲೂ ರಾಮಾಯಣದ ಹರಿವು ಅಸಾಮಾನ್ಯವೇ. ಮೊದಲು ಹೆಸರಿಸಬೇಕಾದದ್ದು ತೊರವೆ ರಾಮಾಯಣವನ್ನು. ರಾಮಚಂದ್ರ ಚರಿತ ಪುರಾಣ, ಕುಮುದೇಂದು ರಾಮಾಯಣ, ಕುವೆಂಪು ಅವರ ಶ್ರೀರಾಮಾಯಣದರ್ಶನಂ ಇವೆಲ್ಲ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು.

ಇನ್ನು ಜನಪದದ ಹಾಡುಗಳು, ದಾಸ ಸಾಹಿತ್ಯದ ಪದ್ಯಗಳು, ಯಕ್ಷಗಾನ – ನೃತ್ಯ – ನಾಟಕಗಳ ಪಠ್ಯಗಳಲ್ಲಿ ರಾಮಾಯಣದ ಅವತರಣ ಬೇರೆಯದೇ ಜಗತ್ತು. ರಾಮಚರಿತಮಾನಸದ್ದು ಭಾರತೀಯ ಸಾಹಿತ್ಯದಲ್ಲಿ ಬೇರೆಯದೇ ಛಾಪು. ಅವಧಿ ಭಾಷೆಯಲ್ಲಿ ಬಂದ ಈ ಕೃತಿ ಸಮಗ್ರ ಭಾರತದ ಕೃತಿಯ ಎತ್ತರಕ್ಕೇರಿತು. ಉತ್ತರದವರಿಗೆ ಅದು ವಾಲ್ಮೀಕಿ ವಿರಚಿತ ರಾಮಾಯಣಕ್ಕಿಂತಲೂ ಒಂದು ತೂಕ ಹೆಚ್ಚು. ರಾಮಚಂದ್ರಿಕಾ, ರಾಮ ರಸರಂಗವಿಲಾಸ, ಸೀತಾ ರಾಮರಸಚಂದ್ರೋದಯ ಇವೆಲ್ಲ ಹೆಸರಿಸುವಂಥವು.

ಮಲಯಾಳಂ, ತಮಿಳು, ತೆಲುಗು, ತುಳು, ಕೊಂಕಣಿ, ಮರಾಠಿ, ಗುಜರಾತಿ, ಒಡಿಯಾ, ಮಗೇಹಿ, ಭೋಜಪುರೀ, ಬಂಗಾಳಿ, ಅಸ್ಸಾಮಿ, ಮಣಿಪುರಿ, ಪಂಜಾಬಿ, ಕಾಶ್ಮೀರಿ, ಸಿಂಧಿ, ಪಾಲಿ, ಪ್ರಾಕೃತ ಹೀಗೆ ಎಲ್ಲ ಭಾರತೀಯ ಭಾಷೆಗಳಲ್ಲೂ ರಾಮಾಯಣ ಬಂದಿದೆ. ಇವುಗಳಲ್ಲಿ ತಮಿಳಿನ ಕಂಬ ರಾಮಾಯಣಕ್ಕೆ ವಿಶಿಷ್ಟ ಸ್ಥಾನವಿದೆ. ಇಂದು ವಿಶ್ವಾದ್ಯಂತ ರಾಮಾಯಣದ ಮಾತು ಕೇಳಿಬರುತ್ತಿದೆ. ಅಮೆರಿಕಾದಿಂದ ಆರಂಭಿಸಿ ಅಸಂಖ್ಯ ದೇಶಗಳಲ್ಲಿ ರಾಮನ ದೇವಾಲಯಗಳಿವೆ. ರಾಮಾಯಣವನ್ನು ಆಧರಿಸಿದ ಸಾಹಿತ್ಯವಂತೂ ನಿತ್ಯ ನಿತ್ಯ ಹುಟ್ಟಿಬರುತ್ತಿದೆ. ಆಧುನಿಕ ಜಗತ್ತಿಗೆ ರಾಮ ಮತ್ತು ರಾಮಾಯಣ ಇಂದು ಚಿರಪರಿಚಿತ.
ವಿಶ್ವವ್ಯಾಪಿಯಾದ ರಾಮಾಯಣಕ್ಕೆ ಇಂದು ವಿಶ್ವಗೌರವದ ಹಿರಿಮೆ.

*ಜಗದೀಶ ಶರ್ಮಾ ಸಂಪ, ಸಂಸ್ಕೃತ ವಿದ್ವಾಂಸರು

Advertisement

Udayavani is now on Telegram. Click here to join our channel and stay updated with the latest news.

Next