Advertisement

ಮಸಣ ಕಾರ್ಮಿಕರ ಜಾಗೃತಿ ಜಾಥಾ

04:17 PM May 13, 2022 | Team Udayavani |

ಕೂಡ್ಲಿಗಿ: ರಾಜ್ಯ ಮಸಣ ಕಾರ್ಮಿಕರ ಸಂಘದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೂ.8 ರಂದು ಹೊಸಪೇಟೆ ಯಲ್ಲಿ ಜರುಗುವ ಮಸಣ ಕಾರ್ಮಿಕರ ರಾಜ್ಯ ಮಟ್ಟದ ಬೃಹತ್‌ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕಿ ಬಿ.ಮಾಳಮ್ಮ ಮಾತಾನಾಡಿ, ಸಾವಿರಾರು ವರ್ಷಗಳಿಂದ ಬಿಟ್ಟಿ ಚಾಕರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಸರ್ಕಾರ ಯಾವುದೇ ಸವಲತ್ತುಗಳನ್ನು ನೀಡದೆ ಅನ್ಯಾಯ ಮಾಡಿದೆ. ಮಸಣ ಕಾರ್ಮಿಕರ ಲಕ್ಷಾಂತರ ಕುಟುಂಬಗಳಿಗೆ ಬಿಡಿಗಾಸು ನೀಡದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ. ಆದ್ದರಿಂದ ಮಸಣ ಕಾರ್ಮಿಕರಿಗೆ ಪ್ರತಿ ಸಾರ್ವಜನಿಕ ಮಸಣಕ್ಕೆ ಒಬ್ಬರಂತೆ, ಮಸಣ ಕಾರ್ಮಿಕರೊಬ್ಬರನ್ನು ಸ್ಥಳಿಯ ಸಂಸ್ಥೆಗಳ ಮಸಣ ನಿರ್ವಾಹಕ ನೌಕರರೆಂದು ಪರಿಗಣಿಸಿ ನೇಮಿಸಿಕೊಳ್ಳಬೇಕು. ಪ್ರತಿ ಕುಣಿ ಅಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗವೆಂದು ಪರಿಗಣಿಸಿ, ಕುಣಿ ಅಗೆಯುವ, ಮುಚ್ಚುವ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕನಿಷ್ಠ 3,000 ರೂ. ಕೂಲಿ ಪಾವತಿಸಲು ಕ್ರಮ ವಹಿಸಬೇಕು. ಕಾರ್ಮಿಕರಿಗೆ ಸೂಕ್ತ ಪರಿಕರ ಹಾಗೂ ಸೋಪುಗಳನ್ನು ಒದಗಿಸಬೇಕು. ಮಸಣ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿ ಮಾಡಬೇಕು. ಎಲ್ಲಾ ಮಸಣ ಕಾರ್ಮಿಕರಿಗೆ ತಲಾ ಐದು ಎಕರೆ ಜಮೀನು ಉಚಿತವಾಗಿ ನೀಡಬೇಕು. ಹಿತ್ತಲು ಸಹಿತ ನೀವೇಶನ ಹಾಗೂ ಹತ್ತು ಲಕ್ಷ ರೂ. ಮೌಲ್ಯದ ಮನೆಯನ್ನು ಉಚಿತವಾಗಿ ಒದಗಿಸುವ ಬೇಕು. 45 ವರ್ಷದ ಮಸಣ ಕಾರ್ಮಿಕರಿಗೆ ಮಾಸಿಕ ಸಹಾಯಧನ ಅಥವಾ ಪಿಂಚಣಿ ಕನಿಷ್ಠ 3000 ಸಾವಿರ ರೂ. ನೀಡಬೇಕು ಎನ್ನುವುದು ಸೇರಿದಂತೆ ಇತರೆ ಹಲವು ಹಕ್ಕೊತ್ತಾಯ ಮಂಡಿಸಿದರು.

ತಾಲೂಕು ಸಿಪಿಎಂ ಕಾರ್ಯದರ್ಶಿ ಸಿ. ವಿರೂಪಾಕ್ಷಪ್ಪ, ಸದಸ್ಯರಾದ ಬಿ.ಟಿ. ಗುದ್ದಿ ಚಂದ್ರು, ಗುನ್ನಳ್ಳಿ ರಾಘವೇಂದ್ರ, ಪಿ.ಚಾಂದ್‌ ಬೀ, ದೇವದಾಸಿ ಮಹಿಳಾ ವಿಮೋಚನಾ ಸಂಘಟನೆ ತಾಲೂಕು ಅಧ್ಯಕ್ಷೆ ಕನಕೇರಿ ವೆಂಕಮ್ಮ, ಸಣ್ಣ ಹನುಮಂತಪ್ಪ, ಬಸವರಾಜ್‌, ಹುಡಿಸಲಪ್ಪ, ಹುಲುಗಪ್ಪ, ಸ್ವಾಮಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next