Advertisement
ಅವನೊಬ್ಬ ಅಪರೂಪದ ಬೇಟೆಗಾರ. ಹದ್ದಿನ ಕಣ್ಣು, ನೀಳ ಬಾಹುಗಳು, ವಿಶಾಲವಾದ ಎದೆ, ದಷ್ಟಪುಷ್ಟವಾದ ಶರೀರ ಅವನದು. ಮಹಾನ್ ಆಶಾವಾದಿ. ಅನೇಕ ಸಾಹಸಗಳನ್ನು ಮೆರೆದಿದ್ದ. ಇಷ್ಟೇ ಆಗಿದ್ದಿದ್ದರೆ ಕಲಿವೀರನ ಬಗ್ಗೆ ಇಲ್ಲಿ ಪ್ರಸ್ತಾಪಿಸುವ ಅವಶ್ಯಕತೆಯೇ ಇರಲಿಲ್ಲ. ಅವನ ವಿಶೇಷತೆ ಎಂದರೆ, ಸದಾ ಬೆನ್ನಿಗಂಟಿಕೊಂಡಿರುತ್ತಿದ್ದ ಬತ್ತಳಿಕೆ! ಅವನ ಅರ್ಧದಷ್ಟು ಎತ್ತರವಿದ್ದ ಬತ್ತಳಿಕೆ ಗಾತ್ರದಲ್ಲಿ ದೊಡ್ಡದಿತ್ತು. ಅವನಿಗದು ಹೆಮ್ಮೆಯ, ಗರ್ವದ ಜೀವನ ಸಾರ್ಥಕ್ಯದ ಸಂಕೇತವಾಗಿತ್ತು. ತನ್ನ ಗುರಿ ತಪ್ಪದ ಬಾಣಕ್ಕೆ ಬೆಲೆತೆತ್ತ ಪ್ರಾಣಿ, ವಸ್ತು ಇತ್ಯಾದಿಗಳ ಪಳೆಯುಳಿಕೆಗಳು ಅದರಲ್ಲಿದ್ದವು. ಒಟ್ಟಿನಲ್ಲಿ ಬತ್ತಳಿಕೆ ಎಂಬುದು ಕಲಿವೀರನ ಜೀವಮಾನ ಸಾಧನೆಯ ಜೀವಂತ ಅಸ್ತಿತ್ವ!
Related Articles
Advertisement
ಕಾದ. ಗುರು ಕಣ್ಣುಮುಚ್ಚಿಕೊಂಡರು. ಅವನಿಗೋ ತನ್ನ ಬತ್ತಳಿಕೆಯ ಬಗ್ಗೆ ಅವರಲ್ಲಿ ಹೇಳಿಕೊಳ್ಳುವ ತವಕ. ಆದರೆ, ಗುರು ಕಣ್ತೆರೆಯಲಿಲ್ಲ. ಹಿಡಿದ ಹಠ ಬಿಡದವನಂತೆ ಕಾದು ಕುಳಿತ. ನಡೆದು ಆಯಾಸಗೊಂಡಿದ್ದ ದೇಹವನ್ನು ಎಳೆ ಗಾಳಿ ಸುಳಿದು ಸಂತೈಸತೊಡಗಿತು. ಹಾಗೆಯೇ ನೆಲಕ್ಕೊರಗಿ ನಿದ್ದೆಗೆ ಜಾರಿದ!
ಕಲಿವೀರ ಕಣ್ಣು ಬಿಟ್ಟಾಗ ಸೂರ್ಯ ನಡು ನೆತ್ತಿಯಲ್ಲಿದ್ದ. ತಡಬಡಿಸುತ್ತ ಎದ್ದು ಕುಳಿತವನ ಕಣ್ಣಿಗೆ ಗುರು ಕಾಣಿಸಲಿಲ್ಲ. ಜೊತೆಗೆ ಅವನ ಬತ್ತಳಿಕೆಯೂ…!
ಚಡಪಡಿಸಿದ… ಹಲುಬಿದ… ಆಘಾತಕ್ಕೊಳಗಾದ… ಆದರೇನೂ ಮಾಡುವಂತಿರಲಿಲ್ಲ.ಸುಮಾರು ಹೊತ್ತು ಕಳೆಯಿತು. ಹೊಟ್ಟೆ ಚುರುಗುಟ್ಟತೊಡಗಿತು. ತಲೆಯೆತ್ತಿದ. ಕಣ್ಣಳತೆಯ ದೂರದಲ್ಲಿಯೇ ಊರೊಂದು ಕಂಡಿತು. ಥಟ್ಟನೆ ಎದ್ದು ಹೆಜ್ಜೆ ಮುಂದಿಟ್ಟ. ಅದು ಅವನು ಅದೆಷ್ಟೋ ವರ್ಷಗಳ ನಂತರ ಬತ್ತಳಿಕೆಯಿಲ್ಲದೆ ಇಟ್ಟ ಮೊದಲ ಹೆಜ್ಜೆ ಆಗಿತ್ತು! ಮಿಂಚಿನ ವೇಗದಲ್ಲಿ ಊರು ಸೇರಿಕೊಂಡ ಕಲಿವೀರ, ತಾನು ಅದ್ಭುತ ಬೇಟೆಗಾರನೆಂದು ಹೇಳಿಕೊಂಡು ಅನ್ನ, ನೀರು ಬೇಡಿದ. ಜನ ನಕ್ಕರು. ಆ ವ್ಯಂಗ್ಯ ನಗು, ಅವನ ಅಭಿಮಾನದ ಗೋಡೆಯನ್ನೊಡೆದು ಪಾತಾಳಕ್ಕಿಳಿಸಿತು. ಸೋಲೊಪ್ಪಿಕೊಳ್ಳದ ಕಲಿವೀರ ತನ್ನ ಮಾಂತ್ರಿಕ ಬಿಲ್ವಿದ್ಯೆಯನ್ನು ನಿಂತಲ್ಲಿಯೇ ಪ್ರದರ್ಶಿಸುವುದಾಗಿ ಸವಾಲು ಹಾಕಿದ. ಹುಚ್ಚನನ್ನು ನೋಡುವವರಂತೆ ಅವನ ಸುತ್ತ ಜನ ನೆರೆದರು. ಅದೇನೋ, ತೋರಿಸು ನಿನ್ನ ಶೌರ್ಯ ಎಂಬಂತಿತ್ತು ಅವರ ನೋಟ. ಕಲಿವೀರನಿಗೆ ಆಗ ಅರಿವಾದ ಸತ್ಯ ತನ್ನ ಕೈಯಲ್ಲಿ ಬಿಲ್ಲು ಇಲ್ಲ ಎಂಬುದು! ಅಷ್ಟಕ್ಕೆ ಕುಗ್ಗದ ಕಲಿವೀರ, ಸುತ್ತಾ ಕಣ್ಣು ಹಾಯಿಸಿದ. ಮರವೊಂದು ಕಣ್ಣಿಗೆ ಬಿತ್ತು. ಸರಸರನೆ ಮರವೇರತೊಡಗಿದ. ಅಭ್ಯಾಸ ತಪ್ಪಿ ಹೋಗಿದ್ದರಿಂದ ಅಲ್ಲಲ್ಲಿ ಜಾರಿದ. ಸಾವರಿಸಿಕೊಂಡು ಮರವನ್ನು ಹತ್ತಿ, ರೆಂಬೆ ಮುರಿಯಲು ಹೋದವನು ರೆಂಬೆ ಸಮೇತ ಕೆಳಕ್ಕೆ ಬಿದ್ದ. ರೆಂಬೆಯನ್ನು ಬಿಲ್ಲನ್ನಾಗಿ ಮಾಡುವುದು ಅವನ ಉದ್ದೇಶವಾಗಿತ್ತು. ಜನ ಚಪ್ಪಾಳೆ ಹೊಡೆದುಕೊಂಡು ನಗತೊಡಗಿದರು. ಅವಮಾನದಿಂದ ಹಿಡಿಯಷ್ಟಾಗಿ ಹೋಗಿದ್ದ ಕಲಿವೀರ ತಲೆಎತ್ತಿ ನೋಡಿದ. ಎದುರಿಗೆ ಗುರುಗಳು! ಅವರ ಮುಖದಲ್ಲಿ ಅದೇ ಮುಗುಳ್ನಗೆ ಅವರ ಒಂದು ಕೈಯಲ್ಲಿ ಬಿಲ್ಲು! ಮತ್ತೂಂದರಲ್ಲಿ ಬುಟ್ಟಿಯಂಥ ಬತ್ತಳಿಕೆ! ಧಿಗ್ಗನೆದ್ದು ನಿಂತ ಕಲಿವೀರ, ಇಷ್ಟು ವರುಷ ತಾನು ಹೊತ್ತು ತಿರುಗುತ್ತಿದ್ದ ಬತ್ತಳಿಕೆ ಕಂಡು ಅಸಹ್ಯ ಪಟ್ಟುಕೊಂಡ!
ಕಲಿವೀರ ಬಿಲ್ಲು ಹಿಡಿದ!!
ಚಪ್ಪಾಳೆ ಮಳೆ ಸುರಿಯಿತು!!!
ಕಲಿವೀರ ಬಯಸಿದ್ದು ಕಾಲಡಿಗೆ ಬಂದಿತ್ತು!!!!
ಜನರ ಹೆಗಲ ಮೇಲೇರಿ ಮೆರೆಯುತ್ತಿದ್ದ ಕಲಿವೀರ ಆ ಅಪಾರ ಜನಸಂದಣಿಯಲ್ಲಿ ಗುರುವನ್ನು ಹುಡುಕತೊಡಗಿದ.
ಗುರು ಅವನ ಬತ್ತಳಿಕೆಯೊಂದಿಗೆ ಕಾಣೆಯಾಗಿದ್ದರು! – ವಿದ್ಯಾ ಅರಮನೆ