Advertisement

ನಕಲಿಗಳಿಂದ ಪ್ರಗತಿಗೆ ಅಡ್ಡಿ; ಸಮಾಜವಾದಿ ವಿರುದ್ಧ ಮೋದಿ ಕಿಡಿ

12:49 AM Feb 08, 2022 | Team Udayavani |

ಹೊಸದಿಲ್ಲಿ: “ನಕಲಿ ಸಮಾಜವಾದಿಗಳು ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ಅವರ ವಂಶಾಡಳಿತದ ನೀತಿಗಳ ಮೂಲಕ ಅಭಿವೃದ್ಧಿಗೆ ಅಡ್ಡಗಾಲು ಹಾಕಿದರು’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

Advertisement

ಸೋಮವಾರ ಉತ್ತರಪ್ರದೇಶದ ಮೂರು ಪಶ್ಚಿಮ ಜಿಲ್ಲೆಗಳಾದ ಬಿಜ್ನೋರ್‌, ಮೊರಾದಾಬಾದ್‌ ಮತ್ತು ಅನ್ರೋಹಾದಲ್ಲಿ ವರ್ಚುವಲ್‌ ರ್‍ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. “ರೈತರೇ, ನಿಮ್ಮ ಹಾದಿತಪ್ಪಿಸುವವರನ್ನು ಒಮ್ಮೆ ಕೇಳಿನೋಡಿ- ಅವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ನಿಮ್ಮ ಗ್ರಾಮಗಳಿಗೆ ಎಷ್ಟು ವಿದ್ಯುತ್‌ ನೀಡಿದರು ಎಂದು. ರೈತ ಸಹೋದರರಿಗೆ ಘನತೆ ಮತ್ತು ಹಕ್ಕುಗಳನ್ನು ಕೊಟ್ಟಿದ್ದು ಕೇಂದ್ರ ಸರಕಾರ‌ ಮತ್ತು ರಾಜ್ಯ ಬಿಜೆಪಿ ಸರಕಾರ’ ಎಂದು ಮೋದಿ ಹೇಳಿದ್ದಾರೆ.

ರ್‍ಯಾಲಿ ನಡೆದ ಕ್ಷೇತ್ರವು ಕೃಷಿಕರು ಹಾಗೂ ಕಬ್ಬು ಬೆಳೆಗಾರರ ಬಾಹುಳ್ಯವಿರುವ ಪ್ರದೇಶವಾದ ಕಾರಣ, ಮೋದಿ ಅವರು ಭಾಷಣದುದ್ದಕ್ಕೂ, ರೈತರಿಗೆ ಸರಕಾರ‌ ನೀಡಿರುವ ಕೊಡುಗೆಗಳ ಬಗ್ಗೆ ವಿವರಿಸಿದರು.

ಭೌತಿಕ ರ್‍ಯಾಲಿ ರದ್ದು: ಮೋದಿ ಅವರು ತಮ್ಮ ಮೊದಲ ಹೈಬ್ರಿಡ್‌ ರ್ಯಾಲಿಯನ್ನು ಬಿಜ್ನೋರ್‌ನಲ್ಲಿ ಭೌತಿಕವಾಗಿಯೇ ನಡೆಸಲು ಉದ್ದೇಶಿಸಿದ್ದರು. ಆದರೆ ಕೊನೇ ಕ್ಷಣದಲ್ಲಿ ಪ್ರತಿಕೂಲ ಹವಾಮಾನವಿದ್ದ ಕಾರಣ ಬಿಜ್ನೋರ್‌ಗೆ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ ವರ್ಚುವಲ್‌ ಆಗಿಯೇ ರ್‍ಯಾಲಿ ನಡೆಸಲು ತೀರ್ಮಾನಿಸಿದರು. ಆದರೆ ಸಿಎಂ ಯೋಗಿ ಆದಿತ್ಯನಾಥ್‌ ಅವರು ಬಿಜ್ನೋರ್‌ನಲ್ಲಿ ಭೌತಿಕ ರ್‍ಯಾಲಿ ನಡೆಸಿದರು.

ಚೌಧರಿ ವ್ಯಂಗ್ಯ: ಕೊನೇ ಕ್ಷಣದಲ್ಲಿ ಮೋದಿ
ಭೌತಿಕ ರ್‍ಯಾಲಿ ರದ್ದಾಗಿದ್ದನ್ನು ವ್ಯಂಗ್ಯವಾಡಿರುವ ರಾಷ್ಟ್ರೀಯ ಲೋಕ ದಳ(ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್‌ ಚೌಧರಿ, “ಬಿಜ್ನೋರ್‌ನಲ್ಲಿ ಸೂರ್ಯ ಪ್ರಕಾಶಿಸುತ್ತಿದ್ದಾನೆ. ಆದರೆ ಬಿಜೆಪಿಗೆ ಮಾತ್ರ ಹವಾಮಾನ ಪ್ರತಿಕೂಲವಾಗಿಯೇ ಇದೆ’ ಎಂದು ಟ್ವೀಟ್‌ ಮಾಡಿದ್ದಾರೆ. ಜತೆಗೆ, ಗೂಗಲ್‌ನಲ್ಲಿ ಬಂದಿರುವ ಹವಾಮಾನ ವರದಿಯನ್ನೂ ಅವರು ಅಪ್‌ಲೋಡ್‌ ಮಾಡಿದ್ದಾರೆ.

Advertisement

ಇದನ್ನೂ ಓದಿ:ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5030 ಕೋಟಿ ರೂ. ಅನುದಾನಕ್ಕಾಗಿ ಮುಖ್ಯಮಂತ್ರಿ ಮನವಿ

ಉ.ಪ್ರದೇಶಕ್ಕೆ ದೀದಿ ಎಂಟ್ರಿ: ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಅವರು ಸೋಮವಾರ ಉತ್ತರಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಲಕ್ನೋದಲ್ಲಿ ಅವರು ಸಮಾಜವಾದಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಈ ನಡುವೆ, ಅಮೇಠಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಜಯ್‌ ಸಿನ್ಹ ವಿರುದ್ಧ ಆಶಿಷ್‌ ಶುಕ್ಲಾರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಸೋಮವಾರ ಬೆಳಗ್ಗೆಯಷ್ಟೇ ಶುಕ್ಲಾ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರಿದ್ದರು.

ಸಿಎಂ ಚನ್ನಿಗೆ ಮುಖಭಂಗ
ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ° ಅವರ ಸಂಬಂಧಿ ಭೂಪಿಂದರ್‌ ಸಿಂಗ್‌ ಅಲಿಯಾಸ್‌ ಹನಿ ಅವರು, ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಿದ್ದಕ್ಕೆ ತಾವು 10 ಕೋಟಿ ರೂ. ನಗದನ್ನು ಲಂಚದ ರೂಪದಲ್ಲಿ ಪಡೆದಿದ್ದನ್ನು ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಹೀಗೆಂದು ಜಾರಿ ನಿರ್ದೇಶನಾಲಯ ಸೋಮವಾರ ಹೇಳಿದೆ. ಫೆ.3ರಂದು ಹನಿ ಅವರನ್ನು ಇಡಿ ವಶಕ್ಕೆ ಪಡೆದಿತ್ತು. ಈಗ ಇಡಿ ಮುಂದೆ ಹನಿ ಲಂಚದ ವಿಚಾರ ಬಾಯಿಬಿಟ್ಟಿರುವುದು ಸಿಎಂ ಚನ್ನಿಗೆ ತೀವ್ರ ಮುಖಭಂಗ ಉಂಟುಮಾಡಿದೆ.

ಉದ್ಯೋಗ ಸೃಷ್ಟಿಗೆ 500 ಕೋಟಿ ರೂ.
ಗೋವಾದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೇರಿದರೆ, ಸರಕಾರದ ಬೊಕ್ಕಸದಲ್ಲಿರುವ 500 ಕೋಟಿ ರೂ.ಗಳನ್ನು ಉದ್ಯೋಗ ಸೃಷ್ಟಿಗೆಂದೇ ಬಳಸಲಾಗುತ್ತದೆ. ಸರಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.30 ಮೀಸಲಾತಿ ನೀಡಲಾಗುತ್ತದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಆಶ್ವಾಸನೆ ನೀಡಿದ್ದಾರೆ. ನುವೇಮ್‌ ಅಸೆಂಬ್ಲಿ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಈ ವಾಗ್ಧಾನ ಮಾಡಿದ್ದಾರೆ.

ಅದು ಡಬಲ್‌ ಬ್ರೇಕ್‌, ಇದು ಡಬಲ್‌ ಎಂಜಿನ್‌
ಉತ್ತರಾಖಂಢದ ಹರಿದ್ವಾರದಲ್ಲಿ ವರ್ಚುವಲ್‌ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, “ಈ ಬಾರಿಯ ಚುನಾವಣೆಯು ಉತ್ತರಾಖಂಡ ರಾಜ್ಯವನ್ನು ರಚಿಸಿದವರು ಮತ್ತು ರಚನೆಗೆ ವಿರೋಧಿಸಿದವರ ನಡುವಿನ ಸಮರ’ ಎಂದು ಬಣ್ಣಿಸಿದ್ದಾರೆ. ಈ ಹಿಂದೆ ರಾಜ್ಯದಲ್ಲಿದ್ದ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರಗಳು “ಡಬಲ್‌ ಬ್ರೇಕ್‌’ ಸರಕಾರಗಳು. ಆದರೆ ಈಗಿರುವುದು “ಡಬಲ್‌ ಎಂಜಿನ್‌’ ಸರಕಾರ‌ ಎಂದೂ ಹೇಳಿದ್ದಾರೆ.

ಕೇಜ್ರಿವಾಲ್‌ ವಾಗ್ಧಾನ: ಉತ್ತರಾಖಂಢದಲ್ಲಿ ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತುಹಾಕುತ್ತೇವೆ ಮತ್ತು ಎಲ್ಲರಿಗೂ ಉಚಿತ ಗುಣಮಟ್ಟದ ಶಿಕ್ಷಣ ಹಾಗೂ ವೈದ್ಯಕೀಯ ಚಿಕಿತ್ಸೆ ನೀಡುತ್ತೇವೆ ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಆಶ್ವಾಸನೆ ನೀಡಿದ್ದಾರೆ.

ನಾನು ಸಕ್ರಿಯ ರಾಜಕಾರಣದಿಂದ ಹೊರಗಿದ್ದೇನೆ. ಕಳೆದ 5 ದಿನಗಳಿಂದಲೂ ಇದನ್ನೇ ಹೇಳುತ್ತಿದ್ದೇನೆ. ಆದರೆ ನಾನು ಯಾವತ್ತೂ ಕಾಂಗ್ರೆಸ್‌ನ ಭಾಗವಾಗಿಯೇ ಉಳಿಯುತ್ತೇನೆ.
-ಸುನೀಲ್‌ ಜಾಖರ್‌, ಪಂಜಾಬ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ

ಗೋವಾದಲ್ಲಿ ಟಿಎಂಸಿ, ಎಎಪಿ ಪಕ್ಷಾಂತರಿಗಳ ಪಕ್ಷವಾಗಿವೆ. ಈ ಎರಡೂ ಪಕ್ಷಗಳು ಗೆಲ್ಲುವು ಸಾಧ್ಯತೆಯೇ ಇಲ್ಲ. ಆದರೆ ಬಿಜೆಪಿಯೇತರ ಮತಗಳನ್ನು ಒಡೆಯುವ ಕೆಲಸ ಮಾಡಲಿವೆ.
-ಚಿದಂಬರಂ, “ಕೈ’ ನಾಯಕ

 

Advertisement

Udayavani is now on Telegram. Click here to join our channel and stay updated with the latest news.

Next