ಹ್ಯಾಂಗ್ಝೂ: ಪೂಜಾ ವಸ್ತ್ರಾಕರ್ ಅವರ ಅಮೋಘ ಬೌಲಿಂಗ್ ನಿರ್ವಹಣೆಯಿಂದ ಭಾರತೀಯ ವನಿತಾ ಕ್ರಿಕೆಟ್ ತಂಡವು ಬಾಂಗ್ಲಾದೇಶವನ್ನು 8 ವಿಕೆಟ್ಗಳಿಂದ ಸೋಲಿಸಿ ಚೊಚ್ಚಲ ಬಾರಿ ಗೇಮ್ಸ್ನ ಫೈನಲ್ ಹಂತಕ್ಕೇರಿತು.
ಸೋಮವಾರ ಚಿನ್ನದ ಪದಕಕ್ಕಾಗಿ ನಡೆಯುವ ಫೈನಲ್ ಹೋರಾಟದಲ್ಲಿ ಭಾರತವು ಶ್ರೀಲಂಕಾವನ್ನು ಎದುರಿಸಲಿದೆ. ಶ್ರೀಲಂಕಾ ತಂಡವು ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕಿಸ್ಥಾನವನ್ನು ಆರು ವಿಕೆಟ್ಗಳಿಂದ ಸೋಲಿಸಿದೆ. ಪಾಕಿಸ್ಥಾನ ಈ ಹಿಂದೆ 2014ರಲ್ಲಿ ನಡೆದ ಗೇಮ್ಸ್ನಲ್ಲಿ ಚಿನ್ನ ಜಯಿಸಿತ್ತು.
ಕೊನೆ ಹಂತದಲ್ಲಿ ಅಂಜಲಿ ಸರ್ವಾನಿ ಅವರ ಬದಲಿಗೆ ತಂಡಕ್ಕೆ ಸೇರ್ಪಡೆಯಾದ ವಸ್ತ್ರಾಕರ್ ತನ್ನ ನಾಲ್ಕು ಓವರ್ಗಳ ದಾಳಿಯಲ್ಲಿ ಕೆವಲ 17 ರನ್ನಿಗೆ 4 ವಿಕೆಟ್ ಕಿತ್ತು ಬಾಂಗ್ಲಾದ ಕುಸಿತಕ್ಕೆ ಕಾರಣರಾದರು. ಅವರ ದಾಳಿಗೆ ತತ್ತರಿಸಿದ ಬಾಂಗ್ಲಾದೇಶು 17.5 ಓವರ್ಗಳಲ್ಲಿ ಕೇವಲ 51 ರನ್ನಿಗೆ ಆಲೌಟಾ ಯಿತು. ಇದು ಭಾರತ ವಿರುದ್ಧ ಬಾಂಗ್ಲಾದ ನಿಕೃಷ್ಟ ಮೊತ್ತವೂ ಆಗಿದೆ.
ಗೆಲ್ಲಲು ಸುಲಭ ಸವಾಲು ಪಡೆದ ಭಾರತ ತಂಡ 8.2 ಓವರ್ಗಳಲ್ಲಿಯೇ ಗುರಿ ತಲುಪಿತು. ನಾಯಕಿ ಸ್ಮತಿ ಮಂದನಾ ಮತ್ತು 17 ರನ್ ಗಳಿಸಿದ ಶಫಾಲಿ ವರ್ಮ ಔಟಾಗಿದ್ದರು. ಜೆಮಿಮಾ ರಾಡ್ರಿಗಸ್ 20 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
ಬಾಂಗ್ಲಾದೇಶದ ಅಂಪಾಯರಿಂಗ್ ಗುಣಮಟ್ಟದ ಕುರಿತು ಸಾರ್ವಜನಿಕವಾಗಿ ಟೀಕೆಯ ಮಾತುಗಳನ್ನಾಡಿದ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರನ್ನು ಎರಡು ಪಂದ್ಯಕ್ಕೆ ಅಮಾನತು ಮಾಡಿದ್ದರಿಂದ ಅವರು ಈ ಪಂದ್ಯದಲ್ಲೂ ಆಡಿರಲಿಲ್ಲ.