Advertisement

ಕಲಾವಿದರಿಗೆ 5 ಸಾವಿರ ರೂ. ಧನಸಹಾಯಕ್ಕೆ ಮನವಿ

07:06 PM Apr 28, 2020 | Suhan S |

ಸಾಗರ: ಸಂಕಷ್ಟದಲ್ಲಿರುವ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ನವೆಂಬರ್‌ ತಿಂಗಳವರೆಗೂ ಕುಟುಂಬ ಜೀವನ ನಿರ್ವಹಣೆಗಾಗಿ ರಾಜ್ಯ ಸರ್ಕಾರದಿಂದ ತಿಂಗಳಿಗೆ ಕನಿಷ್ಟ 5 ಸಾವಿರ ರೂ. ಧನಸಹಾಯ ಒದಗಿಸುವಂತೆ ಸೋಮವಾರ ಕಲಾವಿದರು ಮತ್ತು ತಂತ್ರಜ್ಞರು ಉಪ ವಿಭಾಗಾಧಿಕಾರಿಗಳ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಕೋವಿಡ್ 19  ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಕಲಾವಿದರು ನಾಟಕ, ಕಿರುಚಿತ್ರ, ಧಾರಾವಾಹಿ ಇನ್ನಿತರಗಳಲ್ಲಿ ಅಭಿನಯಿಸಿ, ಆರ್ಥಿಕ ಸಂಕಷ್ಟ ನಿವಾರಿಸಿಕೊಳ್ಳುವ ಕೆಲಸ ಮಾಡುತ್ತಿದ್ದರು. ಇನ್ನು ಕೆಲವು ಕಲಾವಿದರು ರಂಗಶಿಬಿರ, ನಾಟಕ ನಿರ್ದೇಶನ ಮೂಲಕ ಕ್ರಿಯಾಶೀಲರಾಗಿರುತ್ತಿದ್ದರು. ತಂತ್ರಜ್ಞರು ನಾಟಕ, ಧಾರಾವಾಹಿ, ಕಿರುಚಿತ್ರ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಮ್ಮದೇ ರೀತಿಯಲ್ಲಿ ಬೆಳಕಿನ ವಿನ್ಯಾಸ, ಟ್ಯಾಬ್ಲೋ, ವೇದಿಕೆ ಸಜ್ಜುಗೊಳಿಸುವ ಕೆಲಸ ಮಾಡುವ ಮೂಲಕ ಆರ್ಥಿಕವಾಗಿ ಸ್ವಲ್ಪ ಹಣವನ್ನುಗಳಿಸುತ್ತಿದ್ದರು. ಆದರೆ ಕೊರೊನಾ ಲಾಕ್‌ಡೌನ್‌ ನಿಂದ ಅವೆಲ್ಲ ನಿಂತು ಹೋಗಿದ್ದು ಕಲಾವಿದರು ಮತ್ತು ತಂತ್ರಜ್ಞರ ಬದುಕು ಬೀದಿಗೆ ಬಿದ್ದಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಗಮನ ಹರಿಸಿರುವ ಯಡಿಯೂರಪ್ಪ ನೇತƒತ್ವದ ಸಭೆಯಲ್ಲಿ ಕಲಾವಿದರಿಗೆ 2 ಸಾವಿರ ರೂ. ಸಹಾಯಧನ ನೀಡುವ ಪ್ರಸ್ತಾಪ ಮಾಡಿದ್ದಾಗಿ ತಿಳಿದು ಬಂದಿದೆ. ಆದರೆ ಒಂದು ಬಾರಿ 2 ಸಾವಿರ ರೂ. ಧನಸಹಾಯ ಮಾಡುವುದರಿಂದ ಕಲಾವಿದರು, ತಂತ್ರಜ್ಞರ ಬದುಕು ಹಸನಾಗುವುದಿಲ್ಲ. 2 ಸಾವಿರ ರೂ. ಆರ್ಥಿಕ ಸಹಕಾರ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ನವೆಂಬರ್‌ವರೆಗಾದರೂ ಈಗಾಗಲೆ ಅರ್ಜಿ ಸಲ್ಲಿಸಿರುವ ಕಲಾವಿದರಿಗೆ ಕುಟುಂಬದ ಜೀವನ ನಿರ್ವಹಣೆಗಾಗಿ ಪ್ರತಿತಿಂಗಳು 5 ಸಾವಿರ ರೂ. ಆರ್ಥಿಕ ಸಹಕಾರ ನೀಡುವಂತೆ ಒತ್ತಾಯಿಸಲಾಗಿದೆ.

ಉಮಾಮಹೇಶ್ವರ ಹೆಗಡೆ, ಪುರುಷೋತ್ತಮ ತಲವಾಟ, ಎಚ್‌.ಬಿ. ರಾಘವೇಂದ್ರ, ಸಂತೋಷ ಶೇಟ್‌, ಗುರುಮೂರ್ತಿ ತಲವಾಟ, ಸೌಭಾಗ್ಯಮ್ಮ, ಶೋಭಾ ದೀಕ್ಷಿತ್‌, ಸಿ.ಟಿ. ಬ್ರಹ್ಮಾಚಾರ್‌, ಯೇಸು ಪ್ರಕಾಶ್‌, ಪ್ರಭಾಕರ ಸಾಂಶಿ, ಡಾ| ಸಿ.ಕೆ.ಮೂಕಪ್ಪ ನಾಯ್ಕ, ಪರಮೇಶ್ವರ ದೂಗೂರು ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next