Advertisement

ಗತಕಾಲದ ವೈಭವ ಸಾರುವ ಕೋಟಿ ಚೆನ್ನಯ ಥೀಮ್ ಪಾರ್ಕ್

11:02 AM Apr 18, 2021 | Team Udayavani |

 ಕಾರ್ಕಳ : ಕೆದಕಿದಷ್ಟು ಆಳ ಇತಿಹಾಸವನ್ನು ತನ್ನ ಗರ್ಭದೊಳಗೆ ಹಚ್ಚ ಹಸಿರಾಗಿರಿಸುವ ಪ್ರದೇಶ ತುಳುನಾಡು. ವಿವಿಧ ಧರ್ಮಗಳ ಆಚಾರ ವಿಚಾರಗಳನ್ನು ಉಳಿಸಿ ಹಿರಿಯರು ಬಿಟ್ಟು ಹೋದ ಸಂಸ್ಕೃತಿಗಳನ್ನು ಪೋಷಿಸುತ್ತ ಬಂದಿದೆ.

Advertisement

ಇಂತಹ ತುಳುನಾಡಿನ ಜನಪದ ಚರಿತ್ರೆಯಲ್ಲಿ ಕೇಳಿ ಬರುವ ಅವಳಿ ಸಹೋದರರ ಹೆಸರು ಕೋಟಿ ಚೆನ್ನಯ. ಸುಮಾರು 450 ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಪವಿತ್ರವಾದ ದೇಯಿಬೈದೆತಿಯ ಗರ್ಭದಲ್ಲಿ ಜನ್ಮ ತಾಳಿದ ಕೋಟಿ- ಚೆನ್ನಯ ಸಾಮಾಜಿಕ ವ್ಯವಸ್ಥೆಯಲ್ಲಿ ಇದ್ದಂತಹ ತಾರತಮ್ಯದ ವಿರುದ್ಧ ಹೋರಾಡಿದ ಧೀಮಂತರು. ಇವರ ಜೀವನಗಾಥೆ ತುಳುನಾಡಿನ ಮಣ್ಣಿನಲ್ಲಿ ಇಂದಿಗೂ ಜೀವಂತ. ಹಾಗಾಗಿ ಈ ವೀರ ಪುರುಷರ ಕಥೆಯನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಕೋಟಿ ಚೆನ್ನಯ ಹೆಸರಿನ ಥೀಮ್ ಪಾರ್ಕ್ ಅನ್ನು 2012ನೆಯ ಇಸವಿಯಲ್ಲಿ ನಿರ್ಮಿಸಲಾಯಿತು.

ಓದಿ : ‘ರಿವೈಂಡ್’ ಚಿತ್ರ ವಿಮರ್ಶೆ: ಮಾಡರ್ನ್ ಟೆಕ್ನಿಕ್‌ನಲ್ಲಿ ಕನಸುಗಳ ಹುಡುಕಾಟ

ಕರಾವಳಿ ಭಾಗದಲ್ಲಿ ಕೋಟಿ ಚೆನ್ನಯರನ್ನು ದೇವರು ಎಂದು ಪೂಜಿಸಿಕೊಂಡು ಬಂದಿದ್ದು, ಇವರ ಚರಿತ್ರೆ ಹಾಗೂ ತುಳುನಾಡಿನ ಪರಂಪರೆಗಳನ್ನು “ಥೀಮ್ ಪಾರ್ಕ್ ವಸ್ತು ಸಂಗ್ರಹಾಲಯ”ದಲ್ಲಿ ತುಳುವರ ಸಾಂಪ್ರದಾಯಿಕ ಬದುಕಿನ ಚಿತ್ರಣವನ್ನು ಜನರಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ತುಳುನಾಡಿನ ಐತಿಹಾಸಿಕ ವಸ್ತು ಸಂಗ್ರಹಾಲಯದೊಂದಿಗೆ, 5 ಅಡಿ ಎತ್ತರದ ಪೀಠದ ಮೇಲೆ ಸ್ಥಾಪಿಸಲಾದ ಹತ್ತು ಅಡಿ ಎತ್ತರವುಳ್ಳ ಕೋಟಿ ಚೆನ್ನಯರ ಶಿಲಾ ಮೂರ್ತಿಗಳನ್ನೂ ಈ ಫಾರ್ಕ್ ಹೊಂದಿದೆ. ಕಾರ್ಕಳದ ಶಿಲ್ಪಿ ಜಯರಾಜ ಆಚಾರ್ಯ ಈ ಶಿಲ್ಪಗಳನ್ನು ಕೆತ್ತಿದ್ದಾರೆ.

ಥೀಮ್ ಪಾರ್ಕ್‍ನಲ್ಲಿರುವ ವಸ್ತು ಸಂಗ್ರಹಾಲಯ ಪ್ರವೇಶಿಸುತ್ತಿದ್ದಂತೆ ‘ಗುತ್ತಿನ ಮನೆ ಹೆಬ್ಬಾಗಿಲು ಚಾವಡಿ’ಯನ್ನು ಕಾಣಬಹುದು. ಮೊದಲನೆ ಹಂತದಲ್ಲಿ ಮುಖದ್ವಾರ, ಅದನ್ನು ಅನುಸರಿಸಿ ಕೋಟಿ- ಚೆನ್ನಯರ ಕಲ್ಲಿನ ಮೂರ್ತಿಗಳು, ನಂತರ ಗರೋಡಿ ಮಾದರಿ, ಅದರ ಸುತ್ತ ಆವರಣ. ಆವರಣದಲ್ಲಿ ಕೋಟಿ- ಚೆನ್ನಯರ ಹುಟ್ಟಿನಿಂದ ಅವಸಾನದವರೆಗಿನ ಕಥೆ, ಸಂದೇಶ ಸಾರುವ 34 ತೈಲ ಚಿತ್ರಗಳ ರಚನೆ, ಕೋಟಿ-ಚೆನ್ನಯರ ಬದುಕಿನ ಘಟನಾವಳಿಯನ್ನು ನೆನಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗೋಡೆಗಳ ಮೇಲೆ ತುಳು ಪರಂಪರೆಯ ಕಂಬಳ (ಕ್ರೀಡೆ) ಹಾಗೂ ಇನ್ನಿತರ ಜೀವನಶೈಲಿಗಳ ಚಿತ್ರಗಳನ್ನು ಕಾಣಬಹುದು.

Advertisement

ತುಳು ಸಮುದಾಯಗಳಲ್ಲಿ ಕಾಣಬಹುದಾದಂಥಹ ಕಾವಿ ಕಳೆ, ಹಾಗೂ ಸಾಂಸ್ಕೃತಿಕ ಮನೆಗಳ ರಚನಾಶೈಲಿಯನ್ನೇ ಇಲ್ಲಿನ ವಸ್ತು ಸಂಗ್ರಹಾಲಯದ ರಚನೆಯಲ್ಲಿ ಬಳಸಲಾಗಿದೆ. ಅಲ್ಲದೆ, ಕನ್ನಡ ಹಾಗೂ ತುಳು ಸಂಸ್ಕೃತಿಗಳ ಪ್ರತೀಕಗಳಾಗಿರುವ ‘ನಂದಿಕೇಶ್ವರ’, ‘ವೀರಭದ್ರ’, ‘ಗೊಮ್ಮಟ ಮಲ್ಲ’, ‘ಸಂಸಾರ ಬ್ರಹ್ಮ’, ಹಾಗೂ ಇನ್ನಿತರ ಪುಥ್ಥಳಿಗಳನ್ನೂ, ಹಾಗೂ ದಿನನಿತ್ಯದ ಉಪಯೋಗದ ಹಳೆ ಸಾಮಾಗ್ರಿಗಳು ವಸ್ತು ಸಂಗ್ರಹಾಲಯದ ಆಕರ್ಷಣ ಕೇಂದ್ರವಾಗಿದೆ.

ಕೋಟಿ ಚೆನ್ನಯರ ಬೇಟೆಯ ಪರಿಕರಗಳು, ತರ್ಕತ್ತಿ, ಕೈತಲೆ, ಕಾರತಲೆ, ಕೋಲು, ತಾಮ್ರದ ಬುತ್ತಿ, ಕೌಳಿಗೆ, ಕಂಚಿನ ಉರುಳಿ, ಯುದ್ಧಕ್ಕೆ ಬಳಸುತ್ತಿದ್ದ ಖಡ್ಗ, ಚೆನ್ನಮಣೆ, ಬೀಸುಗತ್ತಿ ಬೇಟೆ ಪರಿಕರಗಳು, ಕಂಚಿನ ಬುಟ್ಟಿ, ಮರದ ಶ್ಯಾವಿಗೆ ಸೇರು, ಮೊಸರು ಕಡಿಯುವ ವಿವಿಧ ಮರದ ಸಲಕರಣೆಗಳು, ಕೊಂಬು, ಕಹಳೆ, ವಾಲಗ, ನದಿಯ ದೋಣಿ, ಎತ್ತಿನ ಗಾಡಿಯ ಚಕ್ರಗಳು, ಹಳೆ ಕಾಲದ ವಿಭಿನ್ನ ಮಾದರಿಯ ವಿಗ್ರಹಗಳು, ಗರಡಿ ಮನೆಗಳ ಜೋಕಾಲಿಗಳು, ಮಂಟಪ, ಗೋಪುರಗಳು ಹೀಗೆ ಕೋಟಿ ಚೆನ್ನಯರ ಕಾಲದಲ್ಲಿದ್ದ ಅತ್ಯಂತ ಪುರಾತನ ವಸ್ತುಗಳು ಗತಕಾಲದ ವೈಭವ ಸಾರುತ್ತಿದೆ.

ಓದಿ :  ಡಿಸೆಂಬರ್‌ನಲ್ಲಿ ರಣಜಿಗೆ ಬಿಸಿಸಿಐ ಯೋಜನೆ: ಇರಾನಿ, ದೇವಧರ್‌, ದುಲೀಪ್‌ ಟ್ರೋಫಿ ಅನುಮಾನ!

ಥೀಮ್ ಪಾರ್ಕ್ ನಲ್ಲಿ ದೈವಾರಾಧನೆಯ ಗುಡಿಯಾದ ‘ಗರೋಡಿ’ಯ ಮಾದರಿಯೂ ಇದ್ದು, ಪೂರ್ತಿ ಸಂಗ್ರಹಾಲಯದ ಪರಿಶೀಲನೆ ನಡೆಸಿದರೆ, ಕೋಟಿ ಚೆನ್ನಯರ ಜೀವನವನ್ನು ಬಿಂಬಿಸುವ ೧೪೩ ಚಿತ್ರಣಗಳನ್ನು ಕಾಣಬಹುದಾಗಿದೆ.

ಇತಿಹಾಸದ ನೆನಪುಗಳನ್ನು ನಾಲ್ಕು ಗೋಡೆಗಳ ನಡುವೆ ಜೀವಂತವಾಗಿಸಿರುವ ಕೋಟಿ ಚೆನ್ನಯ ಥೀಮ್ ಪಾರ್ಕ್ ಕಾರ್ಕಳ ತಾಲೂಕಿನಿಂದ 5 ಕಿಲೋಮೀಟರ್ ದೂರದಲ್ಲಿದ್ದು, ಮಂಗಳೂರು ಮಹಾನಗರದಿಂದ 50 ಕಿಲೋಮೀಟರ್ ದೂರದಲ್ಲಿದೆ. ವಾರದ ಎಲ್ಲ ದಿನವೂ ತೆರೆದಿರುವ ಥೀಮ್ ಪಾರ್ಕ್‌ಗೆ ಬೆಳಿಗ್ಗೆ 9ರಿಂದ ಸಂಜೆ 7ರವರೆಗೂ ಭೇಟಿಗೆ ಉಚಿತ ಪ್ರವೇಶವಿದೆ.

-ಪೂಜಶ್ರೀ ತೋಕೂರು

ಓದಿ :  ಯಡಿಯೂರಪ್ಪ ಆರೋಗ್ಯ ಸ್ಥಿರ: ಆಸ್ಪತ್ರೆಯಲ್ಲಿ ಪುಸ್ತಕ ಓದುತ್ತಿದ್ದಾರೆ ಸಿಎಂ ಬಿಎಸ್ ವೈ

Advertisement

Udayavani is now on Telegram. Click here to join our channel and stay updated with the latest news.

Next