Advertisement

ಸರಳತೆ ಕಲಿಸುವ ಕಲೆ ಜಾನಪದ

01:20 AM May 20, 2019 | Team Udayavani |

ಬೆಂಗಳೂರು: ಜಾನಪದ ಕಲೆ ಅಳವಡಿಸಿಕೊಂಡವರು ಬದುಕಿನಲ್ಲಿ ಸರಳತೆಯ ಪಾಠ ಕಲಿಯುತ್ತಾರೆ ಎಂದು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್‌ ಸದಸ್ಯ ಡಾ.ಅಪ್ಪಗೆರೆ ತಿಮ್ಮರಾಜು ಹೇಳಿದರು.

Advertisement

ರಾಮಾಂಜನೇಯ ಸಾಂಸ್ಕೃತಿಕ ಹಾಗೂ ಯುವ ಕಲಾವೃಂದ ಭಾನುವಾರ ಉದಯಭಾನು ಕಲಾ ಸಂಘದಲ್ಲಿ ಆಯೋಜಿಸಿದ್ದ ಜಾನಪದ ಕಲಾಮೇಳ-2019ರಲ್ಲಿ ಮಾತನಾಡಿದ ಅವರು, ಜಾನಪದ ಕಲೆಯಲ್ಲಿ ಆಡಂಬರವಿಲ್ಲ. ಇದು ಪಾಶ್ಚಿಮಾತ್ಯ ಕಲೆಗಳಂತೆ ಪ್ರಚೋದಿಸದೆ, ಚಿಂತನೆಗೆ ದೂಡುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಊಟದ ರೀತಿ ಬಳಸುವುದು ಬೇಡ, ಉಪ್ಪಿನ ಕಾಯಿಯಂತೆ ಬಳಸೋಣ ಎಂದರು.

ಜಾನಪದ ಕಲೆ ರಾಜರ ಆಸ್ಥಾನದಿಂದ ಸಾಮಾನ್ಯ ಜನರನ್ನು ತಲುಪಿದೆ. ಇಂತಹ ಕಲೆಗಳನ್ನು ಉಳಿಸಿಕೊಳ್ಳುವಲ್ಲಿ ನಾವು ಎಡವುತ್ತಿದ್ದೇವೆ. ಶಾಲೆ, ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಜಾನಪದ ಕಲೆ ಬಳಸುತ್ತಿಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಾನಪದ ಕೇಂದ್ರಗಳಿವೆ ಆದರೂ, ಜನಪದ ಕಲಾವಿದರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ ಎಂದು ಹೇಳಿದರು.

ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ, ಜಾನಪದ ಸಂಸ್ಕೃತಿ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿಕೊಡುವ ಪ್ರಯತ್ನಗಳು ಆಗಬೇಕಿದೆ. ಮಕ್ಕಳಿಗೆ ನಮ್ಮ ಕಲೆ ಮತ್ತು ಜಾನಪದ ಸೊಗಡಿನ ಪರಿಚಯವೇ ಇಲ್ಲ. ಪಠ್ಯ ಪುಸ್ತಕಗಳಲ್ಲೂ ಜಾನಪದ ಕಲೆಯ ಬಗ್ಗೆ ಪರಿಚಯಿಸುವ ಪ್ರಯತ್ನಗಳು ಕಡಿಮೆ ಎಂದರು.

ವಿಶ್ವದ ಹಲವು ದೇಶಗಳು ಆರ್ಥಿಕವಾಗಿ ಸದೃಢವಾಗಿವೆ. ಆದರೆ, ಅಲ್ಲಿ ಅವರದ್ದೇ ಆದ ಸಾಂಸ್ಕೃತಿಕ ಹಿನ್ನೆಲೆ ಇಲ್ಲ. ನಮ್ಮ ಜಾನಪದ ಕಲೆ 5 ಸಾವಿರ ವರ್ಷಗಳಷ್ಟು ಹಳೆಯದಾಗಿದೆ. ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಬಸವನಗುಡಿ ಶಾಸಕ ಎಲ್‌.ಎ. ರವಿಸುಬ್ರಹ್ಮಣ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎಲ್‌.ಭೃಂಗೇಶ್‌, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್‌ ಶೆಟ್ಟಿ, ಪೋಷಕ ನಟ ಸತ್ಯಜಿತ್‌, ಹಿರಿಯ ರಂಗಕರ್ಮಿ ಶಂಕನಾದ ಅರವಿಂದ್‌ ಮತ್ತು ರಾಮಾಂಜನೇಯ ಸಾಂಸ್ಕೃತಿಕ ಹಾಗೂ ಯುವ ಕಲಾವೃಂದ ಸಂಘದ ಅಧ್ಯಕ್ಷ ನರಸಿಂಹರಾಜು ಎಚ್‌. ಮತ್ತಿತರರು ಉಪಸ್ಥಿತರಿದ್ದರು.

ರಂಗಭೂಮಿಯಲ್ಲಿ ಸಾಧನೆ ಮಾಡಿದ ಕಲಾವಿದರು ಮತ್ತು ಸಮಾಜಸೇವಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next