“ಇರುವುದೆಲ್ಲವ ಬಿಟ್ಟು’ ಎಂಬ ಸಿನಿಮಾ ತುಂಬಾ ದಿನಗಳಿಂದ ನಾನಾ ಕಾರಣಗಳಿಗಾಗಿ ಸದ್ದು ಮಾಡುತ್ತಲೇ ಇತ್ತು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ಚಿತ್ರ ಬಿಡುಗಡೆಯಾಗುತ್ತಿದೆ. ಕಾಂತ ಕನ್ನಲ್ಲಿ ಈ ಚಿತ್ರದ ನಿರ್ದೇಶಕರು. ದೇವರಾಜ್ ದಾವಣಗೆರೆ ನಿರ್ಮಾಣದ ಈ ಚಿತ್ರದಲ್ಲಿ ಮೇಘನಾ ರಾಜ್, ತಿಲಕ್ ಹಾಗೂ ಶ್ರೀ ಪ್ರಮುಖ ಪಾತ್ರ ಮಾಡಿದ್ದಾರೆ.
ಕಾಂತ ಕನ್ನಲ್ಲಿ ಮನುಷ್ಯ ಸಂಬಂಧ ಹಾಗೂ ಆತನ ಜೀವನ ಶೈಲಿಯ ಸುತ್ತ ಈ ಸಿನಿಮಾ ಮಾಡಿದ್ದಾರಂತೆ. ಮೂರು ವಿಭಿನ್ನ ಮನಸ್ಥಿತಿಯ ವ್ಯಕ್ತಿಗಳ ಮೂಲಕ ಕಥೆಯನ್ನು ಕಟ್ಟಿಕೊಟ್ಟಿದ್ದಾರಂತೆ. ಒಬ್ಟಾತ ಜೀವನವನ್ನು ಎಷ್ಟು ಸಾಧ್ಯವೋ ಅಷ್ಟು ಎಂಜಾಯ್ ಮಾಡಬೇಕೆಂಬ ಮನಸ್ಥಿತಿಯವನಾದರೆ, ಮತ್ತೂಬ್ಟಾಕೆ ತನಗೆ ಕುಟುಂಬ, ಸಂಬಂಧಗಳಿಗಿಂತ ಸಾಧನೆ ಮುಖ್ಯ ಎಂದುಕೊಂಡಿರುವವಳು, ಈ ನಡುವೆಯೇ ಮತ್ತೂಬ್ಬ ತನ್ನದೇ ಆದ ಒಂದು ಸುಂದರ ಕುಟುಂಬ ಬೇಕೆಂದು ಕನಸು ಕಾಣುತ್ತಿರುವವನು … ಈ ತರಹ ವಿಭಿನ್ನ ಮನಸ್ಥಿತಿಯನ್ನಿಟ್ಟುಕೊಂಡು ಈ ಸಿನಿಮಾ ಕಟ್ಟಿಕೊಟ್ಟಿದ್ದಾಗಿ ಹೇಳಿಕೊಂಡರು ನಿರ್ದೇಶಕ ಕಾಂತ ಕನ್ನಲ್ಲಿ.
ಇನ್ನು, ಇತ್ತೀಚೆಗೆ ಚಿತ್ರತಂಡ “ಇರುವುದೆಲ್ಲವ ಬಿಟ್ಟು’ ಎಂಬ ಸ್ಪರ್ಧೆಯೊಂದನ್ನು ಆಯೋಜಿಸಿತ್ತಂತೆ. ಒಂದಷ್ಟು ಮಂದಿಯಲ್ಲಿ, “ನೀವು ನಿಮ್ಮ ನಾಳಿನ ಎಲ್ಲಾ ಕಾರ್ಯಗಳನ್ನು ಬಿಟ್ಟು ಕುಟುಂಬ ಸಮೇತ ಸಿನಿಮಾ ನೋಡಲು ಬರಬೇಕೆಂಬುದು’ ಆ ಸ್ಪರ್ಧೆ. ಅದರಂತೆ ಒಂದಷ್ಟು ಮಂದಿ ಭಾನುವಾರದ ತಮ್ಮ ಕಾರ್ಯಗಳನ್ನೆಲ್ಲಾ ಬದಿಗೊತ್ತಿ ಕುಟುಂಬ ಸಮೇತರಾಗಿ “ಇರುವುದೆಲ್ಲವ ಬಿಟ್ಟು’ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗಿಯಾದರಂತೆ. ಸಿನಿಮಾ ನೋಡಿದ ಪ್ರತಿಯೊಬ್ಬರಿಂದಲೂ, “ಈ ಸಿನಿಮಾ ನಮ್ಮ ಜೀವನಕ್ಕೆ ತುಂಬಾ ಹತ್ತಿರವಾಗಿದೆ’ ಎಂಬ ಮಾತುಗಳು ಕೇಳಿಬಂದುವಂತೆ. ಇದೇ ತರಹದ ಪ್ರತಿಕ್ರಿಯೆ ಎಲ್ಲರಿಂದಲೂ ಸಿಗುತ್ತದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.
ನಿರ್ಮಾಪಕ ದೇವರಾಜ್ ಕೂಡಾ ಸಿನಿಮಾ ಚೆನ್ನಾಗಿ ಮೂಡಿಬಂದ ಬಗ್ಗೆ ಖುಷಿ ಹಂಚಿಕೊಂಡರು. ನಿರ್ದೇಶಕರ ಕನಸಿಗೆ ಜೀವ ತುಂಬಿದ್ದಾಗಿ ಹೇಳಿಕೊಂಡ ಅವರು, “ಚಿತ್ರೀಕರಣದ ವೇಳೆ ಛಾಯಾಗ್ರಾಹಕರು ತುಂಬಾ ಶಾಟ್ಸ್ ತೆಗೆಯುತ್ತಿದ್ದರು. ಆಗ ನನಗೆ, “ಯಾಕಪ್ಪಾ ಇಷ್ಟೊಂದು ತೆಗೆಯುತ್ತಾರೆ’ ಎನಿಸುತ್ತಿತ್ತು. ಆದರೆ ಈಗ ಸಿನಿಮಾ ನೋಡಿದ ಮೇಲೆ ಅವರ ಕೆಲಸದ ಬಗ್ಗೆ ಖುಷಿಯಾಗಿದೆ. ಛಾಯಾಗ್ರಣದ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ಯವಾಗುತ್ತಿದೆ’ ಎಂದರು. ಇನ್ನು ಚಿತ್ರ ಕ್ಯಾಲಿಫೋರ್ನಿಯಾದಲ್ಲಿ ಬಿಡುಗಡೆಯಾಗುತ್ತಿರುವ ಬಗ್ಗೆ ಖುಷಿಹಂಚಿಕೊಂಡರು ದೇವರಾಜ್.
ನಾಯಕರಾಗಿ ಕಾಣಿಸಿಕೊಂಡಿರುವ ಶ್ರೀಗೆ ತಮ್ಮ ಮೊದಲ ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿ. “ಹಿಂದೆ ನಾನು ಕೆ.ಜಿ.ರಸ್ತೆಯ ಥಿಯೇಟರ್ಗಳಲ್ಲಿ ಸಿನಿಮಾ ನೋಡುತ್ತಿದ್ದೆ. ಈಗ ನನ್ನ ಸಿನಿಮಾ ಅಲ್ಲೇ ಬಿಡುಗಡೆಯಾಗುತ್ತಿದೆ’ ಎಂದು ಸಂತಸಗೊಂಡರು. ನಟಿ ಮೇಘನಾ ರಾಜ್ಗೆ ಸಿಕ್ಕ ವಿಭಿನ್ನ ಪಾತ್ರಗಳಲ್ಲಿ “ಇರುವುದೆಲ್ಲವ ಬಿಟ್ಟು’ ಚಿತ್ರ ಕೂಡಾ ಒಂದಂತೆ. ಇಲ್ಲಿ ಅವರು ಪೂರ್ವಿ ಎಂಬ ಪಾತ್ರ ಮಾಡಿದ್ದು, ಸಾಧನೆಯ ಹಿಂದೆ ಬಿದ್ದು ಸಂಬಂಧಗಳನ್ನು ಕಳೆದುಕೊಳ್ಳುವ ಸುತ್ತ ಅವರ ಪಾತ್ರ ಸಾಗಲಿದೆಯಂತೆ. ಚಿತ್ರದಲ್ಲಿ ನಟಿಸಿದ ತಿಲಕ್, ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್, ಛಾಯಾಗ್ರಾಹಕ ವಿಲಿಯಂ ತಮ್ಮ ಅನುಭವ ಹಂಚಿಕೊಂಡರು.