Advertisement

ಪರದೆಯಲಿ ಮೂಡಲಿದೆ ಸೇನೆಯ ಸರ್ಜಿಕಲ್‌ ಸ್ಟ್ರೈಕ್‌

07:10 AM Sep 29, 2017 | Team Udayavani |

ಹೊಸದಿಲ್ಲಿ: ನಮ್ಮ ಸೇನೆಯ ಪರಾಕ್ರಮವನ್ನು ಜಗತ್ತಿಗೆ ತೋರಿಸಿಕೊಟ್ಟ ಸರ್ಜಿಕಲ್‌ ಸ್ಟ್ರೈಕ್‌ ನಡೆದು ಇಂದಿಗೆ ಸರಿಯಾಗಿ ಒಂದು ವರ್ಷವಾಯಿತು. ಕಳೆದ ವರ್ಷ ಸೆ. 28ರಂದು ಮಧ್ಯರಾತ್ರಿ  ದಾಟಿದ ಬಳಿಕ ಭಾರತದ ದಿಟ್ಟ ಕಮಾಂಡೋಗಳು ಪಾಕಿಸ್ಥಾನದ ನೆಲದೊಳಕ್ಕೆ ನುಗ್ಗಿ 7 ಉಗ್ರ ಶಿಬಿರಗಳನ್ನು ನಾಶ ಗೊಳಿಸಿ ಹಲವು ಪಾಕ್‌ ಯೋಧರನ್ನು ಮತ್ತು ಉಗ್ರರನ್ನು ಸದೆಬಡಿದು ವಾಪಸಾದ ಈ ಕಾರ್ಯಾಚರಣೆ ದೇಶದ ಸೇನಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಾಧನೆ  ಎಂದೇ ಪರಿಗಣಿಸಲ್ಪಟ್ಟಿದೆ.
 
ಕಾಶ್ಮೀರಕ್ಕೆ  ನುಗ್ಗಿ  ಉಗ್ರರನ್ನು ರವಾನಿಸಲು ಚಿಮ್ಮು ಹಲಗೆಗಳಂತೆ ಕಾರ್ಯನಿರ್ವಹಿಸುತ್ತಿದ್ದ ಶಿಬಿರಗಳನ್ನು ಗುರಿ ಮಾಡಿಕೊಂಡು ನಡೆಸಿದ ಈ ಕಾರ್ಯಾಚರಣೆಯಲ್ಲಿ ಎಷ್ಟು ಉಗ್ರರು ಮತ್ತು ಪಾಕ್‌ ಯೋಧರು ಸತ್ತಿದ್ದಾರೆ ಎನ್ನುವ ಅಧಿಕೃತ ಮಾಹಿತಿ ಇನ್ನೂ ಬಹಿರಂಗೊಂಡಿಲ್ಲ. ಆದರೆ ಸುಮಾರು 80ರಷ್ಟು ಉಗ್ರರು ಸತ್ತಿರುವ ಸಾಧ್ಯತೆ ಇದೆ. ಸತ್ತವರ ಶವಗಳನ್ನು ಪಾಕ್‌ ಸರಕಾರ ಲಾರಿಗಳಲ್ಲಿ ತುಂಬಿಸಿಕೊಂಡು ಹೋಗಿತ್ತು. 

Advertisement

2015 ಸೆ. 19ರಂದು  ಜೈಶ್‌ ಉಗ್ರರು ಉರಿಯ ಸೇನಾ ನೆಲೆಗೆ ನುಗ್ಗಿ ಮಲಗಿದ್ದ ಯೋಧರ ಶಿಬಿರದೊಳಗೆ ಗ್ರನೇಡ್‌ ಎಸೆದು ಮತ್ತು ಗುಂಡಿನ ದಾಳಿ ಮಾಡಿ 18 ಯೋಧರನ್ನು ಸಾಯಿಸಿದ್ದರು. ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಸೇನೆ ನಡೆಸಿದ ಕಾರ್ಯಾಚರಣೆ ಸರ್ಜಿಕಲ್‌ ಸ್ಟ್ರೈಕ್‌. ಅಷ್ಟರ ತನಕ ಇಸ್ರೇಲ್‌ ಮತ್ತು ಅಮೆರಿಕ ನಡೆಸಿದ  ಈ ಮಾದರಿಯ ಸಾಹಸವನ್ನು ಓದಿ ಗೊತ್ತಿದ್ದ ನಮಗೆ ನಮ್ಮ ಸೇನೆಯೂ ಇಂತಹ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ ಎನ್ನುವುದನ್ನು ತೋರಿಸಿಕೊಟ್ಟ ಕಾರ್ಯಾಚರಣೆಯಿದು. ಸರ್ಜಿಕಲ್‌ ಸ್ಟ್ರೈಕ್‌ ಕಾರ್ಯಾಚರಣೆಯ ಬಳಿಕ ಭಾರತದ ಸೇನೆಯ ಕುರಿತು ಜಗತ್ತಿಗಿದ್ದ ಗ್ರಹಿಕೆ ಬದಲಾಗಿದೆ. 

ಸರ್ಜಿಕಲ್‌ ಸ್ಟ್ರೈಕ್‌ ಬಳಿಕ ನಡೆದ ರಾಜಕೀಯ ಕೆಸರೆರಚಾಟದ ಇನ್ನೊಂದು ದೊಡ್ಡ ಕತೆ. ವಿಪಕ್ಷಗಳಿಗೆ ಆರಂಭದಲ್ಲಿ ನಮ್ಮ ಸೇನೆ ಇಂತಹದ್ದೊಂದು ಕಾರ್ಯಾಚರಣೆ ನಡೆಸಿದ ಎನ್ನುವುದನ್ನು ನಂಬಲು ಸಾಧ್ಯವಾಗಿರಲಿಲ್ಲ. ಕಾರ್ಯಾಚರಣೆ ನಡೆದಿರುವುದು ಸ್ಪಷ್ಟವಾದ ಬಳಿಕ ಇದರಿಂದ ಪ್ರಧಾನಿ ಮೋದಿಯ ಜನಪ್ರಿಯತೆ ಹೆಚ್ಚಾಗುತ್ತಿದೆ ಎಂದು ಆತಂಕಕ್ಕೊಳಗಾದ ವಿಪಕ್ಷಗಳು ಸೇನೆ ಮತ್ತು ಸರಕಾರವನ್ನು ಯದ್ವಾತದ್ವಾ ಟೀಕಿಸಿದ್ದವು. ದೇಶ ಹೆಮ್ಮೆ ಪಡಬೇಕಾದ ಕಾರ್ಯಾಚರಣೆ ಕ್ಷುಲ್ಲಕ ರಾಜಕೀಯ ವಿಚಾರವಾಗಿ ಬದಲಾದದ್ದು ದುರಂತ. ದೇಶದ ಹಿತಾಸಕ್ತಿಗಿಂತಲೂ ಓಟಿನ ಲೆಕ್ಕಾಚಾರವೇ ಮುಖ್ಯ ಎನ್ನುವ ರಾಜಕೀಯ ಪಕ್ಷಗಳ ಅಸಲಿ ಮುಖವೂ ಈ ಕಾರ್ಯಾಚರಣೆಯಿಂದಾಗಿ ಬಯಲಾಯಿತು.

ಆದರೆ ಸರ್ಜಿಕಲ್‌ ಸ್ಟ್ರೈಕ್‌ ಪಾಕ್‌ಗೆ ಯಾವ ಮಟ್ಟದ ಆಘಾತ ನೀಡಿದೆ ಎಂದರೆ ಈಗಲೂ ಅದಕ್ಕೆ ಹೇಗೆ ಈ ಕಾರ್ಯಾಚರಣೆ ನಡೆಯಿತು ಎನ್ನುವುದೇ ಅರ್ಥವಾಗಿಲ್ಲ. ಆಗಿರುವ ಮುಖಭಂಗದಿಂದಾಗಿ ಭಾರತದ ವಿರುದ್ಧ ಪ್ರತಿಭಟಿಸುವ ಧೈರ್ಯವೂ ಇಲ್ಲದಂತಾಗಿದೆ. ಪ್ರತಿಭಟಿಸಿದರೆ ಸರ್ಜಿಕಲ್‌ ಸ್ಟ್ರೈಕ್‌ ನಡೆದಿರುವುದನ್ನು ಒಪ್ಪಿಕೊಂಡಂತಾಗುತ್ತದೆ. ಹೀಗಾಗಿ ಪಾಕ್‌ ಆದ ಗಾಯವನ್ನು ನೆಕ್ಕಿಕೊಂಡು ಸುಮ್ಮನಾಗಿದೆ. ವಿಶೇಷವೆಂದರೆ ಯಾವ ದೇಶ ಕೂಡ ಈ ಸಂದರ್ಭದಲ್ಲಿ  ಪಾಕಿಸ್ಥಾನದ ನೆರವಿಗೆ ಬಂದಿಲ್ಲ. ಎಲ್ಲ ಬಿಟ್ಟು ಪರಮಾಪ್ತ ಗೆಳೆಯ ಎಂದು ನಂಬಿದ್ದ ಚೀನ ಕೂಡ ಭಾರತದ ವಿರುದ್ಧ ಒಂದೇ ಒಂದು ಹೇಳಿಕೆ ನೀಡಲಿಲ್ಲ. ಇನ್ನು ಭಾರತವನ್ನು ಕೆಣಕುವುದು ಸುಲಭದ ಮಾತಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟ ಕಾರ್ಯಾಚರಣೆ ಎನ್ನುವ ಕಾರಣಕ್ಕೂ ಸರ್ಜಿಕಲ್‌ ಸ್ಟ್ರೈಕ್‌ ಮುಖ್ಯವಾಗುತ್ತದೆ.
 
ಸಹಜವಾಗಿಯೇ ಈ ಘಟನೆ ಸಿನೆಮಾ ನಿರ್ಮಾಪಕರನ್ನು  ಮತ್ತು ಲೇಖಕರನ್ನು ಆಕರ್ಷಿಸಿದೆ. ಶೌರ್ಯ, ದೇಶಪ್ರೇಮ, ಸಾಹಸ ಮತ್ತಿತರ ಅಂಶಗಳನ್ನೊಳಗೊಂಡಿರುವ ಸರ್ಜಿಕಲ್‌ ಸ್ಟ್ರೈಕ್‌ ಕುರಿತಾದ “ಉರಿ’ ಚಿತ್ರ ಹಿಂದಿಯಲ್ಲಿ ತಯಾರಾಗಲಿದೆ. ಇನ್ನೊಂದು ವರ್ಷದಲ್ಲಿ ಈ ಚಿತ್ರ ನಿಮ್ಮ ಊರಿನ ಚಿತ್ರಮಂದಿರಗಳಲ್ಲಿರಬಹುದು. ಇಷ್ಟು ಮಾತ್ರವಲ್ಲದೆ ಸರ್ಜಿಕಲ್‌ ಸ್ಟ್ರೈಕ್‌  ಮೇಲೆ ಮೂವರು ಲೇಖಕರು ಈಗಾಗಲೇ ಪುಸ್ತಕಗಳನ್ನು ಬರೆದಿದ್ದಾರೆ. ಈ ಪೈಕಿ ನಿತಿನ್‌ ಗೋಖಲೆ ಬರೆದಿರುವ “ಇನ್‌ ಸೆಕ್ಯುರಿಂಗ್‌ ಇಂಡಿಯಾ ದ ಮೋದಿ ವೇ : ಪಠಾಣ್‌ಕೋಟ್‌, ಸರ್ಜಿಕಲ್‌ ಸ್ಟ್ರೈಕ್ಸ್‌ ಆ್ಯಂಡ್‌ ಮೋರ್‌’ಎಂಬ ಪುಸ್ತಕ ಶುಕ್ರವಾರ  ದಿಲ್ಲಿಯಲ್ಲಿ ಬಿಡುಗಡೆಯಾಗಲಿದೆ.  

ಶಿವ ಅರೂರ್‌ ಮತ್ತು ರಾಹುಲ್‌ ಸಿಂಗ್‌ ಎಂಬ ಇಬ್ಬರು ಲೇಖಕರು ಜಂಟಿಯಾಗಿ “ಇಂಡಿಯಾಸ್‌ ಮೋಸ್ಟ್‌ ಫಿಯರ್‌ಲೆಸ್‌ : ಟ್ರಾ ಸ್ಟೋರೀಸ್‌ ಆಫ್ ಮೋಡರ್ನ್ ಮಿಲಿಟರಿ ಹೀರೊಸ್‌’ಎಂಬ ಪುಸ್ತಕ ಬರೆದಿದ್ದಾರೆ. ಗೋಖಲೆ ತನ್ನ ಪುಸ್ತಕದಲ್ಲಿ ಸೇನೆಯ ಸಾಹಸದ ಜತೆಗೆ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತಿತರ ಪ್ರಮುಖ ವಿಚಾರಗಳ ಮೇಲೂ ಬೆಳಕು ಚೆಲ್ಲಿದ್ದಾರೆ. ಸಿಂಗ್‌, ಅರೂರ್‌ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಕಮಾಂಡರ್‌ ಒಬ್ಬರನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಾಚರಣೆಯನ್ನು ನಿರೂಪಿಸಿದ್ದಾರೆ. 

Advertisement

ಬದಲಾದ ಸಿದ್ಧಸೂತ್ರ 
ಪಾಕ್‌ ಆಕ್ರಮಿತ ಕಾಶ್ಮೀರದೊಳಗೆ 

ನುಗ್ಗಿ ನಡೆಸಿದ ಈ ಕಾರ್ಯಾಚರಣೆ ಪಾಕಿಸ್ಥಾನದ ಜತೆಗೆ ಭಾರತ ವ್ಯವಹರಿಸುವ ರೀತಿಯನ್ನು ಕೂಡ ಬದಲಾಯಿಸಿದೆ.
ದಶಕಗಳಿಂದ ಭಾರತ ಮತ್ತು ಪಾಕ್‌ ರಾಜತಾಂತ್ರಿಕತೆಯ ಸಿದ್ಧಸೂತ್ರವೊಂದನ್ನು ಅನುಸರಿಸುತ್ತಿದ್ದವು. ಪ್ರತಿ ಸಲ ದೊಡ್ಡ ಮಟ್ಟದ ಉಗ್ರ ದಾಳಿಯಾದಾಗ ಭಾರತ ಸರಕಾರ ಪಾಕಿಸ್ಥಾನವನ್ನು ದೂಷಿಸುತವುದು, ರಾಜತಾಂತ್ರಿಕ ಸಂಬಂಧವನ್ನು ಮೊಟಕುಗೊಳಿಸುವುದು, ಪಾಕ್‌ ಹೈಕಮಿಶರನ್ನು ಕರೆಸಿಕೊಂಡು ಪ್ರತಿಭಟನೆ ಸಲ್ಲಿಸುವುದು ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪಾಕ್‌ ವಿರುದ್ಧ  ದೋಷಾರೋಪ ಮಾಡುವುದು ಇದೇ ಈ ಸಿದ್ಧಸೂತ್ರ. ಕೆಲ ಸಮಯದ ಬಳಿಕ ಎಲ್ಲ ಮರೆತು ಹೋಗಿ ಮೊದಲಿನಂತೆ ಮತ್ತು ಮಾತುಕತೆ ಶುರುವಾಗುತ್ತಿತ್ತು. ಮತ್ತೂಮ್ಮೆ ಉಗ್ರರು ಬಂದೆರಗಿದಾಗಲೇ ಸರಕಾರಕ್ಕೆ ಎಚ್ಚರವಾಗುತ್ತಿತ್ತು. ಭಾರತದಿಂದ ಇಷ್ಟು ಮಾತ್ರ ಮಾಡಲು ಸಾಧ್ಯ ಎಂಬ ಭಂಡ ಧೈರ್ಯದಲ್ಲಿ ಪಾಕ್‌ ಕೂಡ ಉಗ್ರರನ್ನು ತರಬೇತಿ ನೀಡಿ ಕಳುಹಿಸುತ್ತಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next