Advertisement

ದೇಶದ ಸೇನಾ ಇತಿಹಾಸದಲ್ಲೇ ಇದೇ ಮೊದಲು: ಸೇನೆಗೀಗ ಎಂಜಿನಿಯರ್‌ ಸಾರಥ್ಯ

12:58 PM Apr 20, 2022 | Team Udayavani |

ಭಾರತೀಯ ಭೂಸೇನೆಯ 29ನೇ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಮನೋಜ್‌ ಪಾಂಡೆ ಅವರು ಇದೇ 30ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 13 ಲಕ್ಷ ಯೋಧರಿರುವ ಬಲಿಷ್ಠ ಪಡೆಯ ನೇತೃತ್ವ ವಹಿಸುತ್ತಿರುವ ಮೊದಲ ಎಂಜಿನಿಯರ್‌ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ದೇಶದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಜಿನಿಯರ್‌ ವಿಭಾಗದ ಅಧಿಕಾರಿಯೊಬ್ಬರು ಭೂಸೇನೆಯ ಮುಖ್ಯಸ್ಥ(ಚೀಫ್ ಆಫ್ ದಿ ಆರ್ಮಿ ಸ್ಟಾಫ್) ಹುದ್ದೆಗೆ ಏರಿದ್ದಾರೆ.

Advertisement

ಈವರೆಗೆ ಯಾವುದೇ ಎಂಜಿನಿಯರ್‌ ಏಕೆ ಈ ಹುದ್ದೆಗೇರಿಲ್ಲ?
ಭಾರತದಲ್ಲಿ ಯಾವಾಗಲೂ ಇನ್‌ಫೆಂಟ್ರಿ, ಆರ್ಮರ್ಡ್‌ ಕಾರ್ಪ್ಸ್ ಅಥವಾ ಆರ್ಟಿಲರಿ ವಿಭಾಗದಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳೇ ಸೇನಾ ಮುಖ್ಯಸ್ಥರಾಗಿ ನೇಮಕಗೊಳ್ಳುತ್ತಾರೆ. ಅಂದರೆ ಶತ್ರುಸೇನೆಯೊಂದಿಗೆ ಯುದ್ಧಭೂಮಿಯಲ್ಲಿ ಸೆಣಸಾಡುವಂಥ ವಿಭಾಗದಿಂದ ಬಂದವರಿಗೇ ಆದ್ಯತೆ ನೀಡಲಾಗುತ್ತದೆ. ಈ ಹಿಂದಿನ 28 ಸೇನಾ ಮುಖ್ಯಸ್ಥರ ಪೈಕಿ 17 ಮಂದಿ ಇನ್‌ಫೆಂಟ್ರಿ ವಿಭಾಗದಿಂದ ಬಂದಿದ್ದರೆ, 6 ಮಂದಿ ಆರ್ಮರ್ಡ್‌ ಕಾರ್ಪ್ಸ್ ನಿಂದ, 5 ಮಂದಿ ಆರ್ಟಿಲರಿ ವಿಭಾಗದಿಂದ ಬಂದವರು. ಎಂಜಿನಿಯರ್‌ ವಿಭಾಗದ ಅಧಿಕಾರಿಯೊಬ್ಬರು ಉನ್ನತ ಹುದ್ದೆಗೆ ಏರುತ್ತಿರುವುದು ಇದೇ ಮೊದಲು.

ಏನಿದು ಕಾರ್ಪ್ಸ್ ಆಫ್ ಎಂಜಿನಿಯರ್ಸ್‌?
ಕಾರ್ಪ್ಸ್ ಆಫ್ ಎಂಜಿನಿಯರ್ಸ್‌ ಎನ್ನುವುದು ಭಾರತೀಯ ಸೇನೆಯ ಅತ್ಯಂತ ಹಳೆಯ ವಿಭಾಗಗಳಲ್ಲಿ ಒಂದು. 1932ರ ನವೆಂಬರ್‌ 18ರಂದು ಗ್ರೂಪ್‌ ಆಫ್ ಮದ್ರಾಸ್‌, ಬೆಂಗಾಲ್‌ ಮತ್ತು ಬಾಂಬೆ ಸ್ಯಾಪರ್ಸ್‌ ಅನ್ನು ವಿಲೀನಗೊಳಿಸಿ ರಚಿಸಲಾದ ಹೊಸ ವಿಭಾಗವೇ ಕಾರ್ಪ್ಸ್ ಆಫ್ ಎಂಜಿನಿಯರ್ಸ್‌. ಯುದ್ಧದ ಸಂದರ್ಭಗಳಲ್ಲಿ ಸೇತುವೆಗಳು, ಟ್ರ್ಯಾಕ್‌ಗಳು ಹಾಗೂ ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಿ, ಯೋಧರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವವರೇ ಈ ಎಂಜಿನಿಯರ್‌ಗಳು. ಅಷ್ಟೇ ಅಲ್ಲ, ನೆಲಬಾಂಬ್‌ಗಳು, ಸ್ಫೋಟಕಗಳನ್ನು ಇಟ್ಟು, ಸೇತುವೆಗಳನ್ನು ಧ್ವಂಸಗೈದು ಶತ್ರು ಸೇನೆಯ ಸಂಚಾರಕ್ಕೆ ಅಡ್ಡಿ ಉಂಟುಮಾಡುವ ಕೆಲಸವನ್ನೂ ಇವರು ಮಾಡುತ್ತಾರೆ. ವಿಶ್ವಸಂಸ್ಥೆಯ ಕಾರ್ಯಾಚರಣೆಗಳ ಸಂದರ್ಭಗಳಲ್ಲಿ ಈ ಎಂಜಿನಿಯರ್‌ಗಳನ್ನು ವಿದೇಶಗಳಲ್ಲೂ ನಿಯೋಜಿಸಲಾಗುತ್ತದೆ. ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲೂ ಇವರ ಸೇವೆಯನ್ನು ಪಡೆಯಲಾಗುತ್ತದೆ.

ಎಂಜಿನಿಯರ್‌ಗಳ ಸಾಧನೆ
47-48ರ ಭಾರತ-ಪಾಕಿಸ್ಥಾನ ಯುದ್ಧದ ಸಮಯದಲ್ಲಿ ಯುದ್ಧ ಟ್ಯಾಂಕ್‌ನ ಮುಂಭಾಗದಲ್ಲಿ ತೆವಳುತ್ತಾ ಸಾಗಿ, ಶತ್ರುಗಳು ನೆಟ್ಟಿದ್ದ ನೆಲಬಾಂಬುಗಳ ನಡುವೆಯೂ ನಮ್ಮ ಯೋಧರ ಸಂಚಾರಕ್ಕೆ ದಾರಿ ಮಾಡಿಕೊಟ್ಟಿದ್ದು ಎಂಜಿನಿಯರ್‌ ವಿಭಾಗದ ಮೇಜರ್‌ ಆರ್‌.ಆರ್‌. ರಾಣೆ. ಇವರಿಗೆ ಭಾರತ ಸರಕಾರವು ಪರಮವೀರ ಚಕ್ರ ನೀಡಿ ಗೌರವಿಸಿದೆ.
1971ರಲ್ಲಿ ಬಸಂತಾರ್‌ ಯುದ್ಧದ ಸಂದರ್ಭದಲ್ಲಿ 9 ಎಂಜಿನಿಯರ್‌ ರೆಜಿಮೆಂಟ್‌ನ ಯೋಧರು ತೋರಿದ ದಿಟ್ಟತನಕ್ಕಾಗಿ ಒಂದು ಮಹಾವೀರ ಚಕ್ರ, ಮೂರು ವೀರ ಚಕ್ರ, 4 ಸೇನಾ ಪದಕಗಳು ಮತ್ತು ಮೂರು ಮೆನ್ಶನ್‌ ಇನ್‌ ಡಿಸ್‌ಪ್ಯಾಚ್‌ ಗೌರವಗಳು ಸಂದಿವೆ.

ಸಾಮರ್ಥ್ಯವೇ ಮಾನದಂಡ
ಒಬ್ಬ ವ್ಯಕ್ತಿಯು ಯಾವುದೇ ವಿಭಾಗ (ಆರ್ಮ್)ದಿಂದ ಬಂದಿದ್ದರೂ ಸೇನಾ ಕಮಾಂಡರ್‌ ಮಟ್ಟಕ್ಕೆ ಏರಿದರೆಂದರೆ ಅವರು ಸೇನೆಯನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ ಎಂಬುದನ್ನು ಇದು ಬಿಂಬಿಸು ತ್ತದೆ. ಈಗ ಎಂಜಿನಿಯರಿಂಗ್‌ ವಿಭಾಗದ ಲೆ| ಜ| ಮನೋಜ್‌ ಪಾಂಡೆ ಅವರು ಭೂಸೇನಾ ಮುಖ್ಯಸ್ಥ ಹುದ್ದೆಗೆ ಏರಿದ್ದರೆ, ಈ ಹಿಂದೆ 2007 ರಲ್ಲಿ ಹೆಲಿಕಾಪ್ಟರ್‌ ಪೈಲಟ್‌ ಆಗಿದ್ದ ಏರ್‌ ಚೀಫ್ ಮಾರ್ಷಲ್‌ ಫಾಲಿ ಹೋಮಿ ಮೇಜರ್‌ ಅವರು ವಾಯು ಪಡೆ ಮುಖ್ಯಸ್ಥ ರಾಗಿ ನೇಮಕಗೊಂಡಿದ್ದರು. ಅಲ್ಲಿಯವರೆಗೆ ಅವರು ಕೇವಲ ಯುದ್ಧ ವಿಮಾನದ ಪೈಲಟ್‌ ಆಗಿಯಷ್ಟೇ ಕಾರ್ಯನಿರ್ವಹಿಸಿದ್ದರು.

Advertisement

ಜ| ಮನೋಜ್‌ ಪಾಂಡೆ ನಿಭಾಯಿಸಿದ ಜವಾಬ್ದಾರಿಗಳು
ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ಜ| ಪಾಂಡೆ ಅವರು 1982ರ ಡಿಸೆಂಬರ್‌ನಲ್ಲಿ ಸೇನೆಯ ಕಾರ್ಪ್‌Õ ಆಫ್ ಎಂಜಿನಿಯರ್ಸ್‌(ದಿ ಬಾಂಬೆ ಸ್ಯಾಪರ್ಸ್‌)ಗೆ ಸೇರಿದರು.

ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿಯ ಪಲ್ಲನ್‌ವಾಲಾ ಸೆಕ್ಟರ್‌ನಲ್ಲಿ “ಆಪರೇಷನ್‌ ಪರಾಕ್ರಮ’ ಕಾರ್ಯಾಚರಣೆ ವೇಳೆ ಎಂಜಿನಿಯರ್‌ ರೆಜಿಮೆಂಟ್‌ ಅನ್ನು ಮುನ್ನಡೆಸಿದ ಹಿರಿಮೆ ಅವರದ್ದು.
ಎಲ್‌ಒಸಿಯಲ್ಲಿನ ಇನ್‌ಫೆಂಟ್ರಿ ಬ್ರಿಗೇಡ್‌, ವೆಸ್ಟರ್ನ್ ಥಿಯೇಟರ್‌ನ ಎಂಜಿನಿಯರ್‌ ಬ್ರಿಗೇಡ್‌ ಅನ್ನು ಮುನ್ನಡೆಸಿದ ಅನುಭವವೂ ಅವರಿಗಿದೆ.
ಲಡಾಖ್‌ ವಲಯದಲ್ಲಿ ಮೌಂಟನ್‌ ಡಿವಿಷನ್‌, ಈಶಾನ್ಯ ದಲ್ಲಿ ಕಾರ್ಪ್‌Õ ವಿಭಾಗದ ನೇತೃತ್ವವನ್ನೂ ಅವರು ವಹಿಸಿದ್ದರು.

ಪೂರ್ವ ಕಮಾಂಡ್‌ನ‌ ನೇತೃತ್ವ ವಹಿಸುವ ಮುನ್ನ ಅವರು ಅಂಡಮಾನ್‌ ಮತ್ತು ನಿಕೋಬಾರ್‌ ಕಮಾಂಡ್‌ನ‌ಲ್ಲಿ ಕಮಾಂಡರ್‌-ಇನ್‌-ಚೀಫ್ ಆಗಿ ಸೇವೆ ಸಲ್ಲಿಸಿªದಾರೆ.
ವಿಶ್ವಸಂಸ್ಥೆಯ ಇಥಿಯೋಪಿಯಾ ಮತ್ತು ಎರಿಟ್ರಿಯಾ ಮಿಷನ್‌ನಲ್ಲಿ ಮುಖ್ಯ ಎಂಜಿನಿಯರ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಲೆ| ಜ| ಪಾಂಡೆ ಪ್ರಮುಖ ಫೋಕಸ್‌ ಏನು?
1. ಲಡಾಖ್‌ ವಿವಾದ ಇತ್ಯರ್ಥ
ಕಳೆದ 2 ವರ್ಷಗಳಿಂದಲೂ ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಹಲವು ಸುತ್ತುಗಳ ಮಾತುಕತೆ ನಡೆದರೂ ಲಡಾಖ್‌ನಲ್ಲಿ ಇನ್ನೂ ಎರಡೂ ದೇಶಗಳ 50 ಸಾವಿರದಿಂದ 60 ಸಾವಿರದಷ್ಟು ಯೋಧರು ನಿಯೋಜನೆಗೊಂಡಿದ್ದಾರೆ. ಈ ಸಂಘರ್ಷವನ್ನು ತಣ್ಣಗಾಗಿಸುವ ಹೊಣೆ ಈಗ ಲೆ| ಜ| ಪಾಂಡೆ ಅವರ ಮೇಲಿದೆ.

2. ಥಿಯೇಟರೈಸೇಶನ್‌
ಭವಿಷ್ಯದ ಯುದ್ಧಗಳು ಹಾಗೂ ಕಾರ್ಯಾಚರಣೆಗಳಿಗೆ ಸೇನೆಯ ಮೂರೂ ಪಡೆಗಳಲ್ಲಿನ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಳ್ಳುವುದು ಭಾರತದ ಲೆಕ್ಕಾಚಾರವಾಗಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ನಿರ್ದಿಷ್ಟ ವಿಭಾಗಗಳನ್ನು ಒಂದೇ ಥಿಯೇಟರ್‌ ಕಮಾಂಡರ್‌ನ ವ್ಯಾಪ್ತಿಗೆ ತರುವುದನ್ನು ಥಿಯೇಟರೈಸೇಶನ್‌ ಎನ್ನುತ್ತಾರೆ. ಇದು ಮೂರೂ ಪಡೆಗಳ ನಡುವೆ ಸಮನ್ವಯತೆ ಸಾಧಿಸಲು ಮತ್ತು ಮೂರೂ ಪಡೆಗಳ ಸಂಪನ್ಮೂಲಗಳನ್ನು ಅಗತ್ಯ ಸಂದರ್ಭಗಳಲ್ಲಿ ಬಳಸಿಕೊಳ್ಳಲು ನೆರವಾಗುತ್ತವೆ. ಪ್ರಸ್ತುತ ಯೋಜ ನೆಯ ಪ್ರಕಾರ, 2 ಭೂಕೇಂದ್ರಿತ ಥಿಯೇಟರ್‌ಗಳು, ಒಂದು ವಾಯು ರಕ್ಷಣಾ ಕಮಾಂಡ್‌, ಮತ್ತೂಂದು ನೌಕಾ ಥಿಯೇಟರ್‌ ಕಮಾಂಡ್‌… ಹೀಗೆ ಒಟ್ಟು 4 ಕಮಾಂಡ್‌ಗಳನ್ನು ರಚಿಸಲು ಯೋಜಿಸಲಾಗಿದೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಲೆ.ಜ.ಪಾಂಡೆ ಹೆಜ್ಜೆಯಿಡಬೇಕಾಗುತ್ತದೆ.

3. ಸೇನಾ ಹಾರ್ಡ್‌ವೇರ್‌ಗಳ ಸ್ವದೇಶೀಕರಣ
ಕೇಂದ್ರ ಸರಕಾರವು ಸೇನಾ ಸಾಮಗ್ರಿಗಳಲ್ಲಿ ಆತ್ಮನಿರ್ಭರತೆ ಸಾಧಿಸಲು ಒತ್ತು ನೀಡುತ್ತಿರುವಂತೆಯೇ ಲೆ| ಜ| ಪಾಂಡೆ ಅವರ ನೇಮಕ ನಡೆದಿದೆ. ರಕ್ಷಣ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಕಳೆದ 2 ವರ್ಷಗಳಲ್ಲಿ ಸರಕಾರವು ಸುಮಾರು 310 ಶಸ್ತ್ರಾಸ್ತ್ರ ವ್ಯವಸ್ಥೆಗಳ ಆಮದಿನ ಮೇಲೆ ನಿರ್ಬಂಧ ಹೇರಿದೆ. ಸೇನೆಗೆ ಅಗತ್ಯವಿರುವ ಇಂಥ ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿ ತಯಾರಿಸುವ ಸರಕಾರದ ಇಚ್ಛೆಗೆ ಕೈಜೋಡಿಸುತ್ತಾ, ಲೆ| ಜ| ಪಾಂಡೆ ಅವರು ರಕ್ಷಣ ಸ್ವಾವಲಂಬನೆಗೆ ಸಹಕಾರ ನೀಡಬೇಕಾಗಿದೆ.

4. ಯುದ್ಧ ಸನ್ನದ್ಧತೆ
ರಷ್ಯಾ- ಉಕ್ರೇನ್‌ ಯುದ್ಧವು ಭಾರತದ ಸೇನಾ ಸನ್ನದ್ಧತೆ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬ ಬಗ್ಗೆ ಈಗಾಗಲೇ ವಿಶ್ಲೇಷಣೆ ನಡೆಯುತ್ತಿದೆ. ಭಾರತದ ಸೇನಾ ಸಾಮಗ್ರಿಗಳ ಪೈಕಿ ಮೂರನೇ ಎರಡರಷ್ಟನ್ನು ರಷ್ಯಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ. ರಷ್ಯಾದ ಮೇಲೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ನಿರ್ಬಂಧ ಹೇರಿರುವುದು ಭಾರತ-ರಷ್ಯಾ ರಕ್ಷಣ ಸಂಬಂಧಕ್ಕೆ ದೊಡ್ಡ ಸವಾಲು ಉಂಟುಮಾಡಿದೆ. ಇದು ಭಾರತದ ಸೇನಾ ಸನ್ನದ್ಧತೆಯನ್ನು ಪರೀಕ್ಷೆಗೆ ಒಡ್ಡಿದೆ. ಬೇರೆ ದೇಶಗಳ ಮೇಲಿನ ಅವಲಂಬನೆ ತಗ್ಗಿಸುವ ಮತ್ತು ಸೇನಾ ಸನ್ನದ್ಧತೆಯನ್ನು ಸಾಬೀತುಪಡಿಸುವ ಸವಾಲು ಈಗ ಹೊಸ ಮುಖ್ಯಸ್ಥರಿಗಿದೆ

Advertisement

Udayavani is now on Telegram. Click here to join our channel and stay updated with the latest news.

Next