Advertisement

ಅರವಿಂದ್‌ ಬೆಲ್ಲದ್‌ ಫೋನ್‌ ಕದ್ದಾಲಿಕೆ ಪ್ರಕರಣ : ಎಸಿಪಿ ನೇತೃತ್ವದಲ್ಲಿ ತನಿಖೆ

06:54 PM Jun 18, 2021 | Team Udayavani |

ಬೆಂಗಳೂರು: ಶಾಸಕ ಅರವಿಂದ್‌ ಬೆಲ್ಲದ್‌ ಅವರು ತಮ್ಮ ಫೋನ್‌ ಕದ್ದಾಲಿಕೆ ಆಗುತ್ತಿರುವ ಬಗ್ಗೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ನೀಡಿರುವ ದೂರಿನ ಪ್ರತಿ ನಮಗೆ ವರ್ಗಾವಣೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಲಿದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದ್ದಾರೆ.

Advertisement

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಪರಿಚಿತ ಸಂಖ್ಯೆಯಿಂದಲೇ ಸಾಕಷ್ಟು ಬಾರಿ ಕರೆ ಬಂದಿದೆ. ಪರಿಚಯ ಇಲ್ಲದ ವ್ಯಕ್ತಿಯಿಂದ ಪದೇ ಪದೇ ಕರೆ ಬಂದಿದೆ. ಫೋನ್‌ ಕದ್ದಾಲಿಕೆಯಾಗುತ್ತಿದೆ ಎಂದು ದೂರಿನಲ್ಲಿ ಶಾಸಕರು ಹೇಳಿದ್ದಾರೆ. ಈ ಎಲ್ಲದರ ಬಗ್ಗೆ ಶಾಸಕ ಅರವಿಂದ್‌ ಬೆಲ್ಲದ್‌ ಅವರಿಂದ ತನಿಖಾಧಿಕಾರಿಗಳು ಮಾಹಿತಿ ಪಡೆದು ಕೂಲಕಂಷವಾಗಿ ತನಿಖೆ ನಡೆಸಲಿದ್ದಾರೆ. ಪ್ರಕರಣದ ತನಿಖೆಗಾಗಿ ಕಬ್ಬನ್‌ಪಾರ್ಕ್‌ ಎಸಿಪಿ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಯಲಿದೆ ಎಂದು ಅವರು ಹೇಳಿದರು.

ಕರೆಗಳ ಬಗ್ಗೆ ತನಿಖೆ: ಶಾಸಕ ಅರವಿಂದ್‌ ಬೆಲ್ಲದ್‌ ಅವರಿಂದ ದೂರಿನ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಿದೆ. ಜೈಲಿನಿಂದ ಕರೆ ಬಂದಿದ್ದರೂ ಅದರ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಶಾಸಕರು ಮೊಬೈಲ್‌ ಮೂಲಕ ಸಂಪರ್ಕಕಕ್ಕೆ ಸಿಕ್ಕಿದ್ದು, ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಎಫ್‌ಐಆರ್‌ ಏಕಾಏಕಿ ಮಾಡುವುದಿಲ್ಲ, ಪರಿಶೀಲನೆ ನಡೆಸಿ ಎಫ್‌ಐಆರ್‌ ದಾಖಲಿಸಲಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಯುವರಾಜ್‌ ಸ್ವಾಮಿಯಿಂದಲೇ ಕರೆ
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್‌ ಬೆಲ್ಲದ್‌ ಕರೆ ಮಾಡಿರುವುದು ಕೆಲ ತಿಂಗಳ ಹಿಂದೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರಿಂದ ಬಂಧನಕ್ಕೊಳಗಾದ ಯವರಾಜ್‌ ಸ್ವಾಮಿ ಅಲಿಯಾಸ್‌ ಸ್ವಾಮಿಯೇ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮೈಸೂರಿನಲ್ಲಿ ಮರ್ಯಾದೆ ಹತ್ಯೆ : ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ

Advertisement

ಶಾಸಕ ಅರವಿಂದ್‌ ಬೆಲ್ಲದ್‌ ಹೇಳಿರುವ ಪ್ರಕಾರ ಒಂದೂವರೆ ತಿಂಗಳಿಂದ ಅನಾಮಧೇಯ ಕರೆಗಳು ಬರುತ್ತಿವೆ. ಯುವರಾಜ ಸ್ವಾಮಿ ಎಂಬಾತ ಕರೆ ಮಾಡಿ, ನಾನು ಆಸ್ಪತ್ರೆಯಿಂದ ಕರೆ ಮಾಡುತ್ತಿದ್ದೇನೆ. ನನ್ನನ್ನು ಅನಗತ್ಯವಾಗಿ ಜೈಲಿಗೆ ಹಾಕಿದ್ದಾರೆ ಎಂದೆಲ್ಲ ಮಾತನಾಡಿದ್ದಾನೆ. ಅಲ್ಲದೆ, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಪ್ರಸ್ತಾಪಿಸಿದ. ಹೀಗಾಗಿ ಆತನ ಕರೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಿದ್ದಾರೆ.

ಅವರ ಹೇಳಿಕೆಗೆ ಪುಷ್ಟಿ ನೀಡುವಂತೆ ಯುವರಾಜ್‌ ಸ್ವಾಮಿ ಅಲಿಯಾಸ್‌ ಸ್ವಾಮಿ ಅನಾರೋಗ್ಯಕ್ಕೊಳಗಾಗಿ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಲಾಕ್‌ಡೌನ್‌ ಜಾರಿಯಾದ ಹತ್ತು ದಿನಗಳ ಬಳಿಕ ಜೈಲಿಗೆ ಹೋಗಿದ್ದಾನೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿಯೇ ಶಾಸಕ ಅರವಿಂದ್‌ ಬೆಲ್ಲದ್‌ ಅವರಿಗೆ ಕರೆ ಮಾಡಿರುವ ಸಾಧ್ಯತೆಗಳಿವೆ. ಆದರೆ, ಚಿಕಿತ್ಸೆ ಸಂದರ್ಭದಲ್ಲಿ ಪೊಲೀಸ್‌ ಭದ್ರತೆ ನಡುವೆಯೂ ಆತನಿಗೆ ಮೊಬೈಲ್‌ ಕೊಟ್ಟಿದ್ದು ಯಾರು? ಅರವಿಂದ್‌ ಬೆಲ್ಲದ್‌ ಅವರಿಗೆ ಕರೆ ಮಾಡಲು ಸೂಚಿಸಿದವರು ಯಾರು? ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಅಲ್ಲದೆ, ಆತ ಜೈಲಿಗೆ ಮರಳಿದ ಬಳಿಕವೂ ಜೈಲಿನಲ್ಲಿಯೇ ಅಕ್ರಮವಾಗಿ ಮೊಬೈಲ್‌ ಮೂಲಕ ಮತ್ತೂಮ್ಮೆ ಕರೆ ಮಾಡಿರುವ ಸಾಧ್ಯತೆಗಳು ಇವೆ. ಈ ಬಗ್ಗೆ ಶಾಸಕ ಅರವಿಂದ್‌ ಬೆಲ್ಲದ್‌ ಅವರಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕಿದೆ. ಅವರ ಮೊಬೈಲ್‌ ಸಿಡಿಆರ್‌ ಪಡೆದು ತನಿಖೆ ನಡೆಸಬೇಕಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರ ಹೆಸರಿನಲ್ಲಿ ಹತ್ತಾರು ಮಂದಿಗೆ ವಂಚಿಸಿದ ಪ್ರಕರಣ ಸಂಬಂಧ ಯುವರಾಜ್‌ ಸ್ವಾಮಿಯನ್ನು ಸಿಸಿಬಿ ಪೊಲೀಸರು ಜನವರಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಯುವರಾಜ್‌ ಸ್ವಾಮಿ ವಶಕ್ಕೆ ಪಡೆದು ವಿಚಾರಣೆ
ಜೈಲಿನಲ್ಲಿರುವ ಯುವರಾಜ್‌ ಸ್ವಾಮಿಯನ್ನು ಕಬ್ಬನ್‌ ಪಾರ್ಕ್‌ ಎಸಿಪಿ ಯತಿರಾಜ್‌ ನೇತೃತ್ವದ ತಂಡ ಸದ್ಯದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಯಾರೊಂದಿಗೆಲ್ಲ ಮಾತನಾಡಿದ್ದಾನೆ? ಶಾಸಕರಿಗೆ ಕರೆ ಮಾಡಲು ಸೂಚಿಸಿದವರು ಯಾರು? ಎಂಬೆಲ್ಲ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next