Advertisement

ಅರಣ್ಯ, ಲೋಕೋಪಯೋಗಿ ಇಲಾಖೆ ಜಂಟಿ ಸರ್ವೇ ಪೂರ್ಣ

10:35 AM May 19, 2019 | Naveen |

ಅರಂತೋಡು : ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆ ಅಭಿವೃದ್ಧಿಗೆ ಹಲವಾರು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿದ್ದು, ಸರ್ವೆ ಕಾರ್ಯ ಪೂರ್ಣಗೊಂಡಿದೆ.

Advertisement

ರಸ್ತೆ ಹಾದು ಹೋಗುವ ಜಾಗ ಅರಣ್ಯ ಹಾಗೂ ವನ್ಯಜೀವಿ ಭಾಗ ಬರುತ್ತಿರುವುದರಿಂದ ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಜಂಟಿ ಸರ್ವೇ ಕಾರ್ಯ ನಡೆಸಿ ಕಡತವನ್ನು ಮತ್ತೆ ಅರಣ್ಯ ಭವನಕ್ಕೆ ಅಪ್‌ಲೋಡ್‌ ಮಾಡಿದೆ.

ಕೊಡಗಿನನಲ್ಲಿ ಕಳೆದ ಆಗಸ್ಟ್‌ ತಿಂಗಳಿನಲ್ಲಿ ಸಂಭವಿಸಿದ ಪಕೃತಿ ವಿಕೋಪದಿಂದ ಈ ಮಳೆಗಾಲವು ಜನರಿಗೆ ಸುಳ್ಯ ಮಡಿಕೇರಿ ಸಂಪರ್ಕಕ್ಕೆ ಅಸಾಧ್ಯವಾಗುವ ಸಂಶಯ ಕಾಡುತ್ತಿದೆ. ಕೊಡಗು ಜಿಲ್ಲೆಯವರು ಹಾಗೂ ಕೊಡಗು ಜಿಲ್ಲೆಯ ಗಡಿಭಾಗದಲ್ಲಿರುವ ದ.ಕ. ಜಿಲ್ಲೆಯ ಜನರು ಈ ರಸ್ತೆ ಅಭಿವೃದ್ಧಿ ಬಗ್ಗೆ ಉತ್ಸುಕರರಾಗಿದ್ದಾರೆ.

ಜೋಡುಪಾಲದಲ್ಲಿ ಸಂಭವಿಸಿದ ಭೂಕುಸಿತದ ಸಂದರ್ಭ ಸ್ಥಳಕ್ಕೆ ಆಗಮಿಸಿದ ಭೂವಿಜ್ಞಾನಿಗಳು ಜೋಡುಪಾಲ ಭಾಗ ವಾಸಕ್ಕೆ ಯೋಗ್ಯವಲ್ಲ ಎಂದು ತಿಳಿಸಿದ್ದರಿಂದ ಇಲ್ಲಿ ನಿರ್ಮಾಣವಾದ ರಸ್ತೆ ಮಳೆಗಾಲದಲ್ಲಿ ಯಾವ ಸಂದರ್ಭದಲ್ಲೂ ಬೇಕಾದರೂ ಕುಸಿಯಬಹುದು ಎಂದು ಜನರು ಆತಂಕ ಹೊಂದಿದ್ದಾರೆ. ಈಗಾಗಲೇ ವಿಜ್ಞಾನಿಗಳು ಕೊಡಗಿನಲ್ಲಿ ಈ ವರ್ಷವೂ ಭೂಕುಸಿತ ಸಂಭವಿಸಬಹುದೆನ್ನುವ ಮುನ್ಸೂಚನೆ ನೀಡಿದ್ದಾರೆ.

5 ಕೋ.ರೂ. ಮಂಜೂರು
ಈಗಿರುವ ರಸ್ತೆಯಲ್ಲಿ ಹುಣೂಸೂರಿನಿಂದ ಮಡಿಕೇರಿಯಾಗಿ ಸುಳ್ಯಕ್ಕೆ 131 ಕಿ.ಮೀ. ದೂರವಾಗುತ್ತದೆ. ಬದಲಾಗಿ ಹುಣುಸೂರುನಿಂದ ವಿರಾಜಪೇಟೆ-ಭಾಗಮಂಡಲಕ್ಕಾಗಿ ಪಟ್ಟಿ- ತೊಡಿಕಾನ- ಕೊಡಗಿನ ಪೆರಾಜೆಯಾಗಿ ಬಂದರೆ 145 ಕಿ.ಮೀ ದೂರವಾಗುತ್ತದೆ. ಹುಣುಸೂರು-ಭಾಗಮಂಡಲ (ರಾಜ್ಯ ಹೆದ್ದಾರಿ) 109 ಕಿ.ಮೀ., ಭಾಗಮಂಡಲ-ಬಾಚಿಮಲೆ (ಅಂತರ್‌ ರಾಜ್ಯ ಹೆದ್ದಾರಿ) 9 ಕಿ.ಮೀ., ಬಾಚಿಮಲೆ-ಪಟ್ಟಿ-ತೊಡಿಕಾನ (ಅಭಿವೃದ್ಧಿ ಆಗಬೇಕಾದ ರಸ್ತೆ) 9 ಕಿ.ಮೀ., ತೊಡಿಕಾನ-ಪೆರಾಜೆ ಜಿಲ್ಲಾ ಪಂಚಾಯತ್‌ 11 ಕಿ.ಮೀ., ಪೆರಾಜೆ-ಸುಳ್ಯ (ರಾಜ್ಯ ಹೆದ್ದಾರಿ) 7.ಕಿ.ಮೀ. ಹೀಗೆ ಒಟ್ಟು 145 ಕಿ.ಮೀ. ದೂರವಾಗುತ್ತದೆ. ಈ ಮಾರ್ಗದಲ್ಲಿ ಮಾಚಿಮಲೆ-ಪಟ್ಟಿ-ತೊಡಿಕಾನ ರಸ್ತೆ ಅಭಿವೃದ್ಧಿಗೆ 2013-14ನೇ ಸಾಲಿನಲ್ಲಿ ರಾಜ್ಯ ಸರಕಾರದಿಂದ 5 ಕೋಟಿ ರೂ. ಮಂಜೂರುಗೊಂಡಿದೆ.

Advertisement

ದೂರ ಕಡಿಮೆಯಾಗಲಿದೆ
ಈ ರಸ್ತೆ ಅಭಿವೃದ್ಧಿಯಾದಲ್ಲಿ ಸಂಪಾಜೆ-ಮಡಿಕೇರಿ ರಸ್ತೆಗೆ ಪರ್ಯಾಯ ರಸ್ತೆಯಾಗಿ ರೂಪುಗೊಂಡು ಆ ರಸ್ತೆಯ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಹಾಗೆಯೇ ದಕ್ಷಿಣ ಭಾರತದ ಪ್ರಸಿದ್ದ ತೀರ್ಥ ಕ್ಷೇತ್ರಗಳಾದ ಭಾಗಮಂಡಲ/ತಲಕಾವೇರಿಯಿಂದ ಸುಬ್ರಹ್ಮಣ್ಯ- ಧರ್ಮಸ್ಥಳಕ್ಕೆ ಪ್ರಯಾಣಿಸಲು ಅತೀ ಹತ್ತಿರದ ರಸ್ತೆಯಾಗಲಿದೆ. ರಸ್ತೆ ಅಭಿವೃದ್ಧಿಯಾದರೆ ಈ ದಾರಿಯಲ್ಲಿ ಭಾಗಮಂಡಲದಿಂದ ಸುಬ್ರಹ್ಮಣ್ಯಕ್ಕೆ ಈಗಿರುವ ಸುಮಾರು 145 ಕಿ.ಮೀ. ದೂರ ಕೇವಲ 50 ಕಿ.ಮೀ. ಆಗಲಿದೆ.

ಕಾವೇರಿ ರಸ್ತೆ
ಈ ರಸ್ತೆಯು ಸರಕಾರಿ ದಾಖಲೆಗಳಲ್ಲಿ ಕಾವೇರಿ ರಸ್ತೆಯೆಂದು ನಮೂದಾಗಿದೆ. ಭಾಗಮಂಡಲ ಕ್ಷೇತ್ರಕ್ಕೆ ಧಾರ್ಮಿಕ ಮತ್ತು ಪೂಜಾದಿಗಳ ಸಂಬಂಧ ಇರುವ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ, ಪೆರಾಜೆ ಶಾಸ್ತವೇಶ್ವರ ದೇವಸ್ಥಾನ ಆಡೂರು ಮಹಾಲಿಂಗೇಶ್ವರ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸಿ ಪ್ರಸ್ತಾವಿತ ಭಾಗಮಂಡಲ ತಲಕಾವೇರಿ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಲಿದೆ. ಮುಖ್ಯವಾಗಿ ಮಾಣಿ-ಮೈಸೂರು ರಾಜ್ಯ ಹೆದ್ದಾರಿಗೆ ಒಂದು ಪರ್ಯಾಯ ರಸ್ತೆಯಾಗಿ ರೂಪುಗೊಳ್ಳಲಿದೆ.

ಪರ್ಯಾಯ ರಸ್ತೆಯಾಗಲಿದೆ
ತೊಡಿಕಾನ-ಪಟ್ಟಿ-ಬಾಚಿಮಲೆ ರಸ್ತೆ ಅಭಿವೃದ್ಧಿ ಅಗತ್ಯ ಇದೆ. ಭವಿಷ್ಯದಲ್ಲಿ ಮಾಣಿ-ಮೈಸೂರು ರಸ್ತೆಯ ಮೂಲಕ ಮಡಿಕೇರಿ ಸಂಪರ್ಕ ಏನಾಗಬಹುದು ಎಂದು ಉಹಿಸಲು ಅಸಾಧ್ಯ. ಈ ರಸ್ತೆ ಅಭಿವೃದ್ಧಿಯಾದರೆ ಮಡಿಕೇರಿ ಜಿಲ್ಲಾ ಕೇಂದ್ರ ಹಾಗೂ ತಲಕಾವೇರಿ, ಭಾಗಮಂಡಲ ಸಂಪರ್ಕಕ್ಕೆ ಪರ್ಯಾಯ ರಸ್ತೆಯಾಗಲಿದೆ.
ವಸಂತ ಭಟ್
ತೊಡಿಕಾನ ರಸ್ತೆ ಅಭಿವೃದ್ಧಿ ಹೋರಾಟಗಾರ

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next