Advertisement

ಇನ್ನೊಬ್ಬರಿಂದ ಮೆಚ್ಚುಗೆ ಪಡೆಯಬೇಕೆಂಬ ಚಟ!

11:29 AM Jan 05, 2020 | mahesh |

ನಮ್ಮ ಬದುಕು ಚೆನ್ನಾಗಿ ಇದೆ ಎಂದು ರುಜುವಾತು ಮಾಡಿಕೊಳ್ಳಲು ಹೀಗೆ ಅಗತ್ಯವಿಲ್ಲದ ದುಬಾರಿ ಫೋನುಗಳನ್ನು, ಇಎಂಐನ ಮೇಲೆ ಮನೆಗಳನ್ನು, ಕಾರುಗಳನ್ನು ಖರೀದಿಸಬೇಕೇ? ಸಾಲ ಮಾಡಿ ಹೈರಾಣಾಗಿ ಇನ್ನೊಬ್ಬರಿಂದ ಮೆಚ್ಚುಗೆ ಪಡೆಯುವಂತಾಗಬೇಕೇ?

Advertisement

ಮೊದಲೇ ಹೇಳಿಬಿಡುತ್ತೇನೆ. ನಾನಿಂದು 2,000 ಕೋಟಿ ರೂಪಾಯಿಗಳಿಗೂ ಅಧಿಕ ಸಂಪತ್ತಿನ ಒಡೆಯ. ಎರಡು ಬಹುರಾಷ್ಟ್ರೀಯ ಡಿಜಿಟಲ್‌ ಮಾರ್ಕೆಟಿಂಗ್‌ ಕಂಪೆನಿಗಳು, ವೈನ್‌ ಉದ್ಯಮ ಹೊಂದಿದ್ದೇನೆ. ನನ್ನ ಯೂಟ್ಯೂಬ್‌ ವಿಡಿಯೋಗಳು, ಭಾಷಣಗಳು ಪ್ರತಿವರ್ಷ ಕೋಟ್ಯಂತರ ರೂಪಾಯಿ ಆದಾಯ ತಂದುಕೊಡುತ್ತಿವೆ. ನಾನು ಬರೆದ ಪುಸ್ತಕಗಳು “ನ್ಯೂಯಾರ್ಕ್‌ ಟೈಮ್ಸ್‌’ ಬೆಸ್ಟ್‌ ಸೆಲ್ಲರ್‌ಗಳಾಗಿ ಗುರುತಿಸಿಕೊಂಡಿದ್ದು, ಅವೂ ಕೂಡ ಹಣದ ಹೊಳೆಯನ್ನೇ ನನ್ನತ್ತ ಹರಿಸುತ್ತಿವೆ. ಇದೆಲ್ಲ ಸಾಧ್ಯವಾಗಿದ್ದು ಹೇಗೆ ಎಂದು ಎಲ್ಲರೂ ನನ್ನನ್ನು ಪ್ರಶ್ನಿಸುತ್ತಾರೆ. ಅವರಿಗೆ ನಾನು ಪ್ರತಿಬಾರಿಯೂ ಹೇಳುವುದು ಇಷ್ಟೆ- “”ನಾನು ಯಾರನ್ನೋ ಮೆಚ್ಚಿಸುವುದಕ್ಕಾಗಿ ಬದುಕುವುದಿಲ್ಲ, ಇದೇ ನನ್ನ ಯಶಸ್ಸಿನ ಗುಟ್ಟು.”

ಅದು 1998ರ ಸಮಯ. ನ್ಯೂ ಜೆರ್ಸಿಯ ಸ್ಪ್ರಿಂಗ್‌ ಫೀಲ್ಡ್‌ನಲ್ಲಿ ನನ್ನ ತಂದೆ ಮತ್ತು ಅವರ ಗೆಳೆಯರದ್ದು ಒಂದು ಮದ್ಯದ ಸ್ಟೋರ್‌ ಇತ್ತು. ಆ ಸ್ಟೋರ್‌ನ ವಾರ್ಷಿಕ ವ್ಯವಹಾರ ಏನಿಲ್ಲವೆಂದರೂ 3 ಮಿಲಿಯನ್‌ ಡಾಲರ್‌ಗಳಷ್ಟಿತ್ತು. ಹಾಗೆ ನೋಡಿದರೆ, ಅದು ದೊಡ್ಡ ಪ್ರಮಾಣದ ಹಣವೇ ಹೌದು. ಆ ಸ್ಟೋರ್‌ ಕೂಡ ಯಾವುದೇ ತೊಂದರೆ ಇಲ್ಲದೇ ನಡೆಯುತ್ತಾ ಸಾಗಿತ್ತು. ಆದರೆ ನನಗೆ, ಈ ವ್ಯಾಪಾರವನ್ನು ಮತ್ತಷ್ಟು ಬೆಳೆಸಬಹುದು ಎಂಬ ಭರವಸೆ ಇತ್ತು. ಈ ಅಂಶವನ್ನು ಅಪ್ಪ ಮತ್ತು ಅವರ ಸ್ನೇಹಿತರ ಮುಂದೆ ಪ್ರಸ್ತಾಪಿಸಿದೆ. ನನಗಿನ್ನೂ ನೆನಪಿದೆ: ಅಪ್ಪನ ಗೆಳೆಯ ಅವತ್ತು ನನ್ನನ್ನು ಕೆಣಕುವ ರೀತಿಯಲ್ಲಿ ಕೇಳಿದ್ದರು, “”3 ಮಿಲಿಯನ್‌ ಕಡಿಮೆ ಆಯಿತೇ? ಹಾಗಿದ್ದರೆ ವಹಿವಾಟು ಎಷ್ಟು ಆಗಬೇಕು ಎಂದು ನಿನ್ನ ಅಭಿಪ್ರಾಯ?ನಿನಗೆ ಸ್ಟೋರ್‌ ಜವಾಬ್ದಾರಿ ಕೊಟ್ಟರೆ 10 ಮಿಲಿಯನ್‌ ಡಾಲರ್‌ ಮಾಡುತ್ತೀಯಾ?”
ತಕ್ಷಣ ನಾನಂದೆ: “”10 ಮಿಲಿಯನ್‌ ಅಲ್ಲ ಅಂಕಲ್‌, ನನ್ನ ಟಾರ್ಗೆಟ್‌ 50 ಮಿಲಿಯನ್‌ ಡಾಲರ್‌!”

ಅವರು ಒಂದು ಕ್ಷಣಕ್ಕೆ ದಂಗಾದರಾದರೂ, ಇದೆಲ್ಲ ಸಾಧ್ಯವಾಗದ ಮಾತು ಎಂಬ ಮಾತನಾಡುತ್ತಲೇ, ಸ್ಟೋರ್‌ನ ನಿರ್ವಹಣೆಯನ್ನು ನನಗೆ ವಹಿಸಿದರು.  2003ರ ವೇಳೆಗೆ, ಅಂದರೆ ಕೇವಲ 5 ವರ್ಷಗಳಲ್ಲಿ ಈ ವೈನ್‌ ಸ್ಟೋರ್‌ನ ವಾರ್ಷಿಕ ಬ್ಯುಸಿನೆಸ್‌ ಎಷ್ಟಾಯಿತು ಗೊತ್ತೇ? 60 ಮಿಲಿಯನ್‌ ಡಾಲರ್‌! ನಾನು ಭರವಸೆ ನೀಡಿದ್ದಕ್ಕಿಂತ 10 ದಶಲಕ್ಷ ಡಾಲರ್‌ ಹೆಚ್ಚು ಲಾಭವಾಗುವಂತೆ ಮಾಡಿದ್ದೆ. ಆ ಸ್ಟೋರ್‌ನ ಹೆಸರನ್ನು ಬದಲಿಸಿದ್ದೆ, ಮದ್ಯದ ಆನ್‌ಲೈನ್‌ ಮಾರಾಟ ಆರಂಭಿಸಿ, ಬೆಲೆಗಳನ್ನು ಬದಲಿಸಿದ್ದೆ. ಈ ಸಾಧನೆ ಹೇಗೆ ಸಾಧ್ಯವಾಯಿತು ಎಂದು ನನ್ನ ತಂದೆ ಪ್ರಶ್ನಿಸಿದಾಗಲೂ ನಾನು ಹೇಳಿದ್ದಿಷ್ಟೆ- ಅಂದು ನಾನು ನಿಮ್ಮನ್ನು-ನಿಮ್ಮ ಗೆಳೆಯರನ್ನು ಮೆಚ್ಚಿಸುವುದಕ್ಕಾಗಿ, ಈ ವ್ಯವಹಾರವನ್ನು 50 ಮಿಲಿಯನ್‌ ಡಾಲರ್‌ಗೆ ಕೊಂಡೊಯ್ಯುತ್ತೇನೆ ಎಂದು ಹೇಳಿರಲಿಲ್ಲ.

ಬದಲಾಗಿ, ನನಗೆ ಈ ಸ್ಟೋರ್‌ ಅನ್ನು ಆ ಮಟ್ಟಕ್ಕೆ ಒಯ್ಯಬೇಕು ಎಂಬ ನಿಜವಾದ ಬಯಕೆ ಇತ್ತು. ಸೋತರೆ ಹೇಗೆ ಎಂಬುದರ ಬಗ್ಗೆ ನಾನು ಕೇರ್‌ ಮಾಡಲಿಲ್ಲ. ಇದು ನನ್ನ ಮತ್ತು ನಿಮ್ಮ ನಡುವಿನ ಹೋರಾಟವಾಗಿರಲಿಲ್ಲ. ನನ್ನ ಮೇಲೆ ನಾನೇ ಸಾರಿದ ಸಮರವಾಗಿತ್ತು.”

Advertisement

ಮುಂದೆ, ನಾನು ವೈನ್‌ ಸ್ಟೋರ್‌ ವ್ಯವಹಾರದಿಂದ ದೂರವಾಗಿ ನನ್ನದೇ ಡಿಜಿಟಲ್‌ ಮಾರ್ಕೆಟಿಂಗ್‌ ಕಂಪನಿಗಳನ್ನು ಸ್ಥಾಪಿಸಿದೆ. ಅಂದಹಾಗೆ, ಅದಕ್ಕೂ ಮುನ್ನ ಅನೇಕ ಪ್ರಯತ್ನಗಳಲ್ಲಿ ಮುಗ್ಗರಿಸಿಯೂ ಬಿದ್ದಿದ್ದೇನೆ.

ಈ ಸೋಲು-ಗೆಲುವುಗಳು ನನಗೆ ಅನೇಕ ಪಾಠಗಳನ್ನು ಕಲಿಸಿಕೊಟ್ಟಿವೆ. ಪ್ರಮುಖವಾಗಿ ಹಣವೇ ಮುಖ್ಯವಲ್ಲ ಎನ್ನುವುದನ್ನೂ ಕಲಿತಿದ್ದೇನೆ(ಅದೂ ಹಣ ಗಳಿಸಿಯೇ ಹೊರತು, ಯಾರಧ್ದೋ ಮಾತು ಕೇಳಿ ಅಲ್ಲ). ನಾನು ಕಲಿತ ಈ ಪಾಠಗಳನ್ನು ಜನರೊಂದಿಗೆ ಹಂಚಿಕೊಳ್ಳಬೇಕು ಎಂಬ ಬಯಕೆ ಆರಂಭವಾದ ಮೇಲೆ ಯೂಟ್ಯೂಬ್‌ ವಿಡಿಯೋಗಳನ್ನು ಮಾಡಲಾರಂಭಿಸಿದೆ. ಆ ವಿಡಿಯೋಗಳಲ್ಲಿ ನಾನು ಹೇಗೆ ಹಣ ಸಂಪಾದಿಸಬೇಕು ಎಂದು ಹೇಳಿಕೊಡುವುದಕ್ಕಿಂತ, ಹಣವನ್ನು ಹೇಗೆ ಹಾಳು ಮಾಡಬಾರದು ಎನ್ನುವುದನ್ನು ಹೇಳಿಕೊಡುತ್ತೇನೆ. ಮುಖ್ಯವಾಗಿ ಹೇಗೆ ಬದುಕಬೇಕು…ಹೇಗೆ ಇನ್ನೊಬ್ಬರನ್ನು ಮೆಚ್ಚಿಸುತ್ತಾ
ಬದುಕಿದವನು ಮಣ್ಣು ಮುಕ್ಕುತ್ತಾನೆ ಎನ್ನುವುದರ ಬಗ್ಗೆಯೇ ನಾನು
ಮಾತನಾಡುವುದು.

ಅಭದ್ರತೆ-ಕೀಳರಿಮೆ ಎಂಬ ಮಾರಕ ರೋಗ
ಇಂದು ಜನರಲ್ಲಿ ಅಭದ್ರತೆ ಮತ್ತು ಕೀಳರಿಮೆ ಯಾವ ಪ್ರಮಾಣದಲ್ಲಿ ಮಡುಗಟ್ಟಿದೆ ಎನ್ನುವುದನ್ನು ಅರಿಯಬೇಕಾದರೆ, ಅವರ ಫೇಸ್‌ಬುಕ್‌ ತೆಗೆದು ನೋಡಿದರೆ ಸಾಕು. ಎಲ್ಲರೂ ತಮಗೆ ನಿಜಕ್ಕೂ ಹೇಳಬೇಕಾಗಿರುವುದನ್ನು ಅದರಲ್ಲಿ ಹೇಳುವುದಿಲ್ಲ, ಬದಲಾಗಿ, ಯಾವುದಕ್ಕೆ ಹೆಚ್ಚು ಲೈಕ್‌ ಸಿಗುತ್ತದೋ ಅದನ್ನು ಮಾತ್ರ ಹೇಳುತ್ತಿರುತ್ತಾರೆ. ತಮ್ಮ ಸ್ನೇಹ ವಲಯದಲ್ಲಿರುವವರನ್ನು ಮೆಚ್ಚಿಸುವಂಥ ಪೋಸ್ಟ್‌ಗಳನ್ನೇ ಹಾಕುತ್ತಿರುತ್ತಾರೆ, ಇಲ್ಲವೇ ತಮ್ಮ ಜೀವನದ ಅತಿ ಬೆಸ್ಟ್‌ ಘಟನೆಗಳ ಫೋಟೋಗಳನ್ನು(ಬ್ರಾಂಡೆಡ್‌ ಬಟ್ಟೆಗಳನ್ನು ಧರಿಸಿ, ಐಷಾರಾಮಿ ಹೋಟೆಲ್‌ಗಳಿಗೆ ಹೋಗಿ) ಶೇರ್‌ ಮಾಡುತ್ತಿರುತ್ತಾರೆ. ಒಟ್ಟಲ್ಲಿ ಮಂದಿಯನ್ನು ಮೆಚ್ಚಿಸಬೇಕು, ಅವರಿಂದ ಭೇಷ್‌ ಎನಿಸಿಕೊಳ್ಳಬೇಕು ಎನ್ನುವ ಈ ಬಯಕೆ ಯಾವ ಪ್ರಮಾಣದಲ್ಲಿ ನಮಗೆಲ್ಲ ರೂಢಿಯಾಗಿಬಿಟ್ಟಿದೆಯೆಂದರೆ, ಈ ಗುಣ ಫೇಸ್‌ಬುಕ್‌ನಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ಪ್ರತಿಫ‌ಲಿಸಲಾರಂಭಿಸಿದೆ. ಜನರಲ್ಲಿ ಇರುವ ಈ ಕೀಳರಿಮೆಯೇ ಕೊಳ್ಳುಬಾಕತನಕ್ಕೆ ಕಾರಣ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ.

ಒಂದು ಜೋಕ್‌ ಅನ್ನು ನೀವು ಕೇಳಿರಬಹುದು. ವ್ಯಕ್ತಿಯೊಬ್ಬ ಹೊಸ ಆ್ಯಪಲ್‌ ಫೋನ್‌ ಖರೀದಿಸಿದನಂತೆ. ಅದು ಅವನ ಕೈಯಿಂದ ಪದೇ ಪದೆ ಜಾರಿ ಕೆಳಕ್ಕೆ ಬೀಳುತ್ತಿತ್ತು. ಇದನ್ನು ಗಮನಿಸಿದ ಅವನ ಗೆಳೆಯ, “”ಅಲ್ಲಾ ಮಾರಾಯ, ಒಂದು ಒಳ್ಳೇ ಕವರ್‌ ಹಾಕಬಾರದೇ?” ಎಂದು ಕೇಳಿದನಂತೆ. ಅದಕ್ಕೆ ಇವನು
ಅಂದ, “ಕವರ್‌ ಹಾಕಿಬಿಟ್ಟರೆ, ಇದು ಆ್ಯಪಲ್‌ ಫೋನ್‌ ಅಂತ ಯಾರಿಗೆ ಗೊತ್ತಾಗುತ್ತೆ?’

ಇದು ಜೋಕ್‌ ಅಲ್ಲ, ದುರಂತ ವಾಸ್ತವ. ನನಗೆ ನಿಜಕ್ಕೂ ಬೇಸರ ತರಿಸುವ ಅಂಶವಿದು. ಅರೆ, ಅದು ಯಾವ ಬ್ರಾಂಡ್‌ನ‌ ಫೋನು ಅಂತ ಯಾರಿಗೆ ಯಾಕೆ ಗೊತ್ತಾಗಬೇಕು? ಆ ಫೋನ್‌ನ ಬಳಕೆಗಿಂತ, ಆ ಫೋನ್‌ ತನ್ನ ಬಳಿ ಇದೆ ಎಂದು ತೋರಿಸಿಕೊಳ್ಳುವುದು ಮುಖ್ಯವಾಗಬೇಕೇ? ಅದೇಕೆ ನಾವು ನಮ್ಮ ಭಾವನಾತ್ಮಕ ಕೊರತೆಯನ್ನು ಮುಚ್ಚಿಕೊಳ್ಳಲು ವಸ್ತುಗಳನ್ನು ಖರೀದಿಸಬೇಕು? ನಮ್ಮ ಬದುಕು ಚೆನ್ನಾಗಿ ಇದೆ ಎಂದು ರುಜುವಾತು ಮಾಡಿಕೊಳ್ಳಲು ಹೀಗೆ ಅಗತ್ಯವಿಲ್ಲದ ದುಬಾರಿ ಫೋನುಗಳನ್ನು, ಇಎಂಐನ ಮೇಲೆ ಮನೆಗಳನ್ನು, ಕಾರುಗಳನ್ನು ಖರೀದಿಸಬೇಕೇ? ಸಾಲ ಮಾಡಿ ಹೈರಾಣಾಗಿ ಇನ್ನೊಬ್ಬರಿಂದ ಮೆಚ್ಚುಗೆ ಪಡೆಯುವಂತಾಗಬೇಕೇ? ನಾನು ಹೇಳುವುದು, ಇದನ್ನೆಲ್ಲ ಖರೀದಿಸಬೇಡಿ ಎಂದಲ್ಲ. ಆದರೆ, ಅದು ನಿಮ್ಮನ್ನು ಹೈರಾಣಾಗಿಸಬಾರದಲ್ಲವೇ? 1 ಕೋಟಿ ರೂಪಾಯಿ ಆದಾಯ ಇದ್ದವನು 1 ಲಕ್ಷದ ಫೋನ್‌ ತೆಗೆದುಕೊಂಡರೆ ಅಡ್ಡಿಯಿಲ್ಲ, ಆದರೆ 1 ಲಕ್ಷ ಸಂಬಳವಿದ್ದವನು 50 ಸಾವಿರ ರೂಪಾಯಿಯನ್ನು ಬೇಡದ ವಸ್ತುಗಳ ಮೇಲೆ ಖರ್ಚು ಮಾಡುವುದು ಇದೆಯಲ್ಲ, ಅದು ಅವನಲ್ಲಿನ ಕೀಳರಿಮೆಯನ್ನು ಮುಚ್ಚಿಕೊಳ್ಳುವ ಪ್ರಯತ್ನವಷ್ಟೆ.

ನಾನು ಎಲ್ಲರಿಗೂ ಹೇಳುವುದು ಇಷ್ಟೇ- ಇನ್ನೊಬ್ಬರು ನಿಮ್ಮನ್ನು ಮೆಚ್ಚಬೇಕು ಎನ್ನುವುದರಲ್ಲೇ ನಿಮ್ಮ ಬಹುತೇಕ ಸಮಯ, ಶಕ್ತಿ ಹಾಳು ಮಾಡಿಕೊಳ್ಳಬೇಡಿ. ಕಷ್ಟಪಡುತ್ತಾ ದುಡಿದು, ಕೊನೆಗೆ ಖುಷಿಯೇ ಇಲ್ಲದಿದ್ದರೆ, ಕಷ್ಟಪಟ್ಟು

ಏನುಪಯೋಗ?
ನೀವು ಮೊದಲು ಮಾಡಬೇಕಿರುವುದು ಇಷ್ಟೇ- ಜನರನ್ನು ಮೆಚ್ಚಿಸುವ ಹುಚ್ಚು ಪ್ರಯತ್ನಗಳನ್ನು ಬಿಡಿ. ಇಂಥ ಗುಣ ನಿರಂತರ ಪ್ರಯತ್ನದಿಂದಾಗಿ ಬೆಳೆಯುವಂಥದ್ದು. ಆಗ ಖಂಡಿತ ಸಂತೋಷ-ಸಮೃದ್ಧಿ
ನಿಮ್ಮದಾಗುತ್ತದೆ.

ಹಣವೇ ಮುಖ್ಯವಲ್ಲ ಎನ್ನುವುದನ್ನೂ ಕಲಿತಿದ್ದೇನೆ (ಅದೂ ಹಣ ಗಳಿಸಿಯೇ ಹೊರತು, ಯಾರಧ್ದೋ ಮಾತು ಕೇಳಿ ಅಲ್ಲ)

ಎಲ್ಲರೂ ತಮಗೆ ನಿಜಕ್ಕೂ ಹೇಳಬೇಕಾಗಿರುವುದನ್ನು ಅದರಲ್ಲಿ ಹೇಳುವುದಿಲ್ಲ, ಬದಲಾಗಿ, ಯಾವುದಕ್ಕೆ ಹೆಚ್ಚು ಲೈಕ್‌ ಸಿಗುತ್ತದೋ ಅದನ್ನು ಮಾತ್ರ ಹೇಳುತ್ತಿರುತ್ತಾರೆ.

ಗ್ಯಾರಿ ವೇಯ್ನರ್‌ ಚೆಕ್‌ , ಅಮೆರಿಕನ್‌ ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next