Advertisement

ಕರ್ನಾಟಕದ 12 ದ್ವೀಪಗಳಿಗಾಗಿ ಗೋವಾ ಸರಕಾರದಿಂದ ಕೇಂದ್ರಕ್ಕೆ ಮನವಿ

02:16 PM Oct 20, 2021 | Team Udayavani |

ಪಣಜಿ: ದೇಶದಲ್ಲಿ ರಾಜ್ಯ ರಾಜ್ಯಗಳ ನಡುವೆ ನಡೆಯುತ್ತಿರುವ ವಾದ ವಿವಾದಗಳು ಹೊಸತೇನಲ್ಲ. ಇದೀಗ ದ್ವೀಪಗಳನ್ನು ತಮ್ಮ ವ್ಯಾಪ್ತಿಗೆ ಪಡೆದುಕೊಳ್ಳಲು ರಾಜ್ಯಗಳ ನಡುವೆ ಪ್ರಯತ್ನ ನಡೆಯುತ್ತಿದೆ. ಗೋವಾ ಸರಕಾರವು ಕರ್ನಾಟಕದ ಬಳಿಯಿರುವ 12 ದ್ವೀಪಗಳನ್ನು ಪಡೆದುಕೊಳ್ಳಲು ಭಾರತ ಸರಕಾರದ ಬಳಿ ಮನವಿ ಮಾಡಿದ್ದು ಈ ಕುರಿತ ಪತ್ರವನ್ನು ಕೇಂದ್ರಕ್ಕೆ ಕಳುಹಿಸಿದೆ. ಭಾರತ ಸರಕಾರವು ಈ ಪತ್ರವನ್ನು ಕರ್ನಾಟಕಕ್ಕೆ ಕಳುಹಿಸಿದೆ ಎನ್ನಲಾಗಿದ್ದು ಕರ್ನಾಟಕ ಸರಕಾರವು ಕಾರವಾರ ಜಿಲ್ಲಾಧಿಕಾರಿಗಳಿಗೆ ಸರ್ವೆ ನಡೆಸಲು ಆದೇಶ ಹೊರಡಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

Advertisement

ಕಾರವಾರದ ಸಮೀಪವಿರುವ ಅಂಜಿವಾಡಾ, ಕೂರ್ಮಗಡ, ದೇವಗಡ, ಗುಂಜಿ, ಜನಿಗುಡ್ಡ, ಮದಲಿಗುಡ್ಡ, ಸೇರಿದಂತೆ 12 ದ್ವೀಪಗಳನ್ನು ಪಡೆದುಕೊಳ್ಳಲು ಗೋವಾ ಸರಕಾರ ಪ್ರಯತ್ನ ನಡೆಸಿದೆ.

ಈ ಕುರಿತ ಪತ್ರವನ್ನು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸರಕಾರವು ಕೇಂದ್ರ ಗೃಹಮಂತ್ರಾಲಯಕ್ಕೆ ಕಳುಹಿಸಿದೆ. ಈ ಕುರಿತು ಸಂಬಂಧಿತ ದ್ವೀಪಗಳಿಗೆ ಸಂಬಂಧಿಸಿದ ವರದಿಯನ್ನು ಕಳುಹಿಸುವಂತೆ ಕೇಂದ್ರವು ಕರ್ನಾಟಕ ಸರಕಾರಕ್ಕೆ ಸೂಚನೆ ನೀಡಿದೆ ಎನ್ನಲಾಗಿದೆ. ಈ ದ್ವೀಪಗಳು ಕರ್ನಾಟಕ ಕಡಲ ತೀರದಿಂದ ಸುಮಾರು 12 ರಿಂದ 15 ನಾಟಿಕಲ್ ಮೈಲಿ ದೂರವಿದ್ದು ಭೌಗೋಳಿಕವಾಗಿ ಕರ್ನಾಟಕ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. 1947 ರಲ್ಲಿ ಭಾರತ ಬ್ರಿಟೀಷರಿಂದ ಸ್ವಾತಂತ್ರ್ಯಗೊಂಡರೂ ಪೋರ್ಚುಗೀಸರು ಗೋವಾದಲ್ಲಿ ಆಡಳಿತ ಕೊನೆಗೊಳಿಸಿರಲಿಲ್ಲ. ಹೀಗಾಗಿ ಈ ನಡುಗಡ್ಡೆಗಳು ಸ್ವಾತಂತ್ರ್ಯದ ಬಳಿಕ ದಶಕಗಳ ಕಾಲ ಪೋರ್ಚುಗೀಸರ ಹಿಡಿತದಲ್ಲಿಯೇ ಇದ್ದ ಕಾರಣ ಅವು ಗೋವಾ ರಾಜ್ಯದ ಹೆಸರಿನಲ್ಲಿಯೇ ದಾಖಲಾಗಿದ್ದವು.

ಪೋರ್ಚುಗೀಸರು ಭಾರತ ಬಿಟ್ಟು ತೆರಳಿದ ಬಳಿಕ ಕರ್ನಾಟಕದ ಕಂದಾಯ ಇಲಾಖೆ ಈ ನಡುಗಡ್ಡೆಗಳನ್ನು ತನ್ನ ಹೆಸರಿಗೆ ಮಾಡಿಕೊಳ್ಳಬೇಕಿತ್ತು. ಆದರೆ ಕಂದಾಯ ಭೂ ದಾಖಲೆ ಪುಟದಲ್ಲಿ ಇವುಗಳ ಸೇರ್ಪಡೆ ಆಗಿಲ್ಲ. ಹೀಗಾಗಿ 500 ವರ್ಷದ ಹಿಂದಿನ ದಾಖಲೆಯ ಪ್ರಕಾರ ಈ ನಡುಗಡ್ಡೆಗಳು ಇನ್ನೂ ಗೋವಾದ ಹೆಸರಿನಲ್ಲೇ ಇದೆ. ಆದರೆ ಹೆಸರಿಗೆ ಮಾತ್ರ ಕಾರವಾರ ಬಳಿಯ ನಡುಗಡ್ಡೆಗಳಾಗಿ ರಾಜ್ಯಕ್ಕೆ ಸೀಮಿತವಾಗಿದೆ.
ಕಾರವಾರ ಬಳಿಯ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಗುಡಿಯಿದ್ದು ಅಲ್ಲಿನ ಪೂಜಾ ಕೈಂಕರ್ಯಗಳನ್ನು ಕಾರವಾರದ ಕಡವಾಡದ ಮನೆತನವೇ ನೋಡಿಕೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next