Advertisement

ಸಾರಸ್ವತ ಲೋಕದಲ್ಲಿ ಪರ-ವಿರೋಧ ಜಂಗೀಕುಸ್ತಿ

08:15 AM Mar 14, 2018 | |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ಅಧಿಕಾರವಧಿ 3 ರಿಂದ 5 ವರ್ಷಕ್ಕೆ ವಿಸ್ತರಿಸುವುದು ಸೇರಿ ಬೈಲಾಗೆ ಹಲವು ತಿದ್ದುಪಡಿ ತರುವ ವಿಚಾರ ಸಾರಸ್ವತ ಲೋಕದಲ್ಲಿ ಈಗ ಪರ ಮತ್ತು ವಿರೋಧದ ಚರ್ಚೆಗೆಡೆ ಮಾಡಿಕೊಟ್ಟಿದೆ. ಮಾ.15ರಂದು ಡಾ.ಶಿವರಾಮ ಕಾರಂತರ ಹುಟ್ಟೂರು, ಉಡುಪಿ ಜಿಲ್ಲೆಯ ಕೋಟಾದಲ್ಲಿ ಸರ್ವಸದಸ್ಯರ ಸಭೆ ನಡೆಸಿ ಪರಿಷತ್‌ನ ಕೆಲವು
ನಿಯಮಗಳಿಗೆ ತಿದ್ದುಪಡಿ ತರಲು ಕಸರತ್ತು ನಡೆಸಿರುವುದು ಅಪಸ್ವರಕ್ಕೆ ಕಾರಣವಾಗಿದೆ. ಮತ್ತೂಂದು ಬಣದಿಂದ ಇದರ ವಿರುದ್ಧ
ನ್ಯಾಯಾಲಯದ ಮೊರೆ ಹೋಗುವ ಪ್ರಯತ್ನವೂ ನಡೆದಿದೆ. ಕಸಾಪ ಕಾರ್ಯಕಾರಿಣಿ ಸಮಿತಿ ಅವಧಿ ಐದು ವರ್ಷಕ್ಕೆ ಏರಿಕೆ ಮಾಡುತ್ತಿರುವುದು ಅಪಾ  ಯಕಾರಿ ನಡೆ. ಇದರಿಂದ ಪರಿಷತ್‌ ಪ್ರಭಾವಿಗಳ ಹಿಡಿತಕ್ಕೆ ಸಿಗಬಹುದೆಂಬ ಆತಂಕ ಸಾಹಿತ್ಯ
ಲೋಕದಲ್ಲಿನ ಕೆಲವರದ್ದಾಗಿದೆ. ಆದರೆ ಈ ಹಿಂದೆಯೂ ಬೈಲಾಗೆ ತಿದ್ದುಪಡಿ ತರುವುದಕ್ಕೆ ಕಸಾಪ ಮುಂದಾಗಿತ್ತು. ಈಗ ಮತ್ತೆ ಆ ಪ್ರಯತ್ನಕ್ಕೆ ಮುಂದಾಗಿದ್ದು ಒಳ್ಳೆಯ ಬೆಳವಣಿಗೆ ಎಂದು ಹಿರಿಯ ಸಾಹಿತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಪರಿಷತ್‌ ಅರ್ಥಿಕವಾಗಿ ತುಂಬಾ ಸಂಕಷ್ಟದ ದಿನಗಳಲ್ಲಿದ್ದಾಗ ಗೊ.ರು.ಚನ್ನಬಸಪ್ಪ ಅವರು “ಅಮೃತ ನಿಧಿ’ ಸಂಗ್ರಹಿಸಿ ಸಾಹಿತ್ಯ ಪರಿಷತ್‌ಗೆ ಆರ್ಥಿಕ ಸ್ವಾವಲಂಬನೆ ಕೊಟ್ಟಿದ್ದರು. ಆದರೆ, ಈಗ ಸರ್ಕಾರವೇ ವಾರ್ಷಿಕ ಸಮ್ಮೇಳನ ಸೇರಿ ಇತರೆ ಕಾರ್ಯಕ್ರಮಗಳಿಗೆ 12 ಕೋಟಿ ರೂ. ನೀಡುತ್ತಿದೆ. ಇಷ್ಟಾದರೂ ಏನು ಕೆಲಸವಾಗುತ್ತಿದೆ ಎಂಬ ಪ್ರಶ್ನೆಯೂ ಹಲವರದ್ದು. ಬೈಲಾ ತಿದ್ದುಪಡಿಗೆ ಅಸಮಾಧಾನ ವ್ಯಕ್ತಪಡಿಸಿರುವ ಲೇಖಕ ರಾಮಣ್ಣ ಕೋಡಿಹೊಸಹಳ್ಳಿ, ಈ ಹಿಂದೆಯೂ ಕಸಾಪ ಅಧ್ಯಕ್ಷರ ಅಧಿಕಾರ ಅವಧಿ
ವಿಸ್ತರಣೆ ಪ್ರಯತ್ನ ನಡೆದಿತ್ತು. ಆರ್ಥಿಕ ದುರ್ಬಳಕೆ ಆರೋಪವೂ ಕೇಳಿ ಬಂದಿತ್ತು. ಆಗ ಸರ್ಕಾರ ಶ್ಯಾಮ್‌ಸುಂದರ್‌ ಆಯೋಗ ರಚಿಸಿ ಅವ್ಯವಹಾರಗಳಿಗೆ ಮೂಗುದಾರ ಹಾಕಲಾಗಿತ್ತು. ಇದನ್ನು ಈಗಿನ ಕಾರ್ಯಕಾರಿಣಿ ಗಮನಿಸಬೇಕು ಎಂದಿದ್ದಾರೆ.

ಚಿಂತಕ ಹರಿಹರಪ್ರಿಯ, ಈಗಿರುವ ಕಾರ್ಯಕಾರಿಣಿ ಸದಸ್ಯರಿಗೆ ಅಧಿಕಾರದ ದಾಹ ಶುರುವಾಗಿದೆ. ಹೀಗಾಗಿಯೇ ಸಾಹಿತ್ಯ ಪರಿಷತ್ತಿನ
ನಿಯಮಗಳ ತಿದ್ದುಪಡಿಗೆ ಮುಂದಾಗಿದ್ದಾರೆ. ಅಧಿ ಕಾರ ಅವಧಿಯನ್ನು ವಿಸ್ತರಣೆ ಮಾಡುವುದಾದರೆ ಈಗಿರುವ ಕಾರ್ಯಕಾರಿಣಿಯ ಅವಧಿ ಮುಗಿದ ನಂತರ ಮಾಡಬಹುದಾಗಿತ್ತಲ್ಲ ಎಂದು ಪ್ರಶ್ನಿಸಿದ್ದಾರೆ. ಸಾಹಿತ್ಯ ಪರಿಷತ್‌ನ ಸದಸ್ಯರಲ್ಲಿ ಬೆಂಗಳೂರಿನಲ್ಲಿಯೇ 35 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇಲ್ಲಿ ಸಭೆ ನಡೆಸುವುದು ಬಿಟ್ಟು ಉಡುಪಿ ಜಿಲ್ಲೆಯ ಕೋಟಾದಲ್ಲಿ ಸಭೆ ನಡೆಸುವ ಆಗತ್ಯ ಏನಿತ್ತು ಎನ್ನುತ್ತಾರೆ. ಈ ಹಿಂದೆ ನಾನು ಕಸಾಪ ಅಧ್ಯಕ್ಷನಾಗಿದ್ದ ವೇಳೆ ಬೈಲಾ ತಿದ್ದುಪಡಿಗೆ ಮುಂದಾಗಿದ್ದೆ. ಹರಿಕೃಷ್ಣ ಪುನರೂರು ಅಧ್ಯಕ್ಷರಾಗಿದ್ದಾಗಲೂ ಈ ಪ್ರಯತ್ನ ನಡೆದಿತ್ತು. ಆದರೆ ಸಫ‌ಲವಾಗಲಿಲ್ಲ. ಮತ್ತೆ ಈ ಕಾರ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಮುಂದಾಗಿರುವು ದು ಒಳ್ಳೆಯ ಬೆಳವಣಿಗೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ತಿಳಿಸುತ್ತಾರೆ. 

ನಾನು ಕುರ್ಚಿಗಾಗಿ ಅಂಟಿಕೊಂಡವನಲ್ಲ. ಎಲ್ಲ ಅಧಿಕಾರವನ್ನೂ ಅನುಭವಿಸಿ ಬಂದಿದ್ದೇನೆ. ಕೋಟಾದಲ್ಲಿ ಸರ್ವಸದಸ್ಯರ ಸಭೆ ನಡೆಯುತ್ತದೆ. ಅಲ್ಲಿ ಏನು ತೀರ್ಮಾನವಾಗುತ್ತದೆಯೋ ಅದಕ್ಕೆ ಬದ್ಧ.
● ಮನು ಬಳಿಗಾರ್‌, ಕಸಾಪ ಅಧ್ಯಕ್ಷ

ಸರ್ವ ಸದಸ್ಯರ ಸಭೆ ಎಲ್ಲಿ  ಬೇಕಾದರೂ ನಡೆಯಬಹುದು. ಈ ಹಿಂದೆ ಉಡುಪಿಯಲ್ಲೂ ನಡೆದಿರುವ ಉದಾಹರಣೆ ಇದೆ. ಬೈಲಾ ತಿದ್ದುಪಡಿಗೆ ವಿರೋಧ ಮಾಡುವವರು ಕಾರ್ಯ ಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲಿ. 
● ಲೀಲಾದೇವಿ ಆರ್‌. ಪ್ರಸಾದ್‌, ಮಾಜಿ ಸಚಿವೆ

Advertisement

ರಾಜಕೀಯ ಮಾದರಿಗಳಲ್ಲಿ ಸಾಹಿತ್ಯ ಪರಿಷತ್‌ ಆಗಬಾರದು. ರಾಜಕೀಯವೇ ಬೇರೆ ಸಾಹಿತ್ಯ ಕ್ಷೇತ್ರವೇ ಬೇರೆ. ಉತ್ತಮ ಕೆಲಸ ಮಾಡಲು ಮೂರು ವರ್ಷ ಸಾಕು.
● ಶ್ರೀಕಂಠ ಕೂಡಿಗೆ, ಜಾನಪದ ಸಂಶೋಧಕ

ಸಾಹಿತ್ಯ ಪರಿಷತ್‌ ಚುನಾವಣೆ ಈ ಹಿಂದಿನಂತೆ ಆಗುತ್ತಿಲ್ಲ. ಲಕ್ಷಾಂತರ ರೂ. ಖರ್ಚು ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸುವಂತೆ ಪರಿಷತ್‌ಗೆ ಪತ್ರ ಬರೆದು ಮನವಿ ಮಾಡಿದ್ದೆ. ಆದರೆ ಕೋಟಾದಲ್ಲಿ ಸಭೆ ಆಯೋಜಿಸಿರುವುದು ಸರಿ ಅಲ್ಲ. 
● ಎಸ್‌.ಎಸ್‌.ಪಾಟೀಲ್‌, ಮಾಜಿ ಸಚಿವ

ಕಾಲ ಕಾಲಕ್ಕೆ ಸಂವಿಧಾನದಲ್ಲಿ ತಿದ್ದುಪಡಿ ತರಲಾಗುತ್ತದೆ. ಅದೇ ರೀತಿಯಲ್ಲಿ ಇಲ್ಲಿಯೂ ನಡೆದಿದೆ. ಕಸಾಪ ನಡೆ ಸ್ವಾಗತಾರ್ಹ ಬೆಳವಣಿಗೆ. ಆದರೆ ಮಧ್ಯ ಕರ್ನಾಟಕದಲ್ಲಿ ಈ ಸಭೆ ನಡೆಸಬೇಕಾಗಿತ್ತು. 
● ಸಿ.ಕೆ.ರಾಮೇಗೌಡ, ಬೆಂ.ನಗರ, ಕಸಾಪ ಮಾಜಿ ಅಧ್ಯಕ್ಷ

● ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next