ಸಂಗೀತ ಎನ್ನುವುದು ಒಂದು ಸ್ವತಂತ್ರವಾದ ಕಲೆ. ಸ್ವತಂತ್ರವಾಗಿ ತನ್ನ ಅಸ್ತಿತ್ವವನ್ನು ಕಂಡುಕೊಂಡು, ಜನರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವ ವೈಶಿಷ್ಟ್ಯಪೂರ್ಣವಾಗಿರುವ ಕಲೆ. ಶ್ರೋತೃ ವರ್ಗಕ್ಕೆ ಅಲೌಕಿಕವಾದ ಆನಂದವನ್ನು ಒದಗಿಸುವುದರೊಂದಿಗೆ ಸಮಾಜಕ್ಕೆ ಉತ್ತಮ ಮೌಲ್ಯಗಳನ್ನು ನೀಡುವಂತಹ ಶಕ್ತಿ ಸಂಗೀತದ್ದು. ಇಂತಹ ಕಲೆಯನ್ನು ಬೆಳೆಸುವ ಕಾರ್ಯದಲ್ಲಿ ವಿ| ಕಾಂಚನ ಎ. ಈಶ್ವರ ಭಟ್ ಇವರ ನೇತೃತ್ವದಲ್ಲಿ “ಸುನಾದ’ ಸಂಸ್ಥೆ ಅವಿರತ ಶ್ರಮಿಸುತ್ತಿದೆ. “ಸುನಾದ ಯುವದನಿ’ ಎಂಬ ಸರಣಿಯಲ್ಲಿ ನಾಡಿನ ಹಲವಾರು ಯುವ ಕಲಾವಿದರುಗಳ ಕಛೇರಿಗಳನ್ನು ಏರ್ಪಡಿಸಿ, ಪ್ರೋತ್ಸಾಹಿಸುವುದರೊಂದಿಗೆ ಸಂಗೀತದ ಅಭಿರುಚಿಯನ್ನು ಪಸರಿಸುವುದು ಕಾರ್ಯಕ್ರಮದ ಮೂಲ ಉದ್ದೇಶ.
ಸುನಾದ ಯುವದನಿ ಸರಣಿಯಲ್ಲಿ 154ನೆಯ ಕಾರ್ಯಕ್ರಮ “ಸುನಾದ’ ಸಭಾಂಗಣದಲ್ಲಿ ಈಚೆಗೆ ಸಂಪನ್ನಗೊಂಡಿತು. ಮೊದಲಿಗೆ ಕು| ಹರ್ಷಿತಾ ವರ್ಣಿಕಾ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸ್ಫೂರ್ತಿದಾಯಕ ಗಾಯನದೊಂದಿಗೆ ಉತ್ತಮ ಕಲಾವಿದೆಯಾಗುವ ಭರವಸೆಯನ್ನು ಮೂಡಿಸಿದರು. ಇವರಿಗೆ ವಯಲಿನ್ನಲ್ಲಿ ಡಾ| ರಾಮಕೃಷ್ಣ ಭಟ್, ಮೃದಂಗದಲ್ಲಿ ಪೃಥ್ವೀರಾಜ್ ಸಹಕರಿಸಿದರು.
ತದನಂತರ ಬೆಂಗಳೂರಿನ ವಿನಯ ಎಸ್. ಆರ್. ಇವರಿಂದ ಸಂಗೀತ ಕಛೇರಿ ನಡೆಯಿತು. ಮೈಸೂರು ವಾಸುದೇವಾಚಾರ್ಯರ ನಳಿನಕಾಂತಿ ರಾಗದ ವರ್ಣದೊಂದಿಗೆ ಕಾರ್ಯಕ್ರಮ ಆರಂಭಿಸಿದ ಕಲಾವಿದರು ನಾಟ ರಾಗದ ಚುಟುಕಾದ ಆಲಾಪನೆ, ಸ್ವರ ಪ್ರಸ್ತಾರದೊಂದಿಗೆ ಜಯ ಜಯ ಸ್ವಾಮಿನ್ ಕೃತಿಯನ್ನು ಪ್ರಸ್ತುತಪಡಿಸಿದರು. ಅನಂತರ ಅಸಾವೇರಿಯ ಮಾಂಪಾಲವೆಲಸಿ ಇಕ ಕೃತಿಯು ಗಂಭೀರವಾಗಿ ಮೂಡಿಬಂದಿತು. ಪೂರ್ವಿಕಲ್ಯಾಣಿಯ ಆಲಾಪನೆಯೊಂದಿಗೆ ಪರಿಪೂರ್ಣಕಾಮ ಭಾವಮುನ ಬಹಳ ಅಚ್ಚುಕಟ್ಟಾಗಿ ನಿರೂಪಿಸಿದರು. ಸಾಕೇತಾಧಿಪನೀಮುಖ ಎಂಬಲ್ಲಿನ ನೆರವಲ್ ಹಾಗೂ ಸ್ವರ ಪೋಣಿಕೆಗಳು ಹಿತವೆನಿಸಿದವು. ಪ್ರಧಾನ ರಾಗವಾಗಿ ಹರಿಕಾಂಭೋಜಿಯ ಒಳಹು ಹೊರಹುಗಳು ಚೆನ್ನಾಗಿ ನಿರೂಪಿತವಾಯಿತು. ಎಂತರಾ ನೀ ಕೃತಿಯಲ್ಲಿನ ನೆರವಲ್, ಸ್ವರಪ್ರಸ್ತಾರಗಳು ಭಿನ್ನವಾಗಿ ಮೂಡಿಬಂದವು. ಅನಂತರ ಕಲಿಯುಗದ ಮಹಿಮೆಯು, ಸರ್ವಂ ಬ್ರಹ್ಮಮಯಂ ರಚನೆಗಳು ಭಾವಪೂರ್ಣವಾಗಿ ಪ್ರಸ್ತುತವಾದವು.
ವಿ| ಶಿಲ್ಪಾ ಸಿ. ಎಚ್.