Advertisement

ರೈತರು ಬಯಸಿದರೆ ಮತ್ತೊಂದು ಸಭೆ: ಸಿಎಂ

06:05 AM Dec 07, 2018 | Team Udayavani |

ಬೆಂಗಳೂರು: ರೈತರು ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಅವರು ಬಯಸಿದರೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮತ್ತೂಂದು ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರೈತರಿಗೆ ಭರವಸೆ ನಿಡಿದ್ದಾರೆ.

Advertisement

“ವೈಜ್ಞಾನಿಕ ರೀತಿಯಲ್ಲಿ ರೈತರ ಸಾಲಮನ್ನಾ ಹಾಗೂ ಕಾರ್ಖಾನೆಗಳಿಂದ ರೈತರಿಗೆ ಬರಬೇಕಿರುವ ಬಾಕಿಯನ್ನು ಕೊಡಿಸುವ ಜವಾಬ್ದಾರಿ ನ‌ಮ್ಮದು” ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರೈತ ಮುಖಂಡರಿಗೆ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ರೈತರೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸಿದ ಮುಖ್ಯಮಂತ್ರಿಗಳು, “”ಸಾಲಮನ್ನಾ ವಿಷಯದಲ್ಲಿ ಸಹಕಾರ ಬ್ಯಾಂಕ್‌ಗಳಿಂದ ಯಾವುದೇ ಸಮಸ್ಯೆ ಇಲ್ಲ. ಸಹಕಾರ ಬ್ಯಾಂಕ್‌ಗಳಲ್ಲಿ 2 ಲಕ್ಷವರೆಗಿನ ಸಾಲಮನ್ನಾ ಮಾಡುವ ಘೋಷಣೆ ಮಾಡಿದ್ದು, ಆ ಬ್ಯಾಂಕ್‌ಗಳಲ್ಲಿ ರೈತರು 10,300 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಈ ವರ್ಷ 9,800 ಕೋಟಿ ರೂಪಾಯಿ ಮನ್ನಾ ಆಗುತ್ತದೆ. ಈಗಾಗಲೇ ನವೆಂಬರ್‌ನಲ್ಲಿ ಮೊದಲ ಕಂತಿನಲ್ಲಿ 1,200 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ” ಎಂದು ತಿಳಿಸಿದರು.

“”ಸಾಲಮನ್ನಾ ವಿಷಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 2.80 ಲಕ್ಷ ರೈತರ ಅಕೌಂಟ್‌ಗಳು ಎನ್‌ಪಿಎ (ಅನುತ್ಪಾದಕ) ಆಗಿದ್ದು, ಅದರಲ್ಲಿ ರಿಯಾಯ್ತಿ ನೀಡುವಂತೆ ಬ್ಯಾಂಕ್‌ನ ಆಡಳಿತ ಮಂಡಳಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಈ ಕುರಿತು ರಾಷ್ಟ್ರೀಕೃತ ಬ್ಯಾಂಕ್‌ಗಳ ಜೊತೆಗೆ ಮಾತುಕತೆ ನಡೆದಿದೆ. ಸುಮಾರು 17 ಲಕ್ಷ ರೈತರಿಗೆ ತಿಂಗಳಿಗೆ 50 ಸಾವಿರ ರೂ.ನಂತೆ ಮೊದಲ ಕಂತಿನಲ್ಲಿ ಹಣ ಬಿಡುಗಡೆ ಮಾಡುತ್ತೇವೆ. ಅದಕ್ಕಾಗಿ ಈ ವರ್ಷ ಬಜೆಟ್‌ನಲ್ಲಿ 17 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಯಾವುದೇ ರೈತರು ಆತಂಕ ಪಡುವ ಅಗತ್ಯವಿಲ್ಲ. ಇದರಿಂದ 44 ಲಕ್ಷ ರೈತ ಕುಟುಂಬಳಿಗೆ ಅನುಕೂಲವಾಗಲಿದೆ” ಎಂದರು.

“ಕಬ್ಬಿನ ಬೆಲೆ ನಿಗದಿ ಕುರಿತಂತೆ ಸರ್ಕಾರ ರೈತರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಕಳೆದ ವರ್ಷದ ಬಾಕಿ ಹಣ ನೀಡುವಂತೆ ಕಾರ್ಖಾನೆ ಮಾಲೀಕರಿಗೆ ಸೂಚಿಸಲಾಗಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಎಫ್ಆರ್‌ಪಿ ಪ್ರಕಾರ 2000 ಕೋಟಿ ರೂ. ಹಣ ಬಾಕಿ ಉಳಿದಿತ್ತು. ಈಗ ಕೇವಲ 28 ಕೋಟಿ ರೂ.ಬಾಕಿ ಉಳಿದಿದ್ದು, ಅದನ್ನು ಆದಷ್ಟು ಶೀಘ್ರವೇ ರೈತರಿಗೆ ನೀಡುವಂತೆ ಕಾರ್ಖಾನೆ ಮಾಲೀಕರಿಗೆ ಸೂಚಿಸಲಾಗಿದೆ” ಎಂದು ಹೇಳಿದರು.

Advertisement

“ಕಾರ್ಖಾನೆ ಮಾಲೀಕರು ರೈತರೊಂದಿಗೆ ಅಧಿಕೃತ  ಒಪ್ಪಂದ ಮಾಡಿಕೊಂಡು ಹಣ ನೀಡದಿದ್ದರೆ, ಕೋರ್ಟ್‌ ಆದೇಶ ಉಲ್ಲಂಘನೆ ಮಾಡಿದ್ದರೆ, ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ರಾಜಕಾರಣಿಗಳೇ ಕಾರ್ಖಾನೆ ಮಾಲೀಕರಾಗಿದ್ದು, ಸರ್ಕಾರ ಇದರಲ್ಲಿ ಮಧ್ಯ ಪ್ರವೇಶ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ರೈತರು ನನ್ನ ಮೊದಲ ಆದ್ಯತೆ ನಿಮಗೆ ನಾನು ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ತೂಕದಲ್ಲಿ ಮೋಸ, ವಂಚನೆ ಮಾಡುವುದನ್ನು ತಡೆಗಟ್ಟಲು ವೈಜ್ಞಾನಿಕ ನಿಯಮ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದರು.

“ರೈತರ ಬೆಳೆಗೆ ಬೆಂಬಲ ಬೆಲೆ, ಬೆಳೆ ಪರಿಹಾರ, ಫ‌ಸಲ್‌ ಬಿಮಾ ಯೋಜನೆಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಲು ಪ್ರಯತ್ನ ನಡೆಸಲಾಗುವುದು. ರಾಜ್ಯ ಸರ್ಕಾರ ಯಾವುದಕ್ಕೂ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿಲ್ಲ. ಫೆಬ್ರವರಿಯಲ್ಲಿ ಹೊಸ ಬಜೆಟ್‌ ಮಂಡನೆ ಮಾಡುವುದರಿಂದ ರೈತರ ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಗುವುದು” ಎಂದು ಹೇಳಿದರು.

ತೆಂಗು ಹಾನಿಗೆ ಪರಿಹಾರ:
ಮಲೆನಾಡು, ಕರಾವಳಿ ಭಾಗದಲ್ಲಿ ತೆಂಗು ಬೆಳೆ ಹಾನಿಗೆ ಪರಿಹಾರ ನೀಡಲು 190 ಕೋಟಿ ರೂ. ಹಣ ಮೀಸಲಿಡಲಾಗಿದೆ. ಪ್ರತಿ ಗಿಡಕ್ಕೆ 50 ರೂ.ನಂತೆ ಪರಿಹಾರ ನೀಡಲು ಸೂಚಿಸಲಾಗಿದೆ. ಪ್ರತಿ ಎಕರೆಗೆ ಸುಮಾರು 20 ಸಾವಿರ ರೂ. ಪರಿಹಾರ ದೊರೆಯಲಿದೆ. ಸರ್ಕಾರದ ಬಳಿ ಹಣಕ್ಕೆ ಸಮಸ್ಯೆ ಇಲ್ಲ. ಆದರೆ, ಪರಿಹಾರದ ಹಣ ಮಧ್ಯವರ್ತಿಗಳ ಪಾಲಾಗಬಾರದು ಎನ್ನುವ ಕಾರಣಕ್ಕೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪರಿಹಾರ ಒದಗಿಸಲಾಗುತ್ತಿದೆ ಎಂದು ಹೇಳಿದರು.

ರೇಷ್ಮೆಗೆ ಬೆಂಬಲ ಬೆಲೆ:
ಬೆಲೆ ಕುಸಿತದಿಂದ ಕಂಗಾಲಾಗಿರುವ ರೇಷ್ಮೆ ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ. ಬಸವರಾಜು ವರದಿ ಪ್ರಕಾರ 50 ಮತ್ತು 100 ರೂ. ಬೆಂಬಲ ಬೆಲೆ ನೀಡುವಂತೆ ಸೂಚಿಸಲಾಗಿದೆ. ಜುಲೈ 2018 ರಿಂದ ಸೆಪ್ಟೆಂಬರ್‌ 2018ರ ವರೆಗೆ ಬೆಂಬಲ ಬೆಲೆ ನೀಡಲು 98 ಲಕ್ಷ ರೂ. ಬಿಡುಗಡೆ ಮಾಡಿದ್ದು, 8,735 ರೈತರು ಇದರ ಲಾಭ ಪಡೆಯಲು ಅರ್ಹರಾಗಿದ್ದಾರೆ. ಬೆಂಬಲ ಬೆಲೆ ನೀಡುವ ಅವಧಿವನ್ನು 2019 ಜನವರಿ 31ರ ವರೆಗೂ ವಿಸ್ತರಿಸಲಾಗಿದೆ. ಈ ವರ್ಷ 10 ಲಕ್ಷ ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಹೆಚ್ಚಳವಾಗಿದೆ ಎಂದು ಹೇಳಿದರು.

ಅಡಿಕೆ ರಬ್ಬರ್‌ ಸಮಸ್ಯೆಗೂ ಪರಿಹಾರ
ಕರಾವಳಿ ಭಾಗದಲ್ಲಿ ಅಡಿಕೆ ಬೆಲೆ ಕುಸಿತದಿಂದ ಸಮಸ್ಯೆಯಾಗಿದೆ ಎಂದು ರೈತರು ಮನವಿ ಮಾಡಿದ್ದು, ಅಡಿಕೆ ಬಗ್ಗೆ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು ಮಾಡಿಕೊಂಡಿದೆ. ಇದರಿಂದ ಸಮಸ್ಯೆಯಾಗಿದೆ. ಅಡಿಕೆ ಬೆಳೆಗಾರರ ಸಮಸ್ಯೆ ಕುರಿತು 
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಶೀಘ್ರವೇ ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

ಸಿಎಂ ಪರಿಹಾರ ನಿಧಿಯಿಂದ 28 ಕೋಟಿ
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 28 ಕೋಟಿ ರೂಪಾಯಿ ಹಣ ನೀಡಲಾಗಿದೆ. ಆರ್ಥಿಕ ವರ್ಷ ಮುಗಿಯುವಷ್ಟರಲ್ಲಿ ಸುಮಾರು 70 ಕೋಟಿ ಮುಟ್ಟುವ ಸಾಧ್ಯತೆ ಇದೆ. ಹೀಗಾಗಿ ಪರಿಹಾರ ನಿಧಿಯ ಹಣವನ್ನೇ ವಿಮೆ ಮಾಡಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಹೇಳಿದರು. ಯಶಸ್ವಿನಿ ಯೋಜನೆ ಕೈಬಿಟ್ಟಿರುವುದರಿಂದ ರೈತರಿಗೆ ಆಗುತ್ತಿರುವ ಸಮಸ್ಯೆಯ ಸಾಧಕ ಬಾಧಕ ಕುರಿತು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೊಡಗಿನ ಪರಿಹಾರ ದುರ್ಬಳಕೆ ಆಗಿಲ್ಲ:
ಕೊಡಗಿನ ಪ್ರವಾಹ ಪೀಡಿತರಿಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ನೀಡಿದ ಪರಿಹಾರದ ಹಣ ಬೇರೆ ಯಾವುದೇ ಯೋಜನೆಗೂ ಬಳಕೆ ಮಾಡಿಕೊಂಡಿಲ್ಲ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 546 ಕೋಟಿ ರೂ. ಹಣವೂ ಯಾವುದೇ ಯೋಜನೆಗೆ ಬಳಸಿಕೊಂಡಿಲ್ಲ. ಎಲ್ಲವನ್ನೂ ಕೊಡಗು ಪುನರ್‌ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿರುವ ಸಭೆ ಸಮಾಧಾನ ತಂದಿದೆ. ಸಾಲ ಮನ್ನಾ ಮತ್ತು ಬೆಂಬಲ ಬೆಲೆ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಎಲ್ಲದರಲ್ಲಿಯೂ ರಾಜಕೀಯ ಬೆರೆಸುವ ಪ್ರಯತ್ನ ಮಾಡುತ್ತಿದೆ. ಅದರ ಬದಲು ಕೇಂದ್ರ ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸಬೇಕು.
– ಬಿ.ಎಂ. ಹಣಸಿ, ಹುಬ್ಬಳ್ಳಿ ರೈತ ಮುಖಂಡ.

Advertisement

Udayavani is now on Telegram. Click here to join our channel and stay updated with the latest news.

Next