Advertisement

ಅಣ್ಣಯ್ಯ ಅವರ ಪರಿಸರ ಕಾಳಜಿ

06:00 AM Jun 15, 2018 | |

ಸಾಮಾನ್ಯವಾಗಿ ತಮ್ಮ ಮಕ್ಕಳನ್ನು ಸಿನಿಮಾದಲ್ಲಿ ಹೀರೋ ಆಗಿ ಲಾಂಚ್‌ ಮಾಡುವಾಗ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಕಥೆ ಬೇಕು, ಹೀರೋ ಇಂಟ್ರೋಡಕ್ಷನ್‌ ಜೋರಾಗಿರಬೇಕು, ಬಿಲ್ಡಪ್‌ಗ್ಳಿರಬೇಕು ಎಂದು ಬಯಸುವವರೇ ಹೆಚ್ಚು. ಆದರೆ, ಇಲ್ಲೊಂದು ದಂಪತಿ ತಮ್ಮ ಮಗನನ್ನು ಲಾಂಚ್‌ ಪರಿಸರದ ಕಾಳಜಿಯ ಕಥೆಯ ಮೂಲಕ ಲಾಂಚ್‌ ಮಾಡಲು ಮುಂದಾಗಿದೆ. ಆ ಸಿನಿಮಾಕ್ಕೆ ಅವರಿಟ್ಟ ಶೀರ್ಷಿಕೆ “ಸೂರ್ಯ ಇವ ವೃಕ್ಷ ಮಿತ್ರ’. ಈ ಸಿನಿಮಾ ಮೂಲಕ ಸಲ್ಮಾನ್‌ ಎಂಬ ನವನಟ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಈ ಸಿನಿಮಾವನ್ನು ಅವರ ತಾಯಿ ಫಾತಿಮಾ ನಿರ್ಮಿಸಿದ್ದಾರೆ. ಈ ಹಿಂದೆ “ಅಕ್ಟೋಪಸ್‌’ ಸಿನಿಮಾ ಮಾಡಿದ್ದ ಅಣ್ಣಯ್ಯ ಈ ಚಿತ್ರದ ನಿರ್ದೇಶಕರು. 

Advertisement

ಅಂದಹಾಗೆ, “ಸೂರ್ಯ ಇವ ವೃಕ್ಷಮಿತ್ರ’ ಹೆಸರಿಗೆ ತಕ್ಕಂತೆ ಪರಿಸರದ ಕುರಿತ ಕಾಳಜಿಯಳ್ಳ ಸಿನಿಮಾ. ಮುಖ್ಯವಾಗಿ ಜೈವಿಕ ಇಂಧನಗಳನ್ನು ಬಳಸಿ ಪರಿಸರ ಮಾಲಿನ್ಯ ತಪ್ಪಿಸಿ ಎಂಬ ಸಂದೇಶದೊಂದಿಗೆ ಈ ಸಿನಿಮಾ ಸಾಗುತ್ತದೆ. ಅಂದಹಾಗೆ, ಇದು ಪರಿಸರ ಹೋರಾಟಗಾರ ಡಾ.ಯಲ್ಲಪ್ಪ ರೆಡ್ಡಿಯವರ “ಲೈಫ್ ಬಿಯಾಂಡ್‌ ಸೈನ್ಸ್‌’ ಎಂಬ ಕಾದಂಬರಿಯನ್ನಾಧರಿಸಿದೆ. ಎಲ್ಲಾ ಓಕೆ, ಈ ಕಥೆಯನ್ನು ಸಿನಿಮಾ ಮಾಡಲು ಕಾರಣವೇನು ಎಂದು ನೀವು ಕೇಳಬಹುದು. ಅದಕ್ಕೆ ನಿರ್ದೇಶಕ ಅಣ್ಣಯ್ಯ ಉತ್ತರಿಸುತ್ತಾರೆ. “ಮೊದಲು ನಿರ್ಮಾಪಕಿ ಫಾತಿಮಾ ಅವರಿಗೆ ಬೇರೊಂದು ಕಥೆ ಹೇಳಿದೆ. ಅದು ಅವರಿಗೆ ಇಷ್ಟವಾಗಲಿಲ್ಲ. ಪರಿಸರ ಕುರಿತಾದ ಹೊಸ ಬಗೆಯ ಸಿನಿಮಾ ಮಾಡೋಣ ಎಂದರು. ಆಗ ಪರಿಸರ ಹೋರಾಟಗಾರ ಡಾ. ಯಲ್ಲಪ್ಪ ರೆಡ್ಡಿ “ಲೈಫ್ ಬಿಯಾಂಡ್‌ ಸೈನ್ಸ್‌’ ಕಾದಂಬರಿಯನ್ನು ಸಿನಿಮಾ ಮಾಡಲು ಮುಂದಾದೆವು. ಈ ಸಮಯದಲ್ಲಿ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ, ಜೆ.ಎಂ.ಪ್ರಹ್ಲಾದ್‌ ಕೂಡಾ ಸ್ಕ್ರಿಪ್ಟ್ನಲ್ಲಿ ಸಹಕರಿಸಿದರು’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ಅಣ್ಣಯ್ಯ. 

ಚಿತ್ರದ ಕಥೆಯ ಬಗ್ಗೆ ಮಾತನಾಡುವ ಅಣ್ಣಯ್ಯ,  ನಾಯಕ ತನ್ನ ಸಂಶೋಧನೆಯಿಂದ ಮರವೊಂದರ ಬೀಜದಿಂದ ಪೆಟ್ರೋಲ್‌, ಡಿಸೇಲ್‌ ಅನ್ನು ಉತ್ಪಾದಿಸಬಹುದು ಹಾಗೂ ಈ ಮೂಲಕ ಪರಿಸರ ಹಾನಿಯನ್ನು ಕಡಿಮೆ ಮಾಡಬಹುದೆಂಬುದನ್ನು ಕಂಡು ಹಿಡಿಯುತ್ತಾನೆ. ಈ ವೇಳೆ ನಾಯಕನಿಗೆ ಅಡ್ಡಬರುವ ಪೆಟ್ರೋಲಿಯಂ ಕಂಪೆನಿಗಳು ಮತ್ತು ಅದು ಕೊಡುವ ತೊಂದರೆಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಅಂತಿಮವಾಗಿ ಈ ಚಿತ್ರದಲ್ಲಿ ಮುಂದಿನ ದಿನಗಳಲ್ಲಿ ಪರಿಸರ ಉಳಿಸಬೇಕಾದರೆ ಜೈವಿಕ ಇಂಧನಗಳನ್ನು ಬಳಸಬೇಕು ಎಂಬುದನ್ನು ಇಲ್ಲಿ ಹೇಳಲಾಗಿದೆ.  ನಿರ್ಮಾಪಕಿ ಫಾತಿಮಾ ಅವರಿಗೆ ಪರಿಸರದ ಕಾಳಜಿ ಇರುವ ಸಿನಿಮಾ ಮೂಲಕ ಮಗನನ್ನು ಲಾಂಚ್‌ ಮಾಡುತ್ತಿರುವ ಖುಷಿ ಇದೆಯಂತೆ. ಇನ್ನು ಚಿತ್ರದಲ್ಲಿ ರಾಧಾ ನಾಯಕಿಯಾಗಿ ನಟಿಸಿದ್ದಾರೆ. ಯತಿರಾಜ್‌ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಕಥೆ, ಚಿತ್ರಕಥೆಯಲ್ಲಿ ತೊಡಗಿಸಿಕೊಂಡ ಜೆ.ಎಂ.ಪ್ರಹ್ಲಾದ್‌ ಅವರಿಗೆ ಈ ಚಿತ್ರ ಇಂದಿನ ಸಮಾಜಕ್ಕೆ, ಪ್ರಸ್ತುತ ಪರಿಸ್ಥಿತಿಗೆ ಹೆಚ್ಚು ಸೂಕ್ತ ಎನಿಸಿದೆ. ನಾಯಕ ಸಲ್ಮಾನ್‌ ಕೂಡಾ ತಮ್ಮ ಸಿನಿಮಾ ಅನುಭವ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next