Advertisement

ಅಣ್ಣಾಮಲೈ ರಾಜಕೀಯ ಪ್ರವೇಶ ಖಚಿತ

01:36 AM May 19, 2020 | Sriram |

ಉಡುಪಿ: ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ರಾಜಕೀಯ ಪ್ರವೇಶಿಸುವುದು ಖಚಿತವಾಗಿದೆ. 2021ರಲ್ಲಿ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.

Advertisement

ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಿ ಅಧಿಕಾರಿಗಳಿಗೆ ಜನರ ಸೇವೆಯನ್ನು ಮಾಡಲು ಉತ್ತಮ ವಾತಾವರಣ ಸೃಷ್ಟಿಸಬೇಕಾಗಿದೆ. “ಯಾವ ಪಕ್ಷ ಸೇರುತ್ತೇನೆ? ಯಾವ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ’ ಎನ್ನುವುದನ್ನು ಒಂದು ತಿಂಗಳಲ್ಲಿ ಪ್ರಕಟಿಸುವುದಾಗಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಪೊರೆ ಕಳಚುವ ಹಾವುಗಳಂತೆ ಇರಬೇಕು
ಹಾವುಗಳು ಪೊರೆ ಕಳಚಿಕೊಂಡು ಹೊಸ ಪೊರೆಯನ್ನು ಸೃಷ್ಟಿಸಿಕೊಳ್ಳುತ್ತದೆ. ಇದು ಪ್ರಕೃತಿ ಧರ್ಮ. ನಾವೂ ಕೂಡ ಕೋವಿಡ್-19 ಅವಧಿಯಲ್ಲಿ ಮುಂದೆ ಯಾವ ದಾರಿಯಲ್ಲಿ ಸಾಗಬೇಕು ಎಂದು ನಿರ್ಧರಿಸಿ ಅದರತ್ತ ಹೆಜ್ಜೆ ಇಡಬೇಕು. ಇಂತಹ ಉತ್ತಮ ಸಂದರ್ಭ ಇನ್ನು ಸಿಗುವುದಿಲ್ಲ. 100 ವರ್ಷಗಳ ಹಿಂದೆ ಇಂತಹ ಸೋಂಕು ಜಗತ್ತಿನಾದ್ಯಂತ ಆವರಿಸಿತ್ತು. ಇನ್ನೂ ಆರು ತಿಂಗಳು ಇರಬಹುದು ಎನ್ನುತ್ತಾರೆ ಅಣ್ಣಾಮಲೈ.

ಮದ್ಯ ಸೇವನೆ ತಪ್ಪು
ಎಲ್ಲ ಸರಕಾರಗಳೂ ಕಳಪೆ ಹಣಕಾಸು ನೀತಿಯನ್ನು ಅನುಸರಿಸುತ್ತಿವೆ. ಕರ್ನಾಟಕದ ಬಜೆಟ್‌ ಗಾತ್ರ 2.48 ಲ.ಕೋ.ರೂ., 1.9 ಲ.ಕೋ.ರೂ. ಆದಾಯವಿದೆ. ಇದರ ಅಂತರವನ್ನು ಸಾಲ ಮಾಡಲಾಗುತ್ತದೆ. ಆಲ್ಕೋಹಾಲ್‌ (ಮದ್ಯ) ಸೇವನೆಯಿಂದ 21,000 ಕೋ.ರೂ. ಆದಾಯ ಬರುತ್ತಿದೆ. ತಮಿಳುನಾಡಿನಲ್ಲಿ 31,000 ಕೋ.ರೂ. ಆದಾಯ ಬರುತ್ತಿದೆ. ಇದು ಸರಿಯೋ? ತ‌ಪ್ಪೋ? ಎಂದು ಪ್ರಶ್ನಿಸಿದರೆ ನಾನು ತಪ್ಪು ಎನ್ನುತ್ತೇನೆ. ಇದರಿಂದ ಆಗುವ ಒಳಿತಿಗಿಂತ ಕೆಡುಕು ಹೆಚ್ಚಿರುವುದು ಇದಕ್ಕೆ ಕಾರಣ.

ವ್ಯವಸ್ಥೆ ಬದಲಾಗಲಿ
ನಾವೀಗ ಆದಾಯ ಬರುವ ಮಾರ್ಗವನ್ನು ಬದಲಾಯಿಸಬೇಕು. ಇದನ್ನೇ ಸಿಸ್ಟಮ್‌ ಬದಲಾಯಿಸುವುದು ಎನ್ನುತ್ತೇನೆ. ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮದ್ಯ ಮಾರಾಟದ ಪ್ರಮಾಣವನ್ನು ಹೆಚ್ಚಿಸಬೇಕೆಂದೇ ಸರಕಾರಗಳು ಹೇಳುತ್ತವೆ. ಈ ಗುರಿ ಹೆಚ್ಚಿಸದೆ ಇದ್ದರೆ ಸರಕಾರ ಅಂತಹ ಅಧಿಕಾರಿಯನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಇದು ಬದಲಾಗಬೇಕಾಗಿದೆ. ಇದು ಬದಲಾಗಬೇಕಾದರೆ ಉತ್ತಮ ಆಡಳಿತ ಬೇಕು. ರಾಜಕೀಯ ವ್ಯವಸ್ಥೆ ಬದಲಾಗಬೇಕು. ಇದನ್ನೆಲ್ಲ ದೃಷ್ಟಿಯಲ್ಲಿರಿಸಿಕೊಂಡು ಮುಂದಿನ ಐದು ಹತ್ತು ವರ್ಷಗಳಲ್ಲಿ ಬದಲಾವಣೆ ತರುವ “ವಿಶನ್‌ ಪ್ಲಾನ್‌’ ತಯಾರಿಸಬೇಕು ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟರು.

Advertisement

ಮೆರಿಟ್‌ ಆಯ್ಕೆ ಅಗತ್ಯ
ಎಲ್ಲರೂ ಸರಕಾರಿ ಉದ್ಯೋಗವನ್ನು ನಿರೀಕ್ಷಿಸಿದರೆ ಆಗುವುದಿಲ್ಲ. ಕೇವಲ ಮೆರಿಟ್‌ ಮೇಲೆ ಆಯ್ಕೆ ಆಗುತ್ತಿದೆ ಎಂಬ ವಿಶ್ವಾಸ ಸಾರ್ವಜನಿಕರಲ್ಲಿ ಮೂಡಬೇಕು. ಕೇವಲ ಯುಪಿಎಸ್‌ಸಿ ಮಾತ್ರ ಶುದ್ಧ ಇದ್ದರೆ ಸಾಲದು, ಕೆಪಿಎಸ್‌ಸಿಯೂ ಶುದ್ಧ ಇರಬೇಕು. ಇದು ಚುನಾಯಿತ ಜನಪ್ರತಿನಿಧಿಗಳ ಪರಿಶ್ರಮದಿಂದಲೇ ಆಗಬೇಕು. ಅಧಿಕಾರ ಇರುವುದು ಪ್ರತಿಷ್ಠೆಗಾಗಿ ಅಲ್ಲ. ಹಾಗೆ ನೋಡಿದ್ದರೆ ಅದೇ ಖುರ್ಚಿಯಲ್ಲಿ ಕುಳಿತಿರುತ್ತಿದ್ದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ಪ್ಯಾಕೇಜ್‌ ಸದ್ಬಳಕೆ ಆಗಬೇಕು
ಈಗ ಕೇಂದ್ರ ಸರಕಾರ ಬೇರೆ ಬೇರೆ ಕ್ಷೇತ್ರಗಳಿಗೆ 20 ಲ.ಕೋ.ರೂ. ಪ್ಯಾಕೇಜ್‌ ಘೋಷಿಸಿದೆ. ಇದರಲ್ಲಿ ಕೃಷಿಯೂ ಒಂದು. ನಾವು ಇದನ್ನು ಬಳಕೆ ಮಾಡಬೇಕು. ಹಿಂದೆಂದೂ ಕಂಡಿರದಂತಹ ಆರ್ಥಿಕ ಮುಗ್ಗಟ್ಟು ಈಗ ಜಗತ್ತಿನಲ್ಲಿ ಕಂಡುಬಂದಿದೆ. ಸರಕಾರ ಈಗ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡಲೇಬೇಕು. ಈ ಘೋಷಣೆ ಕಾರ್ಯರೂಪಕ್ಕೆ ಬರಲು ಒಂದು ವರ್ಷವಾದರೂ ಬೇಕು. ಇದೆಲ್ಲ ನಿಂತಿರುವುದು ಬ್ಯಾಂಕುಗಳ ಕಾರ್ಯ ನಿರ್ವಹಣೆ ಮೇಲೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next