Advertisement

ಉಪ್ಪಿ ಚಿತ್ರಕ್ಕೆ ಅಣ್ಣಯ್ಯ ಚಂದ್ರು ನಿರ್ಮಾಪಕ

10:06 AM Sep 18, 2019 | Lakshmi GovindaRaju |

“ಮಾಸ್ಟರ್‌ಪೀಸ್‌’ ಚಿತ್ರದ ನಂತರ ನಿರ್ದೇಶಕ ಮಂಜು ಮಾಂಡವ್ಯ ಹೊಸಚಿತ್ರವನ್ನು ಅನೌನ್ಸ್‌ ಮಾಡಿದ್ದು ನಿಮಗೆ ಗೊತ್ತಿರಬಹುದು. ಬಳಿಕ ಕಾರಣಾಂತರಗಳಿಂದ ಆ ಚಿತ್ರ ಅಷ್ಟಕ್ಕೆ ನಿಂತುಹೋಯಿತು. ಅದಾದ ಬಳಿಕ ಈಗ ಮಂಜು ಮಾಂಡವ್ಯ ಸದ್ದಿಲ್ಲದೆ ಹೊಸಚಿತ್ರಕ್ಕೆ ಚಾಲನೆ ನೀಡುವ ಸಿದ್ಧತೆಯಲ್ಲಿದ್ದಾರೆ. ಈ ಚಿತ್ರದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ನಾಯಕನಾಗಿ ಅಭಿನಯಿಸುತ್ತಿದ್ದು, ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ.

Advertisement

ಸದ್ಯ ಚಿತ್ರದ ನಾಯಕಿ, ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಚಿತ್ರದ ಟೈಟಲ್‌ ಕೂಡ ಇನ್ನಷ್ಟೇ ಫೈನಲ್‌ ಆಗಬೇಕಿದೆ. ಈ ಹಿಂದೆ “ಅಣ್ಣಯ್ಯ’, “ದೊರೆ’, “ಬಿಂದಾಸ್‌’, “ರನ್ನ’ ಮೊದಲಾದ ಸೂಪರ್‌ ಹಿಟ್‌ ಚಿತ್ರಗಳನ್ನು ನಿರ್ಮಿಸಿದ್ದ ಎಂ. ಚಂದ್ರಶೇಖರ್‌ (ಚಂದ್ರು) “ನಿಮಿಷಾಂಬ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.

ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಎಂ. ಚಂದ್ರಶೇಖರ್‌, “ಈಗಾಗಲೇ ಮಂಜು ಮಾಂಡವ್ಯ ಮತ್ತು ಉಪೇಂದ್ರ ಅವರ ಜೊತೆ ಹೊಸಚಿತ್ರ ಮಾಡುವ ಕುರಿತು ಮಾತುಕತೆ ನಡೆದಿದೆ. ಉಪೇಂದ್ರ ಕೂಡ ಕಥೆಯನ್ನು ಇಷ್ಟಪಟ್ಟು, ಈ ಚಿತ್ರವನ್ನು ಮಾಡಲು ಒಪ್ಪಿಕೊಂಡಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಕೊನೆಯ ಹಂತದಲ್ಲಿದೆ. ಚಿತ್ರದ ಟೈಟಲ್‌, ಕಾಸ್ಟಿಂಗ್‌, ಟೆಕ್ನೀಶಿಯನ್ಸ್‌ ಕುರಿತು ಚರ್ಚೆಗಳಾಗುತ್ತಿದೆ. ನವೆಂಬರ್‌ ವೇಳೆಗೆ ಈ ಹೊಸಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.

ಮುಂದಿನ ವರ್ಷದ ಸಂಕ್ರಾಂತಿ ವೇಳೆಗೆ ಈ ಚಿತ್ರದ ಮುಹೂರ್ತ ನಡೆಯಲಿದೆ. ಮುಂದಿನ ವರ್ಷದ ಮಧ್ಯ ಭಾಗಕ್ಕೆ ಚಿತ್ರ ತೆರೆಗೆ ತರುವ ಪ್ಲಾನ್‌ ಹಾಕಿಕೊಂಡಿದ್ದೇವೆ. ನಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 14ನೇ ಚಿತ್ರ ಇದಾಗಿದ್ದು, ಬಿಗ್‌ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ’ ಎಂಬ ಮಾಹಿತಿ ನೀಡುತ್ತಾರೆ. ಒಟ್ಟಾರೆ ಕಳೆದ ಕೆಲ ದಿನಗಳಿಂದ ಉಪ್ಪಿ ಅಭಿನಯದ ಒಂದೊಂದೆ ಹೊಸ ಚಿತ್ರಗಳು ಅನೌನ್ಸ್‌ ಆಗುತ್ತಿದ್ದು, ಈಗ ಅವರ ಮತ್ತೂಂದು ಹೊಸಚಿತ್ರದ ಸುದ್ದಿ ಹೊರಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next