ಅಂಕೋಲಾ: ತಾಲೂಕಿನ ಮಾಸ್ತಿಕಟ್ಟಾ ಬಳಿಯ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಬೈಕ್ ನಲ್ಲಿ ಆಗಮಿಸಿದ್ದ ಇಬ್ಬರು ದುಷ್ಕರ್ಮಿಗಳು ಹುಬ್ಬಳ್ಳಿ ಮೂಲದ ವ್ಯಾಪಾರಿಗಳ ಕಾರನ್ನು ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಿ ಸುಮಾರು 6 ಲಕ್ಷ ರೂ. ದೋಚಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ವ್ಯಾಪಾರಿಗಳು ಹುಬ್ಬಳ್ಳಿಯಿಂದ ಬಂದು ಕಾರವಾರ ಅಂಕೋಲಾ ಸುತ್ತ ಮುತ್ತ ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಪೂರೈಸಿ ಹಣ ಸಂಗ್ರಹಿಸಿ ರಾತ್ರಿ ಮರಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಹುಬ್ಬಳ್ಳಿ ನಿವಾಸಿಗಳಾದ ವಿನೋದ ಬಾಲಚಂದ್ರ ಮತ್ತು ಕೇವಲಚಂದ್ ಎನ್ನುವವರ ಮುಖ ಕೈಕಾಲುಗಳ ಮೇಲೆ ಹಲ್ಲೆ ನಡೆಸಲಾಗಿದೆ. ಕಾರಿನ ಗ್ಲಾಸನ್ನು ಪುಡಿಮಾಡಿ ಹಣದ ಬ್ಯಾಗನ್ನು ಹೊತ್ತೊಯ್ಯಲಾಗಿದೆ.
ಈ ಕುರಿತಂತೆ ವಿನೋದ ಬಾಲಚಂದ್ರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರಕ್ಷಕ ನಿರೀಕ್ಷಕ ಸಂತೋಷ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಣ ದೋಚಿದವರು ವ್ಯಾಪಾರಿಗಳ ಪರಿಚಯಸ್ಥರೇ ಅಥವಾ ಆಗುಂತುಕರೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.