Advertisement

ಮಟನ್‌ ಸ್ಟಾಲ್‌ಗ‌ೂ ವ್ಯಾಪಿಸಿದ ಪ್ರಾಣಿ ಮಾಂಸ ಮಾರಾಟ ಜಾಲ?

10:53 AM Jan 14, 2019 | |

ಶಿವಮೊಗ್ಗ: ಕಾಡುಪ್ರಾಣಿಗಳ ಬೇಟೆಯಾಡಿ ಮಾಂಸ ಮಾರಾಟ ಮಾಡುವ ಜಾಲ ನಗರದ ಮಟನ್‌ ಸ್ಟಾಲ್‌ವರೆಗೂ ವ್ಯಾಪಿಸಿದೆ. ಈಚೆಗೆ ಶಿವಮೊಗ್ಗದ ನ್ಯೂ ಮಂಡ್ಲಿ ಸುಲ್ತಾನ್‌ ಮೊಹಲ್ಲಾದ ಮಟನ್‌ ಸ್ಟಾಲ್‌ನಲ್ಲಿ ಜಿಂಕೆ ಮಾಂಸ ಮಾರಾಟ ಪ್ರಕರಣವು ದಂಧೆಯ ಕರಾಳತೆಯನ್ನು ಅನಾವರಣ ಮಾಡಿದೆ.

Advertisement

ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಸಮೀಪದ ಗಡಿಸರದಲ್ಲಿ ಬೇಟೆಯಾಡಿದ ಜಿಂಕೆಯನ್ನು ಯಾವುದೇ ಅಡೆತಡೆ ಇಲ್ಲದೆ, ಯಾರದೆ ಸಹಕಾರ ಇಲ್ಲದೆ ಕುರಿ ಮತ್ತು ಮೇಕೆ ರೀತಿಯಲ್ಲಿ ಶಿವಮೊಗ್ಗದವರೆಗೆ ಸಾಗಿಸುವುದು ಸುಲಭದ ಮಾತಲ್ಲ. ಈ ಹಾದಿಯಲ್ಲಿ ಗಾಜನೂರು ಬಳಿ ಇರುವ ಅರಣ್ಯ ಇಲಾಖೆ ಚೆಕ್‌ಪೋಸ್ಟನ್ನೂ ದಾಟಿ ಬಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದರ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರವೂ ಇದೆ ಎಂಬ ಆಪಾದನೆಗಳು ಕೇಳಿಬಂದಿವೆ. 20 ದಿನದ ಹಿಂದೆ ರಂಗೇನಹಳ್ಳಿಯಿಂದ ನಗರಕ್ಕೆ ಬಂದ ಕಾಡುಕುರಿ ಮಾಂಸ ಇಲಾಖೆ ಸಿಬ್ಬಂದಿ ಕೈಗೆ ಸಿಕ್ಕರೂ ಪ್ರಕರಣ ದಾಖಲಾಗಲಿಲ್ಲ. 15 ದಿನದ ಹಿಂದೆ ಮಂಡಗದ್ದೆಯಿಂದ ಬಂದ ಜಿಂಕೆ ಮಾಂಸ ಪ್ರಕರಣವೂ ಇದೇ ರೀತಿಯಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಒಂದು ಕಾಲದಲ್ಲಿ ಅರಣ್ಯದೊಳಗಿನ ಗ್ರಾಮಗಳಲ್ಲಿ ಬೀಗರ ಊಟ, ಹಬ್ಬದಲ್ಲಿ ಜಿಂಕೆ, ಕಡವೆ, ಕಾಡುಕುರಿ, ಕಾಡುಹಂದಿ ಮುಂತಾದ ವನ್ಯಜೀವಿಗಳೇ ಮಾಂಸದೂಟಕ್ಕೆ ಬಳಕೆಯಾಗುತ್ತಿದ್ದವು. ಕಾನೂನು ಬಿಗಿಗೊಂಡು ಜನರು ಪೆಟ್ಟು ತಿಂದ ಬಳಿಕ ಮತ್ತು ಗ್ರಾಮೀಣರಲ್ಲಿ ಬೇಟೆಯಾಡುವ ಪ್ರವೃತ್ತಿಯವರು ಕಡಿಮೆಯಾದ ಬಳಿಕ ಮಾಂಸಕ್ಕಾಗಿ ಕುರಿ ಮತ್ತು ಮೇಕೆಗಳಿಗೆ ಮೊರೆ ಹೋಗಿದ್ದಾರೆ. ಅದಾದ ಬಳಿಕ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿತ್ತು. ಆದರೆ, ನಗರ ಪ್ರದೇಶದಲ್ಲಿ ಕುರಿ, ಮೇಕೆ ಮಾಂಸ ತಿನ್ನುತ್ತಿದ್ದವರು ವನ್ಯಜೀವಿಗಳ ಮಾಂಸದ ಚಪಲ ಹತ್ತಿಸಿಕೊಂಡು ದಂಧೆಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದಾಗಿ ವನ್ಯಜೀವಿಗಳ ಬೇಟೆ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಮತ್ತೆ ಹೆಚ್ಚಾಗಿದೆ.

ಶಿವಮೊಗ್ಗದ ಕೆಲ ಹೊಟೇಲ್‌ಗ‌ಳಿಗೂ ಮಂಡಗದ್ದೆ ವಲಯ, ಶಿವಮೊಗ್ಗ ತಾಲೂಕು ಹಾಲ್‌ಲಕ್ಕವಳ್ಳಿ, ಕಡೇಕಲ್‌ ಹಾಗೂ ತರೀಕೆರೆ ತಾಲೂಕು ಲಕ್ಕವಳ್ಳಿ, ರಂಗೇನಹಳ್ಳಿ ಭಾಗದಿಂದ ವನ್ಯಜೀವಿಗಳ ಮಾಂಸ ಪೂರೈಕೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಡಿನೊಳಗೆ ವನ್ಯಜೀವಿಗಳ ಓಡಾಟ ಹೆಚ್ಚಿರುವ ಕಡೆ ಮರದ ಮೇಲೆ ಅಟ್ಟಣಿಗೆಗಳನ್ನು ನಿರ್ಮಿಸಿಕೊಂಡು ಅತ್ಯಾಧುನಿಕ ಬಂದೂಕುಗಳನ್ನು ಬಳಸಿ ಬೇಟೆಯಾಡಲಾಗುತ್ತಿದೆ. ಕೆಲವೆಡೆ ಪ್ರಖರ ಬೆಳಕು ಬೀರುವ ಸರ್ಚ್‌ಲೈಟ್‌ಗಳನ್ನು ಬಳಸಿ ಬೇಟೆಯಾಡಲಾಗುತ್ತದೆ. ಜಲಾಶಯ, ನದಿ, ಹಳ್ಳಗಳ ಬಳಿ ನೀರು ಕುಡಿಯಲು ಬರುವ ಜಾಗವನ್ನೂ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಮತ್ತೆ ಕೆಲವೆಡೆ ಕಾಡಿನೊಳಗೆ ಉರುಳು ಹಾಕಿ ಪ್ರಾಣಿಗಳನ್ನು ಹಿಡಿಯಲಾಗುತ್ತಿದೆ ಎಂದು ಹೇಳಲಾಗಿದೆ.

ಮೊನ್ನೆ ಜಿಂಕೆ ಮಾಂಸದ ಸಮೇತ ಸಿಕ್ಕಿಬಿದ್ದ ಸಿರಾಜ್‌ ವನ್ಯಜೀವಿಗಳ ಬೇಟೆಯನ್ನು ವೃತ್ತಿಯಾಗಿಸಿಕೊಂಡವನೆಂಬ ಆಪಾದನೆ ಇದೆ. ಮಂಡಗದ್ದೆ ಮತ್ತು ಸಕ್ರೆಬೈಲು ಅರಣ್ಯ ವಲಯದಲ್ಲಿ ವನ್ಯಜೀವಿಗಳ ಬೇಟೆಗೆ ಸಂಬಂಧಿಸಿದಂತೆ ಒಬ್ಬನೇ ವ್ಯಕ್ತಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈಗ ಸಿಕ್ಕಿಬಿದ್ದಿರುವ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಲ್ಲಿ ವನ್ಯಜೀವಿಗಳ ಮಾಂಸ ಮಾರಾಟದ ಹಿಂದಿನ ದಂಧೆ ಬಯಲಿಗೆಳೆಯಬಹುದು ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಮಂಡಗದ್ದೆ ಸಮೀಪದ ಗ್ರಾಮಸ್ಥರೊಬ್ಬರು ಪತ್ರಿಕೆಗೆ ತಿಳಿಸಿದರು.

Advertisement

ಚೆಕ್‌ಪೋಸ್ಟ್‌ ಸ್ಥಾಪನೆ
ಘಟನೆ ನಂತರ ಎಚ್ಚೆತ್ತ ಅರಣ್ಯ ಇಲಾಖೆ ಎರಡು ಕಡೆ ಚೆಕ್‌ಪೋಸ್ಟ್‌ ತೆರೆದಿದೆ. ಅತಿ ಹೆಚ್ಚು ಆರೋಪವಿರುವ ತೀರ್ಥಹಳ್ಳಿ ರಸ್ತೆಯ ಸಕ್ರೆಬೈಲು ಆನೆ ಬಿಡಾರದ ಬಳಿ ಪೊಲೀಸ್‌ ಇಲಾಖೆ ವತಿಯಿಂದ ಒಂದು ಚೆಕ್‌ಪೋಸ್ಟ್‌ ತೆರೆದಿದೆ. ಗಾಜನೂರು ಬಳಿ ಅರಣ್ಯ ಇಲಾಖೆ ಮತ್ತೂಂದು ಚೆಕ್‌ಪೋಸ್ಟ್‌ ತೆರೆದು ವಾಹನಗಳ ತಪಾಸಣೆ ನಡೆಸುತ್ತಿವೆ.

ಜಿಂಕೆ, ಕಡವೆ, ಮೊಲಗಳ ಮಾಂಸವನ್ನು ಪೂರೈಕೆ ಮಾಡುವ ದೊಡ್ಡ ಜಾಲವೇ ಮಂಡಗದ್ದೆ ಆಸುಪಾಸಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ನಗರದ ಪ್ರದೇಶದಲ್ಲಿ ಒಳ್ಳೆ ಬೇಡಿಕೆ ಇದೆ. ಇದು ಅಪರಾಧ ಎಂದು ಗೊತ್ತಿದ್ದರೂ ತಿನ್ನುವವರ ಸಂಖ್ಯೆ ಹೆಚ್ಚಿರುವುದರಿಂದ ಲಾಭಕ್ಕಾಗಿ ಬೇಟೆಯಾಡುವವರ ಸಂಖ್ಯೆ ಹೆಚ್ಚಿದೆ.
ನಾಗರಾಜ್‌, ಮಂಡಗದ್ದೆ

Advertisement

Udayavani is now on Telegram. Click here to join our channel and stay updated with the latest news.

Next