Advertisement

ಸಂಬಂಧಗಳ ಕೊಂಡಿಗೆ ಅನಂತು ಸೂತ್ರ

05:53 AM Dec 29, 2018 | |

ಒಂದು ಸಿನಿಮಾ ಇಷ್ಟವಾಗಲು ದೊಡ್ಡ ತಾರಾಬಳಗ ಬೇಕಿಲ್ಲ, ಬಿಗ್‌ ಬಜೆಟ್‌, ಅದ್ಧೂರಿ ಮೇಕಿಂಗ್‌ ಅನಿವಾರ್ಯತೆಯೂ ಇರುವುದಿಲ್ಲ. ಬದಲಾಗಿ ಒಂದೊಳ್ಳೆಯ ಕಥೆ ಹಾಗೂ ಅಚ್ಚುಕಟ್ಟಾದ ನಿರೂಪಣೆಯಿದ್ದರೆ ಸಾಕು ಎಂಬುದು ಕನ್ನಡ ಚಿತ್ರರಂಗದಲ್ಲಿ  ಆಗಾಗ ಸಾಬೀತಾಗುತ್ತಿರುತ್ತದೆ. ನೀವು ಮಾಡಿಕೊಂಡಿರುವ ಕಥೆ ಒಬ್ಬ ಸಾಮಾನ್ಯ ಪ್ರೇಕ್ಷಕನ ಹೃದಯ ತಟ್ಟಿ, ಆತನ ಭಾವನೆಗಳನ್ನು ಬಡಿದೆಬ್ಬಿಸಿದರೆ ಅದೇ ಒಂದು ಸಿನಿಮಾದ ನಿಜವಾದ ಗೆಲುವು. ಆ ತರಹದ ಒಂದು ಹೃದಯಸ್ಪರ್ಶಿ ಕಥೆಯೊಂದಿಗೆ ತೆರೆಮೇಲೆ ಬಂದಿರೋದು “ಅನಂತು ವರ್ಸಸ್‌ ನುಸ್ರತ್‌’.

Advertisement

ಸಿನಿಮಾ ನೋಡಿ ಹೊರಬಂದಾಗ ಇಲ್ಲಿನ ಕೆಲವು ಅಂಶಗಳು ನಿಮ್ಮನ್ನು ಕಾಡುತ್ತವೆ ಹಾಗೂ ಅನೇಕ ಪ್ರಶ್ನೆಗಳನ್ನು ನಿಮ್ಮಲ್ಲಿ ಹುಟ್ಟುಹಾಕುವಂತೆ ಮಾಡಿರುವುದು “ಅನಂತು ವರ್ಸಸ್‌ ನುಸ್ರತ್‌’ನ ಹೆಗ್ಗಳಿಕೆ. “ಅನಂತು ವರ್ಸಸ್‌ ನುಸ್ರತ್‌’ ಯಾವುದೇ ಅಬ್ಬರವಿಲ್ಲದ, ಅನಾವಶ್ಯಕ ಅಂಶಗಳಿಂದ ಮುಕ್ತವಾದ ಒಂದು ಸಿನಿಮಾ. ಕಥೆಯೇ ಇಲ್ಲದೇ, ಸನ್ನಿವೇಶ, ಡೈಲಾಗ್‌ಗಳಲ್ಲೇ ಮುಗಿದು ಹೋಗುವ ಬಹುತೇಕ ಸಿನಿಮಾಗಳ ಮಧ್ಯೆ “ಅನಂತು’ ಒಂದು ಗಟ್ಟಿಕಥಾಹಂದರವಿರುವ ಸಿನಿಮಾವಾಗಿ ನಿಮಗೆ ಇಷ್ಟವಾಗುತ್ತದೆ.

ಸಿನಿಮಾ ನೋಡುತ್ತಿದ್ದಂತೆ ನಿಮಗೆ “ಇವೆಲ್ಲವೂ ನಮ್ಮ ಪಕ್ಕದ ಮನೆಯಲ್ಲೇ ನಡೆಯುತ್ತಿರುವಂಂತಿದೆಯಲ್ಲಾ’ ಎಂದು ಭಾಸವಾದರೆ ಅದಕ್ಕೆ ಕಾರಣ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ, ಅನೇಕ ಕುಟುಂಬಗಳ ನೆಮ್ಮದಿಕೆಡಿಸಿರುವ ಅಂಶವನ್ನು ಪ್ರಧಾನವಾಗಿಟ್ಟುಕೊಂಡು ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸುಧೀರ್‌. ವಿವಾಹ ವಿಚ್ಛೇದನದ ಮೂಲಕ ಸಂಸಾರಗಳು ಬೇರೆಯಾಗುವ ಅಂಶವೇ ಈ ಸಿನಿಮಾದ ಹೈಲೈಟ್‌.

ಸಣ್ಣ ಸಣ್ಣ ಅಂಶಗಳಿಂದ ಅದೆಷ್ಟೋ ಗಂಡ-ಹೆಂಡತಿ ಮಧ್ಯೆ ಮನಸ್ತಾಪ ಬಂದು ಡೈವೋರ್ಸ್‌ ಮೊರೆ ಹೋಗುತ್ತಾರೆ. ಅದರ ಬದಲಾಗಿ ಸಿಟ್ಟು, ಅಸಡ್ಡೆ, ಅಸಹನೆ ಎಲ್ಲವನ್ನು ಬದಿಗೊತ್ತಿ, ಒಂದು ಕ್ಷಣ ಇಬ್ಬರ ಕುಳಿತು ಯೋಚನೆ ಮಾಡಿದಾಗ ಸಂಸಾರಗಳು ಚೆನ್ನಾಗಿರುತ್ತವೆ ಎಂಬುದನ್ನು ಹೇಳುವುದು ಈ ಸಿನಿಮಾದ ಮೂಲ ಉದ್ದೇಶ. ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಈ ವಿಚಾರ ತುಂಬಾ ಸೂಕ್ಷ್ಮವಾದುದು. ಅದೇ ಕಾರಣದಿಂದ ಅವರು ಕಥೆ ಹೇಳಲು ಆಯ್ಕೆ ಮಾಡಿಕೊಂಡಿರುವುದು ಕೋರ್ಟ್‌.

“ಅನಂತು ವರ್ಸಸ್‌ ನುಸ್ರತ್‌’ ಒಂದು ಕೋರ್ಟ್‌ ರೂಂ ಡ್ರಾಮಾ. ಬಹುತೇಕ ಸಿನಿಮಾ ಕೋರ್ಟ್‌ನಲ್ಲಿ ನಡೆಯುತ್ತದೆ. ಅಲ್ಲಿನ ಸನ್ನಿವೇಶಗಳ ಮೂಲಕ ಸಿನಿಮಾ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ನಿರ್ದೇಶಕರು ಇಲ್ಲಿ ಕೋರ್ಟ್‌ ರೂಂ ಡ್ರಾಮಾದ ಜೊತೆಗೆ ಎರಡು ಹಿಂದು-ಮುಸ್ಲಿಂ ಕುಟುಂಬ, ಆ ಕುಟುಂಬಗಳ ಧನಾತ್ಮಕ ಚಿಂತನೆ, ಅವರ ಯೋಚನೆಯನ್ನು ತೋರಿಸುತ್ತಾ ಹೋಗುವ ಮೂಲಕ ಇಲ್ಲೂ ಸೂಕ್ಷ್ಮ ಅಂಶಗಳನ್ನು ಹೇಳಿದ್ದಾರೆ. ಪಾಸಿಟಿವ್‌ ಅಂಶಗಳೊಂದಿಗೆ ಆರಂಭವಾಗಿ ಪಾಸಿಟಿವ್‌ ಅಂಶಗಳೊಂದಿಗೆ ಕೊನೆಗೊಳ್ಳುವುದು ಈ ಸಿನಿಮಾದ ಹೈಲೈಟ್‌. 

Advertisement

ಮೊದಲೇ ಹೇಳಿದಂತೆ ಇದು ಯಾವುದೇ ಅಬ್ಬರವಿಲ್ಲದ, ಗಾಂಧಿನಗರದ ಸಿದ್ಧಸೂತ್ರಗಳಿಂದ ಮುಕ್ತವಾದ ಒಂದು ಸಿನಿಮಾ. ಇಲ್ಲಿ ನೀವು ಹೀರೋ ಹೊಡೆದಾಗ ಚಂಗನೇ ಹಾರುವ  ಏಳೆಂಟು ಜನ ಇಲ್ಲ, ಮಾಸ್‌ಪ್ರಿಯರು ಶಿಳ್ಳೆ ಹಾಕುವಂತಹ ಡೈಲಾಗ್‌ಗಳಗೆ, ಕಾಮಿಡಿ ನಟರ ಹಾಸ್ಯ ಪ್ರಸಂಗಗಳಿಗೆ ಇಲ್ಲಿ ನೋ ಎಂಟ್ರಿ. ಗಂಭೀರ ಕಥೆಯನ್ನು ಅಷ್ಟೇ ಗಂಭೀರವಾಗಿ, ಮನಮುಟ್ಟುವಂತೆ  ಕಟ್ಟಿಕೊಡುವ ನಿರ್ದೇಶಕರ ಉದ್ದೇಶ ಎದ್ದು ಕಾಣುತ್ತದೆ. ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಬರುತ್ತವೆ. ಆದರೆ, ಅವೆಲ್ಲವನ್ನು ನಿರ್ದೇಶಕರು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಮತ್ತು ಕಥೆಯ ಆಶಯ ಬಿಟ್ಟು ಹೋಗಿಲ್ಲ. 

ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಕಮರ್ಷಿಯಲ್‌ ಅಂಶಗಳಿರುವ ಮಾಸ್‌ ಸಿನಿಮಾಗಳೇ ಬೇಕೆಂದು ನಂಬಿರುವ ಅನೇಕ ಹೊಸ ನಾಯಕ ನಟರ ನಡುವೆ ವಿನಯ್‌ ರಾಜಕುಮಾರ್‌ ಭಿನ್ನವಾಗಿ ನಿಲ್ಲುತ್ತಾರೆ. ಅದಕ್ಕೆ ಕಾರಣ ಅವರ ಆಯ್ಕೆ. “ಅನಂತು ವರ್ಸಸ್‌ ನುಸ್ರತ್‌’ನಂತಹ ಕಥೆಯೇ ಪ್ರಧಾನವಾಗಿರುವ, ಬಿಲ್ಡಪ್‌ ಅಂಶಗಳಿಂದ ಮುಕ್ತವಾಗಿರುವ ಸಿನಿಮಾಗಳನ್ನು ಒಪ್ಪಿಕೊಂಡು, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ವಿನಯ್‌. ಭಾವನಾತ್ಮಕ ಸನ್ನಿವೇಶಗಳಲ್ಲಿ ವಿನಯ್‌ ಇನ್ನೊಂದಿಷ್ಟು ಪ್ರಯತ್ನಿಸಬೇಕಿದೆ ಅನ್ನೋದು ಬಿಟ್ಟರೆ ಇಡೀ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ನಾಯಕಿ ಲತಾ ಹೆಗಡೆ ಮಿತಭಾಷಿಣಿಯಾಗಿ ಇಷ್ಟವಾಗುತ್ತಾರೆ. ಅತಿಥಿ ಪಾತ್ರದಲ್ಲಿ ನಟಿಸಿರುವ ಪ್ರಜ್ವಲ್‌ ದೇವರಾಜ್‌, ಬಿ.ಸುರೇಶ್‌, ದತ್ತಣ್ಣ, ಹರಿಣಿ, ರವಿಶಂಕರ್‌ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ 12ನೇ ಶತಮಾನದ ಕವಿ ಅಮೀರ್‌ ಖುಸ್ರೂ ಬರೆದ ಜನಪ್ರಿಯ “ಜೀಹಲೆ ಮಿಸ್ಕನ್‌’ ಘಜಲ್‌ ಅನ್ನು ಬಳಸಲಾಗಿದೆ. ಛಾಯಾಗ್ರಾಹಕ ಅಭಿಷೇಕ್‌ ಕಾಸರಗೋಡು ಇಡೀ ಸಿನಿಮಾವನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ. 

ಚಿತ್ರ: ಅನಂತು ವರ್ಸಸ್‌ ನುಸ್ರತ್‌
ನಿರ್ಮಾಣ: ಮಾಣಿಕ್ಯ ಪ್ರೊಡಕ್ಷನ್ಸ್‌
ನಿರ್ದೇಶನ: ಸುಧೀರ್‌ ಶ್ಯಾನುಭೋಗ್‌
ತಾರಾಗಣ: ವಿನಯ್‌ ರಾಜಕುಮಾರ್‌, ಲತಾ ಹೆಗಡೆ, ಪ್ರಜ್ವಲ್‌ ದೇವರಾಜ್‌, ಬಿ.ಸುರೇಶ್‌, ದತ್ತಣ್ಣ, ರವಿಶಂಕರ್‌ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next