Advertisement

Anant Nag..: ಆಟ ಅವನದು… ಅಲೆದಾಟ ನಮ್ಮದು! ಅನಂತನಾಗ್‌ ಅಂತರಂಗ

11:31 AM Aug 20, 2023 | Team Udayavani |

75 ನೇ ವಯಸ್ಸಿನಲ್ಲೂ 25 ವರ್ಷದ ಉತ್ಸಾಹ- ಹುಮ್ಮಸ್ಸು ಉಳಿಸಿಕೊಂಡವರು ನಟ ಅನಂತ ನಾಗ್‌. ಸಹಜಾಭಿನಯದ ಮೂಲಕ ಚಿತ್ರಪ್ರೇಮಿಗಳ ಮನಗೆದ್ದ ಅವರ ಚಿತ್ರ ಬದುಕಿಗೆ ಈಗ 50 ವರ್ಷ. ಈಗಲೂ ಬಹುಬೇಡಿಕೆಯ ನಟನಾಗಿರುವ ಅವರು ವೃತ್ತಿ, ಬದುಕು, ಸಿನಿಮಾ, ಸಾಹಿತ್ಯ, ರಾಜಕೀಯ ಮುಂತಾದ ಸಂಗತಿಗಳ ಕುರಿತು ಮುಕ್ತವಾಗಿ ಮಾತಾಡಿದ್ದಾರೆ…

Advertisement

ಸರ್‌, ಕಳೆದ 75 ವರ್ಷಗಳಲ್ಲಿ ನೀವು ನೋಡಿದ 75 ಮಳೆಗಾಲಗಳಲ್ಲಿ ಮರೆಯಲಾರದ ಮಳೆಗಾಲ ಯಾವುದು?
ನಾನು ಬೆಳೆದದ್ದು ಕರಾವಳಿ. ಹಾಗಾಗಿ, ಮಳೆಗಾಲ ಯಾವತ್ತಿಗೂ ಇಷ್ಟ. ಎಷ್ಟು ನೋಡಿದರೂ ನೋಡಬೇಕೆನಿಸುವ ಸಮುದ್ರದ ಹಾಗೆ, ನನಗೆ ಮಳೆಯನ್ನು ಎಷ್ಟು ನೋಡಿದರೂ ಸಾಕೆನಿಸುವುದಿಲ್ಲ. 75 ಆಗುವಾಗಲೂ ಮಳೆ ನೋಡ್ತಾ ಇದ್ರೆ ಅಷ್ಟೇ ಸಾಕೇನೋ ಅನಿಸತ್ತೆ.

– ನಿಮ್ಮ ಬದುಕಿನ ಮುಖ್ಯ ತಿರುವುಗಳಲ್ಲೆಲ್ಲ ನಿಮ್ಮ ತಮ್ಮ ಜೊತೆಗಿದ್ರು. ನಿಮ್ಮ ಸಿನೆಮಾ ಪ್ರಯಣಕ್ಕೆ 50. ಬದುಕಿಗೆ 75. ಈ ಹೊತ್ತಲ್ಲಿ ತಮ್ಮ ಶಂಕರ್‌ ನಾಗ್‌ರನ್ನು ಹೇಗೆ ನೆನಪಿಸಿಕೊಳ್ತೀರಿ?
ನಾನು ಬೆಳೆದ ವಾತಾವರಣದಲ್ಲಿ ಎಲ್ಲವೂ ಭಗವಂತನ ಕೈವಾಡ ಅಂತ ನಂಬಿದ್ದೇನೆ. ಕರ್ಮಸಿದ್ಧಾಂತದಲ್ಲಿ ನನ್ನ ನಂಬಿಕೆ. ಹಾಗಾಗಿ ಇದೆಲ್ಲವನ್ನೂ ನಾವು ಸ್ವೀಕರಿಸಲೇಬೇಕು. ಸಾವಿನ ದುಃಖಗಳಲ್ಲಿ ಮುಳುಗಿದರೆ ಬದುಕಿಲ್ಲ. ಹೊರಬರುವುದು ಸಹಜ ಕ್ರಿಯೆ. ಸ್ಮಶಾನ ವೈರಾಗ್ಯದ ಸ್ಥಿತಿಯಿಂದ ಹೊರಬರಲೇಬೇಕು. ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಆಗ ನಾನು “ಶಂಕರನನ್ನು ತೆಗೆದುಕೊಂಡ ಹೋದ ಆ ಭಗವಂತನನ್ನು ನಾನು ಕ್ಷಮಿಸೋದಿಲ್ಲ’ ಅಂದಿದ್ದೆ. ಆಮೇಲೆ ಬಹಳ ಯೋಚಿಸಿದೆ. ದೇವರನ್ನು ಕ್ಷಮಿಸಿಲು ನಾನು ಯಾರು? ಏನಾಗಬೇಕಿತ್ತೋ ಅದಾಗಿದೆ ಅನಿಸಿತು.

ಈಗಲೂ ನೆನಪಾಗತ್ತೆ. ಆದರೆ ಈಗ ದುಃಖ, ಶೋಕ ಅಲ್ಲ. ಬದಲು ದೂರದಿಂದ ಇನ್ನೊಬ್ಬರ ಘಟನೆ ಕಾಣ್ತೆವಲ್ಲ ಹಾಗೆ. ಆನಂದಾಶ್ರಮದ ಸ್ವಾಮಿ ರಾಮದಾಸರು “ಎವೆರಿಥಿಂಗ್‌ ಇಸ್‌ ಫೈನ್‌. ಎವೆರಿಥಿಂಗ್‌ ಇಸ್‌ ಇನ್‌ ಆರ್ಡರ್‌’ ಅಂತಿದ್ರು. ಅದು ನಿಜ ಅನಿಸ್ತಿದೆ. ಶ್ಲೋಕಗಳೆಲ್ಲ ಚಿಕ್ಕವಯಸಲ್ಲೆ ಬಾಯಿಪಾಠ ಆಗಿದು. ಆದರೆ ಕಾಲಕಾಲಕ್ಕೆ ಚಿಂತನ, ಮಂಥನದಿಂದ ಅವು ಅರ್ಥವಾಗತೊಡಗಿದವು.

– ಮಠದ ಗಾಢಪ್ರಭಾವ ನಿಮ್ಮ ಮೇಲಿದೆ. ಅದು ಬದುಕಿನುದ್ದಕ್ಕೂ ನಿಮ್ಮ ಹಿಂದೆ ಕೆಲಸ ಮಾಡ್ತಿತ್ತಾ?
ಕೆಲವರು ನಾಸ್ತಿಕರಿರ್ತಾರೆ. ಅವರಿಗೆ ಇವನೇನು ಮಾತೆತ್ತಿದರೆ ದೇವರು, ಧರ್ಮ ಅಂತಾನೆ ಅನಿಸಬಹುದು. ಆದರೆ ಯಾರು ಯಾವ ವಾತಾವರಣದಲ್ಲಿ ಬೆಳೆದಿರ್ತಾರೋ ಹಾಗೆ ಇರ್ತಾರೆ. ನಾನು ಮಠದಲ್ಲಿ ಬೆಳೆದದ್ದರಿಂದ ಮಠ ಕಲಿಸಿದ ಸಂಸ್ಕಾರ, ಸಂಸ್ಕೃತಿ, ಧಾರ್ಮಿಕತೆ ಸುಪ್ತವಾಗಿ ನನ್ನೊಳಗೆ ಹರೀತಾನೇ ಇರ್ತದೆ. ಅಷ್ಟು ಆಳವಾದ ಪ್ರಭಾವವಿದೆ. ನಾಸ್ತಿಕರಿಗೂ ಅವಕಾಶವಿರುವ ಧರ್ಮ ಇದು. ವಾದಕ್ಕಾಗಿ ಅಹಂ ಬ್ರಹ್ಮಾಸ್ಮಿ ಆಗಬಾರದು, ಜ್ಞಾನದಿಂದ ಆಗಬೇಕು. ಮತ್ತು ಆಧ್ಯಾತ್ಮ ಅಂದ್ರೆ ಎಲ್ಲವೂ ವಾಚ್ಯವಲ್ಲ, ಕೆಲವು ಸಂಗತಿಗಳು ಗೌಪ್ಯವಾಗಿ ನಮ್ಮೊಳಗಿರ್ತವೆ. ಎಲ್ಲವನ್ನೂ ಹೇಳ್ಳೋಕೆ ಆಗಲ್ಲ.

Advertisement

– ಹಿಂದಿಯಲ್ಲೂ ಕೆಲವು ಸಿನೆಮಾ ಮಾಡಿದ್ರಿ. ಆದರೆ ಹಿಂದಿಯಲ್ಲಿ ಯಾಕೆ ಮುಂದುವರೆಯಲಿಲ್ಲ?
ಯಾಕೆಂದರೆ ನನಗಾಗ ನಾಟಕಗಳ ಹಿನ್ನೆಲೆ ಇತ್ತು, ಮತ್ತು ಕಲಾತ್ಮಕ ಚಿತ್ರಗಳ ಬಗ್ಗೆ ಒಲವಿತ್ತು. ಸತ್ಯದೇವ್‌ ದುಬೆ, ಶ್ಯಾಂ ಬೆನಗಲ್‌ ಅಂಥವರ ಜೊತೆಗಿದ್ದ ನಮ್ಮ ಸಿನೆಮಾ ನಿರೀಕ್ಷೆಗಳೇ ಬೇರೆ ಇತ್ತು. ಹೀರೋ, ವಿಲನ್‌, ಕಾಮೆಡಿಯನ್‌ ಮೂರೇ ಥರದ ಪಾತ್ರಗಳು. ಪರಿಪಕ್ವತೆ ಇರೋ ಪಾತ್ರಗಳಿಗಾಗಿ ನಾನು ಹುಡುಕ್ತಾ ಇದ್ದೆ. ಅದೇ ಸಮಯದಲ್ಲಿ ಕನ್ನಡದಲ್ಲಿ ಕಮರ್ಷಿಯಲ್‌ ಚಿತ್ರಗಳೇ ಆದರೂ ಪಾತ್ರಗಳಲ್ಲಿ ವಿಭಿನ್ನತೆ, ಸವಾಲು ಇತ್ತು. ಇದರ ಜೊತೆಗೆ ಆಗ ಅಲ್ಲಿ ಒಂದು ಸಿನೆಮಾಗೆ ಒಂದೂವರೆ ವರ್ಷವಾದರೂ ಆಗ್ತಿತ್ತು. ಇಲ್ಲಿ ಹೆಚ್ಚೆಂದರೆ ಆರು ತಿಂಗಳಿಗೆ ಒಂದು ಸಿನೆಮಾ ಮುಗೀತಿತ್ತು. ಇಲ್ಲಿನವರೂ ಅಷ್ಟೇ ಪ್ರೀತಿ ವಿಶ್ವಾಸದಿಂದ ನಡೆಸಿಕೊಂಡರು. ಅಲ್ಲಿದ್ದದ್ದು ಪೊ›ಫೆಷನಲ್‌ ಸಂಬಂಧ. ಇಲ್ಲಿ ನಮ್ಮವರು ಎಂಬ ಭಾವ ಇತ್ತು. ಆರಂಭದಲ್ಲಿ ನಾನು ಬಾಂಬೆಯಿಂದ ಬಂದಾಗ ಅನಂತ್‌ ಜೀ ಅನ್ನೋರು. ನಾನು ಹಾಗನ್ನಬೇಡಿ ಅನ್ನುತ್ತಿ¨ªೆ. ನಿಧಾನಕ್ಕೆ ಅದೆಲ್ಲ ಕಡಿಮೆಯಾಯ್ತು.

– ಹೀರೋ ಅಂದ್ರೆ ಡ್ಯಾನ್ಸು, ಫೈಟಿಂಗ್‌ ಮಾಡಬೇಕು ಅನ್ನೋ ರೂಢಿಯನ್ನು ಮುರಿದು ಹೀರೋ ಆಗಿ ಮಿಂಚಿದೋರು ನೀವು. ಇದಕ್ಕೆ ನೀವು, ಕಾಲ, ಕತೆ- ಯಾವುದು ಕಾರಣ?
ಪಾತ್ರಗಳೇ ಕಾರಣ. ಗೋಲ್‌ಮಾಲ್‌ ರಾಧಾಕೃಷ್ಣ, ಬಯಲುದಾರಿ, ನಾ ನಿನ್ನ ಬಿಡಲಾರೆ ಮುಂತಾದ ಚಿತ್ರಗಳಲ್ಲಿ ಕತೆಗೆ, ಪಾತ್ರಕ್ಕೆ ಒಂದು ರೀತಿಯ ಡ್ರಾಮ್ಯಾಟಿಕ್‌ ಫೋರ್ಸ್‌ ಇತ್ತು. ನನಗೆ ಡ್ಯಾನ್ಸ್ ಬರೋದಿಲ್ಲ ಅಂತ ನೇರವಾಗಿಯೇ ಹೇಳಿಬಿಡ್ತಿದ್ದೆ. ಪಾತ್ರದ ಅಗತ್ಯಕ್ಕೆ ತಕ್ಕಷ್ಟನ್ನು ಮಾಡುತ್ತಲೂ ಇದೆ.

– ಪೌರಾಣಿಕ ಸಿನೆಮಾದಲ್ಲಿ ಅಬ್ಬರದ ಪಾತ್ರವನ್ನು ನೀವು ಮಾಡಲಿಲ್ಲ. ಆದರೆ ನಿಮ್ಮ ನಾರದನ ಪಾತ್ರ ಬಹಳ ಯಶಸ್ವಿಯಾಯ್ತು…
ಹೌದು. ಆಗ ವರದಪ್ಪ, ಸಿದ್ದಲಿಂಗಯ್ಯನೋರು, ವೀರಾಸ್ವಾಮಿಯೋರು ಎಲ್ರೂ ಜೊತೆಯಾಗಿದ್ರು. “ನಾರದ ವಿಜಯ’ ಅಂತೂ ಎಲ್ಲರೂ ಎಂಜಾಯ್‌ ಮಾಡಿದ್ರು. ಅದು ಅವತ್ತಿಗೆ ಸೈನ್ಸ್ ಫಾರ್ಮುಲಾ ಇಟ್ಟುಕೊಂಡು ಮಾಡಿದ ಕಾಮಿಡಿ ಚಿತ್ರ. ಅವತ್ತಿಗೆ ಸಿನೆಮಾ ಅಂದರೆ ಕುಟುಂಬ ಸಮೇತ ಹೋಗಿ ನೋಡಿರ್ತಿದ್ದರು. ಅವರಿಗೆಲ್ಲ ಇಂತಹ ಮನರಂಜನೆ ಕೊಡೋ ಸಿನೆಮಾಗಳು ಇಷ್ಟ ಆಗ್ತಿತ್ತು. ಕಾಮಿಕ್‌ಗೆ ಅದರದೇ ಶಕ್ತಿ ಇದೆ. ಬೇರೆಲ್ಲಾ ಏನೇ ಇದ್ದರೂ ಸಿನೆಮಾದ ಮೂಲ ಉದ್ದೇಶ ಮನರಂಜನೆ. ಅದನ್ನು ಕೊಟ್ಟಾಗ ಸಿನೆಮಾ ಗೆಲ್ಲತ್ತೆ ಅಷ್ಟೆ.

– ಪತ್ರಕರ್ತರೊಂದಿಗಿನ ನಿಮ್ಮ ಬಾಂಧವ್ಯದ ಬಗ್ಗೆ ಹೇಳಿ ಸರ್‌…
ನಾನು ಬೆಂಗಳೂರಿಗೆ ಬಂದಾಗ, ಇಲ್ಲಿ ನನಗೆ ಸ್ಕೂಲು, ಕಾಲೇಜು ಗೆಳೆಯರು ಅಂತ ಯಾರೂ ಇರಲಿಲ್ಲ. ಸಿಕ್ಕವರೆಲ್ಲ ಹೆಚ್ಚಾಗಿ ಪತ್ರಕರ್ತರು. ಅದರಲ್ಲೂ ವೈಎನ್‌ಕೆ, ಶಾಮರಾವ್‌, ರಾಮಚಂದ್ರರಾವ್‌ ಹೀಗೆ… ಆಗ ಒಂದು ಒಳ್ಳೆ ಸಿನೆಮಾ ಬಂದಾಗ ಅದರ ಬಗ್ಗೆ ಒಂದು ಸಂವಾದ ಆಗ್ತಾ ಇತ್ತು. ಪತ್ರಕರ್ತರು ಸಲಹೆಗಳನ್ನ ಕೊಡ್ತಾ ಇದ್ರು. ಈಗ ಅಂತದೆಲ್ಲ ಕಡಿಮೆ. ಆದರೆ ಪತ್ರಕರ್ತರೊಂದಿಗಿನ ನನ್ನ ಸ್ನೇಹ ಮುಂದುವರೆದಿದೆ. ಈಗಲೂ 25-30 ಪತ್ರಕರ್ತ ಸ್ನೇಹಿತರ ಹೆಸರು ಹೇಳಬಲ್ಲೆ.

– ನಟನಾಗಿ ಯಾವಾಗಲೂ ನಿಮ್ಮ ಬೇಡಿಕೆ ಕಡಿಮೆ ಆಗಿಲ್ಲ. ಇದಕ್ಕೆ ನೀವು ಕಂಡುಕೊಂಡ ಸೂತ್ರ ಯಾವುದು?
ಸಿಂಪಲ್ ನಾನು ನಾನಲ್ಲ. ಆ ಪಾತ್ರ. ಪಾತ್ರದೊಳಗೆ ಎಷ್ಟು ನನ್ನ ಅಹಂ ಬಿಟ್ಟು ಪರಕಾಯಪ್ರವೇಶ ಮಾಡ್ತೀನೋ, ಕತೆ ಬರೆದವರ ಪಾತ್ರವಾಗ್ತಿನೋ, ಬೇರೆ ವ್ಯಕ್ತಿತ್ವವಾಗ್ತಿನೋ ಆಗ ಪಾತ್ರ ಗೆಲ್ಲತ್ತೆ. ನನ್ನನ್ನು ತೆಗೆದುಹಾಕಿ ಇನ್ನೊಬ್ಬನ ನಕಲಾಗ್ತಿನಿ.

– ನಟನೆಗೆ ಸಾಹಿತ್ಯ ಅಥವಾ ಯಾವುದೇ ಓದು ಎಷ್ಟು ಅಗತ್ಯ?
ಈಚೆಗೆ ಓಪನ್‌ ಹೈಮರ್‌ ಸಿನೆಮಾ ಬಂತು. ಅದರ ನಿರ್ದೇಶಕ ಭಗವದ್ಗೀತೆಯ ಶ್ಲೋಕ ಸ್ಪೂರ್ತಿ ಅಂತಾನೆ. ಯಾವುದೇ ವಿಷಯದ ಇಂಟಪ್ರಿìಟೇಷನ್‌ಗೆ ಓದು ಬೇಕು. ನನಗೆ ಜಿಯಾಗ್ರಫಿ, ಸೈನ್ಸ್, ಹಿಸ್ಟರಿಯಲ್ಲಿ ವಿಶೇಷ ಆಸಕ್ತಿ. ಶಾಲೆಲಿದ್ದಾಗ ತಲೆಗೆ ಹೋಗಲಿಲ್ಲ. ಈಗ ತುಂಬಾ ಓದುತ್ತೀನಿ.

– ಈ ನಾಡು ನಿಮಗೆ ಪ್ರೀತಿ, ಖ್ಯಾತಿ, ಜೊತೆಗೊಂದಿಷ್ಟು ಟೀಕೆ- ಟಿಪ್ಪಣಿ ಎಲ್ಲವನ್ನೂ ಕೊಟ್ಟಿದೆ. ಈ ಸುದೀರ್ಘ‌ ಪ್ರಯಾಣ ಕೊಟ್ಟ ಅರಿವು ಯಾವುದು?
ಇಷ್ಟೆಲ್ಲ ಆಗಿದೆ ನಿಜ. ಆದರೆ ಇದನ್ನು ನಾನು ಮಾಡಿದೆ ಅಂತ ಹೇಗೆ ಹೇಳ್ಳೋದು? ಈಗಷ್ಟೆ ಒಂದು ಪುಸ್ತಕ ಓದಿದ್ದೆ. ಅದರಲ್ಲೂ ಅದೇ ಇದೆ. ಯಾವುದನ್ನೂ ನಾನು ಮಾಡಿದೆ ಅಂದ್ಕೊಬೇಡ. ನಡೆಸೋ ಅವನಿಲ್ಲದಿದ್ದರೆ ಇದಾಗ್ತಿರಲಿಲ್ಲ ಅನಿಸತ್ತೆ.

– ಸಿನೆಮಾ, ರಾಜಕೀಯ, ಸಾಂಸ್ಕೃತಿಕ ಜಗತ್ತಿನ 75 ವರ್ಷದ ಸಾಕ್ಷಿ ಕೂಡ ನೀವು. ಈ ಎಲ್ಲ ಅನುಭವ ಗಳನ್ನೂ ದಾಖಲಿಸುವ ಆತ್ಮಕತೆ ಯಾವಾಗ ಬರತ್ತೆ?
ಸ್ನೇಹಿತರು ಹೇಳಿದಾರೆ. ಆದರೆ ನನಗೂ ಪ್ರೇರಣೆ­ಯಾಗಬೇಕಲ್ಲ. ಆದಾಗ ಖಂಡಿತಾ ಬರೀತೀನಿ.

– ರಾಜಕೀಯ ನಿಮ್ಮ ವಿಶೇಷ ಆಸಕ್ತಿ. ರಾಜಕೀಯದ ನಿಮ್ಮ ಒಲವು ನಿಲುವುಗಳನ್ನೂ ನೀವು ನೇರವಾಗಿ ಹೇಳ್ತೀರಿ. ಅದರಿಂದ ಟೀಕೆಗಳೂ ಬರ್ತವೆ…
ಆದರೆ ನನಗೆ ಸ್ಪಷ್ಟತೆ ಇದೆ. ನನ್ನ ತಂದೆ ನನಗೆ ಸಣ್ಣವಯಸ್ಸಿನಲ್ಲಿಯೇ ಭಗವದ್ಗೀತೆ ಕಲಿಸಿ¨ªಾರೆ. ಅದರಲ್ಲಿ ಬರುವ ಒಂದು ಶ್ಲೋಕದಲ್ಲಿ ನಿಂದಾಸ್ತುತಿ ಏನೇ ಬಂದರೂ ಸ್ಥಿರಮತಿಯಾಗಿರಬೇಕು ಅಂತ, ಜೊತೆಗೆ ಇವತ್ತು ನಾನು ಹೇಳ್ಳೋದು ನಿಜ ಅಂತ ಇನ್ಯಾವತ್ತೋ ಗೊತ್ತಾಗತ್ತೆ. ಹಾಗಾಗಿ ಆ ಟೀಕೆಗಳನ್ನ ಬಹಳ ಸೀರಿಯಸ್ಸಾಗಿ ತಗೊಳಲ್ಲ. ಬೇಸಿಕಲೀ ನಾನು ನಟಿಸಿದ ಕೆಲವು ಸಿನೆಮಾಗಳೆಲ್ಲ ಲೆಫ್ಟಿಸ್ಟ್ ಮತ್ತು ಸೋಶಿಯಲಿಸಂ ಹೇಳಿದಂತವು. ಆ ಸಿನೆಮಾಗಳ ಕಾರಣವೂ ಸೇರಿ ನಾನು ರಾಜಕೀಯಕ್ಕೆ ತಳ್ಳಲ್ಪಟ್ಟೆ. ರಾಜಕೀಯ ಒಂದು ಸುಳಿ. ಒಮ್ಮೆ ಬಿದ್ದ ಮೇಲೆ ಎಳ್ಕೊಂಡುಬಿಡತ್ತೆ. ಆದರೆ ತಳದಲ್ಲಿ ಸುಳಿ ಇರಲ್ಲ. ಬಿದ್ದವರು ಹೊರಬರಬೇಕಾದರೆ ತಳ ತಲುಪಿ ಇನ್ನೊಂದು ಕಡೆಯಿಂದ ಎದ್ದು ಬರಬೇಕು. ನಾನು ಇದನ್ನೇ ಮಾಡಿದೆ.

ಸಂದರ್ಶನ: ಕುಸುಮಾ ಆಯರಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next