Advertisement

ಸಕಲಕ್ಕೂ ಸಿದ್ಧ ನಮ್ಮ ಸಿದ್ಧಿ ಸಮುದಾಯ

04:31 PM Mar 30, 2021 | Team Udayavani |

ವಿವಿಧ ಸಂಸ್ಕೃತಿ ಆಚಾರ ವಿಚಾರ ಪದ್ಧತಿಗಳನ್ನು ಹೊಂದಿದ ನಾಡು ನಮ್ಮದು.

Advertisement

ಒಂದೊಂದು ಕಲೆ ಆಚರಣೆಗೂ ತನ್ನದೇ ಆದಂತಹ ವೈಶಿಷ್ಟ್ಯತೆ ಇದೆ. ಅದೇ ರೀತಿ ವಿಶಿಷ್ಟ ಸಂಪ್ರದಾಯ ವೇಷ ಭೂಷಣ ನೋಡಲು ಕೊಂಚ ಬದಲಾಗಿ ಕಾಣುವವರಲ್ಲಿ ಸಿದ್ಧಿ ಸಮುದಾಯ ಕೂಡ ಒಂದು. ಇಂತಹ ಜನರ ಒಟ್ಟಾರೆ ಅಧ್ಯಯನಕ್ಕಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸ್ನಾತಕ್ಕೋತ್ತರ ಕೇಂದ್ರ ವಿಜಯಪುರದ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ನಾವು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತೋಳಗೋಡು ಎಂಬ ಸ್ಥಳಕ್ಕೆ ಒಂದು ವಾರದ ಶಿಬಿರ ಆಯೋಜಿಸಿದ್ದೆವು.

ಕರ್ನಾಟಕದ ಬಹುಪಾಲು ಸಿದ್ಧಿಗಳು ಆಗ್ನೇಯ ಆಫ್ರಿಕಾದಿಂದ ಬಂದ ಜನರಾಗಿದ್ದಾರೆ. 16-17ನೇ ಶತಮಾನದಲ್ಲಿ ಪೋರ್ಚುಗಿಸರು, ಮೊಘಲರು ಇವರನ್ನು ಗುಲಾಮರಾಗಿ ಕರೆತಂದರು. ಮುಂದೆ ರಾಜರು, ಅಧಿಕಾರಿಗಳ ದಬ್ಟಾಳಿಕೆ, ಹಿಂಸೆ ತಡೆಯಲಾಗದೇ ದಟ್ಟ ಅರಣ್ಯಗಳಲ್ಲಿ ತಲೆಮರೆಸಿಕೊಂಡು ಜೀವನ ಮಾಡಲು ಮುಂದಾದರಂತೆ. ಅಂದಿನಿಂದ ಇಂದಿನವರೆಗೂ ಕಾಡುಗಳು ಸಿದ್ಧಿ ಜನರ ಮೂಲ ನೆಲೆಯಾಗಿದೆ. ಅನಂತರದಲ್ಲಿ ಹೊಟ್ಟೆ ಪಾಡಿಗಾಗಿ ಕೆಲಸ ಕೂಲಿ ಮಾಡುವುದು ಅನಿವಾರ್ಯವಾಗಿ ಕಂಡಿತು. ಊರಿನ ಜನರಲ್ಲಿಗೆ ಹೋಗಿ ಕೆಲಸದ ಬೇಡಿಕೆ ಇಟ್ಟಾಗ ಸಾಕಷ್ಟು ಜನರು ಇವರಿಗೆ ಕೂಲಿ ಕೆಲಸ ನೀಡಿದರು. ಇದೇ ಮುಂದೆ ಸಿದ್ಧಿ ಜನರ ಮುಖ್ಯ ಕಸುಬು ಆಯಿತು. ಕೂಲಿ ಜತೆಗೆ ಅರಣ್ಯ ಪ್ರದೇಶದಲ್ಲಿ ಆಕ್ರಮಿತ ಜಮೀನಿನಲ್ಲಿ ತಮಗೆ ಬೇಕಾದ ತರಕಾರಿ, ಹಣ್ಣು, ಗಡ್ಡೆ, ಗೆಣಸು, ಮುಂತಾದ ಆಹಾರ ಪದಾರ್ಥಗಳನ್ನು ಬೆಳೆಯಲಾರಂಭಿಸಿದರು.

ಜತೆಗೆ ಮುಸ್ಲಿಂ ಮತ್ತು ಕ್ರಿಶ್ಚನ್‌ ಧರ್ಮ ಅನುಸರಿಸುವ ಸಿದ್ಧಿಗಳಿರುವುದು ಗಮನಾರ್ಹ. ನಾವು ಅಧ್ಯಯನಕ್ಕೆ ತೆಗೆದುಕೊಂಡ ಒಟ್ಟು 53 ಕುಟುಂಬಗಳ ಪೈಕಿ ಶೇ. 64.15ರಷ್ಟು ಹಿಂದೂ ಸಿದ್ಧಿಗಳು, ಶೇ. 30.19ರಷ್ಟು ಕ್ರಿಶ್ಚಿಯನ್‌ ಸಿದ್ಧಿಗಳು, ಶೇ. 05.66ರಷ್ಟು ಮುಸ್ಲಿಂ ಸಿದ್ಧಿಗಳನ್ನು ಗುರುತಿಸಿದ್ದೆವು.

Advertisement

ಸಮಾಜದ ರೂಢಿಯಂತೆ ಸಿದ್ಧಿ ಕುಟುಂಬಗಳು ಸಹಾ ಹೆಚ್ಚಾಗಿ ಪುರುಷ ಪ್ರಧಾನಗಳಾಗಿವೆ. ಮಹಿಳೆಯರಿಗೆ ಸಾಮಾಜಿಕ ಸ್ಥಾನ ಮಾನ ನೀಡಿದರು ಸಹ ಶಿಕ್ಷಣದ ಕೊರತೆ ಕಂಡು ಬರುತ್ತದೆ. ಉಳಿದ ಮಕ್ಕಳಿಗೆ ಹೊಲಿಕೆ ಮಾಡಿದಾಗ ಸಿದ್ಧಿ ಮಕ್ಕಳು ಕಲಿಕೆಯಲ್ಲಿ ನಿಧಾನಗತಿಯಲ್ಲಿದ್ದಾರೆ. ಆದರೆ ಪ್ರಕೃತಿಯನ್ನ ಅರಿತವರಾಗಿದ್ದಾರೆ. ಬಹಳಷ್ಟು ಜನ ಕೂಲಿ ಕೆಲಸ ಮಾಡುವುದರಿಂದ ಹೆಚ್ಚಿನ ವಿದ್ಯಾಭ್ಯಾಸ ಮಾಡಿಲ್ಲ. ಬದಲಾಗಿ ಮಾಧ್ಯಮಿಕ ಶಿಕ್ಷಣ ಪಡೆದವರು ಹೆಚ್ಚು ಶಿಕ್ಷಣವಂತರ ಪಟ್ಟಿಯಲ್ಲಿದ್ದಾರೆ. ಕೆಲವರು ಪದವಿ, ಸ್ನಾತಕೋತ್ತರ ಪದವಿ ಪಡೆವದರು ಇದ್ದಾರೆ. ಅನಕ್ಷರಸ್ಥರೂ ಕೂಡಾ ತಮ್ಮ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬುದು ಇವರ ದೃಢ ನಿರ್ಧಾರ. ಆದರೆ ಗುಡ್ಡಗಾಡು, ಅರಣ್ಯ ಪ್ರದೇಶದಿಂದ ಶಾಲೆಗೆ ಹೋಗಲು ಬಸ್ಸು, ಸರಿಯಾದ ರಸ್ತೆ ಇರದ ಕಾರಣ ಅದೆಷ್ಟೋ ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಂತೂ ಹಳ್ಳ ಕೊಳ್ಳ ತುಂಬಿ ರಸ್ತೆ ಕೆಸರಾಗಿ ಮಕ್ಕಳು ಶಾಲೆಗೆ ಹೋಗಲು ಸಾಧ್ಯವೇ ಇಲ್ಲ ಎಂಬಂತಾಗಿರುತ್ತೆ ಎನ್ನುತ್ತಾರೆ ಸ್ಥಳೀಯ ಸಿದ್ಧಿಗಳು.

ಅರಣ್ಯದಲ್ಲಿ ವಾಸಿಸುವುದರಿಂದ ಅನುಕೂಲಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಹೆಚ್ಚಾಗಿ ಮೂಲಸೌಕರ್ಯ ಹೊಂದಿರದ ಕಚ್ಚಾ ಮನೆಗಳನ್ನ ಕಾಣಬಹುದು. ಇವುಗಳಲ್ಲಿ 3-4 ಕೋಣೆಗಳಿರುತ್ತವೆ. ಇನ್ನು ಶಿಕ್ಷಣ, ಕೃಷಿ, ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಜನರು ಸ್ವಸಹಾಯ ಸಂಘಗಳಿಂದ ಸಾಲವನ್ನು ಪಡೆದಿದ್ದಾರೆ. ಮಕ್ಕಳು ತಮ್ಮ ಮನೆ ಸನಿಹದ ಅಂಗನವಾಡಿ, ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಉನ್ನತ ವ್ಯಾಸಂಗ ಮಾಡಿದ ಕೆಲವರು ಉದ್ಯೋಕ್ಕೆಂದು ವಲಸೆ ಹೋಗಿದ್ದಾರೆ.

ರಾಜಕೀಯ ಕ್ಷೇತ್ರ, ವಿಧಾನ ಪರಿಷತ್‌ ಮಟ್ಟದವರೆಗೂ ಸಿದ್ಧಿ ಜನರಿರುವುದು ವಿಶೇಷ. ವಲಸೆ ಹೋಗುವುದರಿಂದ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗಿದೆ. ಹಿಂದೂ, ಕ್ರಿಶ್ಚಿಯನ್‌, ಮುಸ್ಲಿಂ ಧರ್ಮಗಳಂತೆ ಮದುವೆ ಕಾರ್ಯ ನಡೆಯುತ್ತದೆ ಅರಿಶಿನ ಬಳೆ ಶಾಸ್ತ್ರ ಇರುತ್ತದೆ ಆದರೆ ಮಾಂಗಲ್ಯ ಧಾರಣೆ ಇರುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ, ಹಬ್ಬ ಹರಿದಿನ ಸಮಯದಲ್ಲಿ ದಮಾಮು ಎಂಬ ಚರ್ಮದ ವಾದ್ಯವನ್ನು ನುಡಿಸುವುದು ವಾಡಿಕೆ. ಇದು ಆಫ್ರಿಕಾ ಪದ್ಧತಿಯಾಗಿದ್ದು ಸಮಾನ ವಯಸ್ಕರಿಂದ ಕೂಡಿದ ಗುಂಪು ಈ ವಾದ್ಯವನ್ನು ನುಡಿಸುತ್ತಾರೆ. ಪುಗಡಿ (ಕೊಡದ ನೈತ್ಯ), ಗುಮಾಟೆ ಎಂಬುದು ಇವರ ಮನರಂಜನಾತ್ಮಕ ಕಲೆಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಸಂಶೋಧನೆಯಿಂದ ತಿಳಿಯದಂತಹ ಲ್ಯಾಂಡ್‌ ಲಾರ್ಡ್‌ ಧರ್ಮದ ಆಚರಣೆ ಬೆಳಕಿಗೆ ಬಂದಿದೆ. ತಂತ್ರಜ್ಞಾನದ ಪ್ರಭಾವವಿದ್ದು ಕೆಲವು ಜನ ಟಿವಿ, ಸ್ಮಾರ್ಟ್‌ಫೋನ್‌ ಹೊಂದಿದ್ದಾರೆ.

ಅರಣ್ಯ ಪ್ರದೇಶದಲ್ಲಿದ್ದರೂ ಕೂಡ ಇವರಲ್ಲಿ ಒಗ್ಗಟ್ಟಿನ ಮನೋಭಾವನೆ ಇದ್ದು ಸ್ಥಳೀಯರೊಂದಿಗೆ ಹೊಂದಾಣಿಕೆಯಿಂದ ಇರುತ್ತಾರೆ. ಅರಣ್ಯದಲ್ಲಿ ಹಾನಿ, ಬೆಂಕಿ, ಇನ್ಯಾವುದೋ ಘಟನೆ ನಡೆದಾಗ ಅರಣ್ಯಾಧಿಕಾರಿಗಳಿಗೆ ಸ್ಪಷ್ಟ ನಿಖರ ಮಾಹಿತಿ ಕೊಡುವವರೇ ಈ ಸಿದ್ಧಿ ಜನರು ಎನ್ನುತ್ತಾರೆ ಅಲ್ಲಿನ ಅರಣ್ಯ ಸಿಬಂದಿ. ಇವರದು ಸರಳ ಜೀವನ, ಸರಳ ಆಹಾರ ಪದ್ಧತಿ ಹೊಂದಿದ್ದಾರೆ. ಎತ್ತು, ಎಮ್ಮೆ, ಕೋಳಿ, ನಾಯಿ, ಬೆಕ್ಕು ಇವರ ಸಾಕು ಪ್ರಾಣಿಗಳಾಗಿವೆ.

ಸಿದ್ಧಿ ಜನಾಂಗದ ಅಧ್ಯಯನಕ್ಕೆ ಹೋದಾಗ ಅವರು ತುಂಬಾ ಒರಟು, ರೂಢಾಗಿ ವರ್ತಿಸುತ್ತಾರೆ, ನಮಗೆ ಸರಿಯಾಗಿ ಮಾಹಿತಿ ನೀಡುವುದಿಲ್ಲ ಅಂತಾ ಒಂದಿಷ್ಟು ನಕಾರಾತ್ಮಕ ಅಭಿಪ್ರಾಯ ಬಂದಿದ್ದವು. ಅದನ್ನೇ ಅರಿತು ಹೋದಾಗ ಸಾಮಾನ್ಯ ಜನರಿಗೆ ಹೋಲಿಸಿದರೇ ಸಿದ್ಧಿ ಜನರು ತುಂಬಾನೇ ಭಾವನಾತ್ಮಕ ಜೀವಿಗಳು, ತಮ್ಮ ರಕ್ಷಣೆಗಾಗಿ ಒರಟಾಗಿ ಮಾತನಾಡಿದರೂ, ನಾವು ಬಂದ ಉದ್ದೇಶ ತಿಳಿದಾಗ ಸರಿಯಾಗಿಯೇ ಸ್ಪಂದಿಸುವರು. ಅವರೊಟ್ಟಿಗೆ ಇದ್ದ ಈ ಒಂದು ವಾರದ ಶಿಬಿರ ತುಂಬಾನೇ ಖುಷಿ ಕೊಟ್ಟಿತು.

ತಾಯಿ ಮಮತೆ, ತಂದೆ ಕಾಳಜಿ, ಸಹೋದರ ಸಹೋದರಿಯರ ಹೊಂದಾಣಿಕೆ, ಮಗು ಮನ, ಕಾಣದ ಊರಲ್ಲೊಂದು ಕನಸಿನ ಬುತ್ತಿ ಸಿಕ್ಕಂತಾಯಿತು.


ಶುಭಾ ಹತ್ತಳ್ಳಿ, ರಾಣಿ ಚೆನ್ನಮ್ಮ ಸ್ನಾತಕ್ಕೋತ್ತರ ಕೇಂದ್ರ ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next